Sunday, 23 October 2011

ನಮ್ಮ(?) ಮೆಟ್ರೊ ಮತ್ತು ಹುಳುಕು ಬಾಶಾ ನೀತಿ.!

ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಬೆಂಗಳೂರು ಮೆಟ್ರೊ ಸೇವೆ ಶುರು ಆಗಿದೆ. ಮೆಟ್ರೊದಲ್ಲಿನ ಮೊದಲ ಓಡಾಟ ಹೊಸ ಅನುಭವ ನೀಡಿತು. ನಮ್ಮ ಮೆಟ್ರೊ ಸೇವೆಯನ್ನು ಅನುಭವಿಸಿದ ಮೇಲೆ ಇದೇ ಸಮಯದಲ್ಲಿ ಗಮನ ಸೆಳೆದಿದ್ದು ಎಂದರೆ ಅಲ್ಲಿ ಪಾಲಿಸಲಾದ ಬಾಶಾನೀತಿ. ಸಂವಿಧಾನದ ಮೂಲಕ ನಾವು ತಿಳಿದುಕೊಂಡಿದ್ದು ಏನು ಅಂದ್ರೆ, ಭಾರತದಲ್ಲಿ ಎಲ್ಲರೂ ಸಮಾನರು ಎಲ್ಲ ಬಾಶೆಗಳೂ ಸಮಾನ ಎಂದು. ಆದರೆ ಕರ್ನಾಟಕದಲ್ಲಿ ಅನುಶ್ಟಾನವಾಗುವ ಯೋಜನೆಗಳಲ್ಲಿ ಈ ನಮ್ಮ ತಿಳುವಳಿಕೆಯನ್ನು ಹುಸಿ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಮೆಟ್ರೊದಲ್ಲೂ ಇದನ್ನು ಕಂಡಿದ್ದು ಸುಳ್ಳಲ್ಲ. ಎಂದಿನಂತೆ ಕೇಂದ್ರ ಸರಕಾರ ಕರ್ನಾಟಕದ ಯೋಜನೆಗಳಿಗೆ ನಮ್ಮದೇ ತೆರಿಗೆ ಹಣವನ್ನು ಆರ್ಥಿಕ ಸಹಕಾರದ ಮೂಲಕ ನೀಡುವುದರ ಜೊತೆಗೆ ತನ್ನ ಹುಳುಕು ಬಾಶಾ ನೀತಿಯನ್ನು ನಮ್ಮ ಮೆಟ್ರೊ ಮೂಲಕ ಪ್ರದರ್ಶಿಸಿದೆ. ಬೆಂಗಳೂರಿಗರಿಗೆ ಮೀಸಲಾಗಿರುವ ಈ ಸೇವೆಯಲ್ಲಿ ವಿನಾಕಾರಣ ಎಲ್ಲೆಡೆ ಹಿಂದಿಯನ್ನು ಬಳಸಲಾಗಿದೆ. ಬೆಂಗಳೂರಿನಲ್ಲಿ ೧% ಕ್ಕಿಂತಲೂ ಕಡಿಮೆಯಿರುವ ಹಿಂದಿ ಬಲ್ಲವರಿಗೆ ತೊಂದರೆ ಆಗಬಾರದು ಎಂಬ ನಿಯಮ ಇಲ್ಲಿ ಪಾಲಿಸಲಾಗಿದೆ. ಬೆಂಗಳೂರಿನಲ್ಲಿರುವ ಹಿಂದಿ ಬಾಶಿಕರ ಸಂಖ್ಯೆಯಶ್ಟೆ ಹೆಚ್ಚು ಕಡಿಮೆ ದಿಲ್ಲಿಯಲ್ಲೂ ಕನ್ನಡ ಬಾಶಿಕರ ಸಂಖ್ಯೆಯಿದೆ. ಈ ಸಂಖ್ಯಾ ಆಧಾರದ ಮೇಲೆ ನೋಡುವುದಾದರೆ, ಬೆಂಗಳೂರಿನ ನಮ್ಮ ಮೆಟ್ರೊದಲ್ಲಿ ಹಿಂದಿಯಲ್ಲಿ ಸೇವೆ ಕೊಡುವುದಾದರೆ ದಿಲ್ಲಿಯಲ್ಲಿನ ಮೆಟ್ರೊದಲ್ಲೂ ಕನ್ನಡದಲ್ಲಿ ಸೇವೆ ಕೊಡಬೇಕು. ಆದರೆ ಭಾರತದ ಬಾಶಾ ನೀತಿ ಪ್ರಕಾರ ಇದು ಸಾದ್ಯವಿಲ್ಲ. ದಿಲ್ಲಿ ಮೆಟ್ರೊದಲ್ಲಿ ಸ್ಥಳೀಯ ಬಾಶೆ ಮತ್ತು ಆಂಗ್ಲ ಬಾಶೆಗೆ ಮಾತ್ರ ಸ್ಥಾನ ಕಲ್ಪಿಸಿದರೆ ಬೆಂಗಳೂರಿನಲ್ಲಿ ಸ್ಥಳೀಯ ಮತ್ತು ಆಂಗ್ಲ ಬಾಶೆ ಜೊತೆಗೆ ಇನ್ನೊಂದು ಬಾಶೆಯನ್ನು ಸ್ಥಳೀಯರ ಮೇಲೆ ಹೇರಲಾಗುತ್ತಿದೆ. ದಿಲ್ಲಿಗೊಂದು ನಿಯಮ ಬೆಂಗಳೂರಿಗೊಂದು ನಿಯಮ ಯಾಕೆ.? ಇಂಥ ಹುಳುಕಿನ ಬಾಶಾ ನೀತಿಯಿಂದ ಒಕ್ಕೂಟ ವ್ಯವಸ್ಥೆಗೆ ಬೆಲೆಯಿಲ್ಲದಂತಾಗಿದೆ. ಎಲ್ಲ ಬಾಶೆಗಳೂ ಸಮಾನ ಎಂಬ ಸಂದೇಶ ಸಾರಬೇಕಾದ ಸರಕಾರಗಳೇ ಇಂದು ತಮ್ಮ ಯೋಜನೆಗಳ ಮೂಲಕ ಸ್ಥಳೀಯ ಬಾಶೆಗಳಿಗಿಂತ ಹಿಂದಿಗೆ ಕೊಂಬು ಜಾಸ್ತಿ ಎಂಬ ಸಂದೇಶ ರವಾನಿಸುತ್ತಿವೆ.

ಕನ್ನಡಿಗರಾಗದ ವಲಸಿಗರು:
ಮೆಟ್ರೊದಲ್ಲಿನ ಈ ಬಾಶಾ ನೀತಿ ಒಂದು ಕಡೆ ೮ನೇ ಪರಿಚ್ಚೇಧದಲ್ಲಿ ಗುರುತಿಸಲಾದ ಎಲ್ಲ ೨೨ ಭಾಷೆಗಳು ಸಮಾನ ಎಂಬ ಸಂವಿದಾನದ ಆಶಯಕ್ಕೆ ದಕ್ಕೆ ತಂದರೆ, ಇನ್ನೊಂದು ಕಡೆ ವಲಸಿಗರು ಕನ್ನಡ ಕಲಿತು ಸ್ಥಳೀಯ ಮುಖ್ಯವಾಹಿನಿಯಲ್ಲಿ ಅವರು ಬೆರೆಯುವ ಅವಕಾಶವನ್ನು ತಪ್ಪಿಸುತ್ತದೆ. ವಲಸಿಗರು ಅಲ್ಲಿನ ಭಾಷೆಯನ್ನು ಕಲಿತು ಸ್ಥಳೀಯ ಮುಖ್ಯವಾಹಿನಿಗೆ ಬೆರೆಯಬೇಕು. ಜಗತ್ತಿನ ನಿಯಮನೂ ಇದೇ ಹೇಳುತ್ತದೆ. ವಿವಿದತೆಯಲ್ಲಿ ಏಕತೆಯೆಂಬ ಮಂತ್ರ ಪಠಿಸುವ ಒಕ್ಕೂಟ ವ್ಯವಸ್ಥೆಯಿರುವ ಭಾರತವೂ ಇದರಿಂದ ಹೊರತಾಗಿಲ್ಲ. ವಿಪರ್ಯಾಸವೆಂದರೆ ಜರ್ಮನಿ, ಫ್ರಾನ್ಸಿಗೆ ಹೋಗುವುದಕ್ಕಿಂತ ಮುಂಚೆಯೇ ಅಲ್ಲಿನ ಭಾಷೆ ಕಲಿಯುವ ಅನೇಕ ಹೆಮ್ಮೆಯ ಬಾರತೀಯರು ಕರ್ನಾಟಕಕ್ಕೆ ವಲಸೆ ಬಂದು ಇಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡರೂ ಕನ್ನಡವನ್ನು ಕಲಿಯುವ ಗೋಜಿಗೆ ಹೋಗುವುದಿಲ್ಲ. ವಲಸಿಗರಿಗೆನೇ ವ್ಯವಸ್ಥೆಯನ್ನು ಕಟ್ಟುವಂಥ ಮೆಟ್ರೊದಂಥ ಯೋಜನೆಗಳಲ್ಲಿನ ಬಾಶಾ ನೀತಿಯೇ ಇಂಥ ಒಂದು ಕೆಟ್ಟ ವಾತಾವರಣಕ್ಕೆ ನಾಂದಿ ಹಾಡುತ್ತಿವೆ. ವಲಸಿಗರನ್ನು ಕನ್ನಡಿಗರಾಗದ ಹಾಗೆ ತಡೆಯುತ್ತಿವೆ. 


ನಮ್ಮ ಮೆಟ್ರೊ ಬಾಶಾನೀತಿ:
ನಮ್ಮ ಮೆಟ್ರೊ ಸೇವೆ ಒದಗಿಸುತ್ತಿರುವುದು ಬೆಂಗಳೂರಿಗರಿಗೆ. ಹೀಗಾಗಿ ಬೆಂಗಳೂರಿನ ನುಡಿಯಲ್ಲೇ ಎಲ್ಲ ಮಾಹಿತಿಗಳು ಸಿಗಬೇಕು. ಇನ್ನು ಬೆಂಗಳೂರಿಗರಿಗೆ ಬರುವ ವಲಸಿಗರಿಗೆ ತಾತ್ಕಾಲಿಕ ಅನುಕೂಲವಾಗುವ ಹಾಗೆ ಆಂಗ್ಲ ಬಾಶೆ ಇರಲಿ. ಒಕ್ಕೂಟ ವ್ಯವಸ್ಥೆಯಿರುವ ಯುರೋಪಿನಲ್ಲಿನ ಬಾಶಾ ನೀತಿ ಇದಕ್ಕೆ ಒಳ್ಳೆಯ ಉದಾಹರಣೆ. ಆದ್ದರಿಂದ ಮೆಟ್ರೊ ಆಡಳಿತ ವರ್ಗ ಈ ನಿಟ್ಟಿನಲ್ಲಿ ಗಮನ ಹರಿಸಿ ತನ್ನ ಸೇವೆಯಲ್ಲಿ ಹಿಂದಿ ಬಳಕೆಯನ್ನು ನಿಲ್ಲಿಸಿ, ಕಡಿಮೆ ಸಂಖ್ಯೆಯ ವಲಸಿಗರಿಗಾಗಿ ವ್ಯವಸ್ಥೆ ಕಟ್ಟುವ ಕೆಟ್ಟ ಸಂಪ್ರದಾಯವನ್ನು ಬಿಟ್ಟು ಬಹುಸಂಖ್ಯಾತ ಸ್ಥಳೀಯರಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆಯನ್ನು ಕಟ್ಟಿ, ಆ ಮೂಲಕ ಕರ್ನಾಟಕದಲ್ಲಿರುವ ವಲಸಿಗರು ಮುಂದಿನ ದಿನಗಳಲ್ಲಿ ಕನ್ನಡಿಗರಾಗಿ ಪರಿವರ್ತನೆಯಾಗಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ.

Sunday, 25 September 2011

ನಿಲ್ಲದ ಪರಬಾಶೆ ಮನರಂಜನೆಯ ವೈಬವೀಕರಣ.!


ಈ (ನಮ್ಮ) ಕನ್ನಡ ಸುದ್ದಿ ವಾಹಿನಿಗಳಿಗೇನಾಗಿದೆ.! ಮನರಂಜನೆ ಅಂದರೆ ಪರಬಾಶೆ ಚಿತ್ರಗಳೇ ಲಾಯಕ್ಕು ಎಂಬ ನಿಲುವೇನಾದ್ರು ಇವರು ತಾಳಿದಾರಾ? ಅಥವಾ ಪರಬಾಶೆ ಮನರಂಜನೆ ಬಗ್ಗೆ ಸುದ್ದಿ ತೋರಿಸದಿದ್ದರೆ ಅವರ ವಾಹಿನಿಯನ್ನು ಯಾರೂ ನೋಡುವುದಿಲ್ಲ ಎಂಬ ಬ್ರಮೆಯಲ್ಲಿದ್ದಾರಾ.? ಅಥವಾ ಕರ್ನಾಟಕದ ಜನ ಎಲ್ಲ ಸೇರಿ ನಾವು ಇನ್ಮೇಲೆ ಪರಬಾಶೆ ಚಿತ್ರಗಳನ್ನೇ ಜಾಸ್ತಿ ನೋಡ್ತಿವಿ ಅಂತ ಮುಚ್ಚಳಿಕೆ ಏನಾದ್ರು ಇವರಿಗೆ ಬರೆದು ಕೊಟ್ಟಿದ್ದಾರಾ.? ಎಂಬ ಪ್ರಶ್ನೆಗಳು ಇತ್ತೀಚಿನ ಕೆಲವು ದಿನಗಳಿಂದ ಗಾಡವಾಗಿ ಕಾಡ್ತಾ ಇದೆ.

ಹಿಟ್ ಬೇಕು..ಹಿಟ್.!
ಒಂದು ಪರಬಾಶೆಯ ಚಿತ್ರ ತೆರೆಗೆ ಬರಲು ಸಜ್ಜಾದರೆ ಸಾಕು, ಮಾದ್ಯಮದ ಕಚೇರಿಗಳಲ್ಲಿ ಅದರ ಅರ್ದ ತಾಸಿನ  ವಿಶೇಶ ಕಾರ್ಯಕ್ರಮದ ಸಿದ್ದತೆಗಳು ಶುರು ಆಗಿ ಬಿಡುತ್ತವೆ. ಇನ್ನು ಒಬ್ಬರು ಪ್ರಸಾರ ಮಾಡಿದರೆ ಮುಗೀತು,, ನಾವು ತೋರಿಸಲಿಲ್ಲ ಅಂದ್ರೆ ಜನ ಎಲ್ಲಿ ಬೇಜಾರ್ ಮಾಡ್ಕೊತಾರೆ ಅನ್ನೋ ಥರ ಮರುದಿನ ಮತ್ತೊಂದ್ರಲ್ಲಿ. ಬೆಳಿಗ್ಗೆ "ದುಕುಡು" ಚಿತ್ರದ ಬಗ್ಗೆ ವಿಶೇಶ ಕಾರ್ಯಕ್ರಮ,, ಸಂಜೆ ಅದೇ ವಾಹಿನಿಯಲ್ಲಿ "ಕನ್ನಡ ಚಿತ್ರಗಳು ಎಡವುತ್ತಿರುವುದೆಲ್ಲಿ" ಎಂಬ ಬಗ್ಗೆ ವಿಚಾರ ಸಂಕೀರಣ.!! ಈ ಥರ ಇದೆ ನಿಲುವು. ಕನ್ನಡ ಬದ್ದತೆ ಮಾತೆಲ್ಲಿ.! ಈಗಿಗ ಚಿತ್ರಗಳು ಬಿಡುಗಡೆ ಆಗೋದಕ್ಕೆ ಕಾಯೋದೇ ಬೇಡ ಅಂತ, ಅಲ್ಲಿನ ಪರಿಸ್ಥಿತಿಯ ಅವಲೋಕನ ಮಾಡೊದಕ್ಕೆ ಶುರು ಮಾಡಿದ್ದಾರೆ, ಅಂಥದ್ದೇ ಒಂದು ಕಾರ್ಯಕ್ರಮ ಸುವರ್ಣ ಸುದ್ದಿ ವಾಹಿನಿಯಲ್ಲಿ ಇತ್ತೀಚಿಗೆ ಕಾಣಿಸಿಕೊಳ್ತು. ಅದರ ಶಿರ್ಶಿಕೆ ಹೆಸರು "ಹಿಟ್ ಬೇಕು..ಹಿಟ್". ಇದರ ಸಾರಾಂಶ ಏನಪ್ಪಾ ಅಂದ್ರೆ, ತೆಲುಗಿನ ಮಹೇಶ್ ಬಾಬು, ಜೂ.ಎನ್.ಟಿ.ಆರ್, ನಾಗಾರ್ಜುನ ಅವರ ಇತ್ತೀಚಿನ ಚಿತ್ರಗಳು ತಕ್ಕ ಮಟ್ಟಿಗೆ ಯಶಸ್ಸನ್ನು ಕಂಡಿಲ್ಲ, ಹಾಗಾಗಿ ಜನ ಅವರಿಂದ ಒಂದು ಬ್ಲಾಕ್ ಬಸ್ಟರ್ ಹಿಟ್ ಚಿತ್ರವನ್ನು ನಿರೀಕ್ಷೆ ಮಾಡುತ್ತಿದ್ದಾರೆ ಅಂತ.! ಕರ್ನಾಟಕದ ಜನ ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರವನ್ನು ನಿರೀಕ್ಷೆ ಮಾಡುತ್ತಿದ್ದಾರೆ ಅಂತ ನಮ್ಮ ಸುದ್ದಿವಾಹಿನಿಗೆ ಯಾವ ಗುಪ್ತಚರ ಇಲಾಖೆ ಮೂಲಕ ಮಾಹಿತಿ ಬಂತೋ ಗೊತ್ತಿಲ್ಲ.! ಆದರೆ ಪರಬಾಶೆ ಚಿತ್ರಗಳನ್ನು ಬ್ಲಾಕ್ ಬಸ್ಟರ್ ಮಾಡಲು ಕರ್ನಾಟಕದಲ್ಲಿ ಮಾರುಕಟ್ಟೆ ನಿರ್ಮಿಸಲು ನೇರ, ದಿಟ್ಟ ಮತ್ತು ನಿರಂತರ ಪ್ರಯತ್ನ ನಡೆದಿದೆ. ಇನ್ನು ಮತ್ತೊಂದು ಸುದ್ದಿ ವಾಹಿನಿ, ಟಿವಿ೯ ಅವರು ರಜನಿಕಾಂತ್ ಮತ್ತು ಅವರ ಚಿತ್ರಗಳ ಪ್ರಚಾರದ ಗುತ್ತಿಗೆಯನ್ನು ಪಡೆದುಕೊಂಡಿರೋ ಥರ ಸುದ್ದಿ ಪ್ರಸಾರ ಮಾಡ್ತಾರೆ. ಕನ್ನಡಿಗರಿಗೆ ಬೇಡವಾದ ಪ್ರಚಾರವನ್ನು ಕನ್ನಡಿಗರ ಮೇಲೆ ಹೇರಿ ಯಾವ ಉತ್ತಮ ಸಮಾಜವನ್ನು ನಿರ್ಮಿಸಲು ಹೊರಟಿದ್ದಾರೆ. ಪಕ್ಕದ ಮನೆಯಲ್ಲೂ ಹೀಗೆ ಆಗುತ್ತಾ.? ಅಣ್ಣಾವ್ರ್ದು, ಶಂಕರನಾಗ್ ಕುರಿತಾದ ಅಥವಾ ಈಗಿನ ನಟರ ಬ್ಲಾಕಬಸ್ಟರ್ ಚಿತ್ರಗಳ ಬಗ್ಗೆ ಎಶ್ಟು ಸಲ ಅಲ್ಲಿನ ವಾಹಿನಿಗಳು ವಿಶೇಶ ಕಾರ್ಯಕ್ರಮ ಏರ್ಪಡಿಸಿವೆ.? ಖಂಡಿತ ಇಲ್ಲ, ಅಲ್ಲಿನ ಜನರ ಮನರಂಜನೆ ಸ್ಥಳೀಯ ಬಾಶೆಯಲ್ಲೇ ಎಂಬ ಸಿದ್ದಾಂತಕ್ಕೆ ಅಲ್ಲಿನ ಮಾದ್ಯಮಗಳು ಕೈಜೋಡಿಸಿವೆ. ನಮ್ಮ ಮಾದ್ಯಮಗಳು ನಮ್ಮ ಜನರ ಮನರಂಜನೆ ಕನ್ನಡ ನುಡಿಯಲ್ಲೇ ಎಂಬ ಬಗ್ಗೆ ಯಾಕೆ ನಿರ್ಲಕ್ಷ್ಯ. ಪರಬಾಶೆಯಲ್ಲೂ ಒಳ್ಳೆಯ ಮನರಂಜನೆ ಇರುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವುಗಳನ್ನು ನಮ್ಮ ನುಡಿಯಲ್ಲೇ ನಮ್ಮ ಜನರಿಗೆ ತಲುಪಿಸುವತ್ತ ಗಮನ ಹರಿಸಬೇಕೆ ಹೊರತು ಅವರವರ ಬಾಶೆಯಲ್ಲೇ ಪ್ರಚಾರ ಕೊಡುವುದು ಸರಿಯಲ್ಲ. ಒಟ್ಟಿನಲ್ಲಿ ಕನ್ನಡಿಗರಿಗೆ ಬೇಕಾದ್ದನ್ನು ನಿರ್ಲಕ್ಷಿಸಿ ಬೇಡವಾದದ್ದನ್ನು ತುರುಕಲು ಪ್ರಯತ್ನಿಸುತ್ತಿರುವುದು ವಿಪರ್ಯಾಸ.

ಲವಲವಿಕೆ ಕಳೆದುಕೊಳ್ಳುತ್ತಿರುವ ಪತ್ರಿಕಾ ಮಾದ್ಯಮ.!
ಪತ್ರಿಕಾ ಮಾದ್ಯಮಗಳ ಸ್ಥಿತಿ ಇದಕ್ಕಿಂತ ಬಿನ್ನವಾಗಿಲ್ಲ. ಪರಬಾಶೆ ಚಿತ್ರಗಳ ಪ್ರಚಾರದಲ್ಲಿ ನಾವು ಏನು ಕಮ್ಮಿ ಇಲ್ಲ ಅನ್ನೋ ಥರ ಪೈಪೋಟಿಗೆ ಬಿದ್ದವರಂತೆ ನಮ್ಮ ಪತ್ರಿಕಾ ಮಾದ್ಯಮದವರು ಇದ್ದಾರೆ. ವಿಜಯ ಕರ್ನಾಟಕದಲ್ಲಿ ಬರುವ ಲವಲವಿಕೆಯನ್ನು ನೋಡಿದರೆ, ಕೆಲವು ಸಲ ಇದು ಕನ್ನಡ ಪತ್ರಿಕೆಯ ಜೊತೆಗೆ ಬಂದಿದ್ದಾ ಎಂಬ ಬಗ್ಗೆ ಸಂದೇಹ ಮೂಡುತ್ತದೆ. ಅಕ್ಷರಗಳು ಕನ್ನಡದ್ದೇ, ಮನರಂಜನೆ ವಿಶಯ ಮಾತ್ರ ಪಕ್ಕದ ಮನೆದೇ ಜಾಸ್ತಿ. ಟಿವಿ ಮಾದ್ಯಮಗಳಲ್ಲಿ ಟಿವಿ೯ ವಹಿಸುವ ಪಾತ್ರವನ್ನು ಲವಲವಿಕೆಯಿಂದ ವಿ.ಕ ದವರು ನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿಯವರು ಬೊಂಬಾಟ್ ಬಾಲಿವುಡ್ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನು ಮನರಂಜನೆಗಾಗಿಯೇ ಮೀಸಲಿರುವ ಹೊತ್ತಿಗೆಗಳಾದ ರೂಪತಾರಾದಂತವುಗಳಲ್ಲೂ ತಮಿಳು, ತೆಲುಗು ಚಿತ್ರಗಳ ಪ್ರಚಾರ ಕಾರ್ಯ ನಡೆಯುತ್ತದೆ. ಇದೆಲ್ಲದರ ಜೊತೆಗೆ ಎಲ್ಲರೂ ತಮಿಳು, ತೆಲುಗು, ಹಿಂದಿ ಚಿತ್ರಗಳ ವಿಶ್ಲೇಶಣೆ ನಡೆಸುತ್ತಾರೆ. 

ಮನೆಗೆ ಮಾರಿ ಪಕ್ಕದ್ಮನೆಗೆ ಉಪಕಾರಿ.!
ಇಶ್ಟೆಲ್ಲ ಮಾದ್ಯಮದವರು ಯಾರಿಗಾಗಿ ಮಾಡುತ್ತಿರುವುದು, ಹೀಗೆ ಮಾಡುವುದರ ಮೂಲಕ ತಮ್ಮ ತಲೆ ಮೇಲೆ ಚಪ್ಪಡಿ ಕಲ್ಲನ್ನು ಎಳ್ಕೊತಿದ್ದಾರೆ. ಹೀಗೆ ಪರಬಾಶೆಗಳಿಗೆ ಪ್ರಚಾರ ಕೊಡುತ್ತಿದ್ದರೆ, ಆ ಮೂಲಕ ಕನ್ನಡ ಚಿತ್ರಗಳ ಗ್ರಾಹಕರನ್ನು ಪರಬಾಶೆ ಕಡೆಗೆ ವಾಲಿಸುತ್ತಿದ್ದರೆ ಮುಂದೊಂದು ದಿನ ಕನ್ನಡ ವಾಹಿನಿಗಳನ್ನು ನೋಡುವವರ, ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರಬಹುದು. ಆಗ ಯಾರಿಗಾಗಿ ಇವರು ತಮ್ಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡ್ತಾರೆ. ಹೀಗಾಗಿ ಮನರಂಜನೆ ವಿಶಯಗಳಲ್ಲಿ ಪರಬಾಶೆಗಳಿಗೆ ಮಾರುಕಟ್ಟೆ ನಿರ್ಮಿಸಿ ಕೊಡುವುದೆಂದರೆ ತಮ್ಮ ಅನ್ನಕ್ಕೆ ಕುತ್ತು ತಂದುಕೊಳ್ಳುವುದೇ ಎಂದರ್ಥ. ಇದನ್ನು ನಮ್ಮ ಮಾದ್ಯಮದವರು ಅರಿತುಕೊಳ್ಳಬೇಕಿದೆ. ಈಗಿರುವ ಮನೆಯಲ್ಲಿ ತಾವೂ ಇದ್ದೇವೆ ಎಂಬುದನ್ನು ಮರೆತು ಮನೆಗೆ ಮಾರಿ ಪಕ್ಕದ್ಮನೆಗೆ ಉಪಕಾರಿ ಎಂಬಂತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ.  ಮಾದ್ಯಮವೂ ಸೇರಿದಂತೆ ಕರ್ನಾಟಕದ ಪ್ರತಿಯೊಂದು ಕ್ಷೇತ್ರವೂ ನಿಂತಿರುವುದು ಕನ್ನಡ ಎಂಬ ಬಾಶಾ ತಳಹದಿ ಮೇಲೆಯೇ ಎಂಬುದನ್ನು ಮನಗಾಣಬೇಕಿದೆ. ಆದ್ದರಿಂದ ಮಾದ್ಯಮದವರು ತಮ್ಮ ಒಳಿತಿಗಾಗಿ ಮತ್ತು ಕನ್ನಡಿಗರ ಅನುಕೂಲಕ್ಕಾಗಿ, ಆ ತಳಹದಿಯನ್ನು ಅಲುಗಾಡಿಸುವ ಕಾರ್ಯ ಕೈಬಿಟ್ಟು, ಅದನ್ನು ಗಟ್ಟಿಪಡಿಸುವ ಅಂದರೆ, ಕರ್ನಾಟಕದಲ್ಲಿ ಎಲ್ಲ ಮನರಂಜನೆ ಕನ್ನಡದಲ್ಲೇ ದಕ್ಕಿಸಿಕೊಡುವ ಆ ಮೂಲಕ ಕನ್ನಡ ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುವ ಕಡೆಗೆ ಗಮನ ಹರಿಸಬೇಕಿದೆ.

Wednesday, 14 September 2011

ಹಳಿ ತಪ್ಪುತ್ತಿರುವ ರೈಲ್ವೇ ಇಲಾಖೆಯ ಬಾಶಾ ನೀತಿ.!


ಕೇಂದ್ರ ಸರಕಾರ ೧೯೪೯ ರಿಂದ ಇಂದಿನವರೆಗೆ ತನ್ನ ಇಲಾಖೆಗಳನ್ನು ಹಿಂದಿ ಹೇರಿಕೆಗೆ ಬಳಸಿಕೊಳ್ಳುತ್ತಿದೆ. ಯಾವುದೋ ಒಂದು ಪ್ರದೇಶದಲ್ಲಿ ಮಾತನಾಡುವ ಬಾಶೆಯನ್ನು ಇಡೀ ಬಾರತೀಯರ ಮೇಲೆ ಹೇರಲು ಹೊರಟಿದೆ. ಬಾರತದ ಪ್ರತಿಯೊಂದು ಮೂಲೆಗೂ ಮತ್ತು ಪ್ರತಿಯೊಬ್ಬ ನಾಗರೀಕನಿಗೂ ತಲುಪುವಂತ ಸೇವೆಯನ್ನು ರೈಲ್ವೇ ಇಲಾಖೆ ಒದಗಿಸುತ್ತಿರುವುದರಿಂದ ಈ ಇಲಾಖೆಯನ್ನು ಹಿಂದಿ ಹೇರಿಕೆಗೆ ವ್ಯವಸ್ಥಿತವಾಗಿ ಎಲ್ಲ ಹಂತಗಳಲ್ಲೂ ಎಲ್ಲ ತರಹ ಸೇವೆಗಳಲ್ಲೂ ಬಳಸಿಕೊಳ್ಳಲಾಗುತ್ತಿದೆ. ರೈಲ್ವೇ ಇಲಾಖೆಯಲ್ಲಿ ಹಿಂದಿ ಬಲ್ಲವರಿಗೆ ತೊಂದರೆ ಆಗಬಾರದು ಅಥವಾ ತೊಂದರೆ ಆಗಬಾರದು ಎಂದರೆ ಹಿಂದಿ ಬಲ್ಲವರಿರಬೇಕು ಎಂಬ ವಾತಾವರಣವನ್ನು ನಿರ್ಮಿಸುತ್ತಿರುವುದು ಎಲ್ಲರೂ ಸಮಾನರು ಎಲ್ಲ ಬಾಶೆಗಳು ಸಮಾನ ಎಂಬ ಸಂವಿದಾನದ ಆಶಯಕ್ಕೆ ಕಳಂಕ ತರುವಂತವುಗಳಾಗಿವೆ.

ಸ್ಥಳೀಯರಿಗೆ ನೆರವಾಗದ ನೈರುತ್ಯ ರೈಲ್ವೇ ವಲಯ:  
ದಕ್ಷಿಣ-ಪಶ್ಚಿಮ ರೈಲ್ವೇ ವಲಯ ಎಂದೇ ಕರೆಯಲ್ಪಡುವ ನೈರುತ್ಯ ರೈಲ್ವೇ ವಲಯ ಹುಬ್ಬಳ್ಳಿಯಲ್ಲಿ ಕೇಂದ್ರ ಸ್ಥಾನ ಹೊಂದಿದ್ದು, ಬೆಂಗಳೂರು, ಮೈಸೂರು ಮುಂತಾದ ಕರ್ನಾಟಕದ ಮುಖ್ಯ ರೈಲ್ವೇ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಾಪಿತಗೊಂಡಿರುವುದಾಗಿದೆ. ಕರ್ನಾಟಕದಲ್ಲಿನ ರೈಲ್ವೇ ಸಂಪರ್ಕಗಳು, ವ್ಯವಸ್ಥೆಗಳು, ಅವುಗಳ ನಿರ್ವಹಣೆ ಮತ್ತು ವಿಸ್ತರಣೆ ಈ ವಲಯದ ಕಾರ್ಯವ್ಯಾಪ್ತಿಗೆ ಬರುವಂತವುಗಳಾಗಿವೆ. ಹೀಗಾಗಿ ಇಲ್ಲಿ ದೊರಕುವ ಸೇವೆಗಳು, ಹುಟ್ಟುವ ಉದ್ಯೋಗಗಳು ಎಲ್ಲವೂ ಕನ್ನಡ ಕೇಂದ್ರಿತವಾಗಿಯೇ ಮತ್ತು ಕನ್ನಡಿಗನಿಗೆ ಲಾಬದಾಯಕವಾಗಿಯೇ ಇರಬೇಕಾಗಿರುವುದು ಒಕ್ಕೂಟ ವ್ಯವಸ್ಥೆಯ ದ್ರುಶ್ಟಿಯಿಂದ ಸರಿಯಾದ ನಡೆಯಾಗಿದೆ. ಆದರೆ 
ಈ ವಲಯದ ವ್ಯವಸ್ಥೆ ಮಾತ್ರ ಇದಕ್ಕೆ ತದ್ವಿರುದ್ದವಾಗಿದೆ. ಕರ್ನಾಟಕದಲ್ಲೇ ಸಂಚರಿಸುವ ರೈಲುಗಳಲ್ಲಿ ಹಿಂದಿ ನಾಮಫಲಕಗಳು ರಾರಾಜಿಸುತ್ತವೆ. ಕರ್ನಾಟಕಕ್ಕೆ ಬರುವ ರೈಲಿನಲ್ಲೂ ಸ್ಥಳೀಯ ಬಾಶೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಹಿಂದಿಯನ್ನು ಮೊದಲ ಸ್ಥಾನದಲ್ಲಿ ಹಾಕಲಾಗಿದೆ. ಇಂಗ್ಲೀಶ ಜೊತೆಗೆ ಕನ್ನಡದಲ್ಲೇ ಇರಬೇಕಾಗಿದ್ದ ದಕ್ಷಿಣ-ಪಶ್ಚಿಮ ರೈಲ್ವೇ ವಲಯದ ಮಿಂಬಲೆಯಲ್ಲಿ ಕಾಣುತ್ತಿರುವ ಆಯ್ಕೆ ಮಾತ್ರ ಹಿಂದಿ ಒಂದೇ.! ಇಂತ ಘನ ಕಾರ್ಯಗಳಿಗೆ ನಮಗೆ ಒಂದು ರೈಲ್ವೇ ವಲಯ ಬೇಕಾಗಿತ್ತೇ.? ಈಚೆಗೆ ೨ ವರುಶಗಳ ಹಿಂದೆ, ಈ ವಲಯದ ಮೂಲಕ  ನಡೆಯುತ್ತಿದ್ದ ರೈಲ್ವೇ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯ ಜಾಹೀರಾತು, ಪರೀಕ್ಷೆ ಬರೆಯುವ ಮಾದ್ಯಮ ಎಲ್ಲ ಹಿಂದಿಮಯವಾಗಿತ್ತು. ಹೀಗಾಗಿ ಸಹಜವಾಗಿ ಹಿಂದಿ ಬಲ್ಲವರಿಗೆ ಅನುಕೂಲ ವಾತಾವರಣ ನಿರ್ಮಾಣವಾಗುತ್ತಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಇಚ್ಚಾಶಕ್ತಿಯ ಫಲವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡವನ್ನು ಅನುಷ್ಟಾನಗೊಳಿಸಿ, ಕನ್ನಡಿಗರಿಗೆ ರೈಲ್ವೇಯಲ್ಲಿ ಉದ್ಯೋಗದ ಅವಕಾಶಗಳು ಸಿಗುವಂತಾಗಿದೆ. ಇದು ಕೇಂದ್ರ ಸರಕಾರದ ಇಲಾಖೆ ಎಂಬ ವಾದವನ್ನು ಮುಂದಿಟ್ಟುಕೊಂಡು, ಬಾರತದ ಏಕೈಕ ಆಡಳಿತ ಬಾಶೆಯೆಂಬ ಅಸ್ತ್ರವನ್ನು ಬಳಸಿಕೊಂಡು, ಈ ವಲಯದ ಸೇವೆಯನ್ನು ಬಳಸುವವರು ಕನ್ನಡಿಗರೇ ಆಗಿದ್ದರೂ, ಸೇವೆಯಲ್ಲಿ ವ್ಯವಸ್ಥಿತವಾಗಿ ಹಿಂದಿ ಹೇರಿಕೆಯ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನು ಅವಮಾನಿಸುವಂತ ಇಂತಹ ವ್ಯವಸ್ಥೆಯನ್ನು ಕೇಂದ್ರ ಸರಕಾರ ಪೋಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.! 

ವೈವಿದ್ಯತೆಯನ್ನು ಅಪ್ಪಿಕೊಂಡ ಯುರೋಪ್ ಒಕ್ಕೂಟ.!
ವೈವಿದ್ಯತೆಯಲ್ಲಿ ಏಕತೆಯನ್ನು ಸಾರುವ ದೇಶವಾದ ಬಾರತದ ರೈಲು ವ್ಯವಸ್ಥೆಯ ಮಿಂಬಲೆ (ವೆಬ್ ತಾಣ) ಯಲ್ಲಿ ವೈವಿದ್ಯತೆಯನ್ನು ಗಾಳಿಗೆ ತೂರಲಾಗಿದೆ. ಕೇವಲ ಒಂದೇ ಬಾಶೆಗೆ ತನ್ನ ನುಡಿಯಲ್ಲಿ ಸೇವೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಅದರ ಜೊತೆಗೆ, ಒಕ್ಕೂಟ ವ್ಯವಸ್ಥೆಗೆ ಒಳ್ಳೆಯ ಉದಾಹರಣೆ ಎಂದು ಬಿಂಬಿತಲ್ಪಡುವ ಯುರೋಪ್ ಒಕ್ಕೂಟದಲ್ಲಿ ವ್ಯವಸ್ಥೆ ಹೇಗಿದೆ ಅಂತ ತುಸು ನೋಡಿ ಬರೋಣ. ಯುರೋಪ ಮತ್ತು ಇತರ ಮುಂದುವರೆದ ದೇಶಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಅಲ್ಲಿನ ರೈಲಿನ ವ್ಯವಸ್ಥೆಯನ್ನು ಒಮ್ಮೆ ನೋಡಿದರೆ,, ಮಿಂಬಲೆಯಲ್ಲಿ ರೇಲ್ ಯುರೋಪ  ಎಂದು ಒಂದು ತಾಣವಿದೆ. ಆ ತಾಣದಲ್ಲಿ  ಇಂಗ್ಲೀಶನಲ್ಲಿ ಮಾತ್ರವಲ್ಲದೇ ಅನೇಕ ಬಾಶೆಗಳಲ್ಲಿ ಮಾಹಿತಿ ಸಿಗುತ್ತದೆ. ಇನ್ನು ಇತರ ಮುಂದುವರೆದ ದೇಶಗಳಾದ ಜಪಾನ್, ಚೀನಾ, ಕೋರಿಯಾ, ಫ್ರಾನ್ಸ್, ಸ್ವೀಡನ್, ಡೆನ್ಮಾರ್ಕ್ ಹೀಗೆ ಅನೇಕ ದೇಶಗಳ ಮಿಂಬಲೆಗಳಿಗೆ ಬೇಟಿ ಕೊಟ್ಟಾಗ ಕಂಡು ಬಂದಿದ್ದು, ಎಲ್ಲರಿಗೂ ಅವರದೇ ಬಾಶೆಯಲ್ಲಿ ಮಾಹಿತಿ, ಸೇವೆ ಸಿಗುತ್ತಿದೆ. ಅನೇಕ ಬಾಶೆಗಳಿರುವ ಯುರೋಪಿನ ರೈಲು ವ್ಯವಸ್ಥೆಯಲ್ಲಿ ಇಂಗ್ಲೀಶ್ ಜೊತೆಗೆ ಬರೀ ಸ್ಪ್ಯಾನಿಶನಲ್ಲಿ ಮಾಹಿತಿ ಕೊಟ್ಟರೆ, ಅದು ಹೇಗೆ ಇತರ ಸಮುದಾಯದ ಜನರಿಗೆ ಅನುಕೂಲವಾಗದೇ ಹೇರಿಕೆಯಾಗಿ ಕಾಣಿಸುತ್ತದೋ ಅದೇ ಥರ ಬಾರತೀಯ ರೇಲ್ವೇ ಇಲಾಖೆಯಲ್ಲಿ ಕೇವಲ ಹಿಂದಿಯಲ್ಲಿ ಮಾಹಿತಿ ಕೊಡುವುದು ಇತರ ಸಮುದಾಯದ ಜನರಿಗೆ ಅದು ಹೇರಿಕೆ ಅಲ್ಲದೇ ಮತ್ತೇನೂ ಅಲ್ಲ.! ಯುರೋಪದಲ್ಲೂ ಒಕ್ಕೂಟ ವ್ಯವಸ್ಥೆ ಇದೆ, ಆದರೆ ಅಲ್ಲಿ ಜರ್ಮನ್ ಬಾಶೆಯನ್ನು ಫ್ರೇಂಚನವರ ಮೇಲೆ ಹೇರೊದು ಆಗ್ಲಿ, ಅಥವಾ ಸ್ಪೇನ್ ಬಾಶೆಯನ್ನು ಇಟಲಿಯವರ ಮೇಲೆ ಹೇರೊದು ಆಗ್ಲಿ,, ಆಗಿಲ್ಲ. ನಮ್ಮಲ್ಲಿ ಮಾತ್ರ ಯಾಕೆ.? ಅಲ್ಲಿಯವರಿಗೆ ಯುರೋಪ್ ಸುತ್ತಾಡೊಕೆ ಇಂಗ್ಲೀಶ ಬಿಟ್ಟು ಬೇರೆ ಒಂದು ಸಂವಹನ ಬಾಶೆ ಬೇಕು ಅಂತ ಯಾವತ್ತೂ ಅನ್ನಿಸಿಲ್ಲ, ನಮ್ಮಲ್ಲಿ ಎಲ್ಲರಿಗೂ ಹೀಗೆಯೇ ಅನ್ನಿಸುತ್ತದೆ. ಯಾಕೆ.? ಕೆಲವರು ವಾದಿಸಬಹುದು ಯುರೋಪಿನಲ್ಲಿ ಇರುವವು ದೇಶಗಳು, ಬಾರತದಲ್ಲಿ ಇರುವವು ರಾಜ್ಯಗಳು, ಹೀಗಾಗಿ ದೇಶಕ್ಕೊಂದು ಬಾಶೆ ಬೇಕು ಎಂದು. ಈ ಸಂದೇಹಕ್ಕೆ ಸ್ಪಶ್ಟನೆ ಸರಳವಾಗಿದೆ. ಇಲ್ಲಿ ದೇಶ, ರಾಜ್ಯ ಎಂದು ನೋಡುವುದಕ್ಕಿಂತ ಅವುಗಳನ್ನು ಒಂದು ಬಾಶೆ ಮಾತನಾಡುವ ಸಮುದಾಯ (ಜನಾಂಗ) ವಾಸಿಸುವ ಪ್ರದೇಶವಾಗಿ ನೋಡುವುದು ಹೆಚ್ಚು ಸೂಕ್ತ. ಹೀಗಾಗಿ ದೇಶ, ರಾಜ್ಯ ಎನ್ನುವುದಕ್ಕಿಂತ, ಆಯಾ ಪ್ರದೇಶದ ಜನರಿಗೆ ಎಲ್ಲ ಮಾಹಿತಿ, ಸೇವೆ, ಮನರಂಜನೆ ತಮ್ಮ ನುಡಿಯಲ್ಲಿ ಸಿಗುತ್ತಿದೆಯೋ ಇಲ್ಲವೋ ಎಂಬುದು ಮುಖ್ಯ. ಆಯಾ ಬಾಶೆಯ ಅಸ್ಮಿತೆಗೆ ದಕ್ಕೆ ಆಗುವಂತ ಪರಬಾಶಾ ಹೇರಿಕೆಯನ್ನು ಖಂಡಿಸಬೇಕಾದುದು ಸದ್ಯದ ನಡೆ.

ವೈವಿದ್ಯತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಸಿಗಬೇಕು ಗೌರವ.!
ಭಾರತ ಒಂದು ಒಕ್ಕೂಟ ವ್ಯವಸ್ಥೆಯಿರುವಂತ ದೇಶ. ನಮ್ಮಲ್ಲಿ ಅನೇಕ ಬಾಶೆ, ಸಂಸ್ಕ್ರುತಿ, ಸಂಪ್ರದಾಯಗಳಿವೆ. ಎಲ್ಲವಕ್ಕೂ ಅವುಗಳದೇ ಆದ ಮಹತ್ವ ಇದೆ, ಇತಿಹಾಸ ಇದೆ. ಹಿಂದಿ ಹೇಗೊ ಹಾಗೆ ಕನ್ನಡ, ತಮಿಳು, ತೆಲುಗು, ಗುಜರಾತಿ, ಓರಿಯಾ, ಪಂಜಾಬಿ ಎಲ್ಲವೂ ಬಾರತೀಯ ಬಾಶೆಗಳೇ. ಭಾರತದಲ್ಲಿ ಹಿಂದಿಯೊಂದೇ ಎಲ್ಲ ಕಡೆ ನಡೆಯುವ ಹಾಗಾದ್ರೆ, ಹೊರರಾಜ್ಯಗಳಿಗೆ ಹೊಗುವವರು ಅಲ್ಲಿಯ ಬಾಶೆ ಯಾಕೆ ಕಲೀಬೇಕು, ಅಲ್ಲಿ ಬಾಶೆನೇ ಬೇಡ ಅಂದಮೇಲೆ ಅಲ್ಲಿನ ಸಂಸ್ಕ್ರುತಿ, ಸಂಪ್ರದಾಯಗಳು ಯಾಕೆ ಬೇಕು. ಇಂಥ ಪರಿಸ್ಥಿತಿ ನಿರ್ಮಾಣ ಆದರೆ ಭವ್ಯ ಭಾರತದಲ್ಲಿ ವಿವಿಧತೆ ಅನ್ನೋದು ಇತಿಹಾಸ ಪುಟ ಸೇರುತ್ತೆ. ವಿವಿಧತೆ ಇಲ್ಲದ ಮೇಲೆ ಏಕತೆ ಎಲ್ಲಿಂದ.? ಆದ್ದರಿಂದ ನಮ್ಮ ಮೇಲಾಗುತ್ತಿರುವ ಹಿಂದಿ ಹೇರಿಕೆಯನ್ನು ವಿರೋದಿಸೋಣ. ಸಮಾನತೆಯ ಬೀಜವನ್ನು ಬಿತ್ತುವಂತ ಹಿಂದಿ ಸಪ್ತಾಹ, ಸೆಪ್ಟೆಂಬರ್ ೧೪ ರ ಹಿಂದಿ ದಿವಸ ತರಹದ ಆಚರಣೆಗಳನ್ನು ಪುರಸ್ಕರಿಸುವಂತ ಈಗಿನ ಬಾಶಾ ನೀತಿಯನ್ನು ಮುಲಾಜಿಲ್ಲದೇ ವಿರೋದಿಸಬೇಕು. ಎಲ್ಲ ಬಾಶೆಗಳನ್ನು ಗೌರವಿಸುವಂತ, ಸ್ಥಳೀಯ ಜನರಿಗೆ ಅನೂಕೂಲಕರವಾಗುವಂತ, ಅನಿಯಂತ್ರಿತ ವಲಸೆಯನ್ನು ತಡೆಯುವಂತ, ಪರಬಾಶಿಕರನ್ನು ಸ್ಥಳೀಯ ಬಾಶೆಯ ಮುಖ್ಯವಾಹಿನಿಗೆ ಬೆರೆಸುವಂತ ಬಾಶಾ ನೀತಿಯನ್ನು ರೂಪಿಸಬೇಕಿರುವುದು ಬಾರತದಂತ ಒಕ್ಕೂಟಕ್ಕೆ ತುರ್ತಾಗಿ ಆಗಬೇಕಿರುವುದು.

Thursday, 8 September 2011

ರೇಲ್ವೇ ಇಲಾಖೆ ಮತ್ತು ಹಿಂದಿ ಹೇರಿಕೆ.!

ವಿ.ಸೂ: ಬೇರೆ ಒಂದು ಬಾಶೆಯನ್ನು ಗೌರವಿಸುವುದಕ್ಕೂ ಅದನ್ನು ನಮ್ಮ ಮೇಲೆ ಹೇರಿಸಿಕೊಳ್ಳುವುದಕ್ಕೂ ಇರುವ ವ್ಯತ್ಯಾಸವನ್ನು ತಿಳಿದಿರುವವರು ಮಾತ್ರ ಮುಂದುವರಿಯಲು ಕೋರಿಕೆ.! 

ಸ್ವಾತಂತ್ರ್ಯ ನಂತರ, ಬಾರತೀಯತೆಗೂ ಹಿಂದಿಗೂ ತಳುಕು ಹಾಕಿ ಅದನ್ನು ರಾಶ್ಟ್ರ ಬಾಶೆ ಮಾಡಲು ಹೊರಟ ಕೇಂದ್ರ ಸರಕಾರದ ಮತ್ತು ಕೆಲವರ ಪ್ರಯತ್ನ ಅನೇಕ ಹಿಂದಿಯೇತರರ ವಿರೋದಿ ಹೋರಾಟದ ಫಲವಾಗಿ ವಿಫಲವಾಯಿತು. ಇದರ ತರುವಾಯ ಮುಂದೆ ಕೇಂದ್ರ ಸರಕಾರ ನೋಡಿಕೊಂಡ ದಾರಿಯೇ ಆಡಳಿತ ಬಾಶೆಯೆಂಬ ಹಿಂದಿನ ಬಾಗಿಲು. ಹಿಂದಿಯನ್ನು ಆಡಳಿತ ಬಾಶೆಯನ್ನಾಗಿ ಮಾಡಿ ತನ್ನ ಸಂಸ್ಥೆ, ಇಲಾಖೆ, ಬ್ಯಾಂಕುಗಳನ್ನು ಉಪಯೋಗಿಸಿ ಹಿಂದಿನ ಬಾಗಿಲ ಮೂಲಕ

Monday, 15 August 2011

ಕಲಾವಿದರು ಕಸಿದುಕೊಳ್ಳುತ್ತಿರುವ ಕನ್ನಡ ಗ್ರಾಹಕನ ಸ್ವಾತಂತ್ರ್ಯ.!

ಇವತ್ತು ಮದ್ಯಾನ್ಹ ಜೀ ಟಿವಿಯಲ್ಲಿ ಜಾನ್ಸಿ ರಾಣಿ ಅನ್ನೊ ಹಿಂದಿ ದಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿದ್ರು ಅಂತ ನಮ್ಮ ಕಿರುತೆರೆ ಕಲಾವಿದರು ಆ ವಾಹಿನಿಯ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಕಲಾವಿದರ ಪ್ರಕಾರ ಇದರಿಂದ ಕಿರುತೆರೆಯನ್ನೇ ನಂಬಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬರುತ್ತವಂತೆ. ಇದರ ಜೊತೆಗೆ ಜೀ ಟಿವಿಯ ಈ ನಡೆ ಕನ್ನಡ ವಿರೋದಿಯಂತೆ. ಇವರ ವಾದವನ್ನು ಮತ್ತು ಕನ್ನಡತನವನ್ನು ಸ್ವಲ್ಪ ಆಳವಾಗಿ ನೋಡಿ ಬರೋಣ ಬನ್ನಿ.

ಹುರುಳಿಲ್ಲದ ವಾದ: ದಾರಾವಾಹಿ ಈಗಾಗಾಲೇ ತೆಲುಗು, ತಮಿಳು ಬಾಶೆಗೆ ಡಬ್ ಆಗಿ ಅಲ್ಲಿ ಪ್ರಸಾರವಾಗುತ್ತಿದೆ. ಹಾಗಾದರೆ ಆಂದ್ರ ತಮಿಳುನಾಡಿನಲ್ಲಿ ಕಲಾವಿದರೇ ಇಲ್ಲವೇ.? ಅಲ್ಲಿಯೂ ಕಲಾವಿದರಿದ್ದಾರೆ, ಅವರಲ್ಲಿಯೂ ಅನೇಕರಿಗೆ ಕಿರುತೆರೆಯಿಂದಲೇ ಹೊಟ್ಟೆ ತುಂಬುತ್ತದೆ. ಅಲ್ಲಿ ಅವರಿಗೆ ಇಲ್ಲದ ಸಮಸ್ಯೆ ದಿಡೀರನೇ ಕರ್ನಾಟಕಕ್ಕೆ ಬಂದ ಕೂಡಲೇ ಹೇಗೆ ಹುಟ್ಟುತ್ತದೆ. ಇದಕ್ಕೆ ಯಾರು ಕಾರಣ. ಯಾಕೆ ಈ ಮನಸ್ಥಿತಿ.! ಇದೇ ಸಂದರ್ಬದಲ್ಲಿ ಒಬ್ಬ ಕಲಾವಿದರು ಹೇಳಿದ್ರು, ಒಂದು ದಾರಾವಾಹಿ ಕನ್ನಡಕ್ಕೆ ಡಬ್ ಮಾಡಲು ಬಿಟ್ಟರೆ, ಅದರ ಜೊತೆಗೆ ನೂರಾರು ದಾರಾವಾಹಿಗಳು ಬಂದು ನಿಲ್ಲುತ್ತವೆ ಅಂತ.! ಇದು ಯಾವ ಮನಸ್ಥಿತಿಯನ್ನು ತೋರಿಸುತ್ತದೆ. ಸ್ಪರ್ದೆ ಎದುರಿಸುವ ಹಿಂಜರಿಕೆಯನ್ನು ತೋರಿಸುತ್ತದೆ ಅಲ್ಲವೇ.! ಸ್ಪರ್ದೆ ಎಂದ ತಕ್ಷಣ ಬೀದಿಗೆ ಬರುವ ಮಾತು ಇತರ ಬಾಶೆಯ ಕಲಾವಿದರ ಬಾಯಲ್ಲಿ ಬರದೇ ಬರೀ ನಮ್ಮ ಕಲಾವಿದರ ಬಾಯಲ್ಲಿ ಮಾತ್ರ ಏಕೆ ಬರುತ್ತದೆ.? ಒಂದು ಹಿಂದಿ ಬಾಶೆಯಲ್ಲಿರುವ ದಾರಾವಾಹಿಯನ್ನು ಕನ್ನಡ ಚಾನಲ್ಲಿನಲ್ಲಿ ಕನ್ನಡದಲ್ಲಿ ತೋರಿಸಿದರೇ ಅದು ಕನ್ನಡ ವಿರೋದಿ ಎನ್ನುವ ಇವರ ಕನ್ನಡತನಕ್ಕೆ ಏನನ್ನಬೇಕು. ಡಬ್ ಮಾಡದೇನೇ ಹಿಂದಿಯಲ್ಲೇ ತೋರಿಸಿದರೆ ಅದು ಕನ್ನಡಪರವಾಗುವುದೋ.!

ಅರ್ಥವಾಗದ ಕನ್ನಡತನ: ಇಷ್ಟಕ್ಕೂ ಡಬ್ಬಿಂಗ್ ವಿಶಯ ಬಂದಾಗ ಕನ್ನಡವನ್ನು ಮುಂದೆ ಮಾಡಿ ವಾದ ಮಾಡುವವರು, ಅನೇಕ ಕನ್ನಡ ವಾಹಿನಿಯಲ್ಲಿ ಹಿಂದಿ ಹಾಡುಗಳನ್ನು ಪ್ರಸಾರ ಮಾಡುವುದು, ಆ ಹಾಡಿಗೆ ಕುಣಿಯುವುದು ನಡೆದಾಗ ಯಾವ ಲೋಕದಲ್ಲಿದ್ದರು,? ಅದು ಅವರಿಗೆ ಕನ್ನಡ ವಿರೋದಿಯಾಗಿ ಕಾಣಲಿಲ್ಲವೇ.? ಆ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಹೋಗಿದ್ದು ಇದೇ ಕಲಾವಿದರಲ್ಲವೇ.? ನೀರಾವರಿ, ಶಾಸ್ತ್ರೀಯ ಬಾಶೆ ಸ್ಥಾನಮಾನ ಹೀಗೆ ಅನೇಕ ವಿಶಯಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ದ್ವನಿಗೂಡಿಸದ ಇವರ ಕನ್ನಡತನ ಆಗ ಎಲ್ಲಿತ್ತು.? ಮೊನ್ನೆ ನಡೆದ ಕನ್ನಡ ಚಲನಚಿತ್ರ ಪ್ರಶಸ್ತಿ ಸಮಾರಂಬದಲ್ಲಿ ಮೂರು ಬಿಟ್ಟವರಂತೆ ಹಿಂದಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದಾಗ ಎಲ್ಲಿ ಅಡಗಿತ್ತು ಇವರ ಕನ್ನಡ ಸ್ವಾಭಿಮಾನ.? ಡಬ್ಬಿಂಗ್ ವಿರೋದಿಯಂತಹ ನಿಲುವಿನಿಂದಾಗಿಯೇ ಇವತ್ತು ವಿಜ್ಞಾನ (ಡಿಸ್ಕವರಿ, ನ್ಯಾಟ್ ಜಿಯೊ,ಅನಿಮಲ್ ಪ್ಲಾನೇಟ್), ಕಾರ್ಟೂನ್ (ಪೊಗೊ, ಡಿಸ್ನಿ, ಕಾರ್ಟೂನ್ ನೆಟವರ್ಕ್) ತರಹದ ವಿಶಯಗಳು ಕನ್ನಡದ ಮಕ್ಕಳಿಗೆ ಆಡುವ ನುಡಿಯಲ್ಲಿ ದೊರಕದೇ ಅವರು ಅವಕಾಶ ವಂಚಿತರಾಗುತ್ತಿರುವುದು. ಹೋಗಲಿ, ಡಬ್ಬಿಂಗ್ ಬಗ್ಗೆ ಇಶ್ಟೊಂದು ಕಿಡಿ ಕಾರುವ ಇವರು ಇಂಗ್ಲೀಶ್ ಚಿತ್ರ ತೆಲುಗಿಗೆ, ಹಿಂದಿಗೆ ಡಬ್ ಆಗಿ ರಾಜ್ಯದಾದ್ಯಂತ ಓಡುತ್ತ ಇದೆ, ಇದು ಹೇಗೆ ಅವರ ಕಣ್ಣಿಗೆ ಕಾಣಲಿಲ್ಲ.! ಹಿಂದಿ ಸಿಂಗಂ ಚಿತ್ರದಲ್ಲಿ ಕನ್ನಡಿಗರ ಮೇಲೆ ಜನಾಂಗೀಯ ನಿಂದನೆ ನಡೆದಾಗ ಈಗ ಪ್ರತಿಭಟನೆ ಮಾಡಿದವರಲ್ಲಿ ಎಶ್ಟು ಜನ ಬೀದಿಗಿಳಿದಿದ್ದರು.? ಓಟ್ಟಾರೆ ಏನಾದ್ರು ಆಗಲಿ, ಯಾವುದೇ ಮನರಂಜನೆ ಕನ್ನಡಕ್ಕೆ ಡಬ್ ಆಗಬಾರದು ಎನ್ನುವ ವಾದದಲ್ಲಿ ಅಡಗಿರೋದು ಕನ್ನಡದ ಹಿತಾಸಕ್ತಿಯೋ, ಸ್ವಹಿತಾಸಕ್ತಿಯೋ ಎಂಬುದು ಅರ್ಥವಾಗದ ಸಂಗತಿಯೇನಲ್ಲ.!

ಒಟ್ಟಿನಲ್ಲಿ, ಗ್ರಾಹಕನ ಬೇಡಿಕೆಗೆ ಅನುಗುಣವಾಗಿ ಜೀ ಟಿವಿಯವರು ದಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡಿದ್ದಾರೆ. ಜಾನ್ಸಿ ರಾಣಿ ದಾರಾವಾಹಿ ಹಿಂದಿಯಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದರೆ ದ್ವನಿ ಎತ್ತಬೇಕು. ಕನ್ನಡದಲ್ಲೇ ಪ್ರಸಾರ ಆಗುತ್ತಿರುವಾಗ ಅದರಲ್ಲಿ ತಪ್ಪೇನಿದೆ..? ಅದು ತಪ್ಪು ಅಂತ ಸಮರ್ಥಿಸಲು ಅವಕಾಶಗಳೇ ಇಲ್ಲ. ಅದನ್ನು ತಪ್ಪು ಅನ್ನುವವರ ವಾದವೇ ತಪ್ಪು. ತಮ್ಮ ಹೊಟ್ಟೆಪಾಡು ಎಂದು ಹೇಳುವ ಕಲಾವಿದರು ಆ ಹೊಟ್ಟೆಪಾಡಿಗೆ ಕಾರಣನಾದ ಅನ್ನದಾತನಿಗೆ ತನ್ನ ನುಡಿಯಲ್ಲೇ ಮನರಂಜನೆ ಪಡೆದುಕೊಳ್ಳಲು ಬಿಡದೇ ವಂಚಿಸುತ್ತಿದ್ದಾರೆ. ಈ ಜಗತ್ತಿನಲ್ಲಿ ಪ್ರತಿಯೊಂದು ಉದ್ದಿಮೆ ಅವಲಂಬಿತವಾಗಿರುವುದು ಗ್ರಾಹಕನ ಮೇಲೆನೇ. ಮನರಂಜನೆ ಉದ್ದಿಮೆ ಅಂತ ನೋಡಿದರೆ ನಮಗೆ ಕಾಣುವುದು ಗ್ರಾಹಕ, ಟಿವಿ ಮಾಲೀಕ, ಜಾಹೀರಾತುದಾರ ಮತ್ತು ಸರಕು ಪೂರೈಕೆದಾರ. ಇಲ್ಲಿ ಇತರ ಮೂವರೂ ಅವಲಂಬಿತವಾಗಿರುವುದು ಗ್ರಾಹಕನ ಮೇಲೆ. ಹೀಗಾಗಿ ಗ್ರಾಹಕನನ್ನು ಯಾರೋ ಸರಕು ಪೂರೈಕೆದಾರರು ನಿಯಂತ್ರಿಸುವುದು ಬಾಲವೇ ನಾಯಿನ ಅಲ್ಲಾಡಿಸಿದಂತೆ ಆಗುತ್ತದೆ. ಒಂದು ಕಡೆ ಸ್ವಾತಂತ್ರ್ಯ ಬಂದಿದೆ ಅಂತ ಆಚರಣೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಆ ಸ್ವಾತಂತ್ರ್ಯವನ್ನೇ ಕಿತ್ತುಕೊಂಡು ಗ್ರಾಹಕನನ್ನು ನಿಯಂತ್ರಿಸಲು ಕೆಲವರು ಹೊರಟಿರುವುದು ಸಂವಿದಾನ ವಿರೋದಿ ನಡೆಯಾಗಿದೆ.