Monday, 15 August 2011

ಕಲಾವಿದರು ಕಸಿದುಕೊಳ್ಳುತ್ತಿರುವ ಕನ್ನಡ ಗ್ರಾಹಕನ ಸ್ವಾತಂತ್ರ್ಯ.!

ಇವತ್ತು ಮದ್ಯಾನ್ಹ ಜೀ ಟಿವಿಯಲ್ಲಿ ಜಾನ್ಸಿ ರಾಣಿ ಅನ್ನೊ ಹಿಂದಿ ದಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿದ್ರು ಅಂತ ನಮ್ಮ ಕಿರುತೆರೆ ಕಲಾವಿದರು ಆ ವಾಹಿನಿಯ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಕಲಾವಿದರ ಪ್ರಕಾರ ಇದರಿಂದ ಕಿರುತೆರೆಯನ್ನೇ ನಂಬಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬರುತ್ತವಂತೆ. ಇದರ ಜೊತೆಗೆ ಜೀ ಟಿವಿಯ ಈ ನಡೆ ಕನ್ನಡ ವಿರೋದಿಯಂತೆ. ಇವರ ವಾದವನ್ನು ಮತ್ತು ಕನ್ನಡತನವನ್ನು ಸ್ವಲ್ಪ ಆಳವಾಗಿ ನೋಡಿ ಬರೋಣ ಬನ್ನಿ.

ಹುರುಳಿಲ್ಲದ ವಾದ: ದಾರಾವಾಹಿ ಈಗಾಗಾಲೇ ತೆಲುಗು, ತಮಿಳು ಬಾಶೆಗೆ ಡಬ್ ಆಗಿ ಅಲ್ಲಿ ಪ್ರಸಾರವಾಗುತ್ತಿದೆ. ಹಾಗಾದರೆ ಆಂದ್ರ ತಮಿಳುನಾಡಿನಲ್ಲಿ ಕಲಾವಿದರೇ ಇಲ್ಲವೇ.? ಅಲ್ಲಿಯೂ ಕಲಾವಿದರಿದ್ದಾರೆ, ಅವರಲ್ಲಿಯೂ ಅನೇಕರಿಗೆ ಕಿರುತೆರೆಯಿಂದಲೇ ಹೊಟ್ಟೆ ತುಂಬುತ್ತದೆ. ಅಲ್ಲಿ ಅವರಿಗೆ ಇಲ್ಲದ ಸಮಸ್ಯೆ ದಿಡೀರನೇ ಕರ್ನಾಟಕಕ್ಕೆ ಬಂದ ಕೂಡಲೇ ಹೇಗೆ ಹುಟ್ಟುತ್ತದೆ. ಇದಕ್ಕೆ ಯಾರು ಕಾರಣ. ಯಾಕೆ ಈ ಮನಸ್ಥಿತಿ.! ಇದೇ ಸಂದರ್ಬದಲ್ಲಿ ಒಬ್ಬ ಕಲಾವಿದರು ಹೇಳಿದ್ರು, ಒಂದು ದಾರಾವಾಹಿ ಕನ್ನಡಕ್ಕೆ ಡಬ್ ಮಾಡಲು ಬಿಟ್ಟರೆ, ಅದರ ಜೊತೆಗೆ ನೂರಾರು ದಾರಾವಾಹಿಗಳು ಬಂದು ನಿಲ್ಲುತ್ತವೆ ಅಂತ.! ಇದು ಯಾವ ಮನಸ್ಥಿತಿಯನ್ನು ತೋರಿಸುತ್ತದೆ. ಸ್ಪರ್ದೆ ಎದುರಿಸುವ ಹಿಂಜರಿಕೆಯನ್ನು ತೋರಿಸುತ್ತದೆ ಅಲ್ಲವೇ.! ಸ್ಪರ್ದೆ ಎಂದ ತಕ್ಷಣ ಬೀದಿಗೆ ಬರುವ ಮಾತು ಇತರ ಬಾಶೆಯ ಕಲಾವಿದರ ಬಾಯಲ್ಲಿ ಬರದೇ ಬರೀ ನಮ್ಮ ಕಲಾವಿದರ ಬಾಯಲ್ಲಿ ಮಾತ್ರ ಏಕೆ ಬರುತ್ತದೆ.? ಒಂದು ಹಿಂದಿ ಬಾಶೆಯಲ್ಲಿರುವ ದಾರಾವಾಹಿಯನ್ನು ಕನ್ನಡ ಚಾನಲ್ಲಿನಲ್ಲಿ ಕನ್ನಡದಲ್ಲಿ ತೋರಿಸಿದರೇ ಅದು ಕನ್ನಡ ವಿರೋದಿ ಎನ್ನುವ ಇವರ ಕನ್ನಡತನಕ್ಕೆ ಏನನ್ನಬೇಕು. ಡಬ್ ಮಾಡದೇನೇ ಹಿಂದಿಯಲ್ಲೇ ತೋರಿಸಿದರೆ ಅದು ಕನ್ನಡಪರವಾಗುವುದೋ.!

ಅರ್ಥವಾಗದ ಕನ್ನಡತನ: ಇಷ್ಟಕ್ಕೂ ಡಬ್ಬಿಂಗ್ ವಿಶಯ ಬಂದಾಗ ಕನ್ನಡವನ್ನು ಮುಂದೆ ಮಾಡಿ ವಾದ ಮಾಡುವವರು, ಅನೇಕ ಕನ್ನಡ ವಾಹಿನಿಯಲ್ಲಿ ಹಿಂದಿ ಹಾಡುಗಳನ್ನು ಪ್ರಸಾರ ಮಾಡುವುದು, ಆ ಹಾಡಿಗೆ ಕುಣಿಯುವುದು ನಡೆದಾಗ ಯಾವ ಲೋಕದಲ್ಲಿದ್ದರು,? ಅದು ಅವರಿಗೆ ಕನ್ನಡ ವಿರೋದಿಯಾಗಿ ಕಾಣಲಿಲ್ಲವೇ.? ಆ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಹೋಗಿದ್ದು ಇದೇ ಕಲಾವಿದರಲ್ಲವೇ.? ನೀರಾವರಿ, ಶಾಸ್ತ್ರೀಯ ಬಾಶೆ ಸ್ಥಾನಮಾನ ಹೀಗೆ ಅನೇಕ ವಿಶಯಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ದ್ವನಿಗೂಡಿಸದ ಇವರ ಕನ್ನಡತನ ಆಗ ಎಲ್ಲಿತ್ತು.? ಮೊನ್ನೆ ನಡೆದ ಕನ್ನಡ ಚಲನಚಿತ್ರ ಪ್ರಶಸ್ತಿ ಸಮಾರಂಬದಲ್ಲಿ ಮೂರು ಬಿಟ್ಟವರಂತೆ ಹಿಂದಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದಾಗ ಎಲ್ಲಿ ಅಡಗಿತ್ತು ಇವರ ಕನ್ನಡ ಸ್ವಾಭಿಮಾನ.? ಡಬ್ಬಿಂಗ್ ವಿರೋದಿಯಂತಹ ನಿಲುವಿನಿಂದಾಗಿಯೇ ಇವತ್ತು ವಿಜ್ಞಾನ (ಡಿಸ್ಕವರಿ, ನ್ಯಾಟ್ ಜಿಯೊ,ಅನಿಮಲ್ ಪ್ಲಾನೇಟ್), ಕಾರ್ಟೂನ್ (ಪೊಗೊ, ಡಿಸ್ನಿ, ಕಾರ್ಟೂನ್ ನೆಟವರ್ಕ್) ತರಹದ ವಿಶಯಗಳು ಕನ್ನಡದ ಮಕ್ಕಳಿಗೆ ಆಡುವ ನುಡಿಯಲ್ಲಿ ದೊರಕದೇ ಅವರು ಅವಕಾಶ ವಂಚಿತರಾಗುತ್ತಿರುವುದು. ಹೋಗಲಿ, ಡಬ್ಬಿಂಗ್ ಬಗ್ಗೆ ಇಶ್ಟೊಂದು ಕಿಡಿ ಕಾರುವ ಇವರು ಇಂಗ್ಲೀಶ್ ಚಿತ್ರ ತೆಲುಗಿಗೆ, ಹಿಂದಿಗೆ ಡಬ್ ಆಗಿ ರಾಜ್ಯದಾದ್ಯಂತ ಓಡುತ್ತ ಇದೆ, ಇದು ಹೇಗೆ ಅವರ ಕಣ್ಣಿಗೆ ಕಾಣಲಿಲ್ಲ.! ಹಿಂದಿ ಸಿಂಗಂ ಚಿತ್ರದಲ್ಲಿ ಕನ್ನಡಿಗರ ಮೇಲೆ ಜನಾಂಗೀಯ ನಿಂದನೆ ನಡೆದಾಗ ಈಗ ಪ್ರತಿಭಟನೆ ಮಾಡಿದವರಲ್ಲಿ ಎಶ್ಟು ಜನ ಬೀದಿಗಿಳಿದಿದ್ದರು.? ಓಟ್ಟಾರೆ ಏನಾದ್ರು ಆಗಲಿ, ಯಾವುದೇ ಮನರಂಜನೆ ಕನ್ನಡಕ್ಕೆ ಡಬ್ ಆಗಬಾರದು ಎನ್ನುವ ವಾದದಲ್ಲಿ ಅಡಗಿರೋದು ಕನ್ನಡದ ಹಿತಾಸಕ್ತಿಯೋ, ಸ್ವಹಿತಾಸಕ್ತಿಯೋ ಎಂಬುದು ಅರ್ಥವಾಗದ ಸಂಗತಿಯೇನಲ್ಲ.!

ಒಟ್ಟಿನಲ್ಲಿ, ಗ್ರಾಹಕನ ಬೇಡಿಕೆಗೆ ಅನುಗುಣವಾಗಿ ಜೀ ಟಿವಿಯವರು ದಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡಿದ್ದಾರೆ. ಜಾನ್ಸಿ ರಾಣಿ ದಾರಾವಾಹಿ ಹಿಂದಿಯಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದರೆ ದ್ವನಿ ಎತ್ತಬೇಕು. ಕನ್ನಡದಲ್ಲೇ ಪ್ರಸಾರ ಆಗುತ್ತಿರುವಾಗ ಅದರಲ್ಲಿ ತಪ್ಪೇನಿದೆ..? ಅದು ತಪ್ಪು ಅಂತ ಸಮರ್ಥಿಸಲು ಅವಕಾಶಗಳೇ ಇಲ್ಲ. ಅದನ್ನು ತಪ್ಪು ಅನ್ನುವವರ ವಾದವೇ ತಪ್ಪು. ತಮ್ಮ ಹೊಟ್ಟೆಪಾಡು ಎಂದು ಹೇಳುವ ಕಲಾವಿದರು ಆ ಹೊಟ್ಟೆಪಾಡಿಗೆ ಕಾರಣನಾದ ಅನ್ನದಾತನಿಗೆ ತನ್ನ ನುಡಿಯಲ್ಲೇ ಮನರಂಜನೆ ಪಡೆದುಕೊಳ್ಳಲು ಬಿಡದೇ ವಂಚಿಸುತ್ತಿದ್ದಾರೆ. ಈ ಜಗತ್ತಿನಲ್ಲಿ ಪ್ರತಿಯೊಂದು ಉದ್ದಿಮೆ ಅವಲಂಬಿತವಾಗಿರುವುದು ಗ್ರಾಹಕನ ಮೇಲೆನೇ. ಮನರಂಜನೆ ಉದ್ದಿಮೆ ಅಂತ ನೋಡಿದರೆ ನಮಗೆ ಕಾಣುವುದು ಗ್ರಾಹಕ, ಟಿವಿ ಮಾಲೀಕ, ಜಾಹೀರಾತುದಾರ ಮತ್ತು ಸರಕು ಪೂರೈಕೆದಾರ. ಇಲ್ಲಿ ಇತರ ಮೂವರೂ ಅವಲಂಬಿತವಾಗಿರುವುದು ಗ್ರಾಹಕನ ಮೇಲೆ. ಹೀಗಾಗಿ ಗ್ರಾಹಕನನ್ನು ಯಾರೋ ಸರಕು ಪೂರೈಕೆದಾರರು ನಿಯಂತ್ರಿಸುವುದು ಬಾಲವೇ ನಾಯಿನ ಅಲ್ಲಾಡಿಸಿದಂತೆ ಆಗುತ್ತದೆ. ಒಂದು ಕಡೆ ಸ್ವಾತಂತ್ರ್ಯ ಬಂದಿದೆ ಅಂತ ಆಚರಣೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಆ ಸ್ವಾತಂತ್ರ್ಯವನ್ನೇ ಕಿತ್ತುಕೊಂಡು ಗ್ರಾಹಕನನ್ನು ನಿಯಂತ್ರಿಸಲು ಕೆಲವರು ಹೊರಟಿರುವುದು ಸಂವಿದಾನ ವಿರೋದಿ ನಡೆಯಾಗಿದೆ.

Sunday, 17 July 2011

ಅಸಂವಿದಾನಿಕ ಡಬ್ಬಿಂಗ್ ನಿಶೇದದಿಂದ ಕನ್ನಡಕ್ಕಿಲ್ಲದ ಹ್ಯಾರಿ ಪಾಟರ್..!


ಇತ್ತೀಚಿಗೆ ಬಂದ ಸುದ್ದಿಯಂತೆ, ಹ್ಯಾರಿ ಪಾಟರಿನ ಹೊಸ ಚಿತ್ರ ತೆರೆಗೆ ಬಂದಿದೆ. ಅಶ್ಟೆ ಅಲ್ಲ ಇದು ಬಾರತದ ಪ್ರಾದೇಶಿಕ ಬಾಶೆಗಳತ್ತ ತನ್ನ ಗಮನವನ್ನು ಹರಿಸುತ್ತ, ಚಿತ್ರವನ್ನು ಇಂಗ್ಲೀಶಿನ ಜೊತೆಗೆ ತೆಲುಗು, ತಮಿಳು, ಹಿಂದಿಯಲ್ಲೂ ಬಿಡುಗಡೆ ಮಾಡುತ್ತಿದೆ. ಇದರರ್ಥ ಆಂದ್ರಪ್ರದೇಶ, ತಮಿಳುನಾಡಿನ ಮತ್ತು ಉತ್ತರ ಬಾರತದ ಅನೇಕ ರಾಜ್ಯಗಳ ಜನರು ಹ್ಯಾರಿ ಪಾಟರನ್ನು ತಮ್ಮ ತಾಯ್ನುಡಿಯಲ್ಲೇ ನೋಡಿ ಸವಿಯಬಹುದಾಗಿದೆ. ಆದರೆ ಈ ಸೌಬಾಗ್ಯ ಕನ್ನಡ ಬಾಶೆಯನ್ನಾಡುವ, ಕನ್ನಡದಲ್ಲೇ ಮನರಂಜನೆಯನ್ನು ಬಯಸುವ ನಮಗೆ ಇಲ್ಲ.

ಕರ್ನಾಟಕದಲ್ಲಿನ ಪರಿಸ್ಥಿತಿ:
ಕರ್ನಾಟಕದಲ್ಲಿ ಇಂಗ್ಲೀಶ ಚಿತ್ರಗಳು ಇಂಗ್ಲೀಶಿನಲ್ಲೇ ಬಿಡುಗಡೆಯಾಗಬೇಕು ಎಂಬ ನಿಯಮವೇನು ಇಲ್ಲ. ಅದರರ್ಥ ಈ ಚಿತ್ರ ಕರ್ನಾಟಕದಲ್ಲಿ ಇಂಗ್ಲೀಶ ಜೊತೆಗೆ ತೆಲುಗು, ತಮಿಳು, ಹಿಂದಿಯಲ್ಲೂ ಬಿಡುಗಡೆ ಆಗಬಹುದು. ಹೀಗೆ ಕರ್ನಾಟಕದಲ್ಲಿ ಇಂಗ್ಲೀಶ ಚಿತ್ರ ಇಂಗ್ಲೀಶೇತರ ಇತರ ಬಾಶೆಗಳಲ್ಲಿ ಬಿಡುಗಡೆಯಾದರೆ ಅಲ್ಲಿಗೆ ಡಬ್ಬಿಂಗ್ ನಿಶೇದವಿದೆ ಎಂಬ ಮಾತು ಶುದ್ದ ಸುಳ್ಳಾಗುತ್ತದೆ. ಅದರರ್ಥ ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಅನುಮತಿಯಿದೆ, ಆದರೆ ಕನ್ನಡಕ್ಕೆ ಡಬ್ ಆದ ಚಿತ್ರಗಳಿಗೆ ಅನುಮತಿಯಿಲ್ಲ. ಹ್ಯಾರಿ ಪಾಟರ್ ತೆಲುಗು, ತಮಿಳು, ಹಿಂದಿಗಳಿಗೆ ಡಬ್ ಆಗಿ ಕರ್ನಾಟಕದಲ್ಲಿ ಬಿಡುಗಡೆಯಾದರೆ ಓಕೆ,, ಆದರೆ ಅದೇ ಚಿತ್ರ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಲಿ ಅಂದ್ರೆ ಯಾಕೆ.? ಅಂತ ಕೇಳ್ತಾರೆ ನಮ್ಮ ಚಲನಚಿತ್ರ ಮಂಡಳಿ. ಈ ಪ್ರಶ್ನೆಯಲ್ಲಿ ಸ್ವಲ್ಪನಾದ್ರೂ ನ್ಯಾಯ ಇದೆಯಾ.!

ಅಸಂವಿದಾನಿಕ ನಿಯಮ:
ಆಂಗ್ಲ ಬಾಶೆಯ ಬಹುಕೋಟಿ ವೆಚ್ಚದ, ಉನ್ನತ ತಂತ್ರಜ್ನಾನ, ಗ್ರಾಫಿಕ್ಸ್ ಇರುವ ಚಿತ್ರಗಳನ್ನು ಬರೀ ಇಂಗ್ಲೀಶ ಬಲ್ಲವರಶ್ಟೇ ನೋಡಬೇಕು ಎಂಬಂತಿದೆ ನಮ್ಮ ಚಿತ್ರರಂಗದ ಈಗಿನ ನಿಯಮ. ಕರ್ನಾಟಕದಲ್ಲಿ ಇಂಗ್ಲೀಶ್ ಬಾರದವರು ಈ ಚಿತ್ರ ನೋಡಬೇಕೆಂದರೆ ಅವರು ತಮಿಳು, ತೆಲುಗು, ಹಿಂದಿಗೆ ಮೊರೆ ಹೋಗಬೇಕಾದ ಪರಿಸ್ಥಿತಿಯನ್ನು ಈ ಡಬ್ಬಿಂಗ್ ನಿಶೇದದ ನಿಯಮ ತಂದೊಡ್ಡಿದೆ. ಚಿತ್ರರಂಗದ ಈ ಅಸಂವಿದಾನಿಕ ಡಬ್ಬಿಂಗ್ ನಿಶೇದದ ನಿಯಮದಿಂದ ಕೆಲವು ಒಳ್ಳೆಯ ಮನರಂಜನೆಯಿಂದ ಕರ್ನಾಟಕದ ಜನರು ವಂಚಿತರಾಗುತ್ತಿದ್ದಾರೆ. ಈ ಹ್ಯಾರಿ ಪಾಟರ್ ಚಿತ್ರ ಹೆಚ್ಚು ಮಕ್ಕಳ ಮನರಂಜನೆ ಉದ್ದೇಶಿಸಿ ಮಾಡಿರೋದ್ರಿಂದ ಡಬ್ಬಿಂಗ್ ನಿಶೇದದಿಂದಾಗಿ ಕನ್ನಡದ ಮಕ್ಕಳಿಗೆ ಮೋಸವಾಗ್ತಿದೆ ಎಂಬುದನ್ನು ಕೂಡ ಇಲ್ಲಿ ಗಮನಿಸಬೇಕು. ಪ್ರೇಕ್ಷಕನಿಗೆ ನೀನು ಇದನ್ನೇ ನೋಡು ಅಥವಾ ಇದೇ ಬಾಶೆಯಲ್ಲಿ ನೋಡು ಎಂದು ಡಬ್ಬಿಂಗ್ ನಿಶೇದ ಎಂಬ ಅಸ್ತ್ರದ ಮೂಲಕ ಒತ್ತಾಯಿಸುವುದು ಸಂವಿದಾನ ವಿರೋದಿಯಾದ ನಡೆ. ಜಗತ್ತಿನ ಎಲ್ಲ ಒಳ್ಳೆಯ ಮನರಂಜನೆಯನ್ನು ತನ್ನ ನುಡಿಯಲ್ಲಿ ನೋಡುವ ಹಕ್ಕು ಅವನಿಗಿದೆ. ಡಬ್ಬಿಂಗ್ ನಿಶೇದದಿಂದ ಈ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಡಬ್ಬಿಂಗ್ ಬರಲಿ. ಒಳ್ಳೆಯ ಮನರಂಜನೆ ಅನ್ನೋದು ನಗರ ಪ್ರದೇಶಗಳ ಅಥವಾ ಇಂಗ್ಲೀಶ್ ಬಲ್ಲ ಕೆಲವ್ರಿಗೆ ಮಾತ್ರ ಸೀಮಿತ ಆಗದೇ ರಾಜ್ಯದ ಎಲ್ಲರಿಗೂ ಅವರು ಆಡುವ ನುಡಿಯಲ್ಲೇ ಅದು ಸಿಗುವಂತಾಗಲಿ. ಕರ್ನಾಟಕದಲ್ಲಿ ಎಲ್ಲರಿಗೂ ಕನ್ನಡದಲ್ಲಿ ಮನರಂಜನೆ ಸಿಗುತ್ತದೆ ಎಂಬ ಉದ್ದೇಶವನ್ನು ಡಬ್ಬಿಂಗ್ ಹೊಂದಿದೆ ಎಂಬ ಸಾಮಾನ್ಯ ತಿಳುವಳಿಕೆಯನ್ನು ಡಬ್ಬಿಂಗ್ ವಿರೋದಿಗಳು ಅರಿಯಬೇಕಿದೆ.!

Saturday, 25 June 2011

ಹಿಂದಿ ಹೇರಿಕೆಯಲ್ಲೂ ಸುಣ್ಣ ಬೆಣ್ಣೆ..!

ಇವತ್ತಿನ (೨೬-೦೬-೧೧) ಪ್ರಜಾವಾಣಿ ದಿನಪತ್ರಿಕೆಯಲ್ಲಿ ಮಿನಿಸ್ಟ್ರಿ ಆಫ್ ಮೈಕ್ರೊ, ಸ್ಮಾಲ್ ಆಂಡ್ ಮಿಡಿಯಮ್ ಎಂಟರಪ್ರೈಜಸ್ ಅವರು ತಮ್ಮ ಕಾಯರ್ ಬೋರ್ಡ್ ಎಂಬ ಸಂಸ್ಥೆಯ ಮೂಲಕ ಒಂದು ಜಾಹೀರಾತನ್ನು ಕೊಟ್ಟಿದ್ದಾರೆ. ಅದು ಸಂಪೂರ್ಣ ಹಿಂದಿಯಲ್ಲಿರೋದು ಕಾಣುತ್ತೆ. ಅವರ ಮಾಹಿತಿ ಪ್ರಜಾವಾಣಿ ಓದುವ ಅಥವಾ ಜಾಹೀರಾತನ್ನು ನೋಡುವ ಬಹುತೇಕ ಜನರಿಗೆ, ಕಣ್ಣಿಗೆ ಬಿದ್ದರೂ ಮಾಹಿತಿ ತಿಳಿಸುವ ಹಂತಕ್ಕೆ ಅದು ಹೋಗುವುದಿಲ್ಲ ಎಂಬುದು ಸತ್ಯ. ಹೀಗಾಗಿ ಮಾಹಿತಿ ಕೊಡುವ ಉದ್ದೇಶಕ್ಕಿಂತ ಅದರಲ್ಲಿ ಹಿಂದಿ ಹೇರಿಕೆಯ ಉದ್ದೇಶನೇ ಎದ್ದು ಕಾಣುತ್ತೆ.
ಇನ್ನು ಜಾಹೀರಾತು ಕೊಟ್ಟ ಕಾಯರ್ ಬೋರ್ಡ ಅನ್ನೋ ಸಂಸ್ಥೆಯ ಕೇಂದ್ರ ಕಚೇರಿ ಕೇರಳದ ಕೊಚ್ಚಿಯಲ್ಲಿದೆ. ಕೇರಳದ ಬಾಶೆ ಮಲಯಾಳಂ, ಹೀಗಾಗಿ ಅಲ್ಲಿನೂ ಇದೇ ರೀತಿ ಹಿಂದಿಯಲ್ಲಿ ಕೊಟ್ಟಿದ್ದಾರಾ ಅಂತ ನೋಡಿದ್ರೆ,, ಅಲ್ಲಿನ ಮಲಯಾಳ ಮನೋರಮಾ ದಿನಪತ್ರಿಕೆಯಲ್ಲಿ ಇದೇ ಜಾಹೀರಾತು ಸಂಪೂರ್ಣ ಆಂಗ್ಲ್ ಬಾಶೆಯಲ್ಲಿತ್ತು. ವಿಚಿತ್ರ ಅಂದ್ರೆ, ಕಾಯರ್ ಬೋರ್ಡ ತಮ್ಮೂರಿನಲ್ಲಿ ಆಂಗ್ಲ ಬಾಶೆಯಲ್ಲಿ ಜಾಹೀರಾತು ಹಾಕಿಸಿ, ನಮ್ಮೂರಿನಲ್ಲಿ ಹಿಂದಿಯಲ್ಲಿ ಜಾಹೀರಾತು ಹಾಕಿಸಿದ್ದು.! ಎರಡು ಹಿಂದಿಯೇತರ ದಿನಪತ್ರಿಕೆಗಳೇ. ಒಂದು ಪ್ರಾದೇಶಿಕ ದಿನಪತ್ರಿಕೆಯಲ್ಲಿ ಆಂಗ್ಲ ಮತ್ತೊಂದರಲ್ಲಿ ಹಿಂದಿ ಹಾಕಿದ್ದು ಯಾಕೆ ಅನ್ನೋದಶ್ಟೆ ಪ್ರಶ್ನೆ. ಎರಡೂ ಕಡೆ ಪ್ರಾದೇಶಿಕ ಬಾಶೆನೇ ಇರಬೇಕಿತ್ತು ಅನ್ನೋದು ಮಾತ್ರ ವಿವಾದಕ್ಕೆ ಎಡೆ ಇಲ್ಲದ ವಾದ.! ಅಂದಹಾಗೆ ಬೆಂಗಳೂರಿನಲ್ಲೂ ಅದರ ಪ್ರಾದೇಶಿಕ ಕಚೇರಿ ಇದೆ.




ಮಲಯಾಳಂ ಆಡಳಿತ ಬಾಶೆಯಾಗಿರುವ ಕೇರಳದಲ್ಲಿ ಹಿಂದಿಯಲ್ಲಿ ಜಾಹೀರಾತು ಕೊಡಬಾರದು ಎಂಬುದು ಗೊತ್ತಿರುವ ಕೇಂದ್ರ ಸರಕಾರಕ್ಕೆ, ಕನ್ನಡ ಆಡಳಿತ ಬಾಶೆಯಾಗಿರುವ ಕರ್ನಾಟಕದಲ್ಲಿ ಹಿಂದಿಯಲ್ಲಿ ಕೊಡಬೇಕು ಅಂತ ಹೇಗೆ ಅನ್ನಿಸಿತು.! ಇದು ನಿಸ್ಸಂದೇಹವಾಗಿ, ಹಿಂದಿ ಹೇರಿಸಿಕೊಳ್ಳುವುದರಲ್ಲಿ ಕೇರಳಕ್ಕಿಂತ ನಾವು ಮುಂದೆ ಇದ್ದೇವೆ ಎಂಬುದನ್ನು ತೋರಿಸುತ್ತದೆ.
ಕೆಲವೊಮ್ಮೆ ಕೇಂದ್ರ ಸರಕಾರದ ಜಾಹೀರಾತುಗಳು ಪ್ರಾದೇಶಿಕ ಬಾಶೆಯಲ್ಲೇ ಬರುತ್ತವೆ. ಆದರೆ ನಿಯಮವನ್ನು ಕೆಲವೊಮ್ಮೆ ಇಲಾಖೆಗಳು ಪಾಲಿಸಲ್ಲ ಅಥವಾ ಪಾಲಿಸಲು ಬಯಸಲ್ಲ.! ಕನ್ನಡ ಪತ್ರಿಕೆ ಓದುವವರು ಕನ್ನಡ ಬಲ್ಲವರೇ ಆಗಿರುತ್ತಾರೆ. ಹಿಂದಿಯಲ್ಲಿ ಜಾಹೀರಾತು ಕೊಡುವುದರಿಂದ ಅದು ಬಹಳಶ್ಟು ಜನರಿಗೆ ತಲುಪುವುದಿಲ್ಲ ಎಂಬ ಸತ್ಯ ಕೇಂದ್ರ ಸರಕಾರಕ್ಕೆ ಗೊತ್ತಿರದೇ ಇರದು. ಆದ್ರೂ ಕೊಡುತ್ತಾರೆ ಅಂದ್ರೆ, ಅದು ವರ್ಶಕ್ಕೆ ಕಾಯ್ದಿರಿಸಿದ ೩೬ ಕೋಟಿ ರೂಪಾಯಿ ಹಿಂದಿ ಹೇರಿಕೆಯ ಬಜೆಟ್ ಹಣದ ಲೆಕ್ಕ ತೋರಿಸಲು ಅಂತನೇ ಇರಬೇಕು.! ಅಲ್ಲಿಗೆ ಹಿಂದಿ ಹೇರಿಕೆಯೇ ಜಾಹೀರಾತಿನ ಮೂಲಮಂತ್ರ ಎಂಬುದು ಸ್ಪಶ್ಟವಾಗುತ್ತದೆ. ಸ್ಥಳೀಯ ಬಾಶೆಯನ್ನು ಮತ್ತು ಸ್ಥಳೀಯ ಜನರನ್ನು ಕಡೆಗಣಿಸುವ ಕೇಂದ್ರ ಸರಕಾರದ ಇಂತಹ ನಿಲುವಿಗೆ ವಿರೋದ ವ್ಯಕ್ತಪಡಿಸಲೇಬೇಕಲ್ಲವೇ.!

Tuesday, 17 May 2011

ನವರಸಪುರ ಉತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ.!



ಕಳೆದ
ಕೆಲವು ವರುಶಗಳಿಂದ ಸ್ಥಗಿತಗೊಂಡಿದ್ದ ನವರಸಪುರ ಉತ್ಸವ ಮತ್ತೆ ಈ ವರುಶ ಹಮ್ಮಿಕೊಳ್ಳಲಾಗಿದ್ದು ಸಂತೋಶದ ವಿಶಯ ಮತ್ತು ಅದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ವಿಜಾಪುರದ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ, ಪರಂಪರೆಯನ್ನು ಹೊರಜಗತ್ತಿಗೆ ತೋರಿಸುವಲ್ಲಿ, ಆ ಮೂಲಕ ನಾಡಿನ ಜನರಲ್ಲಿ ತಮ್ಮೂರಿನ ಬಗ್ಗೆ ಹೆಮ್ಮೆ ಮೂಡಿ, ನಾಡು-ನುಡಿಯ ಚೌಕಟ್ಟಿನಲ್ಲಿ ಅವರನ್ನು ಒಗ್ಗೂಡಿಸಲು ಇಂತಹ ಉತ್ಸವಗಳು ಸಹಕಾರಿಯಾಗುತ್ತವೆ. ಈ ಬಾಗದ ಸ್ಥಳೀಯ ಕಲಾವಿದರಿಗೂ ತಮ್ಮ ಪ್ರತಿಬೆಯನ್ನು ಪರಿಚಯಿಸಲು ಇದೊಂದು ಒಳ್ಳೆಯ ವೇದಿಕೆ.
ಈ ಉತ್ಸವವನ್ನು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ಸಹಯೋಗದಲ್ಲಿ ನಡೆಸಲಾಗುತ್ತಿರುವುದರಿಂದ ಉತ್ಸವದಲ್ಲಿ ನಮ್ಮ ಕನ್ನಡ ಮತ್ತು ಸಂಸ್ಕೃತಿ, ಇತಿಹಾಸ, ಪರಂಪರೆಗೆ ಸಂಬಂದಿಸಿದ ಕಾರ್ಯಕ್ರಮಗಳಿಗೆ ಮಾತ್ರ ಸ್ಥಾನ ಇರಬೇಕಾಗಿರುವುದು ಸ್ವಾಬಾವಿಕ. ಉತ್ಸವದಲ್ಲಿ ವೈಬವೀಕರಣಕ್ಕಿಂತ ಹೆಚ್ಚಾಗಿ ನಮ್ಮತನ ಕಾಣಿಸಬೇಕು ಮತ್ತು ಹೊರಜಗತ್ತಿಗೆ ಪರಿಚಯಿಸಬೇಕು. ಈಗ ಸಿದ್ದಪಡಿಸಲಾಗಿರುವ ಕಾರ್ಯಕ್ರಮಗಳ ಪಟ್ಟಿಯಲ್ಲಿ ಅವಿಬಜಿತ ವಿಜಾಪುರ ಜಿಲ್ಲೆಯ ಮತ್ತು ಸುತ್ತ ಮುತ್ತಲಿನ ಬೆಳಗಾವಿ, ದಾರವಾಡ, ರಾಯಚೂರು ಜಿಲ್ಲೆಯ ಅನೇಕ ಕಲಾವಿದರಿಗೆ ಇಲ್ಲಿ ವೇದಿಕೆ ಕಲ್ಪಿಸಿದ್ದು ಸಂತೋಶದ ವಿಶಯ. ಇದರ ಮದ್ಯೆ ಕೊಂಚ ಅಸಮಾದಾನ ಆಗಿದ್ದು, ನವರಸಪುರ ಉತ್ಸವಕ್ಕೆ ಅಥವಾ ವಿಜಾಪುರಕ್ಕೆ ಅಥವಾ ಕರ್ನಾಟಕಕ್ಕೆ ಸಂಬಂದವಿರದ ಅನೇಕ ಕಾರ್ಯಕ್ರಮಗಳಿಗೆ ಇಲ್ಲಿ ಜಾಗ ಕಲ್ಪಿಸಿದ್ದು.
ಭುವನೇಶ್ವರದ ಓರಿಸ್ಸಾ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ದೆಹಲಿಯ ಕವ್ವಾಲಿ ತಂಡ, ಬಾಂಬೆಯ ಗೋಲ್ಡನ್ ಮೆಲೋಡಿಸ್ ತಂಡ ಹೀಗೆ ಇತ್ಯಾದಿ ಹೊರಗಿನ ಕಲಾವಿದರಿಗೆ ಮನ್ನಣೆ ನೀಡಲಾಗಿದೆ. ಇವರು ಕೊಡುವ ಕಾರ್ಯಕ್ರಮಕ್ಕೂ ಮತ್ತು ಈ ಉತ್ಸವವನ್ನು ಆಯೋಜಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದ್ದೇಶಕ್ಕೂ ಹೋಲಿಕೆಯೇ ಇಲ್ಲ. ಭುವನೇಶ್ವರ ಮತ್ತು ಮಹಾರಾಷ್ಟ್ರದ ನೃತ್ಯದ ಬದಲಾಗಿ ನಮ್ಮಲ್ಲೇ ಹಲವರಿಗೆ ಪರಿಚಯವಿರದ ಕರ್ನಾಟಕದ ಅನೇಕ ನೃತ್ಯ ಕಲೆಗಳನ್ನು ಪರಿಚಯಿಸುವ ಕೆಲಸ ಮಾಡಬಹುದು. ಉದಾ: ನಂದಿ ಕುಣಿತ, ಕಂಸಾಳೆ ಕುಣಿತ, ಡೊಳ್ಳು ಕುಣಿತ, ಹಾಲಕ್ಕಿ ಕುಣಿತ, ತುಳು ಜಾನಪದ ನೃತ್ಯ ಹೀಗೆ ಹಲವು ಬಗೆಯ ನೃತ್ಯ ಕಲೆಗಳ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಆಯೋಜಿಸಬಹುದು. ಇನ್ನು ಸಂಗೀತದ ಕಾರ್ಯಕ್ರಮ ನೀಡುವ ಆರ್ಕೆಸ್ಟ್ರಾ (ಸಂಗೀತ ತಂಡ) ಗಳಿಗೆ ಕರ್ನಾಟಕದಲ್ಲಿ ಏನು ಬರ. ಪ್ರತಿ ಜಿಲ್ಲೆಯಲ್ಲಿ ಅಂತಹ ತಂಡಗಳನ್ನು ಕಾಣಬಹುದು. ಹೀಗಿರುವಾಗ ಬಾಂಬೆಯಿಂದ ಗೋಲ್ಡನ್ ಮೆಲೋಡಿಸ್ ಎಂಬ ಆರ್ಕೆಸ್ಟ್ರಾ ಕರೆಯಿಸುವ ಅವಶ್ಯಕತೆ ಏನಿತ್ತು. ಅವರಿಂದ ಹಿಂದಿ ಹಾಡುಗಳೇ ಕೇಳುತ್ತವೆ ಹೊರತು ಕನ್ನಡದ ಹಾಡುಗಳು ಕೇಳುವುದಿಲ್ಲ. ಕರ್ನಾಟಕದಲ್ಲಿ ಈ ತರದ ಹಿಂದಿ ಮನರಂಜನೆಗೆ ಈ ಉತ್ಸವವನ್ನು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಬಳಸಿಕೊಳ್ಳುವುದು ಅಷ್ಟೊಂದು ಸಮಂಜಸವಲ್ಲ.
ಇತ್ತೀಚಿಗೆ ನಡೆದ ಉತ್ಸವಗಳನ್ನು ನೋಡಿದರೆ, ಹೊರಗಿನ ಕಲಾವಿದರನ್ನು ಕರೆಸಿದರೆ ಉತ್ಸವದ ಮೆರುಗು ಮತ್ತು ವೈಭವ ಹೆಚ್ಚಬಹುದು ಎಂಬ ತಪ್ಪುಕಲ್ಪನೆಯಲ್ಲಿ ಉತ್ಸವಗಳ ಆಯೋಜಕರು ಇದ್ದಂಗಿದೆ. ಈ ವರುಶದಲ್ಲಿ ನಡೆದ ಗುಲ್ಬರ್ಗಾ ಉತ್ಸವ, ಬೀದರ
ತ್ಸವಗಳಲ್ಲಿ ಇದು ಸಾಬೀತಾಗಿದೆ. ಇದರಿಂದಾಗುವ ಕೆಲವು ಹಿನ್ನಡೆಗಳನ್ನು ಗಮನಿಸಬೇಕಾಗಿದೆ.
* ಹೊರಗಿನ ಕಲಾವಿದರನ್ನು ಕರೆಸುವುದರಿಂದ ಉತ್ಸವದ ಮೂಲಕ ನಮ್ಮ ಕಲಾವಿದರಿಗೆ ಸಿಗಬಹುದಾದ ಅವಕಾಶ ತಪ್ಪಿ ಹೋಗುತ್ತದೆ.
* ಉತ್ಸವದಲ್ಲಿ ಹಿಂದಿ ಮನರಂಜನೆಗೆ ಒತ್ತು ಕೊಡುವುದರಿಂದ ಕನ್ನಡ ಮನರಂಜನೆಯ ಯೋಗ್ಯತೆಯನ್ನು ಪ್ರಶ್ನಿಸಿದಂತಾಗುತ್ತದೆ ಮತ್ತು ಸರಕಾರವೇ ಹಿಂದಿಗೆ ಮಾರುಕಟ್ಟೆ ಕಲ್ಪಿಸಿಕೊಟ್ಟಂತಾಗುತ್ತದೆ.

* ಕನ್ನಡೇತರ ಕಾರ್ಯಕ್ರಮಗಳಿಂದ ಅಲ್ಲಿಯ ಜನರು ಕನ್ನಡ ಮನರಂಜನೆಯಿಂದ ಇನ್ನಷ್ಟು ದೂರ ಸರಿಯುತ್ತಾರೆ ಮತ್ತು ಅವರಲ್ಲಿ ಕೀಳರಿಮೆ ಬೆಳೆಯುತ್ತದೆ.
* ಕಲಾವಿದರು ಹೊರಗಿನವರು ಮತ್ತು ಕಾರ್ಯಕ್ರಮಗಳು ಕನ್ನಡೇತರಗಳಾದರೆ ಕನ್ನಡ ಮತ್ತು ಸಂಸ್ಕೃತಿಯ ಉತ್ಸವ ನಡೆಸುವ ಮೂಲ ಉದ್ದೇಶಕ್ಕೆ ಹಾನಿ ಆಗುತ್ತದೆ.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿ ದೇಶ, ವಿದೇಶದ ಕಲಾವಿದರು, ಆಸಕ್ತರು, ಅತಿಥಿಗಳು ಬರಲಿ ತಪ್ಪೇನಿಲ್ಲ.! ಆದರೆ ಉತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಬಾಗವಹಿಸುವ ಕಲಾವಿದರು ನಮ್ಮವರಾಗಿರಬೇಕು. ಕನ್ನಡ ಮತ್ತು ಸಂಸ್ಕೃತಿ ಪ್ರೋತ್ಸಾಹಿಸಲು ಕೈಗೊಳ್ಳುವ ಇಂತ ಉತ್ಸವಗಳಿಗೆ ನೀಡುವ ಸರಕಾರದ ಹಣ, ಹಿಂದಿ ಮನರಂಜನೆಗೆ ಅಥವಾ ಹೊರಗಿನ ಕಲಾವಿದರ ಕಾರ್ಯಕ್ರಮಗಳಿಗೆ ಉಪಯೋಗಿಸಿದರೆ ಯೋಜನೆಗಳಲ್ಲಾಗುವ ಹಣ ದುರ್ಬಳಕೆ ಅವ್ಯವಹಾರಕ್ಕೂ ಇದಕ್ಕೂ ವ್ಯತ್ಯಾಸವಿಲ್ಲದಂತಾಗುತ್ತದೆ.

ಇನ್ನು ನವರಸಪುರದ/ವಿಜಾಪುರದ ಇತಿಹಾಸಕ್ಕೆ ಸಂಬಂದಪಟ್ಟಂತೆ ಸಾಕ್ಷ್ಯಚಿತ್ರದ ಮೂಲಕ ಮಾಹಿತಿ ಕೊಡಬೇಕು. ಆದಿಲ್ ಶಾಹಿಗಳ ಆಳ್ವಿಕೆ ಬಗ್ಗೆ ಮತ್ತು ಅವರ ಕಾಲದಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಸೇರಿದಂತೆ ನವರಸ ಕಲೆಗಳ ತಾಣವಾಗಿ ಬೆಳೆದ ಆಗಿನ ವಿಜಾಪುರದ ಬಗ್ಗೆ ಉತ್ಸವದಲ್ಲಿ ಬೆಳಕು ಚೆಲ್ಲಬೇಕು. ಇಲ್ಲಿನ ಐತಿಹಾಸಿಕ ಕಟ್ಟಡಗಳ ಹಿನ್ನೆಲೆಯನ್ನು ಪರಿಚಯಿಸುವ ಕೆಲಸ ಆಗಬೇಕು.
ಒಟ್ಟಾರೆ ಈ ಉತ್ಸವದಲ್ಲಿ ವಿಜಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಮಾತ್ರ ಒತ್ತು ಕೊಡುವ ಮೂಲಕ
ನವರಸಪುರ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಿ ಎಂಬುದು ಕನ್ನಡಿಗರ ಆಶಯವಾಗಿದೆ.