Monday, 9 January 2012

ನಮ್ಮನ್ನು ಕನ್ನಡದಿಂದ ದೂರ ಸರಿಸುವ ಈ ಕಟ್ಟುಪಾಡನ್ನು ನಾವು ಒಪ್ಪಿಕೊಳ್ಳಬೇಕೇ.?

ಹಿಸ್ಟರಿ ಟಿವಿ ೧೮ ಎಂಬ ಚಾನಲ್ ಇಂಗ್ಲೀಶ್ ಜೊತೆಗೆ ಹಿಂದಿ ಸೇರಿದಂತೆ ಭಾರತದ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿ ಇತ್ತೀಚಿಗೆ ಹೊರಬಿತ್ತು. ಭಾರತದಲ್ಲಿ ಒಟ್ಟು ಆರು ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದು, ಇಂಗ್ಲೀಶ್, ತೆಲುಗು, ಬೆಂಗಾಲಿ, ಮರಾಠಿ, ತಮಿಳು ಮತ್ತು ಹಿಂದಿಯಲ್ಲಿ ಲಭ್ಯವಿದೆ. ಆದರೆ ಈ ಸೌಲಭ್ಯ ೬ ಕೋಟಿಗಿಂತಲೂ ಹೆಚ್ಚು ಗ್ರಾಹಕರಿರುವ ಕನ್ನಡಕ್ಕೆ ಮಾತ್ರ ಲಭ್ಯವಿಲ್ಲ.

ಡಬ್ಬಿಂಗ್ ನಿಶೇಧ ಎಂಬ ಅಡ್ಡಗೋಡೆ.
ಭಾರತದ ಪ್ರಮುಖ ಭಾಷೆಯಾಗಿರುವ ಮತ್ತು ಕೋಟಿಗಟ್ಟಲೇ ಗ್ರಾಹಕರಿರುವ ಒಂದು ಭಾಷೆಯಲ್ಲಿ ಸೇವೆ ಒದಗಿಸದೇ ಇರಲು ಕಾರಣವೇನು.? ಕನ್ನಡಿಗರು ಹಿಸ್ಟರಿ ಚಾನಲ್ ಒದಗಿಸುವ ಮನರಂಜನೆಯನ್ನು ಕನ್ನಡದಲ್ಲಿ ಪಡೆಯಬಾರದೇಕೇ ಎಂದು ಅನೇಕ ಗ್ರಾಹಕರು ಅವರ ಫೇಸಬುಕ್ ಖಾತೆ ಮೂಲಕ ಕೇಳಿದಾಗ ಅವರು ಕೊಟ್ಟ ಉತ್ತರ "ಪ್ರಸಾರ ವಸ್ತು (ಕಂಟೆಂಟ್) ನಿಯಮ ಪ್ರಕಾರ ಕರ್ನಾಟಕದಲ್ಲಿ ಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಡಬ್ಬಿಂಗ್ ನಿಶೇಧ ಇದೆ. ಆದರೆ ಎಲ್ಲ ಕಡೆಗಳಲ್ಲೂ ಇಂಗ್ಲೀಶ್ ಹಿಂದಿಯಲ್ಲಿ ಲಭ್ಯವಿದೆ ಎಂದು". ಯಾರೋ ಕೆಲವರು ತಮ್ಮ ಸ್ವಹಿತಾಸಕ್ತಿಗೆ ಅನುಗುಣವಾಗಿ ಮಾಡಿರುವ ಒಂದು ನಿಯಮ ಇವತ್ತು ನಮಗೆ ಜಗತ್ತಿನ ಅನೇಕ ಶೈಕ್ಷಣಿಕ ಉಪಯುಕ್ತ ಮಾಹಿತಿಗಳನ್ನು, ವಿಸ್ಮಯಕಾರಿ ಸಂಗತಿಗಳನ್ನು, ಒಳ್ಳೆಯ ಮನರಂಜನೆಯನ್ನು ನಾವಾಡುವ ನುಡಿಯಲ್ಲಿ ಪಡೆದುಕೊಳ್ಳಲು ಬಿಡುತ್ತಿಲ್ಲ ಎಂದರೆ ಅದಕ್ಕಿಂತ ದುರಂತ ಮತ್ತೇನಿದೆ ಗೆಳೆಯರೇ.


ಇದ್ಯಾವ ಸೀಮೆ ಕಟ್ಟುಪಾಡು ಗುರು:
ಪ್ರತಿ ಬಾರಿ ಡಬ್ಬಿಂಗ್ ವಿಷಯ ಬಂದಾಗಲೆಲ್ಲ ಜಗತ್ತಿನ ಯಾವ ಭಾಷೆಯ ಡಬ್ಬಿಂಗಿಗೂ ಇಲ್ಲದ ಲಿಪ್ ಸಿಂಕ್, ಭಾಷೆಯ ಬೇರಿಗೆ ಕೊಡಲಿ ಪೆಟ್ಟು, ಸಂಸ್ಕೃತಿ ನಾಶ ಎಂಬ ಕಾರಣಗಳನ್ನು ಕನ್ನಡದ ಡಬ್ಬಿಂಗಿಗೆ ನೀಡುತ್ತಿದ್ದ ಡಬ್ಬಿಂಗ್ ವಿರೋದಿಸುವವರು ಇಂದು "ಈ ರಾಜ್ಯದಲ್ಲಿ ಯಾವುದೇ ಕ್ರಿಯೆಗೆ ನಿಷೇಧ ಇಲ್ಲ. ಅಂತಹ ಕಾನೂನೂ ಸಹ ಇಲ್ಲ. ಅದೊಂದು ಸಾಮಾಜಿಕ ಕಟ್ಟುಪಾಡು" ಎಂದು ಕರೆಯುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಕನ್ನಡ ಸಮಾಜ ಕಟ್ಟುಪಾಡು ಮಾಡಿಕೊಂಡು ಡಬ್ಬಿಂಗನ್ನು ಬೇಡ ಎನ್ನುತ್ತಿದೆ" ಎಂದಿದ್ದಾರೆ. ಇದೆಂಥ ತೂಕ ತಪ್ಪಿದ ಮಾತು. ಹೊರ ಜಗತ್ತಿನ ಮನರಂಜನೆಯನ್ನು ಕನ್ನಡದಲ್ಲಿ ಪಡೆಯಲು ಕನ್ನಡ ಸಮಾಜ ಬೇಡ ಎಂದು ಕಟ್ಟು ಪಾಡು ಮಾಡಿಕೊಂಡಿದೆಯಂತೆ. ಇಷ್ಟಕ್ಕೂ ಯಾವುದಿದು ಕನ್ನಡ ಸಮಾಜ. ಕನ್ನಡ ಸಮಾಜವೆಂದರೆ ಆಗಾಗ ಗೆಟ್ ಟುಗೆದರ ನಲ್ಲಿ ಸೇರುವ ಜನರು ಮಾತ್ರವೇ.? ಕನ್ನಡಿಗರನ್ನು ಗುತ್ತಿಗೆ ಪಡೆದುಕೊಂಡವರ ತರಹ ಹೀಗೆ ಮಾತನಾಡುವುದು ಸರಿಯೇ.? ಇನ್ನು, ಯಾವುದಿದು ಕಟ್ಟುಪಾಡು, ಯಾರ ಅನುಕೂಲಕ್ಕಾಗಿ ಈ ಕಟ್ಟುಪಾಡು, ಯಾರ ಕೇಳಿ ಈ ಕಟ್ಟುಪಾಡು ಮಾಡಲಾಯಿತು. ಇಂಗ್ಲೀಶ್, ತೆಲುಗು, ಬೆಂಗಾಲಿ, ಮರಾಠಿ, ತಮಿಳು ಮತ್ತು ಹಿಂದಿ ಬಲ್ಲವರಿಗೆ ಇರುವ ಸೌಕರ್ಯವನ್ನು ಕನ್ನಡ ಬಲ್ಲವರಿಗೆ ಸಿಗದ ಹಾಗೆ ಮಾಡುವುದು ಒಂದು ಸಾಮಾಜಿಕ ಚಿಂತನೆಯುಳ್ಳ ಕಟ್ಟುಪಾಡೇ.? ಅಥವಾ ಹುನ್ನಾರದ ಕಟ್ಟುಪಾಡೇ.? ಅನೇಕ ವಾಹಿನಿಯವರು ಕನ್ನಡದಲ್ಲಿ ಕಾರ್ಯಕ್ರಮ ಪ್ರಸಾರಮಾಡಲು ತಯಾರಾಗಿದ್ದರೂ ಅದನ್ನು ತಡೆಯುವುದು ಜನಾಬಿಪ್ರಾಯದ ಕಟ್ಟುಪಾಡೇ.? ಅಥವಾ ಪಾಳೆಗಾರಿಕೆಯ ಕಟ್ಟುಪಾಡೇ.? ಕರ್ನಾಟಕದಲ್ಲಿ ಕನ್ನಡದಲ್ಲಿ ಮನರಂಜನೆ ಸಿಗದ ಹಾಗೆ ನಿಯಮ ಮಾಡುವುದು ಕನ್ನಡಪರ ಕಟ್ಟುಪಾಡೇ.? ಅಥವಾ ಕನ್ನಡ ವಿರೋದಿ ಕಟ್ಟುಪಾಡೇ.?


ನೂರು ಕಟ್ಟುಪಾಡುಗಳಿದ್ದರೂ ಗ್ರಾಹಕನಿಗೆ ಅವು ಅಪ್ರಸ್ತುತ:

ಇಷ್ಟಕ್ಕೂ ಮೇಲೆ ಚರ್ಚಿಸಿದ ವಿಷಯಗಳೆಲ್ಲ ನನ್ನಂಥ ಸಾಮಾನ್ಯ ಕನ್ನಡ ಗ್ರಾಹಕನಿಗೆ ಬೇಡವಾದದ್ದು. ಹಿಸ್ಟರಿ ವಾಹಿನಿಯನ್ನು ಕನ್ನಡದಲ್ಲೇ ನೋಡಬೇಕೆನ್ನುವ ಹಂಬಲ ಅವನದು. ಕೆಲವರು ಮಾಡುವ ಕಟ್ಟುಪಾಡು, ಡಬ್ಬಿಂಗಿನಿಂದ ಒದಗಬಹುದಾದ ಸಮಸ್ಯೆ, ತುಟಿ ಚಲನೆ ಸಮಸ್ಯೆ, ಭಾಷೆಯ ಬುಡಕ್ಕೆ ಪೆಟ್ಟು, ಸಂಸ್ಕ್ರುತಿ ನಾಶ ಈ ತರಹದ ಕಂಡು ಕೇಳರಿಯದ ಸಂಗತಿಗಳು ಅವನಿಗೆ ಅಪ್ರಸ್ತುತ. ತನ್ನನ್ನು ಕನ್ನಡದಿಂದ ಸಿಗುವ ಸೌಲಭ್ಯದಿಂದ ದೂರ ಸರಿಸುವ ಯಾವುದೇ ಕಟ್ಟುಪಾಡನ್ನು ಅವನು ಒಪ್ಪುವುದಿಲ್ಲ. ಕನ್ನಡ ಸಮಾಜದ ಹೆಸರಿನಲ್ಲಿ ಕಟ್ಟುಪಾಡು ಮಾಡಿಕೊಂಡು ತನಗೆ ಕನ್ನಡದಲ್ಲಿ ಮನರಂಜನೆ, ಮಾಹಿತಿ, ವಿಷಯಗಳು ದೊರಕದ ಹಾಗೆ ಮಾಡುತ್ತಿರುವವರಲ್ಲೇ ಅವನಿಗೆ ಹುನ್ನಾರ ಎದ್ದು ಕಾಣುತ್ತದೆ ಹೊರತು ಕನ್ನಡದಲ್ಲಿ ಸೇವೆ ಒದಗಿಸಲು ಮುಂದೆ ಬರುವ ಬಂಡವಾಳಶಾಹಿಗಳಲ್ಲಲ್ಲ.! ಡಬ್ಬಿಂಗ್ ನಿಶೇದ ಎಂಬ ಕನ್ನಡ ವಿರೋದಿ ಕಟ್ಟುಪಾಡು ಕೊನೆಗೊಳ್ಳಲಿ. ಎಲ್ಲ ಕನ್ನಡಿಗರಿಗೂ ಕನ್ನಡದಲ್ಲಿ ಮನರಂಜನೆ ಸಿಗುವಂತಾಗಲಿ. ಗ್ರಾಹಕನಿಗೆ ಆಯ್ಕೆ ಸ್ವಾತಂತ್ರ್ಯ ದೊರೆಯಲಿ.




Saturday, 24 December 2011

ಜನ್ರಿಗೆ ವಿಶ್ಯ ಮುಟ್ಲಿ, ಇಲ್ಲ ಹಾಳಾಗ್ ಹೋಗ್ಲಿ, ಮೊದ್ಲು ಹಿಂದಿ ಹೇರಿರಿ.!


ಪ್ರಜಾವಾಣಿ ೨೪-೧೨-೧೧
ಈ ಚಿತ್ರದಲ್ಲಿ ಕಾಣುತ್ತಿರುವುದು ಮೊನ್ನೆಯ ಒಂದು ದಿನಪತ್ರಿಕೆಯಲ್ಲಿ ಬಂದಿರುವ ಜಾಹೀರಾತು. ಚಿತ್ರವನ್ನು ನೋಡಿ, ಇದ್ಯಾವುದೋ ಹಿಂದಿ ದೈನಿಕದಲ್ಲಿ ಬಂದಿರ್ಬೌದು ಅನ್ಕೊಂಡಿದ್ರೆ, ನಿಮ್ಮ ಊಹೆ ತಪ್ಪು. ಇದು ಬಂದಿರುವುದು ಪ್ರಜಾವಾಣಿ ಕನ್ನಡ ದಿನಪತ್ರಿಕೆಯಲ್ಲಿ. ಕೊಟ್ಟಿರುವುದು ಬಾರತೀಯ ರೇಲ್ವೇ ಇಲಾಖೆ. ಇದನ್ನು ನೋಡಿದ ಮೇಲೆ ಕೆಲವು ಮೂಲಬೂತ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಜನರಿಗೆ ವಿಶಯ ಮುಟ್ಟಿಸುವ ಉದ್ದೇಶ ರೇಲ್ವೇ ಇಲಾಖೆಗೆ ಇದೆಯೇ.? ಇಲ್ಲ ಎಂದರೆ ಬೇರ್ಯಾವ ಉದ್ದೇಶಕ್ಕೆ ಈ ಜಾಹೀರಾತನ್ನು ಕೊಡಲಾಗಿದೆ. ಇದೆ ಎಂದರೆ, ಕನ್ನಡ ಪತ್ರಿಕೆಯಲ್ಲಿ, ಆ ಪತ್ರಿಕೆಯನ್ನು ಓದುವ ಜನರಿಗೆ ಸಂಬಂದವೇ ಇಲ್ಲದ ಹಿಂದಿ ಬಾಶೆಯಲ್ಲಿ ಜಾಹೀರಾತು ಕೊಟ್ಟಿದ್ದೇಕೆ.? ಯಾವ ಆಧಾರದ ಮೇಲೆ ಕನ್ನಡ ದಿನಪತ್ರಿಕೆಯಲ್ಲಿ ಹಿಂದಿಯಲ್ಲಿ ಜಾಹೀರಾತು ಕೊಟ್ಟರು.

ಒಂದು ಜಾಹೀರಾತು ಜನರಿಗೆ ಮುಟ್ಟಬೇಕೆಂದರೆ ಅದು ಜನರ ನುಡಿಯಲ್ಲಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಯಾವುದೇ ಸಂಸ್ಥೆ, ಇಲಾಖೆಯಾದರೂ ಕರ್ನಾಟಕದಲ್ಲಿ ಕನ್ನಡದ ಮೂಲಕವೇ ಜನರನ್ನು ತಲುಪಬೇಕು. ಆ ಪ್ರದೇಶದ ಜನರಿಗೆ ಸಂಬಂದವೇ ಇಲ್ಲದ ಬಾಶೆ ಮೂಲಕ ಜನರನ್ನು ತಲುಪಲು ಪ್ರಯತ್ನಿಸುವುದು ಹೇರಿಕೆಯೇ ಎಂದರ್ಥ. ಇಂಥ ಹಿಂದಿ ಹೇರಿಕೆ ದಿನನಿತ್ಯ ನಮ್ಮ ಮೇಲೆ ನಡೆಯುತ್ತಲೇ ಇದೆ. ಹೀಗೆ ಹಿಂದಿಯನ್ನು ನಮ್ಮ ಮೇಲೆ ಹೇರಿ ಹೇರಿ ಇವತ್ತು ಕೇಂದ್ರ ಸರಕಾರದ ಇಲಾಖೆ ಎಂದರೆ ಜನ ಕಣ್ಣು ಮುಚ್ಚಿಕೊಂಡು ತಮ್ಮದಲ್ಲದ ಹಿಂದಿಯನ್ನು ಒಪ್ಪಿಕೊಳ್ಳುವ ಮಟ್ಟಿಗೆ ತಂದು ನಿಲ್ಲಿಸಿದ್ದಾರೆ. ಇದಕ್ಕೆ ರಾಶ್ಟ್ರೀಯತೆ, ಬಾವೈಕ್ಯತೆಯ ಲೇಪನ ಬೇರೆ.! ಇದನ್ನು ಪ್ರಶ್ನಿಸಿದರೆ, ಈಗಿನ ಬಾಶಾ ನೀತಿ ಪ್ರಕಾರ ಹಿಂದಿ ಕೇಂದ್ರ ಸರಕಾರದ ಆಡಳಿತ ಬಾಶೆ ಎಂಬ ವಾದ. ಇಲ್ಲಿ ಮತ್ತೆ ಕೆಲವು ಮೂಲಬೂತ ಪ್ರಶ್ನೆಗಳು ಎದುರಾಗುತ್ತವೆ. ನಮ್ಮೂರಿನಲ್ಲಿ ಬಳಸುವ ಸೇವೆ, ಸೌಲಬ್ಯ, ಮಾಹಿತಿಗಳಲ್ಲಿ ನಾವಾಡುವ ಬಾಶೆಯಿಲ್ಲ ಎಂದಾದ ಮೇಲೆ ಇದೆಂಥ ಬಾಶಾ ನೀತಿ ಮಾರಾಯ್ರೆ.! ನಮ್ಮೂರಿನಲ್ಲಿ ನಾವು ನೆಮ್ಮದಿಯ ಜೀವನ ನಡೆಸಲು, ಎಲ್ಲ ಸೌಕರ್ಯಗಳನ್ನು ಪಡೆಯಲು ನಮ್ಮದಲ್ಲದ ಮತ್ತೊಂದು ಬಾಶೆಯನ್ನು ಕಲಿಯಬೇಕು ಎಂಬ ಈಗಿನ ಬಾಶಾ ನೀತಿ ನಮ್ಮನ್ನು ಉದ್ದಾರ ಮಾಡಲು ಸಾದ್ಯವೇ.? ಎಲ್ಲ ಬಾರತೀಯರಿಗೆ ಸಮಾನ ಅವಕಾಶ ನೀಡದ, ಎಲ್ಲ ಬಾಶೆಗಳನ್ನು ಸಮಾನವಾಗಿ ಕಾಣದ ಈಗಿನ ಬಾಶಾ ನೀತಿ ಮುಂಬಯಿ ತರಹದ ಸಂಘರ್ಷಗಳಿಗೆ ಕಾರಣವಾಗುತ್ತದೆಯೇ ಹೊರತು ಬಾರತೀಯರ ಮದ್ಯೆ ಸಮಾನತೆಯ ಬೀಜವನ್ನು ಬಿತ್ತಲು ಸಾದ್ಯವೇ.? ವಿವಿದತೆಯಲ್ಲಿ ಏಕತೆ ಎಂಬ ತತ್ವವನ್ನು ಭೋದಿಸಲು  ಸಾದ್ಯವೇ.?


ಹಿಂದಿ ಹೇರಿಕೆಯ ಕರಾಳ ಮುಖವನ್ನು ಅರಿತುಕೊಂಡೇ ಇತ್ತೀಚಿಗೆ ಗಂಗಾವತಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅದ್ಯಕ್ಷರಾದ ಸಿಪಿಕೆಯವರು ನಮಗೆ "ಇಂಗ್ಲಿಷ್ ಮರದ ದೊಣ್ಣೆಯಾದರೆ, ಹಿಂದಿ ಕಬ್ಬಿಣದ ದೊಣ್ಣೆ" ಎಂದು ಹೇಳಿದ್ದರು. ಕನ್ನಡ ಪತ್ರಿಕೆಯಲ್ಲಿ ಕನ್ನಡದಲ್ಲಿ ಏಕೆ ಜಾಹೀರಾತು ಕೊಡಬೇಕು ಎಂಬ ಅಬಿಪ್ರಾಯ ಹೊಂದಿರುವ ಕೇಂದ್ರ ಸರಕಾರದ ಬಾಶಾ ನೀತಿಯ ಈ ದೋರಣೆಯನ್ನು ವಿರೋದಿಸದಿದ್ದರೆ ಕರ್ನಾಟಕದಲ್ಲಿ ಏಕೆ ಕನ್ನಡ ಇರಬೇಕು, ದೇಶಕ್ಕೊಂದೇ ಬಾಶೆ ಸಾಕು ಎಂಬ ಅಬಿಪ್ರಾಯ ವ್ಯಕ್ತಪಡಿಸುವ ದಿನ ದೂರ ಇಲ್ಲ.

Thursday, 3 November 2011

ಕರ್ನಾಟಕದಲ್ಲಿ ಬೇಲಿಯೇ ಎದ್ದು ಹೊಲ ಮೈಯುತ್ತಿದೆ ನೋಡ್ರಣ್ಣಾ.!


ನಿಯಮಗಳು ಮಾಡುವುದೇ ಮುರಿಯೋದಕ್ಕೆ ಎಂಬ ಮಾತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒಪ್ಪುತ್ತದೆಅನೇಕ ಬಾರಿ ಕರ್ನಾಟಕ ಚಲನಚಿತ್ರ ಮಂಡಳಿ ವಿದಿಸಿದ ನಿಯಮಗಳನ್ನು ಪರಬಾಶೆ ಚಿತ್ರಗಳ ವಿತರಕರು ಗಾಳಿಗೆ ತೂರಿರುವುದನ್ನು ನಾವು ಕಾಣಬಹುದು. ಈ ಹಿಂದೆ ಹಿಂದಿಯ ರಾವಣ, ಕೈಟ್ಸ್, ತೆಲುಗಿನ ದೂಕುಡು, ಊಸರವಳ್ಳಿ ಚಿತ್ರ ಬಿಡುಗಡೆ ಸಮಯದಲ್ಲಿ ಈ ನಿಯಮಗಳನ್ನು ಪಾಲಿಸಲಾಗಿಲ್ಲ. ಅದೇ ಪರಿಪಾಠ ಈ ಸಲದ ದೀಪಾವಳಿ ಸಮಯದಲ್ಲೂ ಮುಂದುವರೆದಿದೆ. ಆದರೆ ಈ ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಮುಂದೆ ನಿಂತು, ತಾನು ಸ್ವತ: ಮಾಡಿದ ನಿಯಮಗಳನ್ನು ಹಿಂದಿಯ ರಾ ವನ್, ತಮಿಳಿನ ವೆಲಾಯುದಂ, ೭ ಅಮ್ ಅರಿವು ಚಿತ್ರಗಳ ಮೂಲಕ ಕಸದ ಬುಟ್ಟಿಗೆ ಎಸೆದಿದೆ. ಮಂಡಳಿಯ ಸಲಹಾ ಸಮಿತಿ ಸದಸ್ಯರು ಈ ಮೂರು ಚಿತ್ರಗಳನ್ನು ಕರ್ನಾಟಕದಲ್ಲಿ ನಿಯಮ ಮೀರಿ ಬಿಡುಗಡೆಗೊಳಿಸಲು ಅನುಮತಿ ನೀಡಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಡೆಕ್ಕನ್ ಹೆರಾಲ್ಡಿನಲ್ಲಿ ಪ್ರಕಟವಾಗಿತ್ತು. (The members of the advisory board of the Karnataka Film Chamber of Commerce (KFCC) have consented to the release of Ra. One, Velayudham, and 7 Aum Arivu during Deepavali this week. And because of this no Kannada films are releasing this week.) ಇದು ಆಶ್ಚರ್ಯವಾದರೂ ಸತ್ಯ. ಕನ್ನಡ ಚಿತ್ರರಂಗದ ಏಳಿಗೆಗೆ ಸಲಹೆಗಳನ್ನು ನೀಡಬೇಕಾದ ಮಂಡಳಿಯ ಸಲಹಾ ಸಮಿತಿ ಸದಸ್ಯರು ಪರಬಾಶೆ ಚಿತ್ರಗಳನ್ನು ನಿಯಮ ಮೀರಿ ಬಿಡುಗಡೆ ಮಾಡುವಂತೆ ಸಲಹೆ ಮಾಡಿದ್ದಾರೆ.! ಕನ್ನಡ ಚಿತ್ರಗಳ ಮಾರುಕಟ್ಟೆ ಬೆಳೆಸುವ ಬಗ್ಗೆ ಸಲಹೆ ನೀಡಬೇಕಾದವರಲ್ಲಿ ಕೆಲವರು ಪರಬಾಶೆ ಚಿತ್ರ ವಿತರಣೆ ಹಕ್ಕನ್ನು ಪಡೆದುಕೊಂಡು, ಕನ್ನಡ ಚಿತ್ರಗಳು ಬಿಡುಗಡೆ ಆಗದ ಹಾಗೆ, ಈಗಾಗಲೇ ಬಿಡುಗಡೆ ಆದ ಚಿತ್ರಗಳಿಗೆ ಚಿತ್ರಮಂದಿರ ಸಿಗದ ಹಾಗೆ ಪರಿಸ್ಥಿತಿ ನಿರ್ಮಿಸಿ ಕನ್ನಡ ಚಿತ್ರರಂಗದ ಬಗೆಗಿನ ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ಚಲನಚಿತ್ರ ಮಂಡಳಿಯ ಕರ್ಮಕಾಂಡ

ಕಲಾವಿದರ ನಿರ್ಲಕ್ಷತನ:
ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗುತ್ತಿದ್ದ ಹಿಂದಿಯ ರಾ ವನ್, ತಮಿಳಿನ ವೆಲಾಯುದಂ, ೭ ಅಮ್ ಅರಿವು ಚಿತ್ರಗಳಿಗೆ ಅನುವು ಮಾಡಿಕೊಡಲು ಎಂಬಂತೆ ಆ ಸಮಯದಲ್ಲಿ ಯಾವುದೇ ಕನ್ನಡ ಚಿತ್ರವನ್ನು ಬಿಡುಗಡೆಗೊಳಿಸಲಾಗಿಲ್ಲ. ತನ್ಮೂಲಕ ಪರಬಾಶೆ ಚಿತ್ರಗಳು ನಿಯಮ ಮೀರಿ ಬಿಡುಗಡೆಯಾಗಲು ಪರೋಕ್ಷವಾಗಿ ಬೆಂಬಲ ಸೂಚಿಸಿ, ಅವುಗಳ ಮಾರುಕಟ್ಟೆ ಕರ್ನಾಟಕದಲ್ಲಿ ಇನ್ನಷ್ಟು ವಿಸ್ತರಿಸಲು ಅವಕಾಶ ಕೊಟ್ಟು, ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಇನ್ನಷ್ಟು ಹಾಳುಗೆಡವಲು ಬಿಟ್ಟು ಹಾಯಾಗಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಆಟದಲ್ಲಿ ನಿರತರಾಗಿದ್ದರು ನಮ್ಮ ಕಲಾವಿದರು. ತಮ್ಮ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿಕೊಂಡು, ಸ್ಪರ್ದೆ ನೀಡುತ್ತಿರುವವರ ತಲೆ ಮೇಲೆ ಕಿರೀಟ ತೊಡಿಸುವ ಇವರ ನಡೆ ನಿಜಕ್ಕೂ ಚಿತ್ರರಂಗದ ಏಳಿಗೆಗೆ ಸಂಬಂದಪಟ್ಟಂತೆ ಆತಂಕ ಸೃಷ್ಟಿಸುತ್ತದೆ. ಡಬ್ಬಿಂಗ್ ವಿಚಾರ ಬಂದರೆ ಇದೇ ಚಲನಚಿತ್ರ ಮಂಡಳಿ ಮಾಡಿರುವ ಅಸಂವಿದಾನಿಕ ನಿಯಮವನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿ, ಅನ್ನದ ಪ್ರಶ್ನೆ ಬಗ್ಗೆ ಮಾತನಾಡುವ ನಮ್ಮ ಕಲಾವಿದರು ಅದೇ ಅನ್ನವನ್ನು ಪರಬಾಶೆ ಚಿತ್ರಗಳು ದಿನದಿಂದ ದಿನಕ್ಕೆ ಕಸಿದುಕೊಳ್ಳುತ್ತಿರುವಾಗ ಅದರ ಬಗ್ಗೆ ಗಮನ ಹರಿಸದೇ ಜಾಣಮೌನ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಒಂದು ಕಡೆ, ಕನ್ನಡ ಕಲಾವಿದರ ಅನ್ನಕ್ಕೂ ಕುತ್ತು, ಇನ್ನೊಂದು ಕಡೆ ಕನ್ನಡ ಪ್ರೇಕ್ಷಕರಿಗೆ ಇಲ್ಲದ ಕನ್ನಡ ಮನರಂಜನೆ. ಪರಿಣಾಮವಾಗಿ, ಕನ್ನಡ ಚಿತ್ರಗಳ ಗ್ರಾಹಕರು ಪರಬಾಶೆ ಚಿತ್ರಗಳ ಗ್ರಾಹಕರಾಗಿ ಪರಿವರ್ತಿತವಾಗಿ ತರುವಾಯ ಕನ್ನಡ ಮಾರುಕಟ್ಟೆ ಕುಸಿಯುವುದಕ್ಕೆ ಕಾರಣವಾಗುತ್ತಿದೆ. ಕನ್ನಡ ಚಿತ್ರಗಳ ಮಾರುಕಟ್ಟೆ ಬೆಳವಣಿಗೆಗೆ ಕನ್ನಡ ಕಲಾವಿದರಿಂದಲೇ ಹಿನ್ನೆಡೆಯಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ.? 

ಕಾಗಕ್ಕ ಗುಬ್ಬಕ್ಕನ ಕಥೆ:
"ಕನ್ನಡದ ಮಾರುಕಟ್ಟೆ ಸಣ್ಣದು. ಹೀಗಾಗಿ ಬಹುಕೋಟಿ ವೆಚ್ಚದ ಪರಬಾಶೆ ಚಿತ್ರಗಳು ಬಿಡುಗಡೆಯಾಗುತ್ತಿರುವಾಗ ಕನ್ನಡ ಚಿತ್ರಗಳನ್ನು ಬಿಡುಗಡೆಗೊಳಿಸುವುದರಿಂದ ಕನ್ನಡ ಚಿತ್ರಗಳಿಗೆ ಹಿನ್ನಡೆಯಾಗುತ್ತದೆ. ಪರಬಾಶೆಯ ತಾರಾಗಣ ಮತ್ತು ದೊಡ್ಡ ಚಿತ್ರಗಳು ಜನರನ್ನು ಆಕರ್ಷಿಸುತ್ತವೆ. ಹೀಗಾಗಿ ಪ್ರೇಕ್ಷಕ ಅವುಗಳಿಗೆ ಹೆಚ್ಚು ಮಹತ್ವ ಕೊಡುತ್ತಾನೆ." ಹೀಗಂತ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿದವರು ಬೇರೆ ಯಾರೂ ಅಲ್ಲ, ಸ್ವತ: ಒಬ್ಬ ಕನ್ನಡ ಚಿತ್ರಗಳ ನಿರ್ಮಾಪಕರು/ವಿತರಕರು. ಕರ್ನಾಟಕದಲ್ಲಿ ಪರಬಾಶೆ ಚಿತ್ರಗಳ ಬಿಡುಗಡೆ ಸಮಯ ನೋಡಿಕೊಂಡು ಕನ್ನಡ ಚಿತ್ರಗಳ ಬಿಡುಗಡೆ ಮಾಡಬೇಕು ಎಂಬಂತಿದೆ ಇವರ ಮಾತುಗಳು. ಪರಬಾಶೆ ಚಿತ್ರಗಳನ್ನು ನಿಯಮ ಮೀರಿ ಬಿಡುಗಡೆ ಮಾಡುತ್ತಿರುವುದರಿಂದ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ, ಇದರಿಂದ ಕನ್ನಡ ಚಿತ್ರಗಳಿಗೆ ಮಾರುಕಟ್ಟೆಯಲ್ಲಿ ಹಿನ್ನೆಡೆಯಾಗುತ್ತಿದೆ. ಇದರಿಂದ ಕನ್ನಡ ಚಿತ್ರಗಳ ವಿತರಣೆ ಹಕ್ಕನ್ನು ಪಡೆದುಕೊಂಡವರಿಗೆ, ನಿರ್ಮಾಪಕರಿಗೆ, ಆ ಮೂಲಕ ಕಲಾವಿದರಿಗೆ ನಷ್ಟವಾಗುತ್ತಿದೆ. ಆದ್ದರಿಂದ ಪರಬಾಶೆ ಚಿತ್ರಗಳಿಗಿರುವ ಬಿಡುಗಡೆ ನಿಯಮವನ್ನು ಆಯಾ ಚಿತ್ರಗಳ ವಿತರಕರು ಕಟ್ಟುನಿಟ್ಟಾಗಿ ಲಿಸಬೇಕು. ಪಾಲಿಸದವರ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತೆಲ್ಲ ಹೇಳಬೇಕಾದವರು, ಆ ಸಮಯದಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವುದು ಸರಿಯಲ್ಲ, ನಮ್ಮ ಮಾರುಕಟ್ಟೆ ಸಣ್ಣದು ಹಾಗೆ ಹೀಗೆ ಅಂತ ಸ್ಪರ್ಧೆಯಿಂದ ಹಿಂದೆ ಸರಿಯೊ ಮಾತುಗಳನ್ನು ಕೇಳಿದಾಗ ನಗಬೇಕೋ ಅಳಬೇಕೊ ಎಂಬುದೇ ಗೊತ್ತಾಗುತ್ತಿಲ್ಲ. ಇದು ಪರೋಕ್ಷವಾಗಿ ಆ ಪರಬಾಶೆ ಚಿತ್ರಗಳ ನಿಯಮ ಮೀರಿದ ಬಿಡುಗಡೆಗೆ ಬೆಂಬಲ ಕೊಡುವುದಲ್ಲದೇ ತಮಗೆ ಸ್ಪರ್ಧೆ ಎದುರಿಸುವ ಯೋಗ್ಯತೆ ಇಲ್ಲ, ಅಥವಾ ತಾಕತ್ತಿಲ್ಲ ಎಂದು ಆಡಿದಂತಾಗುತ್ತದೆ.

ಕೊನೆ ಮಾತು: ಪರಬಾಶೆ ಚಿತ್ರಗಳಿಗೆ ಸೆಡ್ಡು ಹೊಡೆದು ಕನ್ನಡ ಚಿತ್ರಗಳು ನಿಲ್ಲಬೇಕೇ ಹೊರತು ಹಚ್ಚ ಹಸಿರಾದ ಬೂಮಿಯನ್ನು ಮೊದಲು ಅವುಗಳಿಗೆ ಮೆಯ್ಯಲು ಬಿಟ್ಟು ಆಮೇಲೆ ನಮ್ಮ ವ್ಯಾಪ್ತಿ ಸಣ್ಣದು ಎಂದು ಅಳುವುದು ಮಾರುಕಟ್ಟೆ ಜಗತ್ತಿನಲ್ಲಿ ಖಂಡಿತ ಒಪ್ಪಲು ಸಾದ್ಯವಿಲ್ಲ. ಇನ್ನು ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹೆಚ್ಚಿಸುವ ಜವಾಬ್ದಾರಿ ಹೊತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಎದ್ದು ಕನ್ನಡ ಚಿತ್ರರಂಗ ಮೈಯುವುದನ್ನು ನೋಡುವಂಥ ದುಸ್ಥಿತಿ ಕನ್ನಡ ಪ್ರೇಕ್ಷಕರಿಗೆ ಮುಂದಿನ ದಿನಗಳಲ್ಲಿ ಬಾರದಿರಲಿ.!




Sunday, 23 October 2011

ನಮ್ಮ(?) ಮೆಟ್ರೊ ಮತ್ತು ಹುಳುಕು ಬಾಶಾ ನೀತಿ.!

ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಬೆಂಗಳೂರು ಮೆಟ್ರೊ ಸೇವೆ ಶುರು ಆಗಿದೆ. ಮೆಟ್ರೊದಲ್ಲಿನ ಮೊದಲ ಓಡಾಟ ಹೊಸ ಅನುಭವ ನೀಡಿತು. ನಮ್ಮ ಮೆಟ್ರೊ ಸೇವೆಯನ್ನು ಅನುಭವಿಸಿದ ಮೇಲೆ ಇದೇ ಸಮಯದಲ್ಲಿ ಗಮನ ಸೆಳೆದಿದ್ದು ಎಂದರೆ ಅಲ್ಲಿ ಪಾಲಿಸಲಾದ ಬಾಶಾನೀತಿ. ಸಂವಿಧಾನದ ಮೂಲಕ ನಾವು ತಿಳಿದುಕೊಂಡಿದ್ದು ಏನು ಅಂದ್ರೆ, ಭಾರತದಲ್ಲಿ ಎಲ್ಲರೂ ಸಮಾನರು ಎಲ್ಲ ಬಾಶೆಗಳೂ ಸಮಾನ ಎಂದು. ಆದರೆ ಕರ್ನಾಟಕದಲ್ಲಿ ಅನುಶ್ಟಾನವಾಗುವ ಯೋಜನೆಗಳಲ್ಲಿ ಈ ನಮ್ಮ ತಿಳುವಳಿಕೆಯನ್ನು ಹುಸಿ ಮಾಡುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಮೆಟ್ರೊದಲ್ಲೂ ಇದನ್ನು ಕಂಡಿದ್ದು ಸುಳ್ಳಲ್ಲ. ಎಂದಿನಂತೆ ಕೇಂದ್ರ ಸರಕಾರ ಕರ್ನಾಟಕದ ಯೋಜನೆಗಳಿಗೆ ನಮ್ಮದೇ ತೆರಿಗೆ ಹಣವನ್ನು ಆರ್ಥಿಕ ಸಹಕಾರದ ಮೂಲಕ ನೀಡುವುದರ ಜೊತೆಗೆ ತನ್ನ ಹುಳುಕು ಬಾಶಾ ನೀತಿಯನ್ನು ನಮ್ಮ ಮೆಟ್ರೊ ಮೂಲಕ ಪ್ರದರ್ಶಿಸಿದೆ. ಬೆಂಗಳೂರಿಗರಿಗೆ ಮೀಸಲಾಗಿರುವ ಈ ಸೇವೆಯಲ್ಲಿ ವಿನಾಕಾರಣ ಎಲ್ಲೆಡೆ ಹಿಂದಿಯನ್ನು ಬಳಸಲಾಗಿದೆ. ಬೆಂಗಳೂರಿನಲ್ಲಿ ೧% ಕ್ಕಿಂತಲೂ ಕಡಿಮೆಯಿರುವ ಹಿಂದಿ ಬಲ್ಲವರಿಗೆ ತೊಂದರೆ ಆಗಬಾರದು ಎಂಬ ನಿಯಮ ಇಲ್ಲಿ ಪಾಲಿಸಲಾಗಿದೆ. ಬೆಂಗಳೂರಿನಲ್ಲಿರುವ ಹಿಂದಿ ಬಾಶಿಕರ ಸಂಖ್ಯೆಯಶ್ಟೆ ಹೆಚ್ಚು ಕಡಿಮೆ ದಿಲ್ಲಿಯಲ್ಲೂ ಕನ್ನಡ ಬಾಶಿಕರ ಸಂಖ್ಯೆಯಿದೆ. ಈ ಸಂಖ್ಯಾ ಆಧಾರದ ಮೇಲೆ ನೋಡುವುದಾದರೆ, ಬೆಂಗಳೂರಿನ ನಮ್ಮ ಮೆಟ್ರೊದಲ್ಲಿ ಹಿಂದಿಯಲ್ಲಿ ಸೇವೆ ಕೊಡುವುದಾದರೆ ದಿಲ್ಲಿಯಲ್ಲಿನ ಮೆಟ್ರೊದಲ್ಲೂ ಕನ್ನಡದಲ್ಲಿ ಸೇವೆ ಕೊಡಬೇಕು. ಆದರೆ ಭಾರತದ ಬಾಶಾ ನೀತಿ ಪ್ರಕಾರ ಇದು ಸಾದ್ಯವಿಲ್ಲ. ದಿಲ್ಲಿ ಮೆಟ್ರೊದಲ್ಲಿ ಸ್ಥಳೀಯ ಬಾಶೆ ಮತ್ತು ಆಂಗ್ಲ ಬಾಶೆಗೆ ಮಾತ್ರ ಸ್ಥಾನ ಕಲ್ಪಿಸಿದರೆ ಬೆಂಗಳೂರಿನಲ್ಲಿ ಸ್ಥಳೀಯ ಮತ್ತು ಆಂಗ್ಲ ಬಾಶೆ ಜೊತೆಗೆ ಇನ್ನೊಂದು ಬಾಶೆಯನ್ನು ಸ್ಥಳೀಯರ ಮೇಲೆ ಹೇರಲಾಗುತ್ತಿದೆ. ದಿಲ್ಲಿಗೊಂದು ನಿಯಮ ಬೆಂಗಳೂರಿಗೊಂದು ನಿಯಮ ಯಾಕೆ.? ಇಂಥ ಹುಳುಕಿನ ಬಾಶಾ ನೀತಿಯಿಂದ ಒಕ್ಕೂಟ ವ್ಯವಸ್ಥೆಗೆ ಬೆಲೆಯಿಲ್ಲದಂತಾಗಿದೆ. ಎಲ್ಲ ಬಾಶೆಗಳೂ ಸಮಾನ ಎಂಬ ಸಂದೇಶ ಸಾರಬೇಕಾದ ಸರಕಾರಗಳೇ ಇಂದು ತಮ್ಮ ಯೋಜನೆಗಳ ಮೂಲಕ ಸ್ಥಳೀಯ ಬಾಶೆಗಳಿಗಿಂತ ಹಿಂದಿಗೆ ಕೊಂಬು ಜಾಸ್ತಿ ಎಂಬ ಸಂದೇಶ ರವಾನಿಸುತ್ತಿವೆ.

ಕನ್ನಡಿಗರಾಗದ ವಲಸಿಗರು:
ಮೆಟ್ರೊದಲ್ಲಿನ ಈ ಬಾಶಾ ನೀತಿ ಒಂದು ಕಡೆ ೮ನೇ ಪರಿಚ್ಚೇಧದಲ್ಲಿ ಗುರುತಿಸಲಾದ ಎಲ್ಲ ೨೨ ಭಾಷೆಗಳು ಸಮಾನ ಎಂಬ ಸಂವಿದಾನದ ಆಶಯಕ್ಕೆ ದಕ್ಕೆ ತಂದರೆ, ಇನ್ನೊಂದು ಕಡೆ ವಲಸಿಗರು ಕನ್ನಡ ಕಲಿತು ಸ್ಥಳೀಯ ಮುಖ್ಯವಾಹಿನಿಯಲ್ಲಿ ಅವರು ಬೆರೆಯುವ ಅವಕಾಶವನ್ನು ತಪ್ಪಿಸುತ್ತದೆ. ವಲಸಿಗರು ಅಲ್ಲಿನ ಭಾಷೆಯನ್ನು ಕಲಿತು ಸ್ಥಳೀಯ ಮುಖ್ಯವಾಹಿನಿಗೆ ಬೆರೆಯಬೇಕು. ಜಗತ್ತಿನ ನಿಯಮನೂ ಇದೇ ಹೇಳುತ್ತದೆ. ವಿವಿದತೆಯಲ್ಲಿ ಏಕತೆಯೆಂಬ ಮಂತ್ರ ಪಠಿಸುವ ಒಕ್ಕೂಟ ವ್ಯವಸ್ಥೆಯಿರುವ ಭಾರತವೂ ಇದರಿಂದ ಹೊರತಾಗಿಲ್ಲ. ವಿಪರ್ಯಾಸವೆಂದರೆ ಜರ್ಮನಿ, ಫ್ರಾನ್ಸಿಗೆ ಹೋಗುವುದಕ್ಕಿಂತ ಮುಂಚೆಯೇ ಅಲ್ಲಿನ ಭಾಷೆ ಕಲಿಯುವ ಅನೇಕ ಹೆಮ್ಮೆಯ ಬಾರತೀಯರು ಕರ್ನಾಟಕಕ್ಕೆ ವಲಸೆ ಬಂದು ಇಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡರೂ ಕನ್ನಡವನ್ನು ಕಲಿಯುವ ಗೋಜಿಗೆ ಹೋಗುವುದಿಲ್ಲ. ವಲಸಿಗರಿಗೆನೇ ವ್ಯವಸ್ಥೆಯನ್ನು ಕಟ್ಟುವಂಥ ಮೆಟ್ರೊದಂಥ ಯೋಜನೆಗಳಲ್ಲಿನ ಬಾಶಾ ನೀತಿಯೇ ಇಂಥ ಒಂದು ಕೆಟ್ಟ ವಾತಾವರಣಕ್ಕೆ ನಾಂದಿ ಹಾಡುತ್ತಿವೆ. ವಲಸಿಗರನ್ನು ಕನ್ನಡಿಗರಾಗದ ಹಾಗೆ ತಡೆಯುತ್ತಿವೆ. 


ನಮ್ಮ ಮೆಟ್ರೊ ಬಾಶಾನೀತಿ:
ನಮ್ಮ ಮೆಟ್ರೊ ಸೇವೆ ಒದಗಿಸುತ್ತಿರುವುದು ಬೆಂಗಳೂರಿಗರಿಗೆ. ಹೀಗಾಗಿ ಬೆಂಗಳೂರಿನ ನುಡಿಯಲ್ಲೇ ಎಲ್ಲ ಮಾಹಿತಿಗಳು ಸಿಗಬೇಕು. ಇನ್ನು ಬೆಂಗಳೂರಿಗರಿಗೆ ಬರುವ ವಲಸಿಗರಿಗೆ ತಾತ್ಕಾಲಿಕ ಅನುಕೂಲವಾಗುವ ಹಾಗೆ ಆಂಗ್ಲ ಬಾಶೆ ಇರಲಿ. ಒಕ್ಕೂಟ ವ್ಯವಸ್ಥೆಯಿರುವ ಯುರೋಪಿನಲ್ಲಿನ ಬಾಶಾ ನೀತಿ ಇದಕ್ಕೆ ಒಳ್ಳೆಯ ಉದಾಹರಣೆ. ಆದ್ದರಿಂದ ಮೆಟ್ರೊ ಆಡಳಿತ ವರ್ಗ ಈ ನಿಟ್ಟಿನಲ್ಲಿ ಗಮನ ಹರಿಸಿ ತನ್ನ ಸೇವೆಯಲ್ಲಿ ಹಿಂದಿ ಬಳಕೆಯನ್ನು ನಿಲ್ಲಿಸಿ, ಕಡಿಮೆ ಸಂಖ್ಯೆಯ ವಲಸಿಗರಿಗಾಗಿ ವ್ಯವಸ್ಥೆ ಕಟ್ಟುವ ಕೆಟ್ಟ ಸಂಪ್ರದಾಯವನ್ನು ಬಿಟ್ಟು ಬಹುಸಂಖ್ಯಾತ ಸ್ಥಳೀಯರಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆಯನ್ನು ಕಟ್ಟಿ, ಆ ಮೂಲಕ ಕರ್ನಾಟಕದಲ್ಲಿರುವ ವಲಸಿಗರು ಮುಂದಿನ ದಿನಗಳಲ್ಲಿ ಕನ್ನಡಿಗರಾಗಿ ಪರಿವರ್ತನೆಯಾಗಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ.

Sunday, 25 September 2011

ನಿಲ್ಲದ ಪರಬಾಶೆ ಮನರಂಜನೆಯ ವೈಬವೀಕರಣ.!


ಈ (ನಮ್ಮ) ಕನ್ನಡ ಸುದ್ದಿ ವಾಹಿನಿಗಳಿಗೇನಾಗಿದೆ.! ಮನರಂಜನೆ ಅಂದರೆ ಪರಬಾಶೆ ಚಿತ್ರಗಳೇ ಲಾಯಕ್ಕು ಎಂಬ ನಿಲುವೇನಾದ್ರು ಇವರು ತಾಳಿದಾರಾ? ಅಥವಾ ಪರಬಾಶೆ ಮನರಂಜನೆ ಬಗ್ಗೆ ಸುದ್ದಿ ತೋರಿಸದಿದ್ದರೆ ಅವರ ವಾಹಿನಿಯನ್ನು ಯಾರೂ ನೋಡುವುದಿಲ್ಲ ಎಂಬ ಬ್ರಮೆಯಲ್ಲಿದ್ದಾರಾ.? ಅಥವಾ ಕರ್ನಾಟಕದ ಜನ ಎಲ್ಲ ಸೇರಿ ನಾವು ಇನ್ಮೇಲೆ ಪರಬಾಶೆ ಚಿತ್ರಗಳನ್ನೇ ಜಾಸ್ತಿ ನೋಡ್ತಿವಿ ಅಂತ ಮುಚ್ಚಳಿಕೆ ಏನಾದ್ರು ಇವರಿಗೆ ಬರೆದು ಕೊಟ್ಟಿದ್ದಾರಾ.? ಎಂಬ ಪ್ರಶ್ನೆಗಳು ಇತ್ತೀಚಿನ ಕೆಲವು ದಿನಗಳಿಂದ ಗಾಡವಾಗಿ ಕಾಡ್ತಾ ಇದೆ.

ಹಿಟ್ ಬೇಕು..ಹಿಟ್.!
ಒಂದು ಪರಬಾಶೆಯ ಚಿತ್ರ ತೆರೆಗೆ ಬರಲು ಸಜ್ಜಾದರೆ ಸಾಕು, ಮಾದ್ಯಮದ ಕಚೇರಿಗಳಲ್ಲಿ ಅದರ ಅರ್ದ ತಾಸಿನ  ವಿಶೇಶ ಕಾರ್ಯಕ್ರಮದ ಸಿದ್ದತೆಗಳು ಶುರು ಆಗಿ ಬಿಡುತ್ತವೆ. ಇನ್ನು ಒಬ್ಬರು ಪ್ರಸಾರ ಮಾಡಿದರೆ ಮುಗೀತು,, ನಾವು ತೋರಿಸಲಿಲ್ಲ ಅಂದ್ರೆ ಜನ ಎಲ್ಲಿ ಬೇಜಾರ್ ಮಾಡ್ಕೊತಾರೆ ಅನ್ನೋ ಥರ ಮರುದಿನ ಮತ್ತೊಂದ್ರಲ್ಲಿ. ಬೆಳಿಗ್ಗೆ "ದುಕುಡು" ಚಿತ್ರದ ಬಗ್ಗೆ ವಿಶೇಶ ಕಾರ್ಯಕ್ರಮ,, ಸಂಜೆ ಅದೇ ವಾಹಿನಿಯಲ್ಲಿ "ಕನ್ನಡ ಚಿತ್ರಗಳು ಎಡವುತ್ತಿರುವುದೆಲ್ಲಿ" ಎಂಬ ಬಗ್ಗೆ ವಿಚಾರ ಸಂಕೀರಣ.!! ಈ ಥರ ಇದೆ ನಿಲುವು. ಕನ್ನಡ ಬದ್ದತೆ ಮಾತೆಲ್ಲಿ.! ಈಗಿಗ ಚಿತ್ರಗಳು ಬಿಡುಗಡೆ ಆಗೋದಕ್ಕೆ ಕಾಯೋದೇ ಬೇಡ ಅಂತ, ಅಲ್ಲಿನ ಪರಿಸ್ಥಿತಿಯ ಅವಲೋಕನ ಮಾಡೊದಕ್ಕೆ ಶುರು ಮಾಡಿದ್ದಾರೆ, ಅಂಥದ್ದೇ ಒಂದು ಕಾರ್ಯಕ್ರಮ ಸುವರ್ಣ ಸುದ್ದಿ ವಾಹಿನಿಯಲ್ಲಿ ಇತ್ತೀಚಿಗೆ ಕಾಣಿಸಿಕೊಳ್ತು. ಅದರ ಶಿರ್ಶಿಕೆ ಹೆಸರು "ಹಿಟ್ ಬೇಕು..ಹಿಟ್". ಇದರ ಸಾರಾಂಶ ಏನಪ್ಪಾ ಅಂದ್ರೆ, ತೆಲುಗಿನ ಮಹೇಶ್ ಬಾಬು, ಜೂ.ಎನ್.ಟಿ.ಆರ್, ನಾಗಾರ್ಜುನ ಅವರ ಇತ್ತೀಚಿನ ಚಿತ್ರಗಳು ತಕ್ಕ ಮಟ್ಟಿಗೆ ಯಶಸ್ಸನ್ನು ಕಂಡಿಲ್ಲ, ಹಾಗಾಗಿ ಜನ ಅವರಿಂದ ಒಂದು ಬ್ಲಾಕ್ ಬಸ್ಟರ್ ಹಿಟ್ ಚಿತ್ರವನ್ನು ನಿರೀಕ್ಷೆ ಮಾಡುತ್ತಿದ್ದಾರೆ ಅಂತ.! ಕರ್ನಾಟಕದ ಜನ ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರವನ್ನು ನಿರೀಕ್ಷೆ ಮಾಡುತ್ತಿದ್ದಾರೆ ಅಂತ ನಮ್ಮ ಸುದ್ದಿವಾಹಿನಿಗೆ ಯಾವ ಗುಪ್ತಚರ ಇಲಾಖೆ ಮೂಲಕ ಮಾಹಿತಿ ಬಂತೋ ಗೊತ್ತಿಲ್ಲ.! ಆದರೆ ಪರಬಾಶೆ ಚಿತ್ರಗಳನ್ನು ಬ್ಲಾಕ್ ಬಸ್ಟರ್ ಮಾಡಲು ಕರ್ನಾಟಕದಲ್ಲಿ ಮಾರುಕಟ್ಟೆ ನಿರ್ಮಿಸಲು ನೇರ, ದಿಟ್ಟ ಮತ್ತು ನಿರಂತರ ಪ್ರಯತ್ನ ನಡೆದಿದೆ. ಇನ್ನು ಮತ್ತೊಂದು ಸುದ್ದಿ ವಾಹಿನಿ, ಟಿವಿ೯ ಅವರು ರಜನಿಕಾಂತ್ ಮತ್ತು ಅವರ ಚಿತ್ರಗಳ ಪ್ರಚಾರದ ಗುತ್ತಿಗೆಯನ್ನು ಪಡೆದುಕೊಂಡಿರೋ ಥರ ಸುದ್ದಿ ಪ್ರಸಾರ ಮಾಡ್ತಾರೆ. ಕನ್ನಡಿಗರಿಗೆ ಬೇಡವಾದ ಪ್ರಚಾರವನ್ನು ಕನ್ನಡಿಗರ ಮೇಲೆ ಹೇರಿ ಯಾವ ಉತ್ತಮ ಸಮಾಜವನ್ನು ನಿರ್ಮಿಸಲು ಹೊರಟಿದ್ದಾರೆ. ಪಕ್ಕದ ಮನೆಯಲ್ಲೂ ಹೀಗೆ ಆಗುತ್ತಾ.? ಅಣ್ಣಾವ್ರ್ದು, ಶಂಕರನಾಗ್ ಕುರಿತಾದ ಅಥವಾ ಈಗಿನ ನಟರ ಬ್ಲಾಕಬಸ್ಟರ್ ಚಿತ್ರಗಳ ಬಗ್ಗೆ ಎಶ್ಟು ಸಲ ಅಲ್ಲಿನ ವಾಹಿನಿಗಳು ವಿಶೇಶ ಕಾರ್ಯಕ್ರಮ ಏರ್ಪಡಿಸಿವೆ.? ಖಂಡಿತ ಇಲ್ಲ, ಅಲ್ಲಿನ ಜನರ ಮನರಂಜನೆ ಸ್ಥಳೀಯ ಬಾಶೆಯಲ್ಲೇ ಎಂಬ ಸಿದ್ದಾಂತಕ್ಕೆ ಅಲ್ಲಿನ ಮಾದ್ಯಮಗಳು ಕೈಜೋಡಿಸಿವೆ. ನಮ್ಮ ಮಾದ್ಯಮಗಳು ನಮ್ಮ ಜನರ ಮನರಂಜನೆ ಕನ್ನಡ ನುಡಿಯಲ್ಲೇ ಎಂಬ ಬಗ್ಗೆ ಯಾಕೆ ನಿರ್ಲಕ್ಷ್ಯ. ಪರಬಾಶೆಯಲ್ಲೂ ಒಳ್ಳೆಯ ಮನರಂಜನೆ ಇರುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವುಗಳನ್ನು ನಮ್ಮ ನುಡಿಯಲ್ಲೇ ನಮ್ಮ ಜನರಿಗೆ ತಲುಪಿಸುವತ್ತ ಗಮನ ಹರಿಸಬೇಕೆ ಹೊರತು ಅವರವರ ಬಾಶೆಯಲ್ಲೇ ಪ್ರಚಾರ ಕೊಡುವುದು ಸರಿಯಲ್ಲ. ಒಟ್ಟಿನಲ್ಲಿ ಕನ್ನಡಿಗರಿಗೆ ಬೇಕಾದ್ದನ್ನು ನಿರ್ಲಕ್ಷಿಸಿ ಬೇಡವಾದದ್ದನ್ನು ತುರುಕಲು ಪ್ರಯತ್ನಿಸುತ್ತಿರುವುದು ವಿಪರ್ಯಾಸ.

ಲವಲವಿಕೆ ಕಳೆದುಕೊಳ್ಳುತ್ತಿರುವ ಪತ್ರಿಕಾ ಮಾದ್ಯಮ.!
ಪತ್ರಿಕಾ ಮಾದ್ಯಮಗಳ ಸ್ಥಿತಿ ಇದಕ್ಕಿಂತ ಬಿನ್ನವಾಗಿಲ್ಲ. ಪರಬಾಶೆ ಚಿತ್ರಗಳ ಪ್ರಚಾರದಲ್ಲಿ ನಾವು ಏನು ಕಮ್ಮಿ ಇಲ್ಲ ಅನ್ನೋ ಥರ ಪೈಪೋಟಿಗೆ ಬಿದ್ದವರಂತೆ ನಮ್ಮ ಪತ್ರಿಕಾ ಮಾದ್ಯಮದವರು ಇದ್ದಾರೆ. ವಿಜಯ ಕರ್ನಾಟಕದಲ್ಲಿ ಬರುವ ಲವಲವಿಕೆಯನ್ನು ನೋಡಿದರೆ, ಕೆಲವು ಸಲ ಇದು ಕನ್ನಡ ಪತ್ರಿಕೆಯ ಜೊತೆಗೆ ಬಂದಿದ್ದಾ ಎಂಬ ಬಗ್ಗೆ ಸಂದೇಹ ಮೂಡುತ್ತದೆ. ಅಕ್ಷರಗಳು ಕನ್ನಡದ್ದೇ, ಮನರಂಜನೆ ವಿಶಯ ಮಾತ್ರ ಪಕ್ಕದ ಮನೆದೇ ಜಾಸ್ತಿ. ಟಿವಿ ಮಾದ್ಯಮಗಳಲ್ಲಿ ಟಿವಿ೯ ವಹಿಸುವ ಪಾತ್ರವನ್ನು ಲವಲವಿಕೆಯಿಂದ ವಿ.ಕ ದವರು ನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿಯವರು ಬೊಂಬಾಟ್ ಬಾಲಿವುಡ್ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನು ಮನರಂಜನೆಗಾಗಿಯೇ ಮೀಸಲಿರುವ ಹೊತ್ತಿಗೆಗಳಾದ ರೂಪತಾರಾದಂತವುಗಳಲ್ಲೂ ತಮಿಳು, ತೆಲುಗು ಚಿತ್ರಗಳ ಪ್ರಚಾರ ಕಾರ್ಯ ನಡೆಯುತ್ತದೆ. ಇದೆಲ್ಲದರ ಜೊತೆಗೆ ಎಲ್ಲರೂ ತಮಿಳು, ತೆಲುಗು, ಹಿಂದಿ ಚಿತ್ರಗಳ ವಿಶ್ಲೇಶಣೆ ನಡೆಸುತ್ತಾರೆ. 

ಮನೆಗೆ ಮಾರಿ ಪಕ್ಕದ್ಮನೆಗೆ ಉಪಕಾರಿ.!
ಇಶ್ಟೆಲ್ಲ ಮಾದ್ಯಮದವರು ಯಾರಿಗಾಗಿ ಮಾಡುತ್ತಿರುವುದು, ಹೀಗೆ ಮಾಡುವುದರ ಮೂಲಕ ತಮ್ಮ ತಲೆ ಮೇಲೆ ಚಪ್ಪಡಿ ಕಲ್ಲನ್ನು ಎಳ್ಕೊತಿದ್ದಾರೆ. ಹೀಗೆ ಪರಬಾಶೆಗಳಿಗೆ ಪ್ರಚಾರ ಕೊಡುತ್ತಿದ್ದರೆ, ಆ ಮೂಲಕ ಕನ್ನಡ ಚಿತ್ರಗಳ ಗ್ರಾಹಕರನ್ನು ಪರಬಾಶೆ ಕಡೆಗೆ ವಾಲಿಸುತ್ತಿದ್ದರೆ ಮುಂದೊಂದು ದಿನ ಕನ್ನಡ ವಾಹಿನಿಗಳನ್ನು ನೋಡುವವರ, ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರಬಹುದು. ಆಗ ಯಾರಿಗಾಗಿ ಇವರು ತಮ್ಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡ್ತಾರೆ. ಹೀಗಾಗಿ ಮನರಂಜನೆ ವಿಶಯಗಳಲ್ಲಿ ಪರಬಾಶೆಗಳಿಗೆ ಮಾರುಕಟ್ಟೆ ನಿರ್ಮಿಸಿ ಕೊಡುವುದೆಂದರೆ ತಮ್ಮ ಅನ್ನಕ್ಕೆ ಕುತ್ತು ತಂದುಕೊಳ್ಳುವುದೇ ಎಂದರ್ಥ. ಇದನ್ನು ನಮ್ಮ ಮಾದ್ಯಮದವರು ಅರಿತುಕೊಳ್ಳಬೇಕಿದೆ. ಈಗಿರುವ ಮನೆಯಲ್ಲಿ ತಾವೂ ಇದ್ದೇವೆ ಎಂಬುದನ್ನು ಮರೆತು ಮನೆಗೆ ಮಾರಿ ಪಕ್ಕದ್ಮನೆಗೆ ಉಪಕಾರಿ ಎಂಬಂತೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ.  ಮಾದ್ಯಮವೂ ಸೇರಿದಂತೆ ಕರ್ನಾಟಕದ ಪ್ರತಿಯೊಂದು ಕ್ಷೇತ್ರವೂ ನಿಂತಿರುವುದು ಕನ್ನಡ ಎಂಬ ಬಾಶಾ ತಳಹದಿ ಮೇಲೆಯೇ ಎಂಬುದನ್ನು ಮನಗಾಣಬೇಕಿದೆ. ಆದ್ದರಿಂದ ಮಾದ್ಯಮದವರು ತಮ್ಮ ಒಳಿತಿಗಾಗಿ ಮತ್ತು ಕನ್ನಡಿಗರ ಅನುಕೂಲಕ್ಕಾಗಿ, ಆ ತಳಹದಿಯನ್ನು ಅಲುಗಾಡಿಸುವ ಕಾರ್ಯ ಕೈಬಿಟ್ಟು, ಅದನ್ನು ಗಟ್ಟಿಪಡಿಸುವ ಅಂದರೆ, ಕರ್ನಾಟಕದಲ್ಲಿ ಎಲ್ಲ ಮನರಂಜನೆ ಕನ್ನಡದಲ್ಲೇ ದಕ್ಕಿಸಿಕೊಡುವ ಆ ಮೂಲಕ ಕನ್ನಡ ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸುವ ಕಡೆಗೆ ಗಮನ ಹರಿಸಬೇಕಿದೆ.