Tuesday, 29 June 2010

ಗುಣಮಟ್ಟದ ಶಿಕ್ಷಣ ಅಂದ್ರೆ "ಸಿ. ಬಿ. ಎಸ್. ಸಿ" ಪಠ್ಯಕ್ರಮನಾ.....?


ಇದು ಮೆಟ್ರೊ ನಗರ ಬೆಂಗಳೂರಿನಲ್ಲಿ ಹರಿದಾಡುತ್ತಿರುವ ಮಾತಲ್ಲ, ರಾಜಧಾನಿಯಿಂದಾಚೆ ನೂರಾರು ಕಿ.ಮಿ. ದೂರದ ಊರುಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡುವಂಥ ಇಂಥದೊಂದು ಗಬ್ಬು ವಾತಾವರಣ ದಿನದಿಂದ ದಿನಕ್ಕೆ ಅವ್ಯಾಹತವಾಗಿ ಹಬ್ತಾ ಇದೆ ಗುರು. ಇದಕ್ಕೆ ಪುಷ್ಟಿ ನೀಡುವ ಉದಾಹರಣೆಗಳಿಗೇನು ಕಮ್ಮಿ ಇಲ್ಲ.
ಒಂದು ತಾಜಾ ನಿದರ್ಶನ. ನಮ್ಮ ವಿಜಾಪುರ ಜಿಲ್ಲೆಯ ಗಲಗಲಿ ಎಂಬ ಪುಟ್ಟ ಗ್ರಾಮದಲ್ಲಿ ೨೦೦೪ ರಲ್ಲಿ ಉಳ್ಳವರು ಶಿವಾಲಯ ಮಾಡೊ ಹಾಗೆ, ಆಂಗ್ಲ ಮಾದ್ಯಮದ ಅಂತರಾಷ್ಟೀಯ ಶಾಲೆಯೊಂದನ್ನು ಪ್ರಾರಂಭ ಮಾಡಿದ್ರು. ಗುಣಮ್ಮಟ್ಟದ ಶಿಕ್ಷಣ ಎಂಬ ಉದ್ದೇಶದಿಂದ ಇದು ಪ್ರಾರಂಭವಾಯ್ತು. ಈಗ ೨೦೧೦ ರಲ್ಲಿ ಆ ಗುಣಮಟ್ಟದ ಶಿಕ್ಷಣ ಸಾಲದೆಂಬಂತೆ ಈ ಸಂಸ್ಥೆ ಸಿ.ಬಿ.ಎಸ್.ಸಿ ಪಠ್ಯಕ್ರಮದ ಅಂತರಾಷ್ಟೀಯ ಶಾಲೆಯೊಂದನ್ನು ತೆರೆಯಲು ಮುಂದಾಗಿದೆ ಎಂಬ ವರದಿ ಮೊನ್ನೆಯ ವಿಕ ದಲ್ಲಿ ಪ್ರಕಟವಾಗಿತ್ತು. ಅಲ್ಲಿ ಅವರು ನೀಡಿರುವ ಹೇಳಿಕೆ ಗಮನ ಸೆಳೆಯಿತು. " ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ದೂರದ ಊರುಗಳಿಗೆ ಕಳುಹಿಸಬೇಕು. ನಮ್ಮಲ್ಲೇ ಉತ್ತಮ ಗುಣಮಟ್ಟದ ಶಾಲೆ ನಡೆಸಿ, ಮಕ್ಕಳು ದೂರಕ್ಕೆ ಹೋಗುವುದನ್ನು ತಪ್ಪಿಸಬೇಕೆಂಬ ಸದುದ್ದೇಶದಿಂದ ಇಲ್ಲಿಯೆ ಸಿ.ಬಿ.ಎಸ್.ಸಿ ಪಠ್ಯಕ್ರಮದ ಶಾಲೆಯೊಂದನ್ನು ತೆರೆಯಲು ನಿರ್ಧರಿಸಲಾಗಿದೆ" ಎಂದು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಇವರು ಹೇಳೊ ರೀತಿ ನೋಡಿದ್ರೆ ಗುಣಮಟ್ಟದ ಶಿಕ್ಷಣ ಅಂದ್ರೆ ಸಿ.ಬಿ.ಎಸ್.ಸಿ ನಲ್ಲೆ ಕಲೀಬೇಕು. ನಮ್ಮ ಮಕ್ಕಳು ಉಧ್ಧಾರ ಆಗಲು ಸಿ.ಬಿ.ಎಸ್.ಸಿ ಶಾಲೆಗಳಿಗೆನೇ ಹೋಗಬೇಕು ಅಂಥ ಮುಖಕ್ಕೆ ಹೊಡೆದ ಹಾಗೆ ಹೇಳ್ತಾ ಇದ್ದಾರೆ ಅನ್ಸುತ್ತೆ. ಹಳ್ಳಿಗಳಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮುಖಾಂತರ ಹಳ್ಳಿಯ ಮಕ್ಕಳು ಏಳಿಗೆ ಹೊಂದಲು ಸಹಕಾರಿಯಾಗುವುದು ಎಂಬ ವಾದವನ್ನು ಒಪ್ಪಬಹುದು, ಆದರೆ ಸಿ.ಬಿ.ಎಸ್.ಸಿ ಯಿಂದ ನಮ್ಮ ಹುಡುಗರು ಕನ್ನಡದಿಂದ ಮತ್ತು ಕನ್ನಡ ನಾಡಿನಿಂದ ಬಹಳ ದೂರವಾಗುತ್ತಾರೆ ಎಂಬ ಅರಿವು ಬರಬೇಕಲ್ಲವೇ. ಇದು ಯಾವುದೋ ಒಬ್ಬ ವ್ಯಕ್ತಿಯ, ಒಂದು ಜಿಲ್ಲೆಯ ಕಥೆಯಲ್ಲ, ನಮ್ಮ ಘನ ಸರಕಾರದ ಕೃಪಾಕಟಾಕ್ಷದಿಂದ, ಹೇಳೊಕೆ ಆಚಾರ ತಿನ್ನೋಕೆ ಬದನೆಕಾಯಿ ಎಂಬಂತಿರುವ ಸರಕಾರದ ಇಂಗ್ಲೀಷ ವ್ಯಾಮೋಹದಿಂದ ದೊಡ್ಡ ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಈ ರೀತಿ ಅಭಿಪ್ರಾಯಗಳು ರಾಜ್ಯದ ತುಂಬೆಲ್ಲ ಹರಡುತ್ತಿದೆ. ಹಳ್ಳಿಗಳಲ್ಲೂ ಇಂಥ ಶಾಲೆಗಳು ಆರಂಭವಾಗೋದ್ರಿಂದ ಸಹಜವಾಗಿ ಸರಕಾರಿ ಕನ್ನಡ ಶಾಲೆಯಲ್ಲಿ ಓದುತ್ತಿರುವ ೮೫% ಕನ್ನಡ ಮಕ್ಕಳಿಗೆ ತಪ್ಪು ಸಂದೇಶ ರವಾನೆಯಾಗದೇ ಇರುವುದೇ..? ಅವರನ್ನ ಶಾಲೆಗೆ ಕಳುಹಿಸುತ್ತಿರುವ ಪಾಲಕರಲ್ಲಿ ಆತಂಕ ಸೃಷ್ಟಿಸದೇ ಇರುವುದೇ..? ಇಷ್ಟ ಪಟ್ಟು ಕನ್ನಡ ಮಾದ್ಯಮ ಕಲಿಯುವವರ ಸಂಖ್ಯೆ ಕ್ಷೀಣೀಸುವುದಿಲ್ಲವೇ..? ಆಂಗ್ಲ ಮಾದ್ಯಮದಲ್ಲಿ ಕಲಿಸುವ ಶಕ್ತಿ ಇಲ್ಲದವರು ಮಾತ್ರ ಕನ್ನಡ ಮಾದ್ಯಮ ಅನ್ನೋ ಥರ ವಾತಾವರಣ ಸೃಷ್ಟಿ ಆಗದೇ ಇರುತ್ತಾ..?

ಯಾಕೆ ಹೀಗೆ.?
ಗುಣಮಟ್ಟದ ಶಿಕ್ಷಣ ಎಂದ ತಕ್ಷಣ ಆಂಗ್ಲ ಮಾದ್ಯಮ ಶಾಲೆ, ಸಿ.ಬಿ.ಎಸ್.ಸಿ ಪಠ್ಯಕ್ರಮದ ಕಡೆ ತಿರುಗುವ ನಮ್ಮ ಅತೀ ಬುದ್ದಿವಂಥ ನಾಗರಿಕರು, ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿ ಅದರಲ್ಲಿಯೆ ಇನ್ನೊಬ್ಬ ವಿಶ್ವೇಶ್ವರಯ್ಯ, ಮತ್ತೊಬ್ಬ ಡಾ: ಮೋದಿ ಯವರನ್ನು ಸೃಷ್ಟಿ ಮಾಡುವಂಥ ಹೊಣೆಯನ್ನು ಹೊತ್ತುಕೊಳ್ಳಬಾರದೇ.? ಅಂತರಾಷ್ಟೀಯ ಆಂಗ್ಲ ಮಾದ್ಯಮ ಶಾಲೆ ತೆರೆಯುವ ಬದಲು ಗುಣಮಟ್ಟದ ಅಂತರಾಷ್ಟ್ರೀಯ ಕನ್ನಡ ಮಾದ್ಯಮ ಮಾದರಿ ಶಾಲೆ ತೆರೆಯಬಾರದೇ..? ಇಂಥದ್ದೊಂದು ಯೋಚನೆ ಜನರಲ್ಲಿ ಮತ್ತು ಉಳ್ಳವರಲ್ಲಿ ಬರಬೇಕೆಂದರೆ ಗುಣಮ್ಮಟ್ಟದ ಶಿಕ್ಷಣ ಕನ್ನಡದಲ್ಲೂ ಕೊಡಬಹುದು, ಕನ್ನಡ ಮಾದ್ಯಮದಲ್ಲಿ ಕಲಿತವರು ಇಂಜಿನಿಯರ ಡಾಕ್ಟರ ಅಷ್ಟೇ ಅಲ್ಲದೇ ಆ ಹುದ್ದೆಗಳಿಗೆ ’ರೋಲ್ ಮಾಡೆಲ್’ ಎಂದೆನಿಸಿದ ನಮ್ಮ ನಾಡಿನ ಹೆಮ್ಮೆಯ ವಿಶ್ವೇಶ್ವರಯ್ಯ ಮತ್ತು ಡಾ: ಮೋದಿ ಥರನೂ ಆಗಬಹುದು ಎಂಬ ನಂಬಿಕೆ ಮೂಡಿದಾಗ. ಆದರೆ ಇಂಥದೊಂದು ನಂಬಿಕೆ ಮೂಡಲು ಬದಲಾವಣೆಗೆ ಮುನ್ನುಡಿ ಬರೆಯಬೇಕಾದ ಸರಕಾರವೇ ಮುಂದೆ ನಿಂತು ತಿಥಿ ಊಟ (ಸಿ.ಬಿ.ಎಸ್.ಸಿ ಪಠ್ಯಕ್ರಮ) ಬಡಿಸುತ್ತಿರುವಾಗ ಯಾರಿಗೆ ಏನಂದು ಏನು ಪ್ರಯೋಜನ.

ಇನ್ನು ನಮ್ಮ ಪ್ರಾಧಿಕಾರಗಳು:
ಕನ್ನಡನಾಡು ನುಡಿ ನೆಲ ಜಲಗಳ ಸಂರಕ್ಷಣೆಗೆ ನಮ್ಮ ಸರಕಾರಗಳು ಪ್ರಾಧಿಕಾರ ಅಂಥ ಮಾಡಿದ್ದಾವೆ. ಆದರೆ ಅವು ’ಅಧಿಕಾರ ಹಂಚಿಕೆ ಮಾಡ್ಕೊಳ್ಳೊಕೆ ದಾರಿಯಾಗಿದೆ ಅಷ್ಟೆ’. ಸಚಿವ ಸ್ಥಾನ ಸಿಗದ ನಾಯಕರಿಗೆ, ಸಮಾಧಾನ ಪಡಿಸ್ಲಿಕ್ಕೆ ಬೇಕಾಗಿರೊ ಕುರ್ಚಿ ಆಗೊಗಿದೆ. ಇವುಗಳು ಲೆಕ್ಕಕ್ಕುಂಟು, ಆದರೆ ಆಟಕ್ಕಿಲ್ಲ. ಅವಾಗವಾಗ ಅಲ್ಪ ಸ್ವಲ್ಪ ಆಟ ಆಡಿದ್ದು ಬಿಟ್ರೆ, ಏನು ಆಟ ಆಡ್ಬೇಕಿತ್ತೊ, ಯಾವ ಜವಾಬ್ದಾರಿಯನ್ನು ನಿರ್ವಹಿಸಬೇಕಿತ್ತೋ ಅದನ್ನು ಹೇಗೆ ನಿರ್ವಹಿಸ್ತಾ ಇವೆ ಅಂಥ ಬಿಡಿಸಿ ಹೇಳ್ಭೇಕಾ. ಗಡಿ ಜಿಲ್ಲೆಗಳಲ್ಲಿರುವ ಕನ್ನಡ ಶಾಲೆಗಳ ಅತಂತ್ರ ಸ್ಥಿತಿ ಇವರು ನಿರ್ವಹಿಸುತ್ತಿರುವ ಬೇಜವಾಬ್ದಾರಿಗೆ ನಿದರ್ಶನ.
ಆಂಗ್ಲ ಮಾದ್ಯಮದ ಕುರಿತಾದ ಒಂದು ಜೋಕು ನೆನಪಾಗ್ತಿದೆ...........
ಇಂಗ್ಲೀಷ ಶಾಲೆಗಳಲ್ಲಿ ಬರಸೇ ಬರೆಯಿಸುವರು ಹೋಮ್ ವರ್ಕ್, ಮಾಸ್ತರು
ಇಂಗ್ಲೀಷ ಶಾಲೆಗಳಲ್ಲಿ ಬರಸೇ ಬರೆಯಿಸುವರು ಹೋಮ್ ವರ್ಕ್, ಮಾಸ್ತರು
ಬರೆದು ಬರೆದು ಸುಸ್ತಾಗಿ ನಮ್ಮ ಮಕ್ಕಳಾಗುವರು ಕಡೆಗೆ ..... ಗುಮಾಸ್ತರು : )

ಗೋಡೆ ಬರಹ: ಸರ್ವರೋಗಕ್ಕೂ ಸಾರಾಯಿ ಮದ್ದು ಅಂತಾರೆ, ಹೌದೋ ಅಲ್ಲವೋ ಗೊತ್ತಿಲ್ಲ ಆದರೆ
ಕರ್ನಾಟಕದ ಸರ್ವಸಮಸ್ಯೆಗೂ ಪ್ರಾದೇಷಿಕ ಪಕ್ಷ ಮದ್ದು ಎಂಬುದು ಮಾತ್ರ ಹೈಕಮಾಂಡ್ ಇರೋರು ಕೂಡ ಅಲ್ಲಗಳೆಯಕ್ಕಾಗಲ್ಲ.

Saturday, 19 June 2010

ರಾಮರಾಜ್ಯದಲ್ಲಿ ’ರಾವಣ’ನ ಅಟ್ಟಹಾಸ ಮುಂದುವರಿಕೆಗೆ ಕಟ್ಟಾಜ್ಞೆ.......!


ಕಡೆಗೂ ’ರಾವಣ’ ತನ್ನ ದುರ್ಬುಧ್ಧಿಯನ್ನು ’ರಾಮರಾಜ್ಯದ’ ಮೇಲೆ ತೋರಿಸಿಯೇ ಬಿಟ್ಟಿದ್ದಾನೆ. ನಿನ್ನೆ (೧೭-೦೬-೧೦) ’ರಾವಣ’, ಕರ್ನಾಟಕ ಚಲನಚಿತ್ರ ಮಂಡಳಿ ನಿಯಮದಂತೆ ಸುಮಾರು ೨೪ ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಆದ್ರೆ ಈ ನಡುವೆ ’ದಿ ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ’ (ಸಿ ಸಿ ಐ) ಎಂಬ ರಾಷ್ಟ್ರೀಯ ಆಯೋಗವು, ರಾವಣ ಚಿತ್ರ ವಿತರಕರ ಮೇಲೆ ನೇರ ಹಾಗೂ ಪರೋಕ್ಷವಾಗಿ ಯಾವುದೇ ಕ್ರಮಕೈಗೊಳ್ಳದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ(ಕೆಎಫ್ ಸಿಸಿ) ಕಟ್ಟಾಜ್ಞೆ ವಿಧಿಸಿದ ಸುದ್ದಿ ನಿನ್ನೆ ಹೊರಬಿತ್ತು. ಈ ಕಟ್ಟಾಜ್ಞೆ ಕೇವಲ ಕೆ ಎಫ್ ಸಿ ಸಿ ಅಷ್ಟೆ ಅಲ್ಲದೇ, ಇಡೀ ಕನ್ನಡ ಚಿತ್ರ ಕಲಾವಿದರಿಗೆ ಮತ್ತು ಕನ್ನಡ ಚಿತ್ರಗಳ ಅಭಿಮಾನಿಗಳಿಗೆ ಆದ ಹಿನ್ನಡೆ ಎಂದು ಭಾವಿಸಬಹುದು. ಈ ಕಟ್ಟಾಜ್ಞೆಯನ್ನ ನಾವ್ ಖಂಡಿಸಬೇಕು ಅಲ್ವಾ ಗುರು.

ಯಾಕೆ ಅಂತೀರಾ....
ಈ ’ಸಿ ಸಿ ಐ’ (ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ) ಅನ್ನೋದು ಗ್ರಾಹಕರ ಹಿತಾಸಕ್ತಿ, ವ್ಯಾಪಾರ ಸ್ವಾತಂತ್ರ್ಯ ಮತ್ತು ಸ್ಪರ್ಧಾತ್ಮಕ ವಾತಾವರಣ ಎಂಬ ದ್ಯೇಯಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಒಂದು ರಾಷ್ಟ್ರೀಯ ಆಯೋಗ. ಗ್ರಾಹಕರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯಾಪಾರದಲ್ಲಿ ಒಂದು ಸ್ಪರ್ಧಾತ್ಮಕ ವಾತಾವರಣವನ್ನು ಪ್ರೋತ್ಸಾಹಿಸುವುದು ಈ ಆಯೋಗದ ಉದ್ದೇಶ. ಆದ್ರೆ ನಿನ್ನೆ (೧೮-೦-೧೦) ಕೊಟ್ಟ ತೀರ್ಪಿನಲ್ಲಿ ಇದು ಏಕೊ ಕೆಲವು ಗ್ರಾಹಕರನ್ನು ಮರೆತಂತಿದೆ. ಗ್ರಾಹಕ ಹೇಗಿದ್ರು ಗ್ರಾಹಕನೇ. ಅದು ೮೦ ಕೋಟಿ ರೂಪಾಯಿ ವೆಚ್ಚ ಚಿತ್ರದ ಗ್ರಾಹಕನಾದ್ರು ಅಷ್ಟೆ, ೮ ಕೋಟಿ ರೂಪಾಯಿ ವೆಚ್ಚ ಚಿತ್ರದ ಗ್ರಾಹಕನಾದ್ರು ಅಷ್ಟೆ. ಅಲ್ಲಿ ಗ್ರಾಹಕನಿಗೆ ಬೆಲೆ ಕಟ್ಟೊಕಾಗತ್ತಾ..? ಆದ್ರೆ ಈ ಆಯೋಗ ಮೇಲ್ನೋಟಕ್ಕೆ ಒಬ್ಬನಿಗೆ ಬೆಣ್ಣೆ ಮತ್ತೊಬ್ಬನಿಗೆ ಸುಣ್ಣ ಪದ್ದತಿ ಅನುಸರಿಸಿರುವುದು ಗೋಚರಿಸುತ್ತದೆ. ಅಧೇಗೆ ಅಂದ್ರೆ, ರಾವಣ ಚಿತ್ರ ನಿಯಮ ಉಲ್ಲಂಘಿಸಿ ೨೪ ರ ಬದಲು ೪೮ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ್ರೆ, ಆ ಹೆಚ್ಚಿದ ೨೪ ಚಿತ್ರಮಂದಿರಗಳಲ್ಲಿ ನಡೆಯುತ್ತಿರುವ ನಮ್ಮ ಕನ್ನಡ ಚಿತ್ರಗಳಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಹೀಗಾದಾಗ ಈ ೨೪ ಚಿತ್ರಮಂದಿರಗಳಿಗೆ ಬರುತ್ತಿದ್ದ ಕನ್ನಡ ಚಿತ್ರಗಳ ಗ್ರಾಹಕರಿಗೆ ಮತ್ತು ಅಭಿಮಾನಿಗಳಿಗೆ ಇವರ ಕಟ್ಟಾಜ್ಞೆ ಮಾರಕವಾಗುವುದಿಲ್ಲವೇ..? ಆಗ ’ಸಿ ಸಿ ಐ’ ನ ಗ್ರಾಹಕರ ಹಿತಾಸಕ್ತಿ ಎಂಬ ದ್ಯೇಯ ಇಲ್ಲಿ ಅನ್ವಯವಾಗುತ್ತದೆಯೇ..? ಕನ್ನಡ ಚಿತ್ರಗಳ ಗ್ರಾಹಕರು ಇವರಿಗೆ ಗ್ರಾಹಕರಾಗಿ ಏಕೆ ಕಾಣಲಿಲ್ಲ. ಒಬ್ಬನಿಗೆ ಒಂದು ನ್ಯಾಯ, ಇನ್ನೊಬ್ಬನಿಗೆ ಇನ್ನೊಂದು ಅಂದ್ರೆ ಹೇಗೆ ಸ್ವಾಮಿ. ನಮ್ಮ ಚಿತ್ರಗಳು ಚಿತ್ರಮಂದಿರಗಳಿಂದ ಎತ್ತಂಗಡಿ ಆದ್ರೂ ಪರ್ವಾಗಿಲ್ಲ, ಇವರ ಚಿತ್ರಗಳು ಬಿಡುಗಡೆಯಾಗ್ಬೇಕು ಅನ್ನೊ ವಾದ ಯಾವ ಕನ್ನಡಾಭಿಮಾನಿ ತಾನೆ ಒಪ್ಪಲು ಸಾದ್ಯ. ಕರ್ನಾಟಕದಲ್ಲೇ ಮಾರುಕಟ್ಟೆ ಕಂಡುಕೊಳ್ಳುವ ನಮ್ಮ ಚಿತ್ರಗಳು ಎಕ್ಕುಟ್ಟೊದ್ರು ಪರ್ವಾಗಿಲ್ಲ, ದೇಶದಾದ್ಯಂತ ಮಾರುಕಟ್ಟೆ ಇರೋ ಇವರಿಗೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ತಡೆಯೊಡ್ಡದೇ ಚಿತ್ರದ ಗೆಲುವಿಗೆ ಅವಕಾಶ ಮಾಡಿಕೊಡಬೇಕು ಅನ್ನೋ ಕಟ್ಟಪ್ಪಣೆಗೆ ತಲೆಬಾಗಲು ಸಾದ್ಯವೇ..?

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದ್ರೆ, ಒಂದು ಚಿತ್ರದ ಉಳಿವಿಗಾಗಿ, ಚೆನ್ನಾಗಿ ಓಡುತ್ತಿರುವ ಮತ್ತೊಂದು ಚಿತ್ರವನ್ನು ಅಳಿಸುವುದು ಯಾವ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಲು ಸಾದ್ಯ. ಪರಭಾಷಾ ಚಿತ್ರಗಳ ನಿಯಮ ಉಲ್ಲಂಘನೆಯಿಂದಾಗುವ ಕನ್ನಡ ಚಿತ್ರಗಳ ಬಿಡುಗಡೆ ವಿಳಂಬ ಯಾವ ವ್ಯಾಪಾರ ಸ್ವಾತಂತ್ರ್ಯವನ್ನು ಬಿಂಬಿಸಲು ಸಾದ್ಯ. ಒಂದು ವೇಳೆ ಮುಂಬೈನಲ್ಲಿ ಸುಮಾರು ೮೦೦ ಕೋಟಿ ರೂಪಾಯಿ ವೆಚ್ಚದ ಇಂಗ್ಲೀಷ ಚಲನಚಿತ್ರ, ಇವರ ಮುಖ್ಯ ಮಾರುಕಟ್ಟೆಯನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದರೆ ಇದೇ ಅಂಬಾನಿ ಸಾಹೇಬರ ಕಂಪನಿ ಸುಮ್ಮನಿರುವುದೇ..? ಈ ಪುರಾಣದಲ್ಲಿ ಇನ್ನೂ ಒಂದು ಮಾತು ಇಲ್ಲಿ ಹೇಳಲೇಬೇಕು, ಈ ರಾವಣ ಚಿತ್ರ ಹಿಂದಿ, ತಮಿಳು, ತೆಲುಗು ಹೀಗೆ ನೂರೆಂಟು ಭಾಷೆಯಲ್ಲಿ ನೋಡೊ ಬದಲು, ನಮ್ಮ ಭಾಷೆಯಲ್ಲೇ ’ಡಬ್’ ಆಗಿದ್ದಿದ್ದರೆ ಈ ಸಮಸ್ಯೆನೇ ಇರ್ತಿರ್ಲಿಲ್ಲ. ನಮ್ಮಲ್ಲಿ ಡಬ್ಬಿಂಗಗೆ ಅವಕಾಶ ಇಲ್ಲದಿರುವ ಪರಿಣಾಮವೇ ಈ ಸಮಸ್ಯೆ.
ಅದಿರ್ಲಿ ಈಗ ಈ ಆಜ್ಞೆ ಬರೋ ಜೂನ್ ೨೨ ರವರೆಗೆ ಜಾರಿಯಿರಲಿದ್ದು, ಅಂದು ನಡೆಯವ ವಿಚಾರಣೆಯಲ್ಲಿ ಚಲನಚಿತ್ರ ಮಂಡಳಿ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಬೇಕಿದೆ. ಪರಭಾಷಾ ಚಿತ್ರಗಳಿಗೆ ವಿಧಿಸಿರುವ ನಿಯಮಗಳ ಪಾಲನೆಯನ್ನು ಎತ್ತಿ ಹಿಡಿಯಬೇಕಿದೆ.

Tuesday, 8 June 2010

ನಾಡಪರ ಚಿಂತಕರು ಯಾವ ನಾಡ ಪರ ಅನ್ನೋದು ಯಕ್ಷ ಪ್ರಶ್ನೆ.......???




"ಕನ್ನಡದ ಮನೆಯಲ್ಲಿ ಕನ್ನಡತಿಯೇ ಯಜಮಾನತಿ; ಮಿಕ್ಕ ಹೆಂಗಸರೆಲ್ಲಾ ಒಕ್ಕಲಷ್ಟೇ ಎಂಬುದರ ನಿಜವನ್ನು ಅರಿತರೆ ಎಲ್ಲರಿಗೂ ಸುಖವಾದೀತು. ಯಜಮಾನತಿ ಮಾತ್ರ ತಾನು ಧರ್ಮಪತ್ನಿ ಎಂಬ ಜಂಭದಲ್ಲಿಯೇ ನಿದ್ರೆ ಮಾಡಿದರೆ, ಊಳಿಗಗಿತ್ತಿಯೂ ಯಜಮಾನನನ್ನು ಲೂಟಿ ಮಾಡುತ್ತಾಳೆಂಬುದನ್ನು ನಾವು ನೋಡಿಲ್ಲವೇ? ಕನ್ನಡತಿ ಯಜಮಾನತಿ ಹೌದು. ಯಜಮಾನನಾದ ಆತ್ಮನಿಗೆ ಪತ್ನಿಯಾಗಿ ಶೃಧ್ಧೆಯಿರುವಂತೆ ಕನ್ನಡಿಗರ ಲಲಿತಾಂಗವನ್ನು ಕನ್ನಡ ಸ್ವಯಂಪ್ರಭೆಯಾಗಿ ಸುತ್ತಮುತ್ತಿಕೊಳ್ಳಬೇಕು". ಇದು ತಾಯಿನುಡಿ ಕನ್ನಡವಲ್ಲದ, ವರಕವಿ ದ. ರಾ. ಬೇಂದ್ರೆ ಅವರು ಕನ್ನಡ ಭಾಷೆಯ ಕುರಿತಂತೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ ಮಾತು.

ಈಗ ಯಕ್ಷ ಪ್ರಶ್ನೆ ಏನಪ್ಪಾ ಅಂದ್ರೆ, ಈ ಮೇಲಿನ ಸಾಲನ್ನು ನಮ್ಮ ಸಾಹಿತಿ ಮಹೋದಯರು, ನಾಡಪರ ಚಿಂತಕರು (ಕನ್ನಡನಾಡ ಪರ ಅಂಥ ಅನ್ಕೊಳ್ಳೋಣ), ಸಭೆ ಸಮಾರಂಭಗಳಲ್ಲೆಲ್ಲ ಕನ್ನಡ ಹಾಗಾಗಿದೆ, ಹೀಗಾಗಿದೆ, ಹಾಗಾಗಬೇಕಿದೆ, ಹೀಗಾಗಬೇಕಿದೆ ಎಂದು ಬಾಯಲ್ಲಿ ಬಡ ಬಡಿಸುವಂಥ ಹಿರಿಯರು, ಎಷ್ಟು ಜನ ಇದನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅದನ್ನು ಅನುಷ್ಟಾನಕ್ಕೆ ತರುವತ್ತ ಪ್ರಯತ್ನಪಡುತ್ತಿದ್ದಾರೆ ಎಂಬುದು. ಸಾಹಿತಿಗಳೆಂದರೆ ಒಂದರ್ಥದಲ್ಲಿ ಕನ್ನಡವನ್ನು ಉಳಿಸುವ ಬೆಳೆಸುವ ಮುಂಚೂಣಿ ನಾಯಕರು ಎಂದರ್ಥ. ಒಬ್ಬ ವ್ಯಕ್ತಿ ಕನ್ನಡದ ಸಾಹಿತಿ ಅಂಥ ಕರೆಯಿಸಿಕೊಂಡರೆ ಅವರು ಸ್ವಾಭಾವಿಕವಾಗಿ ಕನ್ನಡ ಕರ್ನಾಟಕ ಕನ್ನಡಿಗರ ಬಗ್ಗೆ ಇತರರಿಗಿಂತ ಹೆಚ್ಚು ಕಾಳಜಿ, ಗೌರವ ಇರುವವರಾಗಿರಬೇಕಲ್ಲವೇ. ಏಕೆಂದರೆ ಕನ್ನಡದಿಂದಲೇ ಅವರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವವರು. ನಮ್ಮ ನಾಡಿನಲ್ಲಿ ಸಾಹಿತ್ಯಕ್ಕೂ ಬರ ಇಲ್ಲ, ಸಾಹಿತಿಗಳಿಗೂ ಬರ ಇಲ್ಲ. ಆದರೆ ಇಲ್ಲಿ ಎದ್ದು ಕಾಣುತ್ತಿರುವುದು ಒಗ್ಗಟ್ಟಿನ ಕೊರತೆ. ರಾಜಕೀಯ ಪಕ್ಷಗಳನ್ನು ಮೀರಿಸುವಂತಹ ಬಣಗಳು ನಮ್ಮ ಕನ್ನಡ ಸಾಹಿತ್ಯದ ಮನೆಯಲ್ಲಿ. (ದಿನಪತ್ರಿಕೆಗಳಲ್ಲಿ ದಿನಾಲು ಸಾಹಿತಿಗಳ ಕಿತ್ತಾಟ ನೋಡಿ ನೋಡಿ ಬೇಸರವಾಗಿ ಬರೆದ ಲೇಖನವಿದು). ನಮ್ಮ ಸಾಹಿತಿಗಳ ದ್ವಂದ ನಿಲುವುಗಳು, ಕೆಲವರು ಸರಕಾರವನ್ನು ಮೆಚ್ಚಿಸುವ ರೀತಿಯಲ್ಲಿ ನೀಡುವ ಹೇಳಿಕೆಗಳು ಹಿಂದಿನ ಕಹಿ ಅನುಭವಗಳಿಂದ ಸಾಬೀತಾಗಿದೆ. ಕೆಲವರಂತೂ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿರುವುದು ನಿಜಕ್ಕೂ ಘನತೆಗೆ ತಕ್ಕದ್ದಲ್ಲ. ರಾಜ್ಯದಲ್ಲಿ ಸೋನಿಯಾ ಮೇಡಮ್ ಅವರ ಸರ್ಕಾರವಿದ್ದಾಗ ಮುಂಚೂಣಿಯಲ್ಲಿದ್ದು ಬೀದಿಗಿಳಿದು ಹೋರಾಟಗಳನ್ನು ಮಾಡಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಕೆಲವರಿಗೆ, ಸುಷ್ಮಾ ಮೇಡಮ್ (ಗಣಿ ದಣಿಗಳ ಮಾತೆ) ಅವರ ಸರ್ಕಾರ ಬಂದ ಮೇಲೆ ಮಾತುಗಳೇ ಹೊರಡುತ್ತಿಲ್ಲ. ಇದರಿಂದ ಅವರು ನಾಡ ಪರವೋ, ಪಕ್ಷದ ಪರವೋ ಎಂಬ ಸಂಶಯಗಳು ಸ್ವಾಭಾವಿಕವಾಗಿ ಜನರ ಮನಸ್ಸಿನಲ್ಲಿ ಮೂಡಲಾರಂಭಿಸಿವೆ. ಸಾಹಿತಿಗಳು, ನಾಡಪರ ಚಿಂತಕರು ಸರ್ಕಾರದ ಜೊತೆ ಸೇರಿ ಸಲಹೆ ಸೂಚನೆಗಳನ್ನು ಕೊಡುವುದೇನು ಒಳ್ಳೆಯ ನಡೆ. ಆದರೆ ಅದು ಸರ್ಕಾರ ತಪ್ಪು ಹೆಜ್ಜೆ ಇಟ್ಟ ಸಂದರ್ಭದಲ್ಲೂ ಬೆಂಬಲಿಸುವಂಥ ಮಟ್ಟಿಗೆ ಹೋಗಬಾರದಲ್ಲವೇ. ತಿರುವಳ್ಳವರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಆಗಿದ್ದು ಇದೇ ತಾನೆ. “ಕನ್ನಡಿಗರು ವಿಶಾ.....ಲ ಹೃದಯದವರು” ಎಂಬ ಮಾತನ್ನು ಸಾಬೀತು ಮಾಡಲು ಪ್ರತಿಮೆ ಅನಾವರಣ ಪರ ಮಾತನಾಡಿದರು. ಇದರಿಂದ ಕನ್ನಡಿಗರ ಕಿವಿ ಮೇಲೆ ಈಗಾಗಲೇ ಇರುವ ಹೂಗಳ ಜೊತೆಗೆ ಮತ್ತೊಂದು ಹೂ (ಕ್ರೇಜಿ ಸ್ಟಾರ್ ’ಹೂ’ ಅಲ್ಲ) ಇಟ್ಟಂತಾಗುತ್ತದೆ ಎಂಬ ಪರಿಜ್ನಾನವೂ ಇಲ್ಲದ ಇವರು ಯಾವ ಸೀಮೆ ನಾಡಪರಚಿಂತಕರು. (ಹೀಗೆ ಆದರೆ ’ಕನ್ನಡಿಗರು ವಿಶಾ...ಲ ಹೃದಯದವರು’ ಎಂಬ ವಾಕ್ಯ ಕೇಳಿ ಕೇಳಿ ಮುಂದೊಂದು ದಿನ ಮೈ ಉರಿಯುವ ಹಾಗಾಗದೇ ಇರುವುದೇ..?)


ಪ್ರತಿಮೆ ಪುರಾಣನೂ ಆಯಿತು, ನಿರೀಕ್ಷಿಸಿದಂತೆ ಅವರ ಮತಗಳೂ ಬಂದವು. ಅವರು ತಮ್ಮ ಪಾಡಿಗೆ ತಾವು ಕೆಲಸನೂ ಶುರು ಮಾಡಿದರು. ನಮ್ಮ ನಾಡಪರ ಚಿಂತಕರು (ಕನ್ನಡನಾಡ ಪರ ಅಂಥ ಅನ್ಕೊಳ್ಳಿ ಇನ್ನೊಮ್ಮೆ ಪ್ಲೀಸ್) ಊಹಿಸಿದ ಯಾವ ಭಾಂಧವ್ಯ, ಯಾವ ಸಾಮರಸ್ಯ ಬೆಸೆಯಿತು ಎಂಬುದು ಈಗಾಗಲೇ ಅರ್ಥ ಆಗಿರಬೇಕು. ಭಾಂಧವ್ಯ ಬೆಸೆಯಲು ಒಬ್ಬರೇ ’ವಿಶಾ...ಲ ಹೃದಯದವರು’ ಆಗಿದ್ದರೆ ಸಾಲದು ಸ್ವಾಮಿ, ಇನ್ನೊಬ್ಬರಿಗೂ ಆ ನಿಯತ್ತು ಇರಬೇಕಲ್ಲವೇ. ಹಿಂದುಸ್ಥಾನ ಮತ್ತು ಪಾಕಿಸ್ಥಾನ ಭಾಂಧವ್ಯ ಬೆಳೆಯದಿರಲು ಕೂಡ ಇದೇ ಕಾರಣವಲ್ಲವೇ..? ಇಷ್ಟೆಲ್ಲ ಆದರೂ, ಹೊಗೆನಕ್ಕಲನಲ್ಲಿ ಕೆಲಸ ಭರದಿಂದ ಸಾಗಿದ್ದರೂ, ಅಲ್ಲಿ ಕನ್ನಡಿಗರ ಪ್ರವೇಶಕ್ಕೆ ನಿರ್ಭಂಧ ಹೇರಿದ್ದರೂ, ಮಾತನಾಡದ, ತುಟಿ ಬಿಚ್ಚದ ಇವರನ್ನು ನಮ್ಮ ನಾಡಿನ ರತ್ನಗಳು ಎಂದು ಯಾವ ಬಾಯಿಂದ ಹೇಳುವುದು. ಇತ್ತೀಚಿಗೆ ಕರ್ನಾಟಕ ಸರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಸಿ..ಬಿ.ಎಸ್.ಸಿ ಶಾಲೆಗಳನ್ನು ತೆರೆಯುವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಇವರು ಎಂತಹ ಕನ್ನಡಾಭಿಮಾನಿಗಳು ಎಂದು ಒಂದು ಸಲ ಸ್ಪಷ್ಟ ಪಡಿಸಲಿ. ಇನ್ನೂ ಕೆಲವರಿಗೆ ಜಾತಿ ಮೇಲೆ ಮೋಹ (ಪ್ರೇಮ ಅಲ್ಲ). ತಮ್ಮ ಮೋಹಕ್ಕೆ ಮತ್ತೊಬ್ಬರ ಮೇಲೆ ಎಗರಾಡಿ ಕನ್ನಡವನ್ನು ನಿರ್ಲಕ್ಷಿಸುತ್ತಿರುವುದನ್ನು ನಾವೂ ನೋಡಿಲ್ಲವೇ. ಅಲ್ಲ ಸ್ವಾಮಿ, ಈ ಥರ ಎಲ್ಲರೂ ತಮ್ಮ ತಮ್ಮ ಸ್ವಯಂಘೋಷಿತ ಒಂದೊಂದು ತತ್ವ ಸಿದ್ಧಾಂಥಗಳನ್ನೇ ಜನರಿಗೆ ವೇದ ವಾಕ್ಯಗಳೆಂದು ಹೇಳುತ್ತಿದ್ದರೆ, ಕನ್ನಡದ ತತ್ವ ಸಿದ್ಧಾಂಥ ಏಳಿಗೆ ಕಡೆಗೆ ಗಮನ ಹರಿಸುವವರ್ಯಾರು ಮಾರಾಯ್ರೇ..? ನಾವು ರಾಜ್ಯ ಬಿಟ್ಟು ಹೊರಗಡೆ ಇದ್ದಾಗ ಅಲ್ಲಿ ನಮ್ಮನ್ನು(ಕನ್ನಡಿಗರನ್ನು) ಕೂಡಿಸುವುದು ಯಾವ ಜಾತಿ..?, ಕನ್ನಡ ಜಾತಿನೇ ಅಲ್ಲವೇ. ಅಲ್ಲಿ ಯಾವ ಬೇರೆ ಜಾತಿಯ ಸುಳಿವೇ ಇರುವುದಿಲ್ಲ. ನನ್ನ ಒಂದು ಘಟನೆ ನೆನಪಾಯ್ತು. ನಾನು ಒಮ್ಮೆ ಬೇರೆ ರಾಜ್ಯದಲ್ಲಿ ಇದ್ದಾಗ, ಹೀಗೆ ಅಚಾನಕ್ಕಾಗಿ ಒಬ್ಬ ಕನ್ನಡಿಗ ಸಿಕ್ಕರು. ಖುಷಿಯಾಯ್ತು. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿದ್ದು ಏನಪ್ಪಾ ಅಂದ್ರೆ ಅವರು ಹೇಳಿದ ಮಾತು. "ಹಿಂದಿ ಇಂಗ್ಲೀಷ ಮಾತನಾಡಿ ನನ್ನ ನಾಲಿಗೆ ಕೊಳೆಯಾಗಿತ್ತು, ಈಗ ನೀವು ಸಿಕ್ರಲ್ಲ, ಇನ್ ಮೇಲೆ ಸ್ವಚ್ಚ ಆಗುತ್ತೆ" ಅಂಥ. ಅವರು ಒಬ್ಬ ಮುಸ್ಲಿಮ್ ಕನ್ನಡಿಗ ಅನ್ನೋದು ಗಮನಾರ್ಹ. ಹೀಗೆ ಹೊರನಾಡ ಕನ್ನಡಿಗರಲ್ಲಿ ಇರುವಂತಹ ಆ ಅಭಿಮಾನ, ಆ ನಮ್ಮತನ ಒಳನಾಡಿನಲ್ಲಿರುವವರಿಗೂ ತುಂಬುವ ಕೆಲಸ ಮಾಡಬೇಕಾದ ನಮ್ಮ ಹಿರಿಯರೇ ಹೀಗೆ ಸ್ವಾರ್ಥಿಯಾದರೆ ಹೇಗೆ ಸ್ವಾಮಿ. ಯುವಕರಲ್ಲಿ ಸ್ಪೂರ್ತಿ ತುಂಬಬೇಕಾದ ಇವರೇ ಹೀಗೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಮುಂದಿನ ಪೀಳಿಗೆಗೆ ಕನ್ನಡವನ್ನು ಕೊಂಡೊಯ್ಯಲು ಸಾದ್ಯವೇ. ದೇವಸ್ಥಾನದ ಗರ್ಭಗುಡಿಯಲ್ಲೇ ದೇವರು ಇಲ್ಲದ ಮೇಲೆ ಹೊರಗಡೆ ಎಷ್ಟು ಮೂರ್ತಿಗಳನ್ನಿಟ್ಟರೂ ಏನು ಪ್ರಯೋಜನ..? ಕನ್ನಡ ನಾಡಿನಲ್ಲೇ ಕನ್ನಡವಿಲ್ಲದಿದ್ದರೆ, ಹೊರನಾಡಿನಲ್ಲಿ ಎಷ್ಟು ಕನ್ನಡ ಸಂಘಗಳನ್ನು ಮಾಡಿದರೂ ಏನು ಪ್ರಯೋಜನ. ಕರ್ನಾಟಕದಲ್ಲೇ ಕನ್ನಡವಿಲ್ಲದಿದ್ದರೆ, ಮುಂದೊಂದು ದಿನ, ಹೊರನಾಡಿನಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸುವುದು, ಸಭೆ ಸಮಾರಂಭಗಳನ್ನು ನಡೆಸುವುದು ನಗೆ ಚಾಟಿಕೆ ಆಗುತ್ತದೆ ಎಂಬುದನ್ನು ಯಾರಾದರೂ ಅಲ್ಲಗಳೆಯಲು ಸಾದ್ಯವೇ..?


ಏಕೀಕರಣದ ಸಂದರ್ಭದಲ್ಲಿ ಎಲ್ಲ ಮಹೋದಯರು ತಮ್ಮ ಸ್ವಹಿತ, ಪ್ರತಿಷ್ಟೆಯನ್ನು ಬದಿಗಿಟ್ಟ ಪರಿಣಾಮವಾಗಿಯೇ ಈ ನಾಡಿನ ಉದಯವಾಯಿತು. ಈಗ ಅದನ್ನು ಬೆಳೆಸಲು ಎಲ್ಲರೂ ತಮ್ಮ ಸ್ವಹಿತವನ್ನು ಬದಿಗಲ್ಲ, ಊರಾಚೆಯಿಡಬೇಕಲ್ಲವೇ...?

Friday, 7 May 2010

ಶಂಖದಿಂದ್ ಬಂದ್ರನೇ ತೀರ್ಥ.................!!!







ಸುದ್ದಿ: ಹೊಗೆನಕ್ಕಲ್ ಯೋಜನೆ ಕುರಿತು ರಾಜ್ಯ ಸಂಸದರಿಂದ ಪ್ರದಾನ ಮಂತ್ರಿ ಭೇಟಿ........
ಅದರ ಕುರಿತು ಹಳ್ಳಿಯ ಒಂದು ಕಟ್ಟೆಯ ಮೇಲೆ ನಡೆದ ಒಂದು ಸಂವಾದದ ಕಿರುನೋಟ, (ಹಾಗೇ ಸುಮ್ಮನೆ).................


ಗುಂಡ: ಲೇ ತಿಮ್ಮ ಇವತ್ತಿನ್ ಪೇಪರ್ ನೋಡಿಯೇನ....?
ತಿಮ್ಮ : ಇಲ್ಲ ಯಾಕ..?

ಗುಂಡ: ನಮ್ಮ ಎಂಪಿಗೋಳು ನಿನ್ನೆ, ಹೊಗೆನಕ್ಕಲ್ ಸಮಸ್ಯೆ ಬಗಿ ಹರಸ್ರಿ ಅಂತ್ ಹೇಳಾಕ್ ಪ್ರದಾನಮಂತ್ರಿ ಅವರ್ನ್ ಭೆಟ್ಟಿ ಆಗ್ಯಾರಂತ್.
ತಿಮ್ಮ: ಹೌದಾ..!

ಗುಂಡ: ಹೌದಲೇ, ನಮ್ಮ ಎಂಪಿಗೋಳು ಎಲ್ಲಾರು ಪಕ್ಷಭೇಧ ಮರತು, ಎಲ್ಲಾರು ಸೇರಿ, ಪ್ರದಾನ ಮಂತ್ರಿಯವರ್ನ್ ಭೆಟ್ಟಿ ಅಗ್ಯಾರಂತ್. ಇದು ಅಂದ್ರ್ ನೋಡಪಾ ನಮ್ಮ ಎಂಪಿಗೋಳು ಒಗ್ಗಟ್ಟ್ ಅಂದ್ರ. ತಮಿಳನಾಡಿನವ್ರಿಗಿ ಇನ್ ಮ್ಯಾಗ್ ಚಾಲೊ ಆಯ್ತ್ ನೋಡ್ ಮಾರಿ ಹಬ್ಬ. ನೀ ಎನಂತಿ..?
ತಿಮ್ಮ: ಲೇ ನಿಮ್ಮಾಯಿ, ಯಾವ ಜಗತ್ತಿನ್ಯಾಗ್ ಅದಿಯೋಲೆ ನೀ. ಇವತ್ತ್ ನಮ್ಮ ಎಂಪಿಗೋಳ್ ಎಲ್ಲಾರೂ ಸೇರಿ ದಿಲ್ಲಿಗಿ ಹೋಗಿ ಪ್ರದಾನ ಮಂತ್ರಿಯವರ್ನ್ ಭೆಟ್ಟಿ ಆಗ್ಯಾರಂದ್ರ ಅದರ್ ಹಿಂದ್ ಎನೇನ್ ರಾಮಾಯಣ, ಮಹಾಭಾರತ್ ನಡೆದೈತಿ ಅಂತ್ ಗೊತ್ತೈತೇನ್...? ಇವತ್ತ್ ಇವರು ತಮ್ಮ ಉಟ್ಟ ಅರಿಬಿ ಮ್ಯಾಗ್, ದಿಲ್ಲಿಗಿ ಖಬರ್ ಹಾರಿ ಹೊಗ್ಯಾರ ಅಂದ್ರ ಅದಕ್ಕ ಯಾರ್ ಕಾರಣ ಅನ್ನೂದು ಗೊತ್ತೈತೇನ್..? ಸುಮ್ ಸುಮ್ನ ತಲಿ ಕೆಟ್ಟ್ಂಗ್ ಮಾತಾಡ್ತಿಲಾ. ಇವತ್ತ್ ಅವರ್ ದಿಲ್ಲಿಗಿ ಹೊಗ್ಯಾರ್ ಅಂದ್ರ ಅದಕ್ಕ ನಮ್ಮ ಕರವೇ ಕಾರಣಪಾ.

ಗುಂಡ: ಹೌದಾ..? ಖರೇನಾ...?
ತಿಮ್ಮ: ಹೂನೋ ಮಾರಯ್ಯ. ರಾಜ್ಯದ ಸಮಸ್ಯೆ ಬಂದಾಗ ಇವರ್ ಅಷ್ಟ ಒಗ್ಗಟ್ಟಾಗಿ ಇರ್ತಿದ್ರಪಾ ಅಂದ್ರ, ಹೊಗೆನಕ್ಕಲ್, ಬೆಳಗಾವಿ ಮತ್ ಎನೇನ್ ರಾಜ್ಯದ ಸಮಸ್ಯೆ ಅದಾವ್, ಎಲ್ಲ ನಾವ್ ಹುಟ್ಟುಕಿಂತ್ ಮದ್ಲ ಬಗಿ ಹರಿತಿದ್ವು. “ಇವ್ರು, ತಮ್ಮ್ ಹೈ ಕಮಾಂಡ್ ಪರ್ಮಿಷನ್ ಕೊಟ್ಟ್ ಮ್ಯಾಗೆ ಮುಂಜಾನಿ ಮಾಡು ದಿನನಿತ್ಯದ ಕೆಲಸಗಳನ್ನ್ ಮಾಡೊದು. ಇಲ್ಲ ಅಂದ್ರ್ ಇಲ್ಲ (ಅಷ್ಟೊಂದ್ ಪ್ರಾಮಾಣಿಕರು)”. ಇವ್ರ್ ಹಿಂಗ್ ಅದಾರ್ ಅಂತ್ ಹೇಳೆ ಅವು ಸಮಸ್ಯೆ ಇನ್ನೂ ಉಳ್ಕೊಂಡಾವ್. ಇವ್ ಹಿಂಗ್ ಮುಂದ್ ನಮ್ಮ್ ಮಕ್ಳು ಮೊಮ್ಮಕ್ಕಳ್ ಕಾಲದ ತನಕ ಮುಂದುವರಿಬಾರದು ಅಂತ್ ಹೇಳಿ, ನಮ್ಮ್ ಕರವೇ ಅವರು ಇದನ್ನ್ ಬಗಿಹರಿಸಬೇಕಂತ್ ಬೆನ್ನ್ ಹತ್ಯಾರ್. ನಮ್ ಎಂಪಿಗೋಳು ದಿಲ್ಲಿಗಿ ಹೋಗ್ಲಾಕು ಇವರು ಹಿಂದ್ ನಿಂತ್ ಕೀಲಿ ಕೊಟ್ಟಿದ್ದೆ ಕಾರಣ. ನಮ್ ಕರವೇ ದವ್ರು ಇವರ್ ಮನಿ ಮುಂದ್ ಧರಣೀ, ಪ್ರತಿಭಟನೆ ಮಾಡಿದ್ ಮ್ಯಾಗ್ ಇವ್ರಿಗಿ, ಬುಡಕ್ ಬೆಂಕಿ ಹತ್ತತು. ಅವಾಗ್ ಎಚ್ಚರ್ ಆದ್ರು. ಇವ್ರು ಕರ್ನಾಟಕನ ನಮ್ಮ್ ಮನಿ, ಅಂಥ್ ತಿಳ್ಕೊಂಡಿದ್ರ ಹಿಂಗ್ಯಾಕ್ ಆಗ್ತಿತ್ತು. ಆದ್ರ್ ಇವ್ರು ಹಂಗ್ ತಿಳ್ಕೊಂಡಿಲ್ಲ, ತಮ್ಮ ಮತಕ್ಷೇತ್ರ ಮಾತ್ರ ತಮ್ ಮನಿ(ಸ್ವಲ್ಪ ಮಂದಿ ಅದೂ ಇಲ್ಲ), ಉಳಿಕಿದ್ದು ಏನೂ ಸಂಬಂದ ಇಲ್ಲ, ಅನ್ನು ಹಂಗ್ ವರ್ತಿಸ್ತಾರ್. ತಮ್ಮ್ ಸ್ವಂತ ಮನಿಗಿ ಹಾನಿ ಆದಗ್ಲೇ ಇವ್ರಿಗಿ ಬುಡಕ್ಕ್ ಬೆಂಕಿ ಹತ್ತುದು, ಎಚ್ಚರ್ ಆಗುದು, ಉಟ್ಟ ಅರಿಬಿನ್ಯಾಗ್ ದಿಲ್ಲಿಗಿ ಹೋಗುದು. ಅಲ್ಲಿ ತನಕ ತಮ್ ತಮ್ಮ ಲೋಕದಾಗ್ ಇರ್ತಾರ್ ಇವ್ರು, ಬೆಳಗಾವಿಯರೇ ಹೋಗ್ಲಿ, ಹೊಗೆನಕ್ಕಲಾದ್ರು ಹೋಗ್ಲಿ. ವಿಧಾನಸೌದಕ್ಕ್ ಚಲೋ ರೇಟ್ ಬಂದ್ರ ಅದನ್ನೂ ಮಾರಿಬಿಡ್ತಾರ್, ಅಂತವ್ರು ಇವ್ರ್. ಇಂತವರ್ನ್ ಆರ್ಸಿದ್ದಕ್ಕ್ ನಮ್ಮ್ ಕೆರು ತೊಗೊಂಡ್ ನಾವೇ ಹೊಡ್ಕೊಬೇಕ್ ಅನಸ್ತೈತಿ...

ಗುಂಡ: ಹಂಗದ್ರ ಇವ್ರಿಗಿ ಅವಾಗವಾಗ್ ಕೀಲಿ ಕೊಟ್ಟ್ ಮುಂದ್ ನಡಸ್ಲಿಕ್ ಒಬ್ರು ಬೇಕು ಅಂದಂಗಾಯ್ತು.( ನಮ್ಮ್ ಮಕ್ಳು ಆಡು ಆಟಿಗಿ ಸಾಮಾನ್ ಇದ್ದಂಗ್, ಚಾವಿ ಕೊಟ್ಟ್ರ ಮುಂದ್ ಹೊಗ್ತಾವ್, ಇಲ್ಲ ಅಂದ್ರ್ ಇಲ್ಲ.)
ತಿಮ್ಮ: ಹೌದ್ ಹೌದ್. ನಮ್ಮ್ ಹಿರಿಯಾರ್ ಅದಕ್ಕ್ ಹೇಳ್ಯಾರ್, ಶಂಖದಿಂದ ಬಂದ್ರನೇ ತೀರ್ಥ ಅಂಥ. ಚಂದಂಗೆ ಹೇಳಿದ್ರ ಕೇಳುದಿಲ್ಲ ಇವ್ರು. ಒಟ್ಟಿನ್ಯಾಗ್ ಈಗಾದ್ರೂ ಎಚ್ಚರ ಆಗ್ಯಾರ್ ಅಷ್ಟೇ ಖುಶಿ. ಆದ್ರ್ ನಮ್ಮವ್ರು ಭಾಳ್ ಎಚ್ಚರಿಕೆಯಿಂದ್ ಇರ್ಬೇಕು, ಯಾಕ್ ಅಂದ್ರ್ ನಮ್ಮ್ ರಾಜಕಾರಣಿಗೋಳು "ಜನರ ಕಿವಿ ಮ್ಯಾಗ್ ನಮ್ಮ್ ಬೆಂಗಳೂರಿನ್ ಲಾಲಬಾಗ್ ಇಡ್ಲಾಕ್ ಎತ್ತಿದ್ ಕೈ". ಸುಮ್ ಸುಮ್ನ ಪೇಪರ್ನ್ಯಾಗ್ ಫೋಟೊ ಬರ್ಲಾಕ್ ಫೊಜ್ ಕೊಟ್ಟ, ಆಮೇಲಿ ಚಿನ್ನ ತಂಬಿ, ಬೆಳ್ಳಿ ತಂಬಿ, ತಾಮ್ರ ತಂಬಿ, ಕಬ್ಬಿಣದ ತಂಬಿ ಅಂಥ ಎಲ್ಲಾರೂ ಒಂದೊಂದ್ ತಂಬಿಗಿನ ಕೈಗ್ ಕೊಟ್ಟ್ರು ಅಂದ್ರ ನಾನು ನೀನು ಇಬ್ಬರೂ ಸೇರಿ ಗೋಳಗುಮ್ಮಟಕ್ಕ್ ಹೋಗಿ ಬಾಯಿ ಬಾಯಿ ಬಡ್ಕೊಬೇಕಾತೈತಿ.
ಹ್ಹಾ..............

LAST SIP: IMPORTANT QUOTE FROM ABRAHIM LINKON SUITS TO THE SITUATION.
“DEMOCRACY IS ELECTED BY FOOLS, AND RULING BY FRAUDS”.

Tuesday, 6 April 2010

ಬೆಳಕಿಗೆ ಬಾರದ ಹೋರಾಟದ ತಲೆಗಳು ಮತ್ತು ಮುನ್ನುಡಿ ಬರೆದ ಕೈಗಳು...............






ಗೆಳೆಯರೆ..........

ಕರ್ನಾಟಕದಲ್ಲಿ ಇದೇ ಪ್ರಪಥಮ ಬಾರಿಗೆ ರೇಲ್ವೆ ನೇಮಕಾತಿ ಪರೀಕ್ಷೆಗಳು ನಮ್ಮ ರಾಜ್ಯ ಭಾಷೆ ಕನ್ನಡದಲ್ಲಿ ನಡೆಯುತ್ತಿವೆ. ಇದರಿಂದ ಕನ್ನಡ ಮಾದ್ಯಮ ವಿದ್ಯಾರ್ಥಿಗಳಿಗೆ ಆಗುವ ಲಾಭ ಅಷ್ಟಿಷ್ಟಲ್ಲ. ಅದಕ್ಕಾಗಿಯೇ ಕನ್ನಡದಲ್ಲಿ ಪರೀಕ್ಷಾ ಮಾರ್ಗದರ್ಶಿ ಹೊತ್ತಿಗೆಗಳು ಬರಲಾರಂಭಿಸಿವೆ. ಕನ್ನಡದ ಸಾಮಾನ್ಯ ಜ್ನಾನದ ಹೊತ್ತಿಗೆಗಳು ಹೆಚ್ಚು ಹೆಚ್ಚು ಮಾರಾಟವಾಗುತ್ತಿವೆ. ಅಭ್ಯರ್ಥಿಗಳು ಹಿಂದಿನದಕ್ಕಿಂತ ಹೆಚ್ಚು ಉತ್ಸಾಹದಿಂದ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಹಳ್ಳಿಯ ವಿದ್ಯಾರ್ಥಿಗಳಲ್ಲಂತೂ ಹೊಸ ಹೊಸ ಆಸೆಗಳು, ಹೊಸ ಹೊಸ ಬಯಕೆಗಳು ಚಿಗುರೊಡೆಯತೊಡಗಿವೆ. (ಇವು ಹೆಸರಿಸಲು ಮಾತ್ರ, ಇನ್ನು ಸಾಕಷ್ಟಿವೆ).
ಕರ್ನಾಟಕದಲ್ಲಿ ಆಗುತ್ತಿರುವ ಈ ಬದಲಾವಣೆಗಳಿಗೆ ಯಾರು ಕಾರಣರು ಎಂದು ಕೇಳಿದರೆ ಹೆಚ್ಚಿನವರು ಬೆರಳು ತೋರಿಸುವುದು ಕೇಂದ್ರ ರೇಲ್ವೆ ಸಚಿವೆ ಮಮತಾ ಬ್ಯಾನರ್ಜಿ, (ಒಂದು ವಿಧದಲ್ಲಿ ಅಭಿನಂದನಾರ್ಹರು) ಕೇಂದ್ರ ರೇಲ್ವೆ ಸಹಾಯಕ ರಾಜ್ಯ ಸಚಿವ ಹೆಚ್. ಮುನಿಯಪ್ಪ, ಮತ್ತೊಬ್ಬ ಸಚಿವ ವೀರಪ್ಪ ಮೊಯ್ಲಿ (ಇಬ್ಬರೂ ಲೋಕಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರಾಕರಿಸಿದಂಥ ಕನ್ನಡಿಗರು) ಇಟಿಸಿ, ಇಟಿಸಿ.............
ಆದರೆ ಈ ಸಾದನೆಯ ಹಿಂದೆ ಇರುವ ನಿಜವಾದ ತಲೆಗಳೆಂದರೆ, ಈ ಬದಲಾವಣೆಗೆ ಮುನ್ನುಡಿ ಬರೆದ ಶುಧ್ಧ ಕೈಗಳೆಂದರೆ ನಮ್ಮ ಕನ್ನಡ ಪರ ಹೋರಾಟಗಾರರು. ಅವರ ನಿರಂತರ ಹೋರಾಟ, ಸತತ ಒತ್ತಡದ ಪರಿಣಾಮವಾಗಿ ಇಂದು ಕನ್ನಡದಲ್ಲಿ ರೇಲ್ವೆ ನೇಮಕಾತಿ ಪರೀಕ್ಷೆಗಳನ್ನು ಬರೆಯಬಹುದಾಗಿದೆ. ಇದನ್ನು, ನಮ್ಮನ್ನಾಳಿದ ’ಕೈ’ ಯಲ್ಲಿ ’ಕಮಲ’ದ ಹೂವನ್ನು ಹಿಡಿದ ’ಮಣ್ಣಿನ ಮಕ್ಕಳು’ ಇನ್ನೂ ೫೦ ವರ್ಷ ರಾಜ್ಯವನ್ನಾಳಿದ್ದರೂ ಸಾದಿಸಲಾಗುತ್ತಿರಲಿಲ್ಲ. ಯಾವ ರಾಜಕೀಯ ಪಕ್ಷವು (ಇಡೀ ದೇಶದಲ್ಲಿ) ಮಾಡದಂಥ ಇಂಥ ಸಾದನೆಯನ್ನು ನಮ್ಮ ಕನ್ನಡ ಪರ ಹೋರಾಟಗಾರರು ಮಾಡಿದ್ದು ನಿಜಕ್ಕೂ ಎದೆ ತಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳುವಂತಹ ವಿಷಯ. ಇದರಿಂದ ಕೇವಲ ಕನ್ನಡಕ್ಕಷ್ಟೆ ಅಲ್ಲದೇ ದೇಶದಲ್ಲಿರುವ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಲಾಭವಾಗಲಿದೆ. ಎಲ್ಲ ಪ್ರಾದೇಶಿಕ ಭಾಷೆಯ ಅಭ್ಯರ್ಥಿಗಳು ಇದರ ಲಾಭ ಪಡೆಯಲಿದ್ದಾರೆ. ಆದರೆ ವಿಪರ್ಯಾಸವೆಂದರೆ ಹೆಚ್ಚಿನವರಿಗೆ ಇದರ ಹಿಂದಿರುವ ಕೈಗಳ ಬಗ್ಗೆ, ಆ ಹೋರಾಟಗಾರರ ಬಗ್ಗೆ ಅರಿವೇ ಇಲ್ಲ. ಹೋರಾಟದ ಹಾದಿಯಲ್ಲಿ ಹೋರಾಟಗಾರರು ಅನುಭವಿಸಿದ ಕಷ್ಟ, ಯಾತನೆಗಳನ್ನು ಅಷ್ಟು ಸಲೀಸಾಗಿ ಮರೆಯಲು ಸಾದ್ಯವೇ...?
ಏನಿದು ವ್ಯವಸ್ಥೆ..? ಕನ್ನಡವನ್ನು ಕಡೆಗಣಿಸಿದವನಿಗೆ ಕನ್ನಡದ ಸಾದನೆಯ ಕಿರೀಟ,, ಮೂರು ಹೊತ್ತು ಕನ್ನಡ ಕನ್ನಡಿಗ ಕರ್ನಾಟಕ ಎಂದು ಜಪಿಸುತ್ತಿರುವವರಿಗೆ,, ಪೋಲಿಸರ ಲಾಠಿ ಏಟು, ನೂರಾರು ಕೇಸುಗಳು, ಹತ್ತಾರು ದಿನಗಳ ಜೈಲು ವಾಸ, ಕುಟುಂಬದಿಂದ ದೂರವಿದ್ದವರಿಗೆ ಇದರ ಅಭಿನಂದನಾರ್ಹರ ಪಟ್ಟಿಯಲ್ಲಿ ಸ್ಥಾನವೇ ಇಲ್ಲ. ಇಷ್ಟೆಲ್ಲ ಇವರು ಮಾಡುತ್ತಿರುವುದು ಯಾರ ಸಲುವಾಗಿ...? ಕನ್ನಡದ ಮಕ್ಕಳ ಸಲುವಾಗಿ, ಕನ್ನಡ ಮಾದ್ಯಮದಲ್ಲಿ ಕಲಿತು ಒಂದು ರೀತಿಯ ಸಮಾಜದ ನಿರ್ಲಕ್ಷ ಮನೋಭಾವನೆಯಿಂದ ನೊಂದಿರುವ ಕನ್ನಡ ಮಕ್ಕಳ ಹೆತ್ತವರ ಸಲುವಾಗಿ, ಕನ್ನಡವನ್ನು ಕಲಿತರೆ ಕೆಲಸ ಸಿಗುವುದಿಲ್ಲ ಎಂಬ ಸ್ವಯಂ ಘೋಷಿತ ಅಪನಂಬಿಕೆಯಿಂದ ಜನರನ್ನು ದೂರ ಮಾಡುವ ಸಲುವಾಗಿ. ನಿಜವಾಗಿಯೂ ಕನ್ನಡಿಗರು ಅಭಿನಂಧನೆ, ಧನ್ಯವಾದಗಳನ್ನು ಸಲ್ಲಿಸಬೇಕಾಗಿರುವುದು ಹಗಲಿರುಳು ಹೋರಾಡಿದ ಕನ್ನಡ ಪರ ಹೋರಾಟಗಾರರಿಗೆ ಹೊರತು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ, ಹವಾನಿಯಂತ್ರಿತ ಕೊಠಡಿಯಲ್ಲಿ ೨೪*೭ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗುವಂಥ ನಿರಾಭಿಮಾನಿ ರಾಜಕಾರಣಿಗಳಿಗಲ್ಲ.
ಈ ವ್ಯವಸ್ಥೆಗೆ ನಮ್ಮದೊಂದು ಧಿಕ್ಕಾರ.............

ಕೊನೆಯ ರೈಲು (ಅಲ್ಲ, ರೀಯಲ್ಲು) : ‘ವೀರ ಕನ್ನಡಿಗ’ ಚಿತ್ರದ ಈ ಹಾಡು ನಿಜವಾಗಿಯೂ ಕನ್ನಡ ಪರ ಹೋರಾಟಗಾರರಿಗೆ ಹೇಳಿ ಮಾಡಿಸಿದ ಹಾಡು.

ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನಮಗಿಂದು, ನಮ್ಮ ನಿದ್ರೆ ಕಳೆಯುತ್ತಿದ್ದರೆ ಸಹಿಸುವವ ನೀನಲ್ಲ...............
ಕೆಂಪು ಹಳದಿ ಭಾವುಟಕ್ಕೆ ನೀನೆ ತಾನೇ ಭಾವುದಂಡ, ನಿನ್ನ ಯುಧ್ಧ ಸತ್ಯ ಶುಧ್ಧ ನಡೆದರೆ ಸೋಲಿಲ್ಲ...............
ನಮಗಾಗಿ ಹುಟ್ಟಿದ ನೀನು ಕಾಪಾಡೊ ಕಾಮಧೇನು ಜ್ವಾಲಾಮುಖಿ ವೈರಿಗೆ............
ಹೇ ಧೀರ, ಹೇ ಧೀರ ಎದುರಾರೊ..? ನಿನಗೆ
ಮನೆ ದೀಪ ಮನೆ ಬೇಲಿ ನಿನಾದೆ ನಮಗೆ..
ಹೇ....................................................
ನಾಡು ಕರುನಾಡು ಎಲ್ಲಾ ನಿನ್ನದು,
ನೀ ತಂದ ವಿಜಯ ಸದಾ ನಮ್ಮದು.
ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನಮಗಿಂದು, ನಮ್ಮ ನಿದ್ರೆ ಕಳೆಯುತ್ತಿದ್ದರೆ ಸಹಿಸುವವ ನೀನಲ್ಲ...............