Sunday, 8 April 2012

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕನ್ನಡತನ

ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (BIAL) 'ಕೆಂಪೇಗೌಡರ ಹೆಸರಿಡಲು ವಿಮಾನಯಾನ ಸಚಿವರು ಒಪ್ಪಿಗೆ ಸೂಚಿಸಿದ್ದು, ಕುರಿತ ಪ್ರಸ್ತಾವನೆಯನ್ನು ಶೀಘ್ರವೇ ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಹೇಳಿ ಕೆಂಪೇಗೌಡರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಕನ್ನಡಿಗರಿಗೆ ಮುಖ್ಯವಾಗಿ ಬೆಂಗಳೂರಿಗರಿಗೆ ಹುಗ್ಗಿ ಊಟ ಉಣಬಡಿಸಿದ್ದಾರೆ. ಸುಮಾರು ಒಂದು ವರುಶದ ಹಿಂದೆ ಈ ಕುರಿತ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಕಳುಹಿಸಿತ್ತು. ಈ ಮೂಲಕ ಹೆಸರಿನ ಬಗ್ಗೆ ಜನರಲ್ಲಿದ್ದ ಗೊಂದಲಗಳಿಗೆ, ರಾಜಕೀಯ ಲೆಕ್ಕಾಚಾರಗಳಿಗೆ ತೆರೆ ಎಳೆದಿದ್ದಾರೆ.

ಬೆಂಗಳೂರು ನಿರ್ಮಾತೃಗೆ ಸಂದ ಗೌರವ:
೧೬ ನೇ ಶತಮಾನದಲ್ಲಿ ಬೆಂಗಳೂರು ಎಂಬ ನಗರದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರದ್ದು. ಅಂದಿನಿಂದ ಇಂದಿನವರೆಗೆ ಆರ್ಥಿಕವಾಗಿ ಮತ್ತು ಸಾಂಸ್ಕ್ರುತಿಕವಾಗಿ ಸಾಕಷ್ಟು ಬೆಳೆದ ಬೆಂಗಳೂರು ಇಂದು ಸಾಫ್ಟವೇರ್ ತಂತ್ರಜ್ನಾನದ ಬೆಳವಣಿಗೆ ಮೂಲಕ ಚಿರಪರಿಚಿತವಾದ ನಗರವಾಗಿ ಜಗತ್ತಿನ ಗಮನ ಸೆಳೆದಿದೆ. ಇಂಥ ಒಂದು ನಗರದ ಉದಯಕ್ಕೆ, ಅದರ ಏಳಿಗೆಯ ದೂರದೃಷ್ಟಿಗೆ ಮುನ್ನುಡಿ ಬರೆದ ಇತಿಹಾಸಕಾರನ ಹೆಸರನ್ನು ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡುವ ಮೂಲಕ ಅವರನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ನಿಜಕ್ಕೂ ಮೆಚ್ಚುವಂಥದ್ದು. ವಿಮಾನ ನಿಲ್ದಾಣಗಳಿಗೆ ಸ್ಥಳೀಯ ಇತಿಹಾಸಗಾರರ ಹೆಸರನ್ನು ಇಡುತ್ತಿರುವುದಕ್ಕೆ ಅನೇಕ ಉದಾಹರಣೆಗಳೂ ಇವೆ. ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಜಯಪ್ರಕಾಶ ನಾರಾಯಣ ವಿಮಾನ ನಿಲ್ದಾಣ, ನೇತಾಜಿ ಸುಭಾಶಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೀಗೆ ಹೇಳಬಹುದು.

ನಮ್ಮ ಸ್ವತ್ತುಗಳು ನಮ್ಮವರನ್ನು ಬಿಂಬಿಸುವ ವೇದಿಕೆಗಳಾಗಲಿ:
ಯಾವುದೋ ಒಂದು ಯೋಜನೆ, ಸ್ಥಳ, ಸಂಸ್ಥೆಯನ್ನು ಹೆಸರಿಸುವ ಸಮಯದಲ್ಲಿ ನಮ್ಮನ್ನಾಳುತ್ತಿದ್ದವರಿಂದ ಮೊದಲು, ಇಂದಿರಾ ಗಾಂದಿ, ರಾಜೀವ ಗಾಂದಿ, ನೆಹರುವಾಜಪೇಯಿ ಹೆಸರುಗಳೇ ಕೇಳಿ ಬರುತ್ತಿದ್ದವು. (ಉದಾ: ರಾಜೀವ ಗಾಂದಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ) ಎಲ್ಲರೂ ತಮ್ಮ ತಮ್ಮ ಪಕ್ಷದ ಬ್ರಾಂಡ್ ಅಂಬಾಸಿಡರಗಳನ್ನು ಇಲ್ಲಿ ತಂದು ಕೂರಿಸಲು ಹಾತೊರಿಯುತ್ತಿದ್ದರು. ಆದರೆ ಬಾರಿ ಕೇಳಿ ಬಂದದ್ದು ಕರ್ನಾಟಕದ ಇತಿಹಾಸಕಾರರ ಹೆಸರುಗಳೇ. ವಿಮಾನ ನಿಲ್ದಾಣದ ಕಾಮಗಾರಿ ಶುರುವಾದಾಗಿನಿಂದ ಕರವೇ,, ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಒತ್ತಾಯಿಸುತ್ತ ಬಂದ ಪರಿಣಾಮವಾಗಿ, ಮುಂದಿನ ದಿನಗಳಲ್ಲಿ ಹೆಸರಿನ ಬಗ್ಗೆ ಚರ್ಚೆಗಳಾದಾಗ ಕೇಳಿಬಂದ ಹೆಸರುಗಳೆಲ್ಲವೂ ಕರ್ನಾಟಕದ ಇತಿಹಾಸಕಾರರದ್ದೇ (ಬಸವಣ್ಣ, ವಿಶ್ವೇಶ್ವರಯ್ಯ, ಟಿಪ್ಪು ಸುಲ್ತಾನ್) ಆಗಿದ್ದವು. ಕರ್ನಾಟಕದಲ್ಲಿ ದಶಕದಿಂದಿಚಿಗೆ ನಡೆದು ಬಂದ ಕನ್ನಡ ಪರ ಸಂಘಟನೆಗಳ ಹೋರಾಟಗಳು, ಕನ್ನಡ ಪರವಾದ ಮಾತುಗಳು ಇಂದು ಇಂಥ ಒಂದು ಬೆಳವಣಿಗೆಗೆ ನಾಂದಿ ಹಾಡಿದೆಕರ್ನಾಟಕದಲ್ಲಿ ಜಾರಿಯಾಗುವ ಯೋಜನೆಗಳು, ಕಟ್ಟಲಾಗುವ ಸಂಸ್ಥೆಗಳು, ನಿರ್ಮಾಣವಾಗುವ ಸ್ಥಳಗಳು ಕರ್ನಾಟಕದ ಇತಿಹಾಸಗಾರರನ್ನು ಬಿಂಬಿಸುವ ವೇದಿಕೆಗಳಾಗಬೇಕೇ ಹೊರತು, ದೇಶದ ಐಕ್ಯತೆ, ರಾಷ್ಟ್ರೀಯತೆ ಹೆಸರಿನಲ್ಲಿ ನಾಡಿಗಾಗಿ ದುಡಿದ ಸ್ಥಳೀಯರನ್ನು ಕಡೆಗಣಿಸುವ ರಾಜಕೀಯದ ಪೊಳ್ಳು ನಂಬಿಕೆಗಳಾಗುವುದು ಸರಿಯಲ್ಲ.

ಕನ್ನಡತನ ಬೆಳೆಯಲಿ:
ಇಂದು ನಮ್ಮಲ್ಲಿ ಆಗಬೇಕಾದ ಬಹುಮುಖ್ಯ ಕೆಲಸ ಕನ್ನಡತನದ ಜಾಗ್ರುತಿಯೇ ಆಗಿದೆ. ಕನ್ನಡತನವನ್ನು ರಾಷ್ಟ್ರೀಯತೆಗೆ ಪರ್ಯಾಯವಾಗಿಯೋ ಅಥವಾ ಮಾರಕವಾಗಿಯೋ ನೋಡುವ ಮನಸ್ಥಿತಿ ದೂರಾಗಬೇಕಿದೆ. ಕನ್ನಡತನ ಎಂಬುದು ಕೂಡ ಭಾರತೀಯತೆಯೇ ಆಗಿದೆ ಎಂಬುದು ಮನವರಿಕೆಯಾಗಬೇಕಿದೆ. ನಿಟ್ಟಿನಲ್ಲಿ, ಕರ್ನಾಟಕದ ಇತಿಹಾಸವನ್ನು ಬಿಂಬಿಸುವ ಪ್ರಯತ್ನವೂ ಕೂಡ ಸಹಕಾರಿಯಾಗಲಿದೆ. ಅದೇ ರೀತಿ ಕನ್ನಡತನ ಬೆಳೆಸುವ ಕೆಲಸ ಬೆಂಗಳೂರಿನ ಎಲ್ಲ ಕಡೆ ಆಗಬೇಕಿದೆ. ಬೆಂಗಳೂರಿಗರಿಗೆ ಹೆಚ್ಚು ತಲುಪುವ ಬಿ.ಎಮ್.ಟಿ.ಸಿ ಆಗಿರಬಹುದು ಅಥವಾ ಟ್ರಾಫಿಕ್ ಪೊಲೀಸ್ ಇಲಾಖೆ ಆಗಿರಬಹುದು ಅಥವಾ ಖಾಸಗಿ ವ್ಯವಸ್ಥೆಯೇ ಆಗಿರಬಹುದು ಎಲ್ಲ ಕಡೆಯೂ ಕನ್ನಡತನವನ್ನು ಎತ್ತಿ ಹಿಡಿಯುವ ಕೆಲಸವಾಗಬೇಕಿದೆ. ಕನ್ನಡತನವಿಲ್ಲದ ಬೆಂಗಳೂರನ್ನು ನಮ್ಮ ಬೆಂಗಳೂರು ಎನ್ನಲು ಸಾದ್ಯವೇ.?

Tuesday, 6 March 2012

ವಲಸಿಗರಿಗೆ ವ್ಯವಸ್ಥೆ ಕಟ್ಟುತ್ತಿರುವ ಆರ್.ಟಿ.ಓ. ಕಚೇರಿ.


ಈಚೆಗೆ ಕೆಲವು ದಿನಗಳ ಹಿಂದೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ಹೇಗೆ ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದರ ಬಗ್ಗೆ ಬರೆದಿದ್ದೆ. ಈಗ ಸಾರಿಗೆ ಇಲಾಖೆಗೆ ಸಂಬಂದಿಸಿದ ಮತ್ತೊಂದು ಅಂಗದ ಸರದಿ. ಚಾಲನಾ ಪರವಾನಗಿ ಪಡೆದುಕೊಳ್ಳುವುದು, ವಾಹನಗಳ ನೊಂದಣಿ ಮಾಡಿಸಿಕೊಳ್ಳುವುದು, ಅವುಗಳಿಗೆ ಸಂಬಂದಿಸಿದಂತೆ ತಿದ್ದುಪಡಿಗಳಾಗುವುದು ಹೀಗೆ ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಸಾರಿಗೆ ಇಲಾಖೆಯ ಆರ್.ಟಿ.ಕಚೇರಿಗೆ ಭೇಟಿ ಕೊಡುತ್ತಾರೆ.

ಗಾಡಿ ಕಲಿಯೋ ಮುನ್ನ ಇಂಗ್ಲೀಶ್ ಕಲಿರಿ: ಹೌದು. ಚಾಲನಾ ಪರವಾನಗಿ ಪಡೆಯಬೇಕಿದ್ದರೆ, ನೀವು ನಿಮ್ಮ ದಿನನಿತ್ಯದ ವ್ಯವಹಾರಗಳಿಗೆ ಕನ್ನಡವನ್ನೇ ನೆಚ್ಚಿಕೊಂಡಿದ್ದರೆ ಗಾಡಿ ಕಲಿಯುವ ಮುನ್ನ ಇಂಗ್ಲೀಶ್ ಕಲಿರಿ ಎನ್ನುತದೆ ನಮ್ಮ ರಾಜ್ಯ ಸರಕಾರದ ಸಾರಿಗೆ ಇಲಾಖೆ. ಆಡಳಿತದಲ್ಲಿ ಕನ್ನಡ ಅಂತ ಹೇಳುವ ಸರಕಾರ ಹೀಗೆ ಹೇಳಲು ಸಾದ್ಯವೇ ಅಂತಿರಾ.! ಹೀಗಂತ ಆದೇಶವನ್ನೇನು ಸರಕಾರ ಹೊರಡಿಸಿಲ್ಲ, ಆದರೆ ಅಲ್ಲಿನ ವ್ಯವಸ್ಥೆ ಮಾತ್ರ ಸ್ಪಷ್ಟವಾಗಿ ಇದನ್ನೇ ಹೇಳುತ್ತದೆ. ಯಾಕಂದ್ರೆ, ಆರ್.ಟಿ. ಕಚೇರಿಯಲ್ಲಿನ ವ್ಯವಹಾರವೆಲ್ಲ ಸಂಪೂರ್ಣ ಇಂಗ್ಲೀಷಮಯವಾಗಿದೆ. ಪರವಾನಗಿ ಅರ್ಜಿ, ಗಾಡಿ ನೊಂದಣಿ ಅರ್ಜಿ, ಗಾಡಿ ಮಾಲೀಕತ್ವ ಬದಲಿಸಲು ಬಳಸುವ ಅರ್ಜಿ   ಹೀಗೆ ಯಾವ ಅರ್ಜಿಯಲ್ಲೂ ಒಂದಕ್ಷರ ಕನ್ನಡವಿಲ್ಲ. ಪರವಾನಗಿ ಅಥವಾ ನೊಂದಣಿ ಮಾಡಿಸಲು ಹೋದವರಿಗೆ ಇದು ಗಮನಕ್ಕೆ ಬಂದಿರಬಹುದು. ಕನ್ನಡ ಬಾರದವರು ಸಲೀಸಾಗಿ ತಮ್ಮ ಕೆಲಸ ಮಾಡಿಕೊಳ್ಳುತ್ತಾರೆ, ಆದರೆ ವಿಪರ್ಯಾಸವೆಂದರೆ ತಮ್ಮ ದಿನನಿತ್ಯದ ವ್ಯವಹಾರಗಳಿಗಾಗಿ ಕನ್ನಡವನ್ನೇ ನೆಚ್ಚಿಕೊಂಡವರು ಸ್ವಾಬಾವಿಕವಾಗಿ ಇನ್ನೊಬರ ಸಹಾಯ ಪಡೆಯಲೇ ಬೇಕಾಗುತ್ತದೆ. ಆಗ ನೆನಪಾಗುವುದೇ ಏಜೆಂಟರು. ಹೀಗಾಗಿ ಸಾರಿಗೆ ಇಲಾಖೆಯ ವ್ಯವಸ್ಥೆಯಲ್ಲಿ ಸ್ಥಳೀಯರ ಬಾಶೆಯಾದ ಕನ್ನಡ ಇಲ್ಲದಿರುವುದು ಕೂಡ ಏಜೆಂಟರ ಹಾವಳಿ ಹೆಚ್ಚಾಗಲು ಪ್ರಮುಖ ಕಾರಣ ಎಂದರೆ ತಪ್ಪಾಗಲ್ಲ.

ಯಾರಿಗಾಗಿ ವ್ಯವಸ್ಥೆ: ಕನ್ನಡಿಗರ ಪ್ರತಿನಿಧಿಯಾಗಿ ಅವರ ಅನುಕೂಲತೆಗಳನ್ನು ಗಮನದಲ್ಲಿರಿಸಿಕೊಂಡು ಕೆಲಸ ನಿರ್ವಹಿಸಬೇಕಾದ್ದು ಸರಕಾರದ ಜವಾಬ್ದಾರಿ. ಕರ್ನಾಟಕ ಸರಕಾರ ಕಟ್ಟುವ ವ್ಯವಸ್ಥೆ ಕನ್ನಡಿಗರಿಗೆ ಎಂಬುದು ದಿಟವಾಗಿದ್ದರೆ ವ್ಯವಸ್ಥೆ ನಿರ್ಮಾಣವನ್ನು ಕನ್ನಡಿಗರ ಬಾಶೆ/ಆಡಳಿತ ಬಾಶೆ ಮೂಲಕನೇ ಕಲ್ಪಿಸಿಕೊಡಬೇಕಿರುವುದು ರಾಜ್ಯ ಸರಕಾರ ಹೊಣೆ. ಕನ್ನಡವನ್ನು ಕಲಿಯದವರು ಕೂಡ ಇಲ್ಲಿ ಆರಾಮಾಗಿ ತಮ್ಮ ವ್ಯವಹಾರವನ್ನು ನಿಭಾಯಿಸುತ್ತಾರೆ. ಆದರೆ ಕನ್ನಡವನ್ನು ನೆಚ್ಚಿಕೊಂಡವರಿಗೆ ಕರ್ನಾಟಕದಲ್ಲೇ ಅದೂ ಸರಕಾರದ ಇಲಾಖೆಯಲ್ಲೇ ಸೇವೆ ಲಭ್ಯವಿಲ್ಲ ಎಂದರೆ ಆಡಳಿತದಲ್ಲಿ ಕನ್ನಡ ಎಂಬುದಕ್ಕೆ ಅರ್ಥವೆಲ್ಲಿದೆ. ಬಾಶಾ ಸೂತ್ರವನ್ನು ನಾವು ಹೀಗೆ ಹೇಳಬಹುದು. ಸ್ಥಳೀಯರ ಅನುಕೂಲಕ್ಕಾಗಿ ಸ್ಥಳೀಯ ಬಾಶೆ ಮತ್ತು ವಲಸಿಗರ ಅನುಕೂಲಕ್ಕಾಗಿ ಇಂಗ್ಲೀಶ್ ಬಾಶೆ ಬಳಕೆ ಮಾಡಬಹುದು. ಆದರೆ ಸಾರಿಗೆ ಇಲಾಖೆ ಇಂಗ್ಲೀಶ್ ಒಂದನ್ನೇ ತಮ್ಮ ವ್ಯವಹಾರದಲ್ಲಿ ಬಳಸುವುದನ್ನು ನೋಡಿದರೆ, ವಲಸಿಗರಿಗೆನೇ ವ್ಯವಸ್ಥೆಯನ್ನು ಕಟ್ಟುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಸರಕಾರದ ಆಡಳಿತ ರಾಜ್ಯದ ಜನಸಾಮಾನ್ಯರಿಗೆ ತಲುಪಬೇಕು ಎನ್ನುವ ಉದ್ದೇಶದಿಂದಲೇ ಅಲ್ಲವೇ ಆಡಳಿತದಲ್ಲಿ ರಾಜ್ಯದ ಜನರ ನುಡಿಯಾದ ಕನ್ನಡದ ಅನುಷ್ಟಾನ ಆಗಬೇಕು ಎಂದಿದ್ದು. ಹೀಗಿರುವಾಗ ಜನರ ನುಡಿಯನ್ನೇ ವ್ಯವಸ್ಥೆಯಿಂದ ದೂರ ಇಡುವುದು, ಕನ್ನಡವನ್ನು ಬಳಕೆ ಮಾಡಲು ಅವಕಾಶ ನೀಡದೇ ಇರುವುದು ಹೇಗೆ ಆಡಳಿತವನ್ನು ಪರಿಣಾಮಕಾರಿಯಾಗಿಸಲು ಸಾದ್ಯ.!