Monday, 22 February 2010

ಆತ್ಮಾವಲೋಕನಕ್ಕೆ ಇದು ಸಕಾಲ; ಆಚಾರ್ಯ ಸಾಹೇಬರೇ...........!


"ಕಾಸರಗೋಡಿನಲ್ಲಿ ಕನ್ನಡ ಸಮಾವೇಶ ನಡೆಯುತ್ತಿರುವಾಗ, ಸೊಲ್ಲಾಪೂರಿನಲ್ಲಿ ಕನ್ನಡಿಗರು ಒಗ್ಗೂಡಿ ಸಮಾರಂಭ ಮಾಡುತ್ತಿರುವಾಗ ಬೆಳಗಾವಿಯಲ್ಲಿ ಮರಾಠಿಗರು ನಡೆಸಲುದ್ದೇಶಿಸಿರುವ ಸೀಮಾ ಪರಿಷತ್ ಬೇಡ ಎನ್ನಲು ಹೇಗೆ ಸಾದ್ಯ. ಆದರೆ ಅವರಿಗೆ ನಾವು ಷರತ್ತು ಬಧ್ಧ ಅನುಮತಿ ನೀಡಿದ್ದೇವೆ." ಇದು ಫೇ ೫ ರಂದು ನಡೆದ ಮರಾಠಿಗರ ಸೀಮಾ ಪರಿಷತ್ ಸಮಾವೇಶವನ್ನು ತಡೆ ಹಿಡಿಯಬೇಕು, ಅದಕ್ಕೆ ಅನುಮತಿ ಕೊಡಬಾರದು ಎಂದು ಒತ್ತಾಯಿಸಿದ ಕನ್ನಡಪರ ಸಂಘಟನೆಗಳಿಗೆ ನಮ್ಮ ರಾಜ್ಯದ ಘನತೆವೆತ್ತ ಮನೆ ಮಂತ್ರಿಗಳಾದ (ಗೃಹ ಸಚಿವ) ವಿ.ಎಸ್.ಆಚಾರ್ಯ ಅವರು ನೀಡಿದ ಉತ್ತರ. ಫೆ ೫ ರಂದು ಸೀಮಾ ಪರಿಷತ್ ನಡೆದೇ ಹೋಯಿತು. ಆದರೆ ಗೃಹ ಸಚಿವರ ಅನುಮತಿಯಂತೆ ನಡೆಯಲಿಲ್ಲ. ಅವರ ಷರತ್ತು ಯಾವ ಎಮ್.ಇ.ಎಸ್ ನವರ ಮುಂದೆಯೂ ಹಾಯ್ದು ಹೋಗಲಿಲ್ಲ. ಕರ್ನಾಟಕದ ನೆಲದಲ್ಲೇ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬೈಯ್ದು, ಮನ ಬಂದಂತೆ ಥಳಿಸುವಷ್ಟು ಷರತ್ತು ಬಧ್ಧ ಅನುಮತಿಯನ್ನು ಸರಕಾರ ನೀಡಿತ್ತು ಎಂಬುದನ್ನು ಯಾರೂ ಊಹಿಸಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರು ಭಾರತೀಯರ ಮೇಲೆ ಮಾಡಿದ ಹಲ್ಲೆಯನ್ನು ಮರೆತಿದ್ದ ಕನ್ನಡಿಗರು, ಈ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗಾದರೂ ನೆನಪಿಸಿಕೊಂಡಿರಬಹುದು. ಆದರೆ ಅದಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸ. ಅಲ್ಲಿ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡ ಪರಕೀಯರನ್ನು ದೇಶ ಬಿಟ್ಟು ತೊಲಗಿಸಲು ನಡೆಸಿದ ಹೋರಾಟ. ಇಲ್ಲಿಯ ಘಟನೆಯಲ್ಲಿ ಯಾರೂ ಪರಕೀಯರಲ್ಲ, ಎಲ್ಲರೂ ಭಾರತಿಯರೆ. ಆದರೆ ಕೆಲವರು, ಒಣ ರಾಜಕೀಯದ ದುರುದ್ದೇಶದಿಂದ ವಿವಾದವನ್ನು ಮತ್ತಷ್ಟು ಕೆಣಕಿ, ಮುಗ್ಧ ಜನರಲ್ಲಿ ಅಶಾಂತಿಯನ್ನು ಹುಟ್ಟುಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಭಾರತೀಯರು. ಇನ್ನು ಹಲವರು ವಿವಾದವನ್ನು ಬಗೆಹರಿಸಿ, ಸ್ಥಳೀಯರಲ್ಲಿ ಮತ್ತು ವಲಸಿಗರಲ್ಲಿ ಸಾಮರಸ್ಯವನ್ನು ಬೆಳೆಸಿ, ಜನರಲ್ಲಿ ಶಾಂತಿ ಮೂಡಿಸಲು ಪ್ರಯತ್ನಿಸಿ ತಮ್ಮ ನಿಷ್ಠೆ ಪ್ರದರ್ಶಿಸುತ್ತಿರುವ ಭಾರತೀಯರು.

ಗೃಹ ಸಚಿವರಿಗೆ ಇದು ಆತ್ಮಾವಲೋಕನಕ್ಕೆ ಸಕಾಲ. ಕಾಸರಗೋಡಿನಲ್ಲಿ, ಸೋಲ್ಲಾಪುರಿನಲ್ಲಿ ಕನ್ನಡ ಸಮಾವೇಶ ಮಾಡುವ ಬಗ್ಗೆ ಮಾತನಾಡುವ ಸಚಿವರು, ಆ ಸಮಾವೇಶಗಳಲ್ಲಿ ಕಂಡು ಬರುವ ಶಿಸ್ತಿನ ಬಗ್ಗೆ ಆಲೋಚನೆ ಮಾಡಿದ್ದಾರೆಯೆ...? ಮಹಾರಾಷ್ಟದಲ್ಲಿ ಹಲವಾರು ಕನ್ನಡ ಸಂಘಗಳಿದ್ದಾವೆ. ಅವುಗಳು ಪ್ರತಿ ವರ್ಷ ಹಲವಾರು ಕನ್ನಡ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತವೆ. ಕನ್ನಡ ರಾಜ್ಯೊತ್ಸವವನ್ನು ಅಧ್ಧೂರಿಯಿಂದ ಆಚರಿಸುತ್ತವೆ. ಆದರೆ ಯಾವತ್ತಾದರೂ ಅವುಗಳಿಂದ ಮತ್ತು ಅವುಗಳು ಮಾಡುವ ಕಾರ್ಯಕ್ರಮಗಳಿಂದ ಅಲ್ಲಿನ ಮಹಾರಾಷ್ಟ್ರದ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದ ಉದಾಹರಣೆಗಳಿವೆಯೆ...? ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ ನಿದರ್ಶನಗಳಿವೆಯೆ....? ಯಾವುದೇ ಹೊರರಾಜ್ಯ ಕನ್ನಡದ ಸಮಾರಂಭದಲ್ಲಿ ಅಲ್ಲಿನ ಗೌರವಕ್ಕೆ ಚ್ಯುತಿ ಬರುವಂತಹ ನಿರ್ಣಯಗಳನ್ನು ಅಂಗೀಕರಿಸಲಾಗಿದೆಯೇ.......? ಎಲ್ಲಿಯಾದರೂ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರದ ಜನರ ಮೇಲೆ ಕನ್ನಡಿಗರು ಹಲ್ಲೆ ಮಾಡಿ, ಅವರ ಭಾವನೆಗಳ ಜೊತೆ ಆಟ ಆಡಿದ ಸುದ್ದಿಗಳಿವೆಯೆ....? ಈ ಪ್ರಶ್ನೆಗಳು ಕೇವಲ ಮಹಾರಾಷ್ಟ್ರಕ್ಕೆ ಸಂಬಂದ ಪಡದೇ ಇಡಿ ಜಗತ್ತಿನಲ್ಲಿ ಎಲ್ಲೆಲ್ಲಿ ಕನ್ನಡ ಸಂಘಗಳಿವೆಯೋ ಅಲ್ಲೆಲ್ಲ ಅನ್ವಯಿಸುತ್ತದೆ. ಜಗತ್ತಿನಲ್ಲಿ ಎಲ್ಲಿಯೂ ವಲಸಿಗ ಕನ್ನಡಿಗರು ಸ್ಥಳಿಯ ಜನರ ವಿರುದ್ಧ ಹೋದ ಉದಾಹರಣೆಗಳಿಲ್ಲ. ತಾವು ಕಾಲಿಟ್ಟ ಪ್ರತಿಯೊಂದು ಸ್ಥಳವನ್ನು ಗೌರವಿಸುತ್ತ ಅಲ್ಲಿನ ಜನರ ವಿಶ್ವಾಸಕ್ಕೆ ಪಾತ್ರರಾಗಿ, ತಾವೂ ಅಲ್ಲಿಯ ನಾಗರಿಕರಾಗಿ ಬೆರೆತು ತಮ್ಮ ತಾಯ್ನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ಕಾಪಾಡಿಕೊಂಡು ಹಿರಿಮೆ ಮೆರೆಯುತ್ತಿದ್ದಾರೆ. ಹೀಗೆ ವಿದೇಶಗಳಲ್ಲೆಲ್ಲ ಕನ್ನಡದ ಕಂಪು ಹರಡುತ್ತಿರುವಾಗ ನಮ್ಮ ನೆಲದಲ್ಲೇ ದುಷ್ಟ ಶಕ್ತಿಗಳು ಅಶಾಂತಿ ಹುಟ್ಟುಹಾಕಲು ಪ್ರಯತ್ನಿಸುತ್ತಿರುವಾಗ ನೋಡಿಕೊಂಡು ಸುಮ್ಮನಿರಬೇಕೆ ಮಾನ್ಯ ಆಚಾರ್ಯ ಸಾಹೇಬರೇ.....? ಹಿಂದೆ ನಡೆದ ಹಲವಾರು ಸಮಾವೇಶಗಳಿಂದ ಮತ್ತು ಘಟನೆಗಳಿಂದ ಎಮ್.ಇ.ಎಸ್ ನವರ ಪುಂಡಾಟದ ಬಗ್ಗೆ ಸರಕಾರಕ್ಕೆ ಅರಿವಾಗಿಲ್ಲವೇ.......? ಅಥವಾ ಇದನ್ನು ಸರಕಾರದ ಜಾಣ ಕುರುಡುತನವೆಂದು ತಿಳಿದುಕೊಳ್ಳಬಹುದೇ........? ಪ್ರತಿ ಬಾರಿ ಬೇರೆ ಬೇರೆ ಹೆಸರಿನಲ್ಲಿ ಸಮ್ಮೇಳನ ಮಾಡಿ, ಅಲ್ಲಿನ ಮರಾಠಿ ಭಾಷಿಕರಿಗೆ ಬೇಡವಾದ ಭಾವನೆಗಳನ್ನು ಮೂಡಿಸಿ, ನೀವು ಮರಾಠಿಗರು ಇದು ಮಹಾರಾಷ್ಟ್ರಕ್ಕೆ ಸೇರಬೇಕು, ಇಲ್ಲಿನ ಕಛೇರಿಗಳಲ್ಲಿ ಮರಾಠಿಗೂ ಸ್ಥಾನ ಬೇಕು ಎಂದೆಲ್ಲ ಪೊಳ್ಳು ನಿರ್ದಾರಗಳನ್ನು ಕೈಗೊಂಡು ಅಲ್ಲಿನ ಮರಾಠಿ ಮತ್ತು ಕನ್ನಡ ಭಾಷಿಕರ ನಡುವೆ ಇರುವ ಸಾಮರಸ್ಯವನ್ನು ಹಾಳು ಮಾಡುತ್ತಿರುವವರ ಬಗ್ಗೆ ಸರಕಾರ ಮೃದು ಧೋರಣೆ ತಾಳಿದ್ದು ಏಕೆ........? ಈ ಎಲ್ಲ ಮುನ್ಸೂಚನೆಗಳ ಆದಾರವಾಗಿಟ್ಟುಕೊಂಡೆ ಕನ್ನಡ ಪರ ಸಂಘಟನೆಗಳು ಇದಕ್ಕೆ ಅನುಮತಿ ಬೇಡ ಎಂದಿದ್ದು, ಇಷ್ಟಾಗಿಯೂ ಸೀಮಾ ಪರಿಷತಗೆ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮವನ್ನು ಒಮ್ಮೆ ನಮ್ಮ ಸಚಿವರು ಆತ್ಮಾವಲೋಖನ ಮಾಡಿಕೊಳ್ಳಲಿ. ಇನ್ನು ಸೀಮಾ ಪರಿಷತ ಸಮಾವೇಶವನ್ನು ಬೆಳಗಾವಿ ಮರಾಠಿಗರು ಯಾವ ರೀತಿ ಸ್ವೀಕರಿಸಿದ್ದಾರೆ ಎಂಬುದಕ್ಕೆ ನಿರೀಕ್ಷಿಸಿದ್ದ ಲಕ್ಷ ಲಕ್ಷ ಜನರ ಬದಲಿಗೆ ಅಲ್ಲಿ ನೆರೆದಿದ್ದ ಸಾವಿರದಷ್ಟು ಜನರೇ ಸಾಕ್ಷಿ.

ಎಲೆಯಡಿಕೆ: ಆದ್ದರಿಂದ ಇಂತಹ ಸಮಾವೇಶಗಳು ಮರಾಠಿಗರ ಸಮ್ಮಿಲನಕ್ಕೆ ಒಂದು ವೇದಿಕೆಯಾಗುವ ಬದಲು ಕೇವಲ ಕನ್ನಡವನ್ನು, ಕನ್ನಡಿಗರನ್ನು, ಕರ್ನಾಟಕವನ್ನು ಮತ್ತು ಸರಕಾರವನ್ನು ಟೀಕಿಸಲು ಬಳಸಿಕೊಳ್ಳುವ ವೇದಿಕೆಗಳಾಗುತ್ತವೆ, ಅಲ್ಲಿನ ಶಾಂತಿಯನ್ನು ಕೆದಕುವ ವೇದಿಕೆಗಳಾಗುತ್ತವೆ, ಕನ್ನಡಿಗರ ತಾಳ್ಮೆ ಪರೀಕ್ಷಿಸುವ ವೇದಿಕೆಗಳಾಗುತ್ತವೆ ಎಂಬುದನ್ನು ಇನ್ನಾದರೂ ನಮ್ಮ ಘನ ಸರಕಾರ ಮತ್ತು ಆಚಾರ್ಯ ಸಾಹೇಬರು ಅರ್ಥ ಮಾಡಿಕೊಳ್ಳಬೇಕು. ಬೆಳಗಾವಿ ಗಡಿ ಎಂಬ ಏಕೀಕರಣ ಸಮಯದಲ್ಲಿ ಉದ್ಭವವಾದ ಸಣ್ಣ ಸಮಸ್ಯೆಯನ್ನು ಬಗೆ ಹರಿಸದೇ ಪ್ರತಿ ಬಾರಿ ನುಣುಚಿಕೊಂಡು ಅದನ್ನು ಕರ್ನಾಟಕದ ಮೂಲಭೂತ ವಿವಾದವನ್ನಾಗಿ ಮಾಡಿದ ಕೀರ್ತಿ ನಮ್ಮ ಹಿಂದಿನ ಸರಕಾರಗಳಿಗೆ ಸಲ್ಲುತ್ತದೆ. ಈಗಿರುವ ಬಿಜೆಪಿ ಸರಕಾರ ಈ ಸಮಸ್ಯೆಯನ್ನು ಬಗೆಹರಿಸುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದಿದ್ದರೂ ಸರಿ, ಆದರೆ ಇಂತಹ ಶಾಂತಿ, ಸುವ್ಯವಸ್ಥೆಯನ್ನು ಕದಡುವ ಮತ್ತು ವಿವಾದವನ್ನು ಇನ್ನಷ್ಟು ಜಟಿಲಗೊಳಿಸುವ ಸಮಾವೇಶಗಳಿಗೆ ಅನುಮತಿ ನೀಡಬಾರದೆಂದು ಕರ್ನಾಟಕ ಶಾಂತಿಪ್ರಿಯರ ಒಕ್ಕೋರಲಿನ ಆಗ್ರಹವಾಗಿದೆ.

ಹೆಬ್ಬಯಕೆ: Every Belagavian should feel like this….
" My native is BELAGAVI, and I am not a MAHARASHTRIAN"

Sunday, 31 January 2010

ನಾನು ಕಂಡ ಒಂದು ದಿನದ ಚೆನ್ನೈ..................


ನಾನು ಕೆಲವು ದಿನಗಳ ಹಿಂದೆ ಒಂದು ದಿನದ ಕೆಲಸದ ಮೇಲೆ ಮೊದಲ ಬಾರಿಗೆ ಚೆನ್ನೈಗೆ ಹೋಗಿದ್ದೆ. ಅಲ್ಲಿ ನನ್ನ ಗಮನಕ್ಕೆ ಬಂದ ಕೆಲವು ಸಂಗತಿಗಳನ್ನು ಹೇಳಲು ಇಚ್ಛಿಸುತ್ತೇನೆ. ಅಲ್ಲಿನ ಕೆಟ್ಟ ಸಂಗತಿಗಳನ್ನು ಬಿಟ್ಟು ಒಳ್ಳೆಯ ಮತ್ತು ನಾವು ಗಮನಿಸಬಹುದಾದ ಸಂಗತಿಗಳನ್ನು ಮಾತ್ರ ಮಾತನಾಡುವುದು ಉಚಿತ. ಬೆಳಿಗ್ಗೆ ನಿಲ್ದಾಣದಲ್ಲಿ ಇಳಿದು ಅಥಿತಿ ಗೃಹದ ಕಡೆಯಲ್ಲಿ ಆಟೊದಲ್ಲಿ ಹೋಗುತ್ತಿದ್ದಾಗ, ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಎದ್ದಿರುವ ಆಟೊ ಚಾಲಕರ ಬಾಷಾ ವಿಚಾರದ ಆದೇಶದ ನೆನಪಾಯಿತು. ತಮಿಳನಾಡಿನಲ್ಲಿ ಈ ತರಹದ ಆದೇಶ ಜಾರಿಗೊಳಿಸುವುದೇ ಬೇಡ. ಅದು ತನ್ನಿಂದ ತಾನಾಗಿಯೆ ಜಾರಿಯಾಗಿದ್ದು ಕಂಡು ಬಂತು. ಅಲ್ಲಿರುವ ಆಟೊ ಚಾಲಕ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡದಿದ್ದರೆ, ಅದರಿಂದ ತೊಂದರೆ ಅನುಭವಿಸುವುದು ಗ್ರಾಹಕನಲ್ಲ, ಸ್ವತಃ ಆಟೊ ಚಾಲಕನೆ. ಇದು ಅಲ್ಲಿನ ಪರಿಸ್ಥಿತಿ. ನಮ್ಮ ಹಿಂದಿ ಮಾತಿಗೆ ಆಟೊದವನು ತಮಿಳಿನಲ್ಲಿ ಉತ್ತರ ನೀಡಿದ್ದು ನೋಡಿ ಅದು ಗೋಚರವಾಗಿತ್ತು. ಮುಂದೆ ಅಥಿತಿ ಗೃಹಕ್ಕೆ ಹೋಗಿ ನಮ್ಮ ಕೋಣೆಯಲ್ಲಿದ್ದ ಟಿವಿಯ ಒಳಹೊಕ್ಕು ನೋಡಿದರೆ ಅದರಲ್ಲಿ ಕೇವಲ ಒಂದು ಕನ್ನಡ ಚಾನಲ್, ಎರಡು ತೆಲುಗು, ಎರಡು ಹಿಂದಿ ಚಾನಲಗಳನ್ನು ಬಿಟ್ಟರೆ ಉಳಿದೆಲ್ಲವು ತಮಿಳ ಚಾನಲಗಳೆ. ಬೆಂಗಳೂರಿನಲ್ಲಿ ಕನಿಷ್ಟ ಮೂರ್ನಾಲ್ಕು ತಮಿಳು, ಮೂರ್ನಾಲ್ಕು ತೆಲುಗು ಚಾನಲಗಳನ್ನು ನಾವು ನೋಡಬಹುದು. ಮುಂದೆ ನಮ್ಮ ಕೆಲಸಕ್ಕೆ ಹೋಗಲು ಬಸ್ ಹತ್ತಿದಾಗ ಅಲ್ಲಿ ಚಾಲಕನ ಪಕ್ಕದಲ್ಲಿ ಅಂಟಿಸಿದ್ದ ತಿರುವಳ್ಳವರ್ ಫೋಟೊ ಮತ್ತು ಕೆಲವು ಅಕ್ಷರದ ಸಾಲುಗಳು ನಮ್ಮ ಗಮನ ಸೆಳೆದವು. ನಮ್ಮಲ್ಲಿ ರಾಜಕುಮಾರ್, ಶಂಕರನಾಗ್ ಫೋಟೊ ಹಾಕೋ ಥರ ಈ ಬಸ್ಸಿನವರು ಹಾಕಿರಬಹುದು ಎಂದು ನಂಬಿದ್ದ ನನಗೆ ಆಶ್ಚರ್ಯ ಕಾದಿತ್ತು, ಪ್ರತಿಯೊಂದು ನಗರ ಸಾರಿಗೆ ಬಸ್ ನಲ್ಲಿಯೂ ಇದು ಇರುವುದನ್ನು ಕಂಡು, ನಮ್ಮ ಸರಕಾರ ಮತ್ತು ನಾವು, ನಮ್ಮ ಸರ್ವಜ್ನರನ್ನು, ಬಸವಣ್ಣನವರನ್ನು ಎಷ್ಟು ಗೌರವಿಸುತ್ತಿದ್ದೇವೆ ಎಂಬ ಅನುಮಾನವಾಯಿತು.
ಹೀಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ’ಯುನಿನಾರ್’ ಮಹಾಶಯರ ಜಾಹಿರಾತು ಫಲಕಗಳು ನಮ್ಮ ಕಣ್ಣು ಕುಕ್ಕಿದವು. ಬೆಂಗಳೂರಿನಲ್ಲಿ ಜಾಹಿರಾತು ಫಲಕಗಳ ಮೇಲೆ, ನಮ್ಮ ಬಿ ಎಂ ಟಿ ಸಿ ಬಸ್ ಗಳ ಮೇಲೆ, ಹೀಗೆ ಎಲ್ಲೆಂದರಲ್ಲಿ "ಅಬ್ ಮೇರಾ ನಂಬರ್ ಹೈ" "ಅಬ್ ಮೇರಾ ನಂಬರ್ ಹೈ" ಎಂದು ಹಿಂದಿಯಲ್ಲಿ ಬೊಬ್ಬೆ ಹೊಡೆಯುವ ಇವರು ಚೈನ್ನೈನಲ್ಲಿ ಒಂದೇ ಒಂದು ಹಿಂದಿ ಜಾಹಿರಾತು ಹಾಕಿರುವುದನ್ನು ಹುಡುಕಿ ಹುಡುಕಿ ನನ್ನ ಕಣ್ಣುಗಳು ಸುಸ್ತಾದವು. ಚೆನ್ನೈನಲ್ಲಿಯು ತಮಿಳೇತರ ’ತಾಯಿನುಡಿ’ ಇರುವವರ ಸಂಖ್ಯೆ ಏನು ಕಮ್ಮಿ ಇಲ್ಲ. ಆದರೆ ವಿಪರ್ಯಾಸವೆಂದರೆ ಬಹುತೇಕ ಕಂಪನಿಗಳಿಗೆ ಚೈನ್ನೈನಲ್ಲಿದ್ದಾಗ ನೆನಪಾಗದ ’ವಲಸೆಗಾರರು’ ಬೆಂಗಳೂರಿಗೆ ಬಂದ ಮೇಲೆ ಧಿಡೀರನೆ ನೆನಪಾಗಿ ಅವರ ಮೇಲೆ ಮೋಹ (ಪ್ರೀತಿ ಅಲ್ಲ) ಉಕ್ಕಿ ಹರಿಯುತ್ತದೆ. ಬೆಂಗಳೂರಿನಲ್ಲಿ ನೆನಪಾಗದ ಸ್ಥಳಿಯರು ಚೈನ್ನೈಗೆ ಹೋದ ಮೇಲೆ ತಂತಾನೆ ತನ್ನಂತಾನೆ ನೆನಪಾಗುತ್ತಾರೆ. ಬಸ್ ನಲ್ಲಿ ಇನ್ನೊಂದು ಅಪರೂಪದ ದೃಶ್ಯ ಕಂಡು ಒಂದೆಡೆ ಆಶ್ಚರ್ಯ ಇನ್ನೊಂದೆಡೆ ಅಸುಯೆ ಮೂಡಿತು. ನಮ್ಮ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಇಬ್ಬರು ಮುಸ್ಲಿಮರು ಅಚ್ಚ ತಮಿಳಿನಲ್ಲಿ ಮಾತನಾಡುತ್ತಿದ್ದರು. ಅಲ್ಲಿರುವ ಎಷ್ಟೊ ಮುಸ್ಲಿಮರಿಗೆ ಹಿಂದಿ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ ಎಂದು ಯಾರೋ ಹೇಳಿದಾಗ, ಅಲ್ಲಿನ ಭಾಷೆಯ ಆಳ ಕಾಣಿಸಿದಂತಾಯ್ತು. ಹೀಗೆ ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲಿಯೂ, "ಇಲ್ಲಿ ಬಾಳಬೇಕಾದರೆ ತಮಿಳನ್ನು ಕಲಿಯಲೇಬೇಕು" ಎಂಬ ಸಂದೇಶ ನನ್ನ ಮನಸ್ಸಿನಿಂದ ಹೊರಹೊಮ್ಮುತ್ತಿತ್ತು. ಬಹುಶಃ ಇದೇ ಕಾರಣದಿಂದ ಅಲ್ಲಿ ವಲಸೆಗಾರರ ಸಂಖ್ಯೆ ಅಷ್ಟೊಂದಿಲ್ಲ. ವಲಸೆಗಾರರಿದ್ದರೂ ಅದು ದೊಡ್ಡ ಸಮಸ್ಯೆಯಾಗಿಲ್ಲ. ಹೊರಗಿನಿಂದ ಬಂದವರು ಹೊರಗಿನವರಾಗಿ ಬಹಳ ದಿನ ಅಲ್ಲಿ ನೆಲೆಸಲು ಸಾದ್ಯವಿಲ್ಲ. ಅವರು ಅಲ್ಲಿನ ಮುಖ್ಯವಾಹಿನಿಗೆ ಬೆರೆಯಲೇಬೇಕಾಗುತ್ತದೆ. "ತಮಿಳುನಾಡಿಗೆ ಬಂದ ವಲಸಿಗರಿಗೆ ತಮ್ಮ ಭಾಷೆಯನ್ನು ಕಲಿಯುವ ಹಾಗೆ ಮಾಡಿ, ತಮ್ಮ ಸಂಪ್ರದಾಯಕ್ಕೆ ಹೊಂದಿಕೊಳ್ಳುವ ಹಾಗೆ ಮಾಡಿ, ಅವರನ್ನೂ ತಮಿಳುನಾಡಿನವರನ್ನಾಗಿ ಮಾಡುವ ತಮಿಳರು, ತಾವು ಬೇರೆ ಕಡೆಗೆ ವಲಸಿಗರಾಗಿ ಹೋದಾಗ ಆ ನಿಯಮವನ್ನು ಪಾಲಿಸಬೇಕು, ಅಲ್ಲಿನವರಾಗಿ ತಾವೂ ಬಾಳಬೇಕು ಎಂಬ ಮನೋಭಾವನೆಯನ್ನು, ಸೌಜನ್ಯವನ್ನು, ಕರ್ತವ್ಯವನ್ನು ಬೆಳೆಸಿಕೊಳ್ಳದೇ ಇರುವುದು ಮಾತ್ರ ಎಲ್ಲರೂ ಒಕ್ಕೊರಲಿನಿಂದ ಖಂಡಿಸುವಂಥದ್ದು". ಇನ್ನು ನಗರದ ಬಗ್ಗೆ ಹೇಳಬೇಕೆಂದರೆ, ವಾತಾವರಣ, ಸ್ವಚ್ಛತೆ, ನಗರಾಭಿವೃಧ್ಧಿ ಮತ್ತು ಮೂಲಸೌಕರ್ಯಗಳ ವಿಷಯದಲ್ಲಿ ನಮ್ಮ ಬೆಂಗಳೂರಿಗೆ ಚೆನ್ನೈ ಇನ್ನೂ ಸರಿಸಾಟಿಯಾಗಿಲ್ಲ ಎಂದೆನಿಸಿತು. ಬರೋವಾಗ ಚೈನ್ನೈನಲ್ಲಿರೋ ನಮ್ಮ ಕೆ.ಎಸ್.ಆರ್.ಟಿ.ಸಿ ಕಚೇರಿಯ ಫಲಕದಲ್ಲಿ ಕನ್ನಡವಿಲ್ಲದೇ ಇರುವುದನ್ನು ಕಂಡು ಬೇಜಾರಾಯಿತು. (ಬೆಂಗಳೂರಿನಲ್ಲಿರುವ ತಮಿಳನಾಡಿನ ಬಸ್ ಬುಕ್ಕಿಂಗ್ ಆಫೀಸಿನ ಫಲಕದಲ್ಲಿ ತಮಿಳನ್ನು ಮೊದಲನೇ ಸ್ಥಾನದಲ್ಲಿ ಕಾಣಬಹುದು). ಇಷ್ಟು, ಒಂದು ದಿನದ ಅಲ್ಪ ಸ್ವಲ್ಪ ಅನುಭವಗಳನ್ನು ಮತ್ತು ಅನಿಸಿಕೆಗಳನ್ನು ಹೊತ್ತುಕೊಂಡು ನನ್ನ ಒಂದು ದಿನದ ಚೆನ್ನೈ ಪ್ರವಾಸವನ್ನು ಮುಗಿಸಿ ತಾಯ್ನಾಡಿಗೆ ಮರಳಿದೆ.

ನನ್ನ ಅನಿಸಿಕೆಗಳಲ್ಲಿನ ತಪ್ಪುಗಳನ್ನು ದಯವಿಟ್ಟು ಕ್ಷಮಿಸದೇ ಅವುಗಳನ್ನು ತಿದ್ದುವ ಪೂರ್ಣ ಅಧಿಕಾರ ನಿಮಗಿದೆ.......................

Thursday, 24 December 2009

ಶೇಷಾದ್ರಿಪುರ ಓಕೆ, ಅದರ ಮುಂದೆ ಅಂ ಯಾಕೆ?


ಮಲ್ಲೇಶ್ವರಂ, ಶೇಷಾದ್ರಿಪುರಂ ಇವು ಬದಲಾವಣೆಯಾಗಿರುವಂತಿರುವ ಹೆಸರುಗಳು. ಓಕಳೀಪುರಂ, ಕೋರಮಂಗಲಂ, ಶ್ರೀರಾಮಪುರಂ ಇವು ಬದಲಾವಣೆಯಾಗುತ್ತಿರುವ ಹೆಸರುಗಳು. ವಿಜಯನಗರಂ, ರಾಜಾಜಿನಗರಂ ಇವು ಬದಲಾಗಬಹುದಾದ ಹೆಸರುಗಳು. ಮುಂದೆ ಊಹೆ ಮಾಡಿಕೊಂಡರೆ ಸಾಕಷ್ಟು ಹೆಸರುಗಳು ಕಾಣುತ್ತವೆ.
ಹೆಸರಲ್ಲೇನಿದೆ....? ಶೇಷಾದ್ರಿಪುರ ಅನ್ನೊ ಬದಲು ಶೇಷಾದ್ರಿಪುರಂ ಅಂದರೆ ಏನ್ ತಪ್ಪು, ಅದರಲ್ಲೇನು ಮಹಾ ತಪ್ಪಿದೆ ಅಂಥ ಕೇಳೊ ವಿಟ್ಯಾಮಿನ್ ಎನ್ ( ನಮ್ಮತನ) ಕಡಿಮೆಯಿರೋ ನಮ್ಮ ಜನರು ಸಾಕಷ್ಟಿದ್ದಾರೆ. ಆದರೆ ಇದು ನಮ್ಮತನವನ್ನು ಮಾಯ ಮಾಡುವ, ಕನ್ನಡ ಅನುಷ್ಟಾನವನ್ನು ನಿರ್ಲಕ್ಷಿಸುವ ಒಂದು ಸಣ್ಣ ಹೆಜ್ಜೆ ಎಂದು ಕನ್ನಡದ ಕಣ್ಣಿನಿಂದ ನೋಡಿದಾಗ ಮಾತ್ರ ಅವರಿಗೆ ಅರ್ಥವಾಗುತ್ತದೆ. ಇದರಲ್ಲಿ ಬರೀ ಹೆಸರನ್ನಷ್ಟೆ ನೋಡದೆ ನಮ್ಮ ಸಂಸ್ಕೃತಿ, ಒಗ್ಗಟ್ಟು, ನುಡಿಯ ಹಿರಿಮೆ, ಸ್ವಾಭಿಮಾನ ಎಲ್ಲವನ್ನು ನೋಡಬೇಕು ಅಂಥ. ಶೇಷಾದ್ರಿಪುರಂಗೆ ಹೋಗಿ ಬರ್ತಿನಿ ಎಂಬ ವಾಕ್ಯಕ್ಕಿಂತ ಶೇಷಾದ್ರಿಪುರಕ್ಕೆ ಹೋಗಿ ಬರ್ತಿನಿ ಅನ್ನೊ ವಾಕ್ಯದಲ್ಲಿ ಕನ್ನಡ ಎದ್ದು ಕಾಣುತ್ತದೆ. ನಮ್ಮ ನುಡಿಯ ದರ್ಶನವಾಗುತ್ತದೆ.
ಬ್ರಿಟಿಷರು ತಾವು ಹೋದ ಕಡೆಯಲ್ಲೆಲ್ಲ ಊರುಗಳ ಹೆಸರುಗಳನ್ನು ತಮ್ಮ ನಾಲಿಗೆಗೆ ಹೊರಳೊ ಹಾಗೆ ಮಾರ್ಪಾಡಿಸಿಕೊಂಡಿದ್ದರು. ಅವರು ನಮ್ಮ ದೇಶ ಬಿಟ್ಟು ೬೨ ವರ್ಷಗಳಾದರೂ ಎಷ್ಟೋ ಕಡೆ ಅದೇ ಹೆಸರುಗಳು ಮುಂದುವರೆದಿರುವುದನ್ನು ಕಾಣಬಹುದು. ಹೀಗಿರುವಾಗ, ಇದೇ ರೀತಿ ಯಾರೋ ಕೆಲವರ ನಾಲಿಗೆಯ ಹಿತಕ್ಕೆ ಕೋಟಿ ಕೋಟಿ ನಾಲಿಗೆಗಳು ಹೆಸರನ್ನು ತಿರುಚಿ ಹೇಳುವುದು ಎಷ್ಟು ಸೂಕ್ತ. ಈಗ ವಿಜಯನಗರ ಅಂಥ ಇರೋದನ್ನು ವಿಜಯನಗರಂ ಅಂಥ ಯಾರೋ ಕೆಲವು ಜನ "ಅಂ" ಪ್ರೀಯರು ಕರೀತಾರೆ ಅಂಥ ನಾವು ಅದನ್ನೇ ಅನ್ನೋಕೆ, ಬರಿಯೋಕೆ ಶುರು ಮಾಡಿದ್ರೆ,, ನಾಳೆ ನಮ್ ಉತ್ತರದ ಮಹಾಶಯರು ಬಂದಬಿಟ್ಟು ವಿಜಯನಗರಂ ಅಂಥ ನಮಗೆ ಅನ್ನೋಕೆ ಬರೋದಿಲ್ಲ, ನಾವು ಅದನ್ನು ಭಿಜಯನಗರಂ ಅಂಥ ಕರೀತಿವಿ ಅಂದ್ರೆ, ನಾವು ಹಂಗೆ ಅನ್ನೋಕೆ ಆಗುತ್ತಾ...? ಎಲ್ಲರೂ ಅನ್ನೋದನ್ನೇ ನಾವು ಅನ್ನೋಕೆ, ನಮ್ಮ ನಾಲಿಗೆಗೆ ನಿಯತ್ತೇ ಇಲ್ಲವೇ...? ಸುಂದರವಾಗಿದ್ದ ವಿಜಾಪುರವನ್ನು ಬಿಜಾಪುರ ಅಂಥ ಮಾಡಿದ್ದನ್ನೇ ಇನ್ನೂ ಸರಿ ಮಾಡಕ್ಕಾಗ್ತಿಲ್ಲ. ಇನ್ನೂ ಹಾಗೆ ಎರಡು ಹೆಸರುಗಳ ಮದ್ಯೆ ಗೋಳಾಡ್ತಿದೆ.
ಈಗ ಮಲ್ಲೇಶ್ವರ, ಶೇಷಾದ್ರಿಪುರ ಅಂಥ ಬರೆದಿರೋ ಫಲಕಗಳನ್ನು ನಾವು ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಕಡೆ ನೋಡಬಹುದು. ಬಹುತೇಕ ಕಡೆ ಮುಂದೆ "ಅಂ" ಹಚ್ಚಿ ಬರೆದಿರುವುದನ್ನು ಕಾಣುತ್ತೇವೆ. ಅದೇ ರೀತಿ ಓಕಳೀಪುರ, ಶ್ರೀ ರಾಮಪುರ ಅಂಥ ಕೆಲವು ಕಡೆ ನೋಡಬಹುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ೫-೧೦ ವರ್ಷಗಳ ನಂತರ ಈಗಿರುವ ಹೆಸರುಗಳೂ ಬದಲಾಗುವ ವಾತಾವರಣ ಅಗೋಚರವಾಗಿ ನಿರ್ಮಾಣವಾಗುತ್ತಿದೆ. ದೇವಾಲಯದ ಪ್ರಸಾದಕ್ಕೂ ಇದು ಬಿಟ್ಟಿಲ್ಲ. ಕನ್ನಡದಲ್ಲಿ "ಪ್ರಸಾದ" ಅಂಥ ಇರುವಂಥದ್ದು ಆಂಗ್ಲ ಭಾಶೆಯಲ್ಲಿ ಪ್ರಸಾದಂ ಹೆಂಗ್ ಆಗುತ್ತೆ ಅಂಥ ಆ ದೇವಾಲಯದ ದೇವರಿಗೂ ಯಕ್ಷ ಪ್ರಶ್ನೆಯಾಗಿದೆ. ಲಾಲ್ ಬಾಗಿನ ಮುಖ್ಯ ದ್ವಾರದಲ್ಲಿ ಕಾಣುವ ಫಲಕದಲ್ಲಿ ತೋಟ ಇರುವ ಬದಲು "ತೋಟಂ" ಹೆಂಗ್ ಬಂತು ಅನ್ನೋದು ಅಲ್ಲಿಯ ಹೂಗಿಡಗಳಿಗೂ ತಿಳಿಯದಾಗಿದೆ. ಹೀಗೆ ಮುಂದುವರೆದರೆ ಈಗಿರುವ ವಿಜಯನಗರ ಮುಂದೆ ವಿಜಯನಗರಂ ಅಂಥ, ಈಗಿರುವ ಜಾಲಹಳ್ಳಿ ಮುಂದೆ ಜಾಲಪಲ್ಲಿ ಅಂಥ, ಈಗಿರುವ ಬನ್ನೇರುಘಟ್ಟ ಮುಂದೆ ಬನ್ನೇರುಗುಟ್ಟ ಅಂಥ ಆಗಲು ಬಹಳ ವರ್ಷ ಕಾಯಬೇಕಿಲ್ಲ. ಪೋಕಿರಿಯನ್ನು ಚಿತ್ರಮಂದಿರದಲ್ಲಿ ನೋಡಿ, ವಂಶಿಯನ್ನು ಟಿವಿ ಚಾನಲನಲ್ಲಿ ಹಾಕಿದಾಗ ಕೂಡ ನೋಡದೇ ಇರುವವರಿಗೆ, ನಿಯತ್ತಿಲ್ಲದ ನಾಲಿಗೆಗಳಿಗೆ ಹೇಗೆ ತಿಳಿಯೊಕ್ ಸಾದ್ಯ. ನಿಯತ್ತಿರುವ ನಾಲಿಗೆಗಳು ಈ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಕೊನೆ ಗುಟುಕಂ: ಹೆಸರಲ್ಲೇನಿದೆ...? ಅಂಥ ಹೇಳುವವರು ಹೆಸರಲ್ಲೇ ಎಲ್ಲ ಇದೆ ಅಂಥ ಹೇಳುವವರ ಮತ್ತು ಪ್ರತಿಪಾದಿಸುವವರ ಜೊತೆ ಸಹಕರಿಸಬೇಕಲ್ಲವೇ....?

ವಿಟ್ಯಾಮಿನ್ ಎನ್ (ನಮ್ಮತನ) ಕೊರತೆಯಿಂದ ಬರುವ "ಅಂ ಜ್ವರ" ಎಂಬ ಹೊಸ ಸಾಂಕ್ರಾಮಿಕ ರೋಗ.......

ನಮಸ್ಕಾರ ಗೆಳೆಯರೆ......

ಕೋಳಿ ಜ್ವರ, ಡೆಂಗ್ಯೂ ಜ್ವರ, ಹಂದಿ ಜ್ವರ, ಮಂದಿ ಜ್ವರ ಈ ರೀತಿ ಅನೇಕ ಮಾರಣಾಂತಿಕ, ಸಾಂಕ್ರಾಮಿಕ ಕಾಯಿಲೆಗಳನ್ನು ಕಂಡ ಬೆಂಗಳೂರಿಗೆ ಇದೀಗ ಬಹು ದಿನಗಳಿಂದ ವ್ಯವಸ್ಥಿತವಾಗಿ, ನಿಧಾನವಾಗಿ, ಅಗೋಚರವಾಗಿ ಹರಡುತ್ತಿರುವ ಹೊಸ ಸಾಂಕ್ರಾಮಿಕ ರೋಗದ ಪತ್ತೆಯಾಗಿದೆ. ಬನ್ರಿ ಅದೇನು ಅಂಥ,, ಒಂದ್ ಸ್ವಲ್ಪ ನಮ್ ಕಣ್ಣನ್ನು ಅದರ ಮೇಲೆ ಹಾಯಿಸೋಣ.

ರೋಗದ ಸಂಕ್ಷಿಪ್ತ ಪರಿಚಯ: ಈ ರೋಗದ ಹೆಸರು " ಅಂ ಜ್ವರ ". ಇದು ಆರೋಗ್ಯ ಇಲಾಖೆಗೆ ಸಂಬಂಧಪಡದೇ ಇರುವ ಒಂದು ಸಾಂಕ್ರಾಮಿಕ ರೋಗ. ಇದು ಸಾರ್ವಜನಿಕ ಇಲಾಖೆಗೆ ಸಂಬಂಧವಿರುವ ರೋಗ. ಇದು ಹೆಸರುಗಳಿಗೆ, ವಿಶೇಷವಾಗಿ ಬೆಂಗಳೂರಿನ ಕೆಲವು ಬಡಾವಣೆಗಳ ಹೆಸರುಗಳಿಗೆ ಸದ್ಯದ ಮಟ್ಟಿಗೆ ಮೀಸಲಿರುವ ರೋಗ. ಇದು ಅಗೋಚರವಾಗಿ ಹರಡುತ್ತಿರುವ ಒಂದು ರೋಗವಾಗಿದೆ. ಕನ್ನಡದ ಕಣ್ಣಿನಿಂದ ನೋಡಿದಾಗ ಮಾತ್ರ ಈ ರೋಗ ಕಾಣಸಿಗುವುದು ಇದರ ವಿಶೇಷತೆ.

ರೋಗದ ಗುಣ ಲಕ್ಷಣಗಳು: ಈ ರೋಗದ ಗುಣ ಲಕ್ಷಣಗಳನ್ನು ನಿಖರವಾಗಿ ಹೇಳಲು ಅಸಾದ್ಯ. ಏಕೆಂದರೆ ಅಷ್ಟೊಂದು ವ್ಯವಸ್ಥಿತವಾಗಿ, ಅಗೋಚರವಾಗಿ ಹರಡುತ್ತದೆ. ಸಂಶೋದನಾ ನಿರತ ಕೆಲವು ತಜ್ನ ವೈದ್ಯರ ಪ್ರಕಾರ, "ಕೆಲವೇ ಕೆಲವು ರೋಗಜಂತುಗಳ" ಸ್ವಾರ್ಥದ ಪರಿಣಾಮದಿಂದ ಹುಟ್ಟುವ ಈ ರೋಗ ಮುಂದೆ ವಿಟ್ಯಾಮಿನ್ ಎನ್ ( ನಮ್ಮತನ) ಕಡಿಮೆಯಿರುವ " ಅಸಂಖ್ಯಾತ ಕ್ರಿಮಿಕೀಟಗಳ" ಅರಿವಿನ ಕೊರತೆಯಿಂದ ಮತ್ತು ವಿಟ್ಯಾಮಿನ್ ಎನ್ ಇರುವ "ಹಲವು ಸೂಕ್ಷಜೀವಿಗಳ" ಅಸಹಾಯಕತೆಯಿಂದ ಈ ರೋಗ ಅಚ್ಚುಕಟ್ಟಾಗಿ ಈಗ ಬೆಂಗಳೂರಿನಲ್ಲಿ ಹರಡುತ್ತಿದೆ.

ರೋಗ ಹರಡುವಿಕೆ: ಮೊದ ಮೊದಲು ತೆರೆಮರೆಯಲ್ಲಿ ಕಂಡುಬರುವ ಈ ರೋಗವು ನಿಧಾನ ಗತಿಯಲ್ಲಿ "ಕೆಲವೇ ಕೆಲವು ರೋಗಜಂತುಗಳ" ಸಹಾಯದಿಂದ ಕಾಡ್ಗಿಚ್ಚಿನಂತೆ ಹರಡಿ ಮುಖ್ಯವಾಹಿನಿಗೆ ಬಂದು ಗೋಚರವಾಗುತ್ತದೆ. ಈ ರೋಗ ಹರಡುವುದನ್ನು ತಡೆಯುವುದು ಎಷ್ಟು ಮುಖ್ಯ ಅಂದ್ರೆ,, ಕೇವಲ ರೋಗ ಜಂತುಗಳು ಹೆಚ್ಚಾಗಿರುವ ಕೆಲವು ಪ್ರದೇಶಕ್ಕೆ ಸೀಮಿತವಾಗಿರುವ ಈ ರೋಗ ಮುಂದೆ ರಾಜ್ಯದಾದ್ಯಂತ ವಿಸ್ತಾರವಾಗುವ ಹಂತ ತಲುಪುಬಹುದು. ಇನ್ನೂ ವಿಚಿತ್ರ ಅಂದ್ರೆ ಈ ರೋಗ ವ್ಯಾಪಕವಾಗಿ ಹರಡಿದರೆ ಇದು ಕೆಲವು ಹೊಸ ಸಾಂಕ್ರಾಮಿಕ ರೋಗಗಳಾದ ಪಲ್ಲಿ, ಗುಟ್ಟ ಎಂಬವುಗಳನ್ನು ಹುಟ್ಟು ಹಾಕುತ್ತದೆ. ಇದರಿಂದ ಕೇವಲ ಪುರ ಮತ್ತು ನಗರ ಪ್ರದೇಶಗಳಿಗೆ ಇದ್ದ ಈ ರೋಗ ಮುಂದೆ ನಮ್ಮ ಹಳ್ಳಿಗಳಿಗೆ ವಿಸ್ತರಿಸಿ ಜಾಲಹಳ್ಳಿಯನ್ನು ಜಾಲಪಲ್ಲಿಯನ್ನಾಗಿ, ಬೊಮ್ಮನಹಳ್ಳಿಯನ್ನು ಬೊಮ್ಮನಪಲ್ಲಿಯನ್ನಾಗಿ, ಬನ್ನೇರುಘಟ್ಟವನ್ನು ಬನ್ನೇರುಗುಟ್ಟವನ್ನಾಗಿ ಹೀಗೆ ಹಳ್ಳಿಗಳ ಮತ್ತು ಗುಡ್ಡಗಳ ಸ್ವಾಭಿಮಾನದ ಆರೋಗ್ಯವನ್ನೇ ಹದಗೆಡಿಸುತ್ತದೆ. ಬಾಗೆಪಲ್ಲಿಗೆ ಹಿಡಿದಿರುವ ರೋಗಾನೇ ಭಾಗ್ಯನಗರವಾದರೂ ಇನ್ನೂ ಸರಿಯಾಗಿ ಬಿಟ್ಟಿಲ್ಲ, ಆ ತಾಲೂಕಿನಲ್ಲಿರುವ ಎಷ್ಟೊಂದು ಹಳ್ಳಿಗಳು ಇನ್ನೂ "ಪಲ್ಲಿ ಜ್ವರ" ದಿಂದ ಬಳಲುತ್ತಿವೆ. ಹೀಗಿರುವಾಗ ಬಹಳಷ್ಟು ಹಳ್ಳಿಗಳು ಈ ರೋಗಕ್ಕೆ ತುತ್ತಾದ್ರೆ ಸಾರ್ವಜನಿಕ ಇಲಾಖೆ ಒತ್ತಡಕ್ಕೆ ಸಿಲುಕುತ್ತವೆ. ಈಗಿಗ ದೇವಾಲಯಗಳಿಗೂ, ಅಲ್ಲಿನ ಪ್ರಸಾದಕ್ಕೂ ಈ ರೋಗ ವಿಸ್ತರಿಸಿದೆ.

ರೋಗಕ್ಕೆ ಚಿಕಿತ್ಸೆಗಳು: ಈ ರೋಗಕ್ಕೆ ಮೂರು ತರಹದ ಚಿಕಿತ್ಸೆಗಳನ್ನು ವೈದ್ಯರು ಕಂಡು ಹಿಡಿದಿದ್ದಾರೆ. ಮೊದಲನೆಯದಾಗಿ ಈ ರೋಗಕ್ಕೆ ಮುಖ್ಯ ಕಾರಣವಾಗಿರುವ "ಕೆಲವೇ ಕೆಲವು ರೋಗಜಂತುಗಳನ್ನು" ಹಿಡಿತದಲ್ಲಿಟ್ಟು, ರೋಗ ಹುಟ್ಟುವಿಕೆಯಲ್ಲಿ ಸಕ್ರೀಯಗೊಳ್ಳದಂತೆ ನೋಡಿಕೊಳ್ಳಬೇಕು. ಎರಡನೆಯದಾಗಿ ಈ ರೋಗ ಬೆಳೆಯಲು ಕಾರಣವಾಗುವ ವಿಟ್ಯಾಮಿನ್ ಎನ್ ಕಡಿಮೆಯಿರುವ "ಅಸಂಖ್ಯಾತ ಕ್ರಿಮಿಕೀಟಗಳಿಗೆ" ವಿಟ್ಯಾಮಿನ್ ಎನ್ ಒದಗಿಸುವ ಅಥವಾ ಹೆಚ್ಚಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು. ಮತ್ತು ಮೂರನೆಯದಾಗಿ ಸಾಕಷ್ಟು ವಿಟ್ಯಾಮಿನ್ ಎನ್ ಇದ್ದರೂ ರೋಗ ತಡೆಯುವಿಕೆಯ ಸಾಮರ್ಥ್ಯದ ಕೊರತೆಯಿರುವ "ಹಲವು ಸೂಕ್ಷಜೀವಿಗಳಿಗೆ" ರೋಗ ತಡೆಯುವಿಕೆ ಬಗ್ಗೆ ಮಾರ್ಗದರ್ಶನ ಮಾಡಬೇಕು.

ಕೊನೆ ಔಷದಿ: ಭಾರತೀಯ ವಿಜ್ನಾನ ಸಂಸ್ಥೆ. ಬೆಂಗಳೂರು. ವಿಜ್ನಾನಿಗಳ ಸಂಶೋಧನೆ ಪ್ರಕಾರ ವಿಟ್ಯಾಮಿನ್ ಎನ್ (ನಮ್ಮತನ) ಹೆಚ್ಚಿಸಿಕೊಳ್ಳುವುದರಿಂದ, ನಮ್ಮ ಕಣ್ಣುಗಳನ್ನು ಕನ್ನಡದ ಕಣ್ಣುಗಳಾಗಿ ಉಚಿತವಾಗಿ ಬದಲಾಯಿಸಿಕೊಳ್ಳಬಹುದು. ಮತ್ತು ಸಾರ್ವಜನಿಕ ಇಲಾಖೆಗೆ ಸಂಬಂಧಪಟ್ಟ ಬಹುತೇಕ ಕಾಯಿಲೆಗಳನ್ನು ತಡೆಗಟ್ಟಬಹುದು.

Tuesday, 3 November 2009

ನಮಗೂ ಒಂದು ಪ್ರಾದೇಶಿಕ ಪಕ್ಷ ಏಕೆ ಬೇಕು..........?

!!......................................................................................................!!
ಯಾರಿಗೋ ಏನೇನೋ ನೀಡುವ ದೇವನೇ, ಕನ್ನಡಿಗನ ಮನವಿ ಸಲ್ಲಿಸ..ಲೇನು......?
ಕನ್ನಡದ ಜನತೆ ಕಾಣುತಿರುವ ಮನಸಿನ ಆಸೆ ಕೇಳಿಸ..ಲೇನು...........?

ನಾವು ಈಗ ಸ್ವಾಭಿಮಾನದಲ್ಲಿ ಏಳ.ಬೇಕು.......ನಮಗೂ ಒಂದು ಪಕ್ಷ ಬೇಕು..
ಕರವೇ ಇದ್ದ ಹಾಗೆ ಬದಲೇನು ಆಗದಂತೆ ಮನಸ್ಸು ಕದ್ದು ಗೆಲ್ಲ..ಬೇಕು..

ನಾವು ಈಗ ಸ್ವಾಭಿಮಾನದಲ್ಲಿ ಏಳ.ಬೇಕು.......ನಮಗೂ ಒಂದು ಪಕ್ಷ ಬೇಕು..
!!.....................................................................................................!!
ನಮ್ಮ ಕರ್ನಾಟಕ ರಾಜ್ಯ ರಚನೆಯಾಗಿ, ಏಕೀಕರಣವಾಗಿ ೫೩ ವರ್ಷಗಳು ಕಳೆದರೂ ನಮ್ಮ ಕರ್ನಾಟಕ, ಕನ್ನಡ, ಕನ್ನಡಿಗ ನಿರೀಕ್ಷಿತ ಮಟ್ಟದಲ್ಲಿ ಸುದಾರಣೆ ಕಾಣದೇ ಇರೋದೇ ಇವತ್ತಿನ ಈ ಯೋಚನೆಗೆ ಪ್ರೇರಣೆ.......
ಸ್ವಲ್ಪ ಹಿಂದೆ ಹೋಗಿ ನೋಡಿದರೆ ನಮಗೆ ಗೊತ್ತಾಗುವ ಸಂಗತಿ ಏನೆಂದರೆ, ಕನ್ನಡ ಶಾಲೆಗಳಿಗಿಂತ ಬೇರೆ ಭಾಷೆಯ ಶಾಲೆಗಳೆ ಹೆಚ್ಚಾಗಿದ್ದ ಕೆಲವು ಪ್ರದೇಶಗಳ ಇಂದಿನ ಸ್ವಲ್ಪ ಸುಧಾರಿತ ಬೆಳವಣಿಗೆಗಳಿಗೆ ನಮ್ಮ ಹಿರಿಯರು ಪಟ್ಟ ಶ್ರಮವೇ ಕಾರಣ. ಬಹಳಷ್ಟು ಮಹನೀಯರ ಶ್ರಮ, ಹೋರಾಟದ ಫಲವಾಗಿಯೇ ಇಂದು ನಾವು ಕರ್ನಾಟಕವೆಂಬ ಸುಂದರ ನಾಡಿನಲ್ಲಿ ಜೀವನ ಮಾಡುತ್ತಿರುವುದು.
ಈ ನಾಡಿಗೆ ಈಗ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಏಕೆ........? ಎಂಬ ಪ್ರಶ್ನೆ ನಮ್ಮ ಮುಂದೆ ಎದುರಾದಾಗ ಕೆಲವು ಹಿಂದೆ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುವುದು ಇಲ್ಲಿ ಸೂಕ್ತವೆನಿಸುತ್ತದೆ.

ಬೆಳಗಾವಿ ಗಡಿ ವಿವಾದ: ಈ ಸಮಸ್ಯೆ ಇಂದು ನಿನ್ನೆಯದಲ್ಲ. ಇದು ಏಕೀಕರಣವಾದ ಕಾಲದಿಂದಲೂ ಸಣ್ಣ ಪುಟ್ಟ ಹೇಳಿಕೆಗಳ ಮುಖಾಂತರ ಪ್ರಾರಂಭವಾದ ವಿವಾದ, ಒಂದು ಸಂಘಟನೆಯಾಗಿ ನಮ್ಮ ರಾಜ್ಯದಲ್ಲೆ ಇದ್ದು ನಮ್ಮ ಪ್ರದೇಶವನ್ನು ತಮ್ಮ ಪ್ರದೇಶವೆಂದು ಸಾರಿ ಸರಕಾರಿ ಮಟ್ಟದಲ್ಲಿ ನಿರ್ಣಯ ಕೈಗೊಳ್ಳುವಷ್ಟು ಮುಂದುವರೆದದ್ದು ನಿಜಕ್ಕೂ ಕನ್ನಡಿಗರೂ ತಲೆ ತಗ್ಗಿಸುವ ವಿಚಾರ ಅಂಥ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗರಿಗೆ ಅನ್ನಿಸದೇ ಇರದು.
ಈ ವಿವಾದ ಇಷ್ಟು ವರ್ಷ ಜೀವಂತವಾಗಿ ಇರಲು ನಮ್ಮನ್ನಾಳಿದ ರಾಷ್ಟ್ರೀಯ ಪಕ್ಷಗಳೇ ಕಾರಣ. ಒಂದು ಕನ್ನಡ ಪರ ಸಂಘಟನೆಯ ಶ್ರಮದ ಫಲವಾಗಿ ಇಂದು ಬೆಳಗಾವಿಯಲ್ಲಿ ಕನ್ನಡದ ಮೇಯರ್ ಆಯ್ಕೆಯಾಗಿದ್ದಾರೆ. ಕನ್ನಡದ ಕಂಪು ವಿಸ್ತಾರವಾಗತೊಡಗಿದೆ. ಸರಕಾರ ಮಾಡಬೇಕಾದ ಕೆಲಸವನ್ನು ಮಾಡಿದ್ದು ಕನ್ನಡ ಪರ ಸಂಘಟನೆ. ನಮ್ಮಲ್ಲೂ ಒಂದು ಪ್ರಾದೇಶಿಕ ಪಕ್ಷ ಮೊದಲೇ ಇದ್ದಿದ್ದರೆ ಬಹುಶ್ಃ ಇವತ್ತಿನ ಪತ್ರಿಕೆಗಳಲ್ಲಿ ಎಮ್ ಇ ಎಸ್ ಎಂಬ ಸಂಘಟನೆ ಬೆಳಗಾವಿಯಲ್ಲಿ ಮಾಡಿದ ಪುಂಡಾಟಿಕೆಯ ಸುದ್ದಿ ನಾವು ಕೇಳುತ್ತಿರಲಿಲ್ಲ.

ಹೊಗೆನಕ್ಕಲ್ ವಿವಾದ: ಈಗಲೂ ಹಳ್ಳಿಗಳಲ್ಲಿ ಒಂದೊಂದು ಅಡಿಗಳಷ್ಟು ಜಾಗದ ಸಲುವಾಗಿ ಜಗಳಗಳಾಗುವುದನ್ನು ನಾವು ಕಂಡಿದ್ದೇವೆ. ಇನ್ನು ಹೊಗೆನಕ್ಕಲ್ ಎಂಬ ನೂರಾರು ಎಕರೆ ಅರಣ್ಯ ಪ್ರದೇಶದ ಜಾಗವನ್ನು ನೆರೆ ರಾಜ್ಯದವರು ನೀರಾವರಿ ಯೋಜನೆಯ ನೆಪದಲ್ಲಿ ಕಬಳಿಸುತ್ತಿದ್ದರೆ, ಸ್ವಾಭಿಮಾನಿಯಾದ ಯಾವೊಬ್ಬ ಕನ್ನಡಿಗನು ಸುಮ್ಮನಿರಲು ಸಾದ್ಯವೇ..? ಇಲ್ಲವೇ ಇಲ್ಲ. ಆದರೆ ಇಲ್ಲ ಅನ್ನೋದು ಏಕೀಕರಣವಾದ ಕಾಲದಿಂದಲೂ ಆಳುತ್ತ ಬಂದಿರುವ ನಮ್ಮ ರಾಷ್ಟ್ರೀಯ ಪಕ್ಷಗಳ ಜನಪ್ರತಿನಿಧಿಗಳಿಗೆ ಇಲ್ಲಿಯವರೆಗೂ ಗೊತ್ತಾಗದೇ ಇರುವುದು ನಮ್ಮ ದುರಾದ್ರಷ್ಟ. ಈ ವಿವಾದಕ್ಕೆ ಗಾಯದ ಮೇಲೆ ಬರೆ ಎಳೆದ ಹಾಗೆ, ಕೇಂದ್ರ ಸರಕಾರ ಇದಕ್ಕೆ ಸಮ್ಮತಿಸಿ ಯೋಜನೆಗೆ ಜಪಾನನಿಂದ ೧೩೩೪ ಕೋಟಿ ರೂ. ನೆರವು ಪಡೆಯಲು ತಮಿಳನಾಡಿಗೆ ಒಪ್ಪಿಗೆ ಸೂಚಿಸಿತು. ಇದಕ್ಕೆ ನಮ್ಮ ರಾಷ್ಟ್ರೀಯ ಪಕ್ಷದ ಜನಪ್ರಿತಿನಿಧಿಗಳು ತಾನೆ ಏನು ಮಾಡಿಯಾರು..? ಅವರು ಈ ಕೆಲಸಕ್ಕೆ ಕೈ ಹಾಕಿದರೆ ಅವರ ಕುರ್ಚಿ ಕಾಪಾಡುವವರು ಯಾರು...? ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ ಅಂದರೆ ತಮಿಳುನಾಡು ಸರಕಾರ ಕಬಳಿಸಲು ಕೆಂದ್ರ ಸರಕಾರದ ಅನುಮತಿ ಪಡೆಯುವಷ್ಟು ಮುಂದುವರೆಯಲು ಕಾರಣ ಅಲ್ಲಿರುವ ಪ್ರಾದೇಶಿಕ ಪಕ್ಷವೇ ಹೊರತು ಮತ್ತೇನಲ್ಲ. ನಮ್ಮ ಪ್ರಾದೇಶಿಕ ಪಕ್ಷ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತು ಎಂದು ಒತ್ತಿ ಹೇಳುವ ಅಗತ್ಯ ಇಲ್ಲ. ಒಂದು ಕನ್ನಡ ಪರ ಸಂಘಟನೆ ಆ ಸಂಧರ್ಭದಲ್ಲಿ ಪ್ರಾದೇಶಿಕ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದು ಮಾತ್ರ ನಿಜಕ್ಕೂ ಪ್ರಶಂಸನಿಯ.

ಪ್ರತಿಮೆ ಅನಾವರಣ ವಿವಾದ: ತಿರುವಳ್ಳುವರ್ ಒಬ್ಬ ಶ್ರೇಷ್ಟ ಕವಿ ಇರಬಹುದು. ಆದರೆ ಇಲ್ಲಿ ಕೆಲವು ಸಂಗತಿಗಳನ್ನು ನಾವು ಮೆಲುಕು ಹಾಕೋದು ಸೂಕ್ತ. -ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಭರವಸೆ ನೀಡುವ, ಅದಕ್ಕೆ ಪ್ರಯತ್ನಿಸುವ ಸದಸ್ಯನಿಗೆ ಮಾತ್ರ ಚುನಾವಣೆಗಳಲ್ಲಿ ಮತ ಹಾಕಿ ಎಂದು ಇಲ್ಲಿನ ತಮಿಳು ಸಮುದಾಯಕ್ಕೆ ಆದೇಶ ಹೊರಡಿಸಿದ್ದು, -ವೀರಪ್ಪನ್ ಒತ್ತಾಸೆಯಿಂದ ರಾಜಕುಮಾರ್ ಬಿಡುಗಡೆ ಆಗಬೇಕಾದ್ರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಆಗಬೇಕು ಎಂಬ ಹಠ ಮಾಡಿದ್ದು. -ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿಕೆ ನೀಡಿದ್ದು, -ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗದಂತೆ ತೊಡರುಗಾಲು ಹಾಕಿರುವುದು, -ತಮ್ಮ ರಾಜ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಡುತ್ತಿರುವುದು. -ತಮಿಳರು ನಾವು ಬೆಂಗಳೂರಿನವರು ಆದರೆ ಕರ್ನಾಟಕಕ್ಕೆ ಸೇರಿದವರಲ್ಲ ಎಂಬ ಭಾವನೆ ಇಟ್ಟುಕೊಂಡಿರುವುದು, -ಇಲ್ಲಿ ನೆಲೆಸಿರುವ ತಮಿಳರ ಉದ್ದೇಶ ಬೆಂಗಳೂರನ್ನು ಕೇಂದ್ರಾಡಳಿತಕ್ಕೆ ಒಳಪಡಿಸುವುದಾಗಿರುವುದು. ಈ ಎಲ್ಲ ಸಂಗತಿಗಳನ್ನು ಬಲ್ಲವರು ಯಾರೇ ಆದರೂ ಪ್ರತಿಮೆ ಅನಾವರಣಕ್ಕೆ ಮುಂದಾಗುವುದಿಲ್ಲ. ಇನ್ನು ನಮ್ಮ ರಾಜ್ಯದಲ್ಲಿರುವ ಎಷ್ಟು ಶ್ರೇಷ್ಟ ಕವಿಗಳ ಪ್ರತಿಮೆ ನಮ್ಮ ರಾಜ್ಯದಲ್ಲಿವೆ. ಎಷ್ಟು ಜನ ಕವಿಗಳಿಗೆ ಅವರಿಗೆ ಸಿಗಬೇಕಾದ ಗೌರವ ಸಿಕ್ಕಿದೆ ಸ್ವಲ್ಪ ಯೋಚಿಸಬೇಕಾಗಿದೆ. ಹೀಗಿದ್ದಾಗ ಸೌಹಾರ್ಧದ ನೆಪದಲ್ಲಿ ಒಂದು ರೀತಿಯ ತಮಿಳರ ಸಂಕೇತವಾದ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಎಷ್ಟು ಸಮಂಜಸ...? ಆದರೆ ನಮ್ಮ ರಾಷ್ಟ್ರೀಯ ಪಕ್ಷದ ಜನಪ್ರತಿನಿಧಿಗಳು ಮಾಡಿದ್ದೇನು...? ಬೆಂಗಳೂರು ಮಾತ್ರವಲ್ಲದೆ ನಮ್ಮ ಸಾಂಸ್ಕ್ರತಿಕ ನಗರ ಮೈಸೂರಿನಲ್ಲಿ ಕೂಡ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದು ನಾವು ಮರೆಯುವಂತಿಲ್ಲ. ನಮ್ಮ ರಾಜ್ಯದ ಪ್ರಾದೇಶಿಕ ಪಕ್ಷ ಅನ್ನಿಸಿಕೊಂಡಿರುವ ಜೆ ಡಿ ಎಸ್ ಕೂಡ ಇದನ್ನು ಬೆಂಬಲಿಸಿದ್ದು ಕಂಡಾಗ ಅದನ್ನು ಹೇಗೆ ನಾವು ನಮ್ಮ ಪ್ರಾದೇಶಿಕ ಪಕ್ಷ ಅಂಥ ಒಪ್ಪುವುದು....? ಇಲ್ಲಿ ಮತ್ತೆ ಒಂದು ಸಮರ್ಥ ಪ್ರಾದೇಶಿಕ ಪಕ್ಷದ ಜವಾಬ್ದಾರಿ ಹೊತ್ತಿದ್ದು ನಮ್ಮ ಕನ್ನಡ ಪರ ಸಂಘಟನೆ........

ಮೇಲಿನವುಗಳು ಕೇವಲ ಉದಾಹರಣೆಗಳು. ಕಾವೇರಿ ವಿವಾದ, ರೇಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ತಾರತಮ್ಯ, ಕನ್ನಡ ಅನುಷ್ಟಾನ ನಿರ್ಲಕ್ಷ್ ಈ ತರಹದ ಅನೇಕ, ನಮ್ಮ ನಾಡು, ನುಡಿ, ನೆಲ, ಜಲಗಳಿಗೆ ಹಾನಿಯುಂಟು ಮಾಡುವ ಅನೇಕ ಘಟನೆಗಳು ನಡೆದಿವೆ. ಆ ಎಲ್ಲ ಸಂದಭಗಳಲ್ಲಿ ನಮ್ಮ ರಾಷ್ಟ್ರೀಯ ಪಕ್ಷದ ಜನಪ್ರತಿನಿಧಿಗಳು, ನಮ್ಮ ಪ್ರಾದೇಶಿಕ ಪಕ್ಷದ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ, ಕನ್ನಡ, ಕರ್ನಾಟಕ ಮತ್ತು ಕನ್ನಡಿಗರನ್ನು ಕಾಪಾಡುವಲ್ಲಿ ವಿಫಲರಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುವ ಸಂಗತಿ.
ಮತ್ತು ಈ ಎಲ್ಲ ಸಂಧಭಗಳಲ್ಲಿ ಕನ್ನಡದ, ಕನ್ನಡಿಗರ, ಕರ್ನಾಟಕದ ಪರವಾಗಿ ನಿಂತು ಒಂದು ಪ್ರಾದೇಶಿಕ ಪಕ್ಶ ಮಾಡಬೇಕಾದ ಕೆಲಸ ಮಾಡಿದ್ದು, ಒಂದು ಸಂಘಟನೆ. “ಆ ಸಂಘಟನೆ ಈಗ ನಮ್ಮ ರಾಜ್ಯದ ರಾಜಕೀಯ ಪ್ರಾದೇಶಿಕ ಪಕ್ಷವಾಗಿ ಮಾರ್ಪಾಡಾಗಬೇಕಾಗಿರುವುದು ಇಂದಿನ ಅಗತ್ಯತೆ ಮತ್ತು ನಮ್ಮ ಆಶಯ”.