Tuesday 17 May 2011

ನವರಸಪುರ ಉತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ.!



ಕಳೆದ
ಕೆಲವು ವರುಶಗಳಿಂದ ಸ್ಥಗಿತಗೊಂಡಿದ್ದ ನವರಸಪುರ ಉತ್ಸವ ಮತ್ತೆ ಈ ವರುಶ ಹಮ್ಮಿಕೊಳ್ಳಲಾಗಿದ್ದು ಸಂತೋಶದ ವಿಶಯ ಮತ್ತು ಅದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ವಿಜಾಪುರದ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ, ಪರಂಪರೆಯನ್ನು ಹೊರಜಗತ್ತಿಗೆ ತೋರಿಸುವಲ್ಲಿ, ಆ ಮೂಲಕ ನಾಡಿನ ಜನರಲ್ಲಿ ತಮ್ಮೂರಿನ ಬಗ್ಗೆ ಹೆಮ್ಮೆ ಮೂಡಿ, ನಾಡು-ನುಡಿಯ ಚೌಕಟ್ಟಿನಲ್ಲಿ ಅವರನ್ನು ಒಗ್ಗೂಡಿಸಲು ಇಂತಹ ಉತ್ಸವಗಳು ಸಹಕಾರಿಯಾಗುತ್ತವೆ. ಈ ಬಾಗದ ಸ್ಥಳೀಯ ಕಲಾವಿದರಿಗೂ ತಮ್ಮ ಪ್ರತಿಬೆಯನ್ನು ಪರಿಚಯಿಸಲು ಇದೊಂದು ಒಳ್ಳೆಯ ವೇದಿಕೆ.
ಈ ಉತ್ಸವವನ್ನು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ಸಹಯೋಗದಲ್ಲಿ ನಡೆಸಲಾಗುತ್ತಿರುವುದರಿಂದ ಉತ್ಸವದಲ್ಲಿ ನಮ್ಮ ಕನ್ನಡ ಮತ್ತು ಸಂಸ್ಕೃತಿ, ಇತಿಹಾಸ, ಪರಂಪರೆಗೆ ಸಂಬಂದಿಸಿದ ಕಾರ್ಯಕ್ರಮಗಳಿಗೆ ಮಾತ್ರ ಸ್ಥಾನ ಇರಬೇಕಾಗಿರುವುದು ಸ್ವಾಬಾವಿಕ. ಉತ್ಸವದಲ್ಲಿ ವೈಬವೀಕರಣಕ್ಕಿಂತ ಹೆಚ್ಚಾಗಿ ನಮ್ಮತನ ಕಾಣಿಸಬೇಕು ಮತ್ತು ಹೊರಜಗತ್ತಿಗೆ ಪರಿಚಯಿಸಬೇಕು. ಈಗ ಸಿದ್ದಪಡಿಸಲಾಗಿರುವ ಕಾರ್ಯಕ್ರಮಗಳ ಪಟ್ಟಿಯಲ್ಲಿ ಅವಿಬಜಿತ ವಿಜಾಪುರ ಜಿಲ್ಲೆಯ ಮತ್ತು ಸುತ್ತ ಮುತ್ತಲಿನ ಬೆಳಗಾವಿ, ದಾರವಾಡ, ರಾಯಚೂರು ಜಿಲ್ಲೆಯ ಅನೇಕ ಕಲಾವಿದರಿಗೆ ಇಲ್ಲಿ ವೇದಿಕೆ ಕಲ್ಪಿಸಿದ್ದು ಸಂತೋಶದ ವಿಶಯ. ಇದರ ಮದ್ಯೆ ಕೊಂಚ ಅಸಮಾದಾನ ಆಗಿದ್ದು, ನವರಸಪುರ ಉತ್ಸವಕ್ಕೆ ಅಥವಾ ವಿಜಾಪುರಕ್ಕೆ ಅಥವಾ ಕರ್ನಾಟಕಕ್ಕೆ ಸಂಬಂದವಿರದ ಅನೇಕ ಕಾರ್ಯಕ್ರಮಗಳಿಗೆ ಇಲ್ಲಿ ಜಾಗ ಕಲ್ಪಿಸಿದ್ದು.
ಭುವನೇಶ್ವರದ ಓರಿಸ್ಸಾ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ದೆಹಲಿಯ ಕವ್ವಾಲಿ ತಂಡ, ಬಾಂಬೆಯ ಗೋಲ್ಡನ್ ಮೆಲೋಡಿಸ್ ತಂಡ ಹೀಗೆ ಇತ್ಯಾದಿ ಹೊರಗಿನ ಕಲಾವಿದರಿಗೆ ಮನ್ನಣೆ ನೀಡಲಾಗಿದೆ. ಇವರು ಕೊಡುವ ಕಾರ್ಯಕ್ರಮಕ್ಕೂ ಮತ್ತು ಈ ಉತ್ಸವವನ್ನು ಆಯೋಜಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದ್ದೇಶಕ್ಕೂ ಹೋಲಿಕೆಯೇ ಇಲ್ಲ. ಭುವನೇಶ್ವರ ಮತ್ತು ಮಹಾರಾಷ್ಟ್ರದ ನೃತ್ಯದ ಬದಲಾಗಿ ನಮ್ಮಲ್ಲೇ ಹಲವರಿಗೆ ಪರಿಚಯವಿರದ ಕರ್ನಾಟಕದ ಅನೇಕ ನೃತ್ಯ ಕಲೆಗಳನ್ನು ಪರಿಚಯಿಸುವ ಕೆಲಸ ಮಾಡಬಹುದು. ಉದಾ: ನಂದಿ ಕುಣಿತ, ಕಂಸಾಳೆ ಕುಣಿತ, ಡೊಳ್ಳು ಕುಣಿತ, ಹಾಲಕ್ಕಿ ಕುಣಿತ, ತುಳು ಜಾನಪದ ನೃತ್ಯ ಹೀಗೆ ಹಲವು ಬಗೆಯ ನೃತ್ಯ ಕಲೆಗಳ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಆಯೋಜಿಸಬಹುದು. ಇನ್ನು ಸಂಗೀತದ ಕಾರ್ಯಕ್ರಮ ನೀಡುವ ಆರ್ಕೆಸ್ಟ್ರಾ (ಸಂಗೀತ ತಂಡ) ಗಳಿಗೆ ಕರ್ನಾಟಕದಲ್ಲಿ ಏನು ಬರ. ಪ್ರತಿ ಜಿಲ್ಲೆಯಲ್ಲಿ ಅಂತಹ ತಂಡಗಳನ್ನು ಕಾಣಬಹುದು. ಹೀಗಿರುವಾಗ ಬಾಂಬೆಯಿಂದ ಗೋಲ್ಡನ್ ಮೆಲೋಡಿಸ್ ಎಂಬ ಆರ್ಕೆಸ್ಟ್ರಾ ಕರೆಯಿಸುವ ಅವಶ್ಯಕತೆ ಏನಿತ್ತು. ಅವರಿಂದ ಹಿಂದಿ ಹಾಡುಗಳೇ ಕೇಳುತ್ತವೆ ಹೊರತು ಕನ್ನಡದ ಹಾಡುಗಳು ಕೇಳುವುದಿಲ್ಲ. ಕರ್ನಾಟಕದಲ್ಲಿ ಈ ತರದ ಹಿಂದಿ ಮನರಂಜನೆಗೆ ಈ ಉತ್ಸವವನ್ನು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಬಳಸಿಕೊಳ್ಳುವುದು ಅಷ್ಟೊಂದು ಸಮಂಜಸವಲ್ಲ.
ಇತ್ತೀಚಿಗೆ ನಡೆದ ಉತ್ಸವಗಳನ್ನು ನೋಡಿದರೆ, ಹೊರಗಿನ ಕಲಾವಿದರನ್ನು ಕರೆಸಿದರೆ ಉತ್ಸವದ ಮೆರುಗು ಮತ್ತು ವೈಭವ ಹೆಚ್ಚಬಹುದು ಎಂಬ ತಪ್ಪುಕಲ್ಪನೆಯಲ್ಲಿ ಉತ್ಸವಗಳ ಆಯೋಜಕರು ಇದ್ದಂಗಿದೆ. ಈ ವರುಶದಲ್ಲಿ ನಡೆದ ಗುಲ್ಬರ್ಗಾ ಉತ್ಸವ, ಬೀದರ
ತ್ಸವಗಳಲ್ಲಿ ಇದು ಸಾಬೀತಾಗಿದೆ. ಇದರಿಂದಾಗುವ ಕೆಲವು ಹಿನ್ನಡೆಗಳನ್ನು ಗಮನಿಸಬೇಕಾಗಿದೆ.
* ಹೊರಗಿನ ಕಲಾವಿದರನ್ನು ಕರೆಸುವುದರಿಂದ ಉತ್ಸವದ ಮೂಲಕ ನಮ್ಮ ಕಲಾವಿದರಿಗೆ ಸಿಗಬಹುದಾದ ಅವಕಾಶ ತಪ್ಪಿ ಹೋಗುತ್ತದೆ.
* ಉತ್ಸವದಲ್ಲಿ ಹಿಂದಿ ಮನರಂಜನೆಗೆ ಒತ್ತು ಕೊಡುವುದರಿಂದ ಕನ್ನಡ ಮನರಂಜನೆಯ ಯೋಗ್ಯತೆಯನ್ನು ಪ್ರಶ್ನಿಸಿದಂತಾಗುತ್ತದೆ ಮತ್ತು ಸರಕಾರವೇ ಹಿಂದಿಗೆ ಮಾರುಕಟ್ಟೆ ಕಲ್ಪಿಸಿಕೊಟ್ಟಂತಾಗುತ್ತದೆ.

* ಕನ್ನಡೇತರ ಕಾರ್ಯಕ್ರಮಗಳಿಂದ ಅಲ್ಲಿಯ ಜನರು ಕನ್ನಡ ಮನರಂಜನೆಯಿಂದ ಇನ್ನಷ್ಟು ದೂರ ಸರಿಯುತ್ತಾರೆ ಮತ್ತು ಅವರಲ್ಲಿ ಕೀಳರಿಮೆ ಬೆಳೆಯುತ್ತದೆ.
* ಕಲಾವಿದರು ಹೊರಗಿನವರು ಮತ್ತು ಕಾರ್ಯಕ್ರಮಗಳು ಕನ್ನಡೇತರಗಳಾದರೆ ಕನ್ನಡ ಮತ್ತು ಸಂಸ್ಕೃತಿಯ ಉತ್ಸವ ನಡೆಸುವ ಮೂಲ ಉದ್ದೇಶಕ್ಕೆ ಹಾನಿ ಆಗುತ್ತದೆ.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿ ದೇಶ, ವಿದೇಶದ ಕಲಾವಿದರು, ಆಸಕ್ತರು, ಅತಿಥಿಗಳು ಬರಲಿ ತಪ್ಪೇನಿಲ್ಲ.! ಆದರೆ ಉತ್ಸವದಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಬಾಗವಹಿಸುವ ಕಲಾವಿದರು ನಮ್ಮವರಾಗಿರಬೇಕು. ಕನ್ನಡ ಮತ್ತು ಸಂಸ್ಕೃತಿ ಪ್ರೋತ್ಸಾಹಿಸಲು ಕೈಗೊಳ್ಳುವ ಇಂತ ಉತ್ಸವಗಳಿಗೆ ನೀಡುವ ಸರಕಾರದ ಹಣ, ಹಿಂದಿ ಮನರಂಜನೆಗೆ ಅಥವಾ ಹೊರಗಿನ ಕಲಾವಿದರ ಕಾರ್ಯಕ್ರಮಗಳಿಗೆ ಉಪಯೋಗಿಸಿದರೆ ಯೋಜನೆಗಳಲ್ಲಾಗುವ ಹಣ ದುರ್ಬಳಕೆ ಅವ್ಯವಹಾರಕ್ಕೂ ಇದಕ್ಕೂ ವ್ಯತ್ಯಾಸವಿಲ್ಲದಂತಾಗುತ್ತದೆ.

ಇನ್ನು ನವರಸಪುರದ/ವಿಜಾಪುರದ ಇತಿಹಾಸಕ್ಕೆ ಸಂಬಂದಪಟ್ಟಂತೆ ಸಾಕ್ಷ್ಯಚಿತ್ರದ ಮೂಲಕ ಮಾಹಿತಿ ಕೊಡಬೇಕು. ಆದಿಲ್ ಶಾಹಿಗಳ ಆಳ್ವಿಕೆ ಬಗ್ಗೆ ಮತ್ತು ಅವರ ಕಾಲದಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಸೇರಿದಂತೆ ನವರಸ ಕಲೆಗಳ ತಾಣವಾಗಿ ಬೆಳೆದ ಆಗಿನ ವಿಜಾಪುರದ ಬಗ್ಗೆ ಉತ್ಸವದಲ್ಲಿ ಬೆಳಕು ಚೆಲ್ಲಬೇಕು. ಇಲ್ಲಿನ ಐತಿಹಾಸಿಕ ಕಟ್ಟಡಗಳ ಹಿನ್ನೆಲೆಯನ್ನು ಪರಿಚಯಿಸುವ ಕೆಲಸ ಆಗಬೇಕು.
ಒಟ್ಟಾರೆ ಈ ಉತ್ಸವದಲ್ಲಿ ವಿಜಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಮಾತ್ರ ಒತ್ತು ಕೊಡುವ ಮೂಲಕ
ನವರಸಪುರ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಿ ಎಂಬುದು ಕನ್ನಡಿಗರ ಆಶಯವಾಗಿದೆ.