Thursday, 12 April 2012

ವಿ.ಆರ್.ಎಲ್ ಸಾರಿಗೆ ಮನರಂಜನೆ ಕನ್ನಡದಲ್ಲಿರಲಿ.

ನಮ್ಮ ನಾಡಿನ ಹೆಮ್ಮೆಯ ಉದ್ಯಮಿ ವಿಜಯ ಸಂಕೇಶ್ವರ ಅವರ ಸಮೂಹ ಸಂಸ್ಥೆ ವಿ.ಆರ್.ಎಲ್. ಇಂದು ವಿ.ಆರ್.ಎಲ್ ನಾಡಿನ ಹತ್ತಾರು ಲಕ್ಷ ಜನರಿಗೆ ಸೇವೆ ನೀಡುತ್ತಿದೆ, ಹತ್ತಾರು ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸಿದೆ ಎಂಬುದು ಎಷ್ಟು ಸತ್ಯವೋ, ಇಂಥ ಒಂದು ಸಂಸ್ಥೆ ದೈತ್ಯಾಕಾರವಾಗಿ ಬೆಳೆಯುವುದರಲ್ಲಿ ಅದನ್ನು ಸಾರಿಗೆ, ಪತ್ರಿಕೋದ್ಯಮ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಪೋಷಿಸಿದ, ಪ್ರೋತ್ಸಾಹಿಸಿದ ಕನ್ನಡಿಗರ ಪಾತ್ರ ಬಹಳ ದೊಡ್ಡದು ಎಂಬುದು ಕೂಡ ಅಷ್ಟೆ ಸತ್ಯ


ಕನ್ನಡ ಮನರಂಜನೆಗೆ ಸಿಕ್ಕಿತು ಮನ್ನಣೆ
ಇಂಥ ಹೆಮ್ಮೆಯ ಸಂಸ್ಥೆಯಲ್ಲಿ ಕನ್ನಡೇತರ ಮನರಂಜನೆಗೆ ಈ ಮೊದಲು ಹೆಚ್ಚು ಒತ್ತು ಕೊಡಲಾಗುತ್ತಿತ್ತು. ತನ್ನ ಗ್ರಾಹಕರು ಕನ್ನಡ ಮನರಂಜನೆಗೆ ಆಗ್ರಹ ಪಡಿಸಿದರೂ ಡೋಂಟ್ ಕೇರ್ ಅನ್ನೋರೀತಿ ವರ್ತಿಸಿದ್ದ ವಿ.ಆರ್.ಎಲ್, ಅದನ್ನು ನಿರ್ಲಕ್ಷಿಸಿತ್ತು ಮತ್ತು ತಮ್ಮ ಬಸ್ಸುಗಳಲ್ಲಿನ ಕನ್ನಡೇತರ ಮನರಂಜನೆಯನ್ನು ಸಮರ್ಥಿಸಿಕೊಳ್ಳಲು, ಮನರಂಜನೆ ಕಡ್ಡಾಯ ಅಲ್ಲ, ಪೂರಕ (Complimentary) ಮಾತ್ರ ಮತ್ತು ಕನ್ನಡ ಪ್ರೇಮದ ಪಾಠ ಇನ್ನೊಬ್ಬರಿಂದ ಹೇಳಿಸಿಕೊಳ್ಳಬೇಕಿಲ್ಲ, ವಿ.ಆರ್.ಎಲ್ ಸಂಸ್ಥೆ ಕನ್ನಡಕ್ಕೆ ಪ್ರಾದಾನ್ಯತೆ ನೀಡಿದೆ ಎಂದೆಲ್ಲ ಹೇಳಿದ್ದರು. ಕನ್ನಡ ಪ್ರೇಮದ ಕಾರಣಕ್ಕೆ ಕನ್ನಡ ಚಿತ್ರವನ್ನು ಗ್ರಾಹಕರು ಆಗ್ರಹಿಸುತ್ತಾರೆ ಎಂದು ಅಂದುಕೊಳ್ಳುವುದು ಎಂಥ ಮೂರ್ಖತನ. ಇದೊಂದು ಕೆಟ್ಟ ಸಂಪ್ರದಾಯ ಹುಟ್ಟಿಕೊಳ್ಳುತ್ತಿದೆ. ಗ್ರಾಹಕರು ತಮ್ಮ ಅನುಕೂಲಕ್ಕಾಗಿ ಕನ್ನಡದ ಸೇವೆ ಕೇಳಿದರೆ ಕನ್ನಡ ಪ್ರೇಮಿ, ಅಬಿಮಾನಿ ಎಂದೆಲ್ಲ ಸಂಬೋದನೆಗಳು ಶುರು ಆಗಿ ಬಿಡುತ್ತವೆ. ಕನ್ನಡ ಮನರಂಜನೆಯ ಆಗ್ರಹದಲ್ಲೂ ಅನುಕೂಲ ಅಡಗಿದೆ ಹೊರತು ಕನ್ನಡ ಪ್ರೇಮದ ಪ್ರಶ್ನೆ ಅಪ್ರಸ್ತುತ. ಇನ್ನು, ಮನರಂಜನೆ ಪೂರಕನಾದರೂ ಆಗಿರ್ಲಿ, ಕಡ್ಡಾಯವಾದ್ರೂ ಆಗಿರ್ಲಿ, ಮನರಂಜನೆ ಹಾಕುವುದಾದರೆ ಬಸ್ಸಿನ ಸೇವೆ ಬಳಸುವ ಬಹುತೇಕ ಗ್ರಾಹಕರ ನುಡಿಯಾದ ಕನ್ನಡದ ಮನರಂಜನೆನೇ ಆಗಿರಲಿ. ನಮ್ಮ ಅನುಕೂಲಕ್ಕಾಗಿ ಕನ್ನಡದಲ್ಲಿ ಮನರಂಜನೆ ಕೊಡಿ ಎಂಬ ಗ್ರಾಹಕರ ನಿರಂತರ ಒತ್ತಾಯದ ಪರಿಣಾಮವಾಗಿ ವಿ.ಆರ್.ಎಲ್ ನಲ್ಲಿ ಬದಲಾವಣೆಯ ಗಾಳಿ ಈಚೆಗೆ ಬೀಸಲಾರಂಬಿಸಿತ್ತು. ಕರ್ನಾಟಕದಲ್ಲಿ ಸಂಚರಿಸುವ ತಮ್ಮ ಎಲ್ಲ ಬಸ್ಸುಗಳಲ್ಲಿ ಕನ್ನಡ ಚಲನಚಿತ್ರ ಮಾತ್ರ ಪ್ರದರ್ಶಿಸಲು ನಿರ್ದರಿಸಿದ್ದೇವೆ ಎಂಬ ಸಕಾರಾತ್ಮಕ ಉತ್ತರ ಬಂದಿತ್ತು. ಅಷ್ಟೇ ಅಲ್ಲದೇ ಮುಂಬರುವ ದಿನಗಳಲ್ಲಿ ಯಾವುದೇ ಅನ್ಯಬಾಶೆ ಚಲನಚಿತ್ರ ಪ್ರದರ್ಶಿಸಿದಲ್ಲಿ ಗಮನಕ್ಕೆ ತರಬೇಕೆಂದು ಹೇಳಿದ್ದರು. ಬದಲಾವಣೆ ಇಲ್ಲಿಯವರೆಗೂ ಪೂರ್ಣ ಪ್ರಮಾಣದಲ್ಲಿ ಅನುಷ್ಟಾನ ಬರದಿದ್ದರೂ, ಅಲ್ಲಲ್ಲಿ ಆಗಾಗ ಕೆಲವು ಲೋಪಗಳು ಕಂಡು ಬಂದರೂ ಕರ್ನಾಟಕದಲ್ಲಿ ಸಂಚರಿಸುವ ಬಸ್ಸುಗಳಲ್ಲಿ ಕನ್ನಡ ಮನರಂಜನೆಗೆ ಒತ್ತು ಕೊಟ್ಟಿರುವುದು ಕಾಣುತ್ತಿದೆ ಎಂಬುದು ಬದಲಾವಣೆಯ ಸ್ಪಷ್ಟ ನಿದರ್ಶನ.
ಅಂತರರಾಜ್ಯ ಸಾರಿಗೆಗೂ ಬೀಸಿದ ತಂಗಾಳಿ.
ಬದಲಾವಣೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು. ಮುಂಬಯಿ, ಪುಣೆ, ಹೈದರಾಬಾದಗಳಿಗೆ ತೆರಳುವ ಬಸ್ಸುಗಳಲ್ಲಿ ಎಂದಿನಂತೆ ಕನ್ನಡೇತರ ಮನರಂಜನೆ ಜಾರಿಯಲ್ಲಿತ್ತು. ದಿನವೂ ಊರುಗಳಿಗೆ ತೆರಳುವ ಬಸ್ಸುಗಳಲ್ಲಿ ಕೂಡ ಹೆಚ್ಚಿನವರು ಕನ್ನಡ ಬಲ್ಲವರೇ ಆಗಿರುವ ಕಾರಣ, ಅಂತರರಾಜ್ಯ ಬಸ್ಸುಗಳಲ್ಲೂ ಕನ್ನಡ ಮನರಂಜನೆ ಅಳವಡಿಸುವಂತೆ, ಪುಣೆಗೆ ಹೆಚ್ಚಾಗಿ ಸಂಚರಿಸುವ ಗೆಳೆಯ ಜಯತೀರ್ಥ ಅವರು ಸೇರಿದಂತೆ ಅನೇಕ ಗ್ರಾಹಕರು ಆಗ್ರಹಿಸಿದ ಪರಿಣಾಮವಾಗಿ, ವಿಜಾಪುರ ಪುಣೆ ಮದ್ಯೆ ಸಂಚರಿಸುವ ಬಸ್ಸಿನಲ್ಲಿ ಮೊನ್ನೆ ಕನ್ನಡ ಮನರಂಜನೆ ಹಾಕುವ ಪರಿಪಾಠ ಶುರು ಆಯಿತು. ಹೀಗಾಗಿ ಅಂತರರಾಜ್ಯ ಸಾರಿಗೆ ವ್ಯವಸ್ಥೆಯಲ್ಲೂ ಕನ್ನಡ ಮನರಂಜನೆ ಸಿಗುವ ಹಾಗಾಗಿದೆ. ಗ್ರಾಹಕರ ಆಗ್ರಹಕ್ಕೆ ಮನ್ನಣೆ ನೀಡಿದ ವಿ.ಆರ್.ಎಲ್ ನಡೆ ಅಬಿನಂದನಾರ್ಹ. ಕನ್ನಡ ಮನರಂಜನೆಯನ್ನು ಕಡ್ಡಾಯಗೊಳಿಸಿ ಕನ್ನಡಿಗರ ದ್ವನಿಯಾಗಲಿ ವಿ.ಆರ್.ಎಲ್ ಎಂಬುದು ಎಲ್ಲರ ಆಶಯ.
ಖಾಸಗಿ ಸಂಸ್ಥೆಯ ಗ್ರಾಹಕ ಸ್ನೇಹಿ ನೀತಿ ಸರಕಾರದಲ್ಲೇಕಿಲ್ಲ.!
ಖಾಸಗಿ ಸಂಸ್ಥೆಯಲ್ಲಿ ತಕ್ಕ ಮಟ್ಟಿಗೆ ಮನರಂಜನೆ ಅನುಕೂಲ ಗ್ರಾಹಕನಿಗೆ ದೊರಕಿದರೂ ಸರಕಾರದ ಸಂಸ್ಥೆಯಾದ ಕೆ.ಎಸ್.ಆರ್.ಟಿ.ಸಿ ವ್ಯವಸ್ಥೆಯಲ್ಲಿ ಅದು ಇನ್ನೂ ಮರಿಚಿಕೆಯಾಗಿದೆ. ಹಾಗೇ ನೋಡಿದರೆ, ಸರಕಾರದ ಆಡಳಿತ ನುಡಿ ಕನ್ನಡ ಆಗಿರುವಾಗ ಮತ್ತು ಕೆ.ಎಸ್.ಆರ್.ಟಿ.ಸಿ ಕೂಡ ಸರಕಾರದ ಆಡಳಿತದ ಪರಿದಿಯೊಳಗೆ ಬರುವಾಗ ಗ್ರಾಹಕನಿಂದ ಆಗ್ರಹ ಬರಲಿ, ಬರದೇ ಇರಲಿ, ಬಸ್ಸು ಚೆನ್ನೈಗಾದರೂ ಹೋಗಲಿ, ಹುಬ್ಬಳ್ಳಿಗಾದರೂ ಹೋಗಲಿ, ಮನರಂಜನೆ ಅಂತ ಇದ್ದರೆ ಕಡ್ಡಾಯವಾಗಿ ಅದು ಕನ್ನಡ ಮನರಂಜನೆನೇ ಇರಬೇಕು ಎಂಬ ನಿಯಮ ಮಾಡಬೇಕಿರುವುದು ಸಂಸ್ಥೆಯ ಜವಾಬ್ದಾರಿ ಅಂತ ಅನ್ನಿಸಲ್ವೇ. ನಿಟ್ಟಿನಲ್ಲಿ ಸಾರಿಗೆ ಸೇವೆಯನ್ನು ಬಳಸುವ ಗ್ರಾಹಕರ ಸಣ್ಣ ಮಟ್ಟದ ಕನ್ನಡ ಆಗ್ರಹ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಬಹುದು.

Sunday, 8 April 2012

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕನ್ನಡತನ

ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (BIAL) 'ಕೆಂಪೇಗೌಡರ ಹೆಸರಿಡಲು ವಿಮಾನಯಾನ ಸಚಿವರು ಒಪ್ಪಿಗೆ ಸೂಚಿಸಿದ್ದು, ಕುರಿತ ಪ್ರಸ್ತಾವನೆಯನ್ನು ಶೀಘ್ರವೇ ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಹೇಳಿ ಕೆಂಪೇಗೌಡರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಕನ್ನಡಿಗರಿಗೆ ಮುಖ್ಯವಾಗಿ ಬೆಂಗಳೂರಿಗರಿಗೆ ಹುಗ್ಗಿ ಊಟ ಉಣಬಡಿಸಿದ್ದಾರೆ. ಸುಮಾರು ಒಂದು ವರುಶದ ಹಿಂದೆ ಈ ಕುರಿತ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಕಳುಹಿಸಿತ್ತು. ಈ ಮೂಲಕ ಹೆಸರಿನ ಬಗ್ಗೆ ಜನರಲ್ಲಿದ್ದ ಗೊಂದಲಗಳಿಗೆ, ರಾಜಕೀಯ ಲೆಕ್ಕಾಚಾರಗಳಿಗೆ ತೆರೆ ಎಳೆದಿದ್ದಾರೆ.

ಬೆಂಗಳೂರು ನಿರ್ಮಾತೃಗೆ ಸಂದ ಗೌರವ:
೧೬ ನೇ ಶತಮಾನದಲ್ಲಿ ಬೆಂಗಳೂರು ಎಂಬ ನಗರದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರದ್ದು. ಅಂದಿನಿಂದ ಇಂದಿನವರೆಗೆ ಆರ್ಥಿಕವಾಗಿ ಮತ್ತು ಸಾಂಸ್ಕ್ರುತಿಕವಾಗಿ ಸಾಕಷ್ಟು ಬೆಳೆದ ಬೆಂಗಳೂರು ಇಂದು ಸಾಫ್ಟವೇರ್ ತಂತ್ರಜ್ನಾನದ ಬೆಳವಣಿಗೆ ಮೂಲಕ ಚಿರಪರಿಚಿತವಾದ ನಗರವಾಗಿ ಜಗತ್ತಿನ ಗಮನ ಸೆಳೆದಿದೆ. ಇಂಥ ಒಂದು ನಗರದ ಉದಯಕ್ಕೆ, ಅದರ ಏಳಿಗೆಯ ದೂರದೃಷ್ಟಿಗೆ ಮುನ್ನುಡಿ ಬರೆದ ಇತಿಹಾಸಕಾರನ ಹೆಸರನ್ನು ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡುವ ಮೂಲಕ ಅವರನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ನಿಜಕ್ಕೂ ಮೆಚ್ಚುವಂಥದ್ದು. ವಿಮಾನ ನಿಲ್ದಾಣಗಳಿಗೆ ಸ್ಥಳೀಯ ಇತಿಹಾಸಗಾರರ ಹೆಸರನ್ನು ಇಡುತ್ತಿರುವುದಕ್ಕೆ ಅನೇಕ ಉದಾಹರಣೆಗಳೂ ಇವೆ. ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಜಯಪ್ರಕಾಶ ನಾರಾಯಣ ವಿಮಾನ ನಿಲ್ದಾಣ, ನೇತಾಜಿ ಸುಭಾಶಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೀಗೆ ಹೇಳಬಹುದು.

ನಮ್ಮ ಸ್ವತ್ತುಗಳು ನಮ್ಮವರನ್ನು ಬಿಂಬಿಸುವ ವೇದಿಕೆಗಳಾಗಲಿ:
ಯಾವುದೋ ಒಂದು ಯೋಜನೆ, ಸ್ಥಳ, ಸಂಸ್ಥೆಯನ್ನು ಹೆಸರಿಸುವ ಸಮಯದಲ್ಲಿ ನಮ್ಮನ್ನಾಳುತ್ತಿದ್ದವರಿಂದ ಮೊದಲು, ಇಂದಿರಾ ಗಾಂದಿ, ರಾಜೀವ ಗಾಂದಿ, ನೆಹರುವಾಜಪೇಯಿ ಹೆಸರುಗಳೇ ಕೇಳಿ ಬರುತ್ತಿದ್ದವು. (ಉದಾ: ರಾಜೀವ ಗಾಂದಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ) ಎಲ್ಲರೂ ತಮ್ಮ ತಮ್ಮ ಪಕ್ಷದ ಬ್ರಾಂಡ್ ಅಂಬಾಸಿಡರಗಳನ್ನು ಇಲ್ಲಿ ತಂದು ಕೂರಿಸಲು ಹಾತೊರಿಯುತ್ತಿದ್ದರು. ಆದರೆ ಬಾರಿ ಕೇಳಿ ಬಂದದ್ದು ಕರ್ನಾಟಕದ ಇತಿಹಾಸಕಾರರ ಹೆಸರುಗಳೇ. ವಿಮಾನ ನಿಲ್ದಾಣದ ಕಾಮಗಾರಿ ಶುರುವಾದಾಗಿನಿಂದ ಕರವೇ,, ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಒತ್ತಾಯಿಸುತ್ತ ಬಂದ ಪರಿಣಾಮವಾಗಿ, ಮುಂದಿನ ದಿನಗಳಲ್ಲಿ ಹೆಸರಿನ ಬಗ್ಗೆ ಚರ್ಚೆಗಳಾದಾಗ ಕೇಳಿಬಂದ ಹೆಸರುಗಳೆಲ್ಲವೂ ಕರ್ನಾಟಕದ ಇತಿಹಾಸಕಾರರದ್ದೇ (ಬಸವಣ್ಣ, ವಿಶ್ವೇಶ್ವರಯ್ಯ, ಟಿಪ್ಪು ಸುಲ್ತಾನ್) ಆಗಿದ್ದವು. ಕರ್ನಾಟಕದಲ್ಲಿ ದಶಕದಿಂದಿಚಿಗೆ ನಡೆದು ಬಂದ ಕನ್ನಡ ಪರ ಸಂಘಟನೆಗಳ ಹೋರಾಟಗಳು, ಕನ್ನಡ ಪರವಾದ ಮಾತುಗಳು ಇಂದು ಇಂಥ ಒಂದು ಬೆಳವಣಿಗೆಗೆ ನಾಂದಿ ಹಾಡಿದೆಕರ್ನಾಟಕದಲ್ಲಿ ಜಾರಿಯಾಗುವ ಯೋಜನೆಗಳು, ಕಟ್ಟಲಾಗುವ ಸಂಸ್ಥೆಗಳು, ನಿರ್ಮಾಣವಾಗುವ ಸ್ಥಳಗಳು ಕರ್ನಾಟಕದ ಇತಿಹಾಸಗಾರರನ್ನು ಬಿಂಬಿಸುವ ವೇದಿಕೆಗಳಾಗಬೇಕೇ ಹೊರತು, ದೇಶದ ಐಕ್ಯತೆ, ರಾಷ್ಟ್ರೀಯತೆ ಹೆಸರಿನಲ್ಲಿ ನಾಡಿಗಾಗಿ ದುಡಿದ ಸ್ಥಳೀಯರನ್ನು ಕಡೆಗಣಿಸುವ ರಾಜಕೀಯದ ಪೊಳ್ಳು ನಂಬಿಕೆಗಳಾಗುವುದು ಸರಿಯಲ್ಲ.

ಕನ್ನಡತನ ಬೆಳೆಯಲಿ:
ಇಂದು ನಮ್ಮಲ್ಲಿ ಆಗಬೇಕಾದ ಬಹುಮುಖ್ಯ ಕೆಲಸ ಕನ್ನಡತನದ ಜಾಗ್ರುತಿಯೇ ಆಗಿದೆ. ಕನ್ನಡತನವನ್ನು ರಾಷ್ಟ್ರೀಯತೆಗೆ ಪರ್ಯಾಯವಾಗಿಯೋ ಅಥವಾ ಮಾರಕವಾಗಿಯೋ ನೋಡುವ ಮನಸ್ಥಿತಿ ದೂರಾಗಬೇಕಿದೆ. ಕನ್ನಡತನ ಎಂಬುದು ಕೂಡ ಭಾರತೀಯತೆಯೇ ಆಗಿದೆ ಎಂಬುದು ಮನವರಿಕೆಯಾಗಬೇಕಿದೆ. ನಿಟ್ಟಿನಲ್ಲಿ, ಕರ್ನಾಟಕದ ಇತಿಹಾಸವನ್ನು ಬಿಂಬಿಸುವ ಪ್ರಯತ್ನವೂ ಕೂಡ ಸಹಕಾರಿಯಾಗಲಿದೆ. ಅದೇ ರೀತಿ ಕನ್ನಡತನ ಬೆಳೆಸುವ ಕೆಲಸ ಬೆಂಗಳೂರಿನ ಎಲ್ಲ ಕಡೆ ಆಗಬೇಕಿದೆ. ಬೆಂಗಳೂರಿಗರಿಗೆ ಹೆಚ್ಚು ತಲುಪುವ ಬಿ.ಎಮ್.ಟಿ.ಸಿ ಆಗಿರಬಹುದು ಅಥವಾ ಟ್ರಾಫಿಕ್ ಪೊಲೀಸ್ ಇಲಾಖೆ ಆಗಿರಬಹುದು ಅಥವಾ ಖಾಸಗಿ ವ್ಯವಸ್ಥೆಯೇ ಆಗಿರಬಹುದು ಎಲ್ಲ ಕಡೆಯೂ ಕನ್ನಡತನವನ್ನು ಎತ್ತಿ ಹಿಡಿಯುವ ಕೆಲಸವಾಗಬೇಕಿದೆ. ಕನ್ನಡತನವಿಲ್ಲದ ಬೆಂಗಳೂರನ್ನು ನಮ್ಮ ಬೆಂಗಳೂರು ಎನ್ನಲು ಸಾದ್ಯವೇ.?