Thursday 24 December 2009

ಶೇಷಾದ್ರಿಪುರ ಓಕೆ, ಅದರ ಮುಂದೆ ಅಂ ಯಾಕೆ?


ಮಲ್ಲೇಶ್ವರಂ, ಶೇಷಾದ್ರಿಪುರಂ ಇವು ಬದಲಾವಣೆಯಾಗಿರುವಂತಿರುವ ಹೆಸರುಗಳು. ಓಕಳೀಪುರಂ, ಕೋರಮಂಗಲಂ, ಶ್ರೀರಾಮಪುರಂ ಇವು ಬದಲಾವಣೆಯಾಗುತ್ತಿರುವ ಹೆಸರುಗಳು. ವಿಜಯನಗರಂ, ರಾಜಾಜಿನಗರಂ ಇವು ಬದಲಾಗಬಹುದಾದ ಹೆಸರುಗಳು. ಮುಂದೆ ಊಹೆ ಮಾಡಿಕೊಂಡರೆ ಸಾಕಷ್ಟು ಹೆಸರುಗಳು ಕಾಣುತ್ತವೆ.
ಹೆಸರಲ್ಲೇನಿದೆ....? ಶೇಷಾದ್ರಿಪುರ ಅನ್ನೊ ಬದಲು ಶೇಷಾದ್ರಿಪುರಂ ಅಂದರೆ ಏನ್ ತಪ್ಪು, ಅದರಲ್ಲೇನು ಮಹಾ ತಪ್ಪಿದೆ ಅಂಥ ಕೇಳೊ ವಿಟ್ಯಾಮಿನ್ ಎನ್ ( ನಮ್ಮತನ) ಕಡಿಮೆಯಿರೋ ನಮ್ಮ ಜನರು ಸಾಕಷ್ಟಿದ್ದಾರೆ. ಆದರೆ ಇದು ನಮ್ಮತನವನ್ನು ಮಾಯ ಮಾಡುವ, ಕನ್ನಡ ಅನುಷ್ಟಾನವನ್ನು ನಿರ್ಲಕ್ಷಿಸುವ ಒಂದು ಸಣ್ಣ ಹೆಜ್ಜೆ ಎಂದು ಕನ್ನಡದ ಕಣ್ಣಿನಿಂದ ನೋಡಿದಾಗ ಮಾತ್ರ ಅವರಿಗೆ ಅರ್ಥವಾಗುತ್ತದೆ. ಇದರಲ್ಲಿ ಬರೀ ಹೆಸರನ್ನಷ್ಟೆ ನೋಡದೆ ನಮ್ಮ ಸಂಸ್ಕೃತಿ, ಒಗ್ಗಟ್ಟು, ನುಡಿಯ ಹಿರಿಮೆ, ಸ್ವಾಭಿಮಾನ ಎಲ್ಲವನ್ನು ನೋಡಬೇಕು ಅಂಥ. ಶೇಷಾದ್ರಿಪುರಂಗೆ ಹೋಗಿ ಬರ್ತಿನಿ ಎಂಬ ವಾಕ್ಯಕ್ಕಿಂತ ಶೇಷಾದ್ರಿಪುರಕ್ಕೆ ಹೋಗಿ ಬರ್ತಿನಿ ಅನ್ನೊ ವಾಕ್ಯದಲ್ಲಿ ಕನ್ನಡ ಎದ್ದು ಕಾಣುತ್ತದೆ. ನಮ್ಮ ನುಡಿಯ ದರ್ಶನವಾಗುತ್ತದೆ.
ಬ್ರಿಟಿಷರು ತಾವು ಹೋದ ಕಡೆಯಲ್ಲೆಲ್ಲ ಊರುಗಳ ಹೆಸರುಗಳನ್ನು ತಮ್ಮ ನಾಲಿಗೆಗೆ ಹೊರಳೊ ಹಾಗೆ ಮಾರ್ಪಾಡಿಸಿಕೊಂಡಿದ್ದರು. ಅವರು ನಮ್ಮ ದೇಶ ಬಿಟ್ಟು ೬೨ ವರ್ಷಗಳಾದರೂ ಎಷ್ಟೋ ಕಡೆ ಅದೇ ಹೆಸರುಗಳು ಮುಂದುವರೆದಿರುವುದನ್ನು ಕಾಣಬಹುದು. ಹೀಗಿರುವಾಗ, ಇದೇ ರೀತಿ ಯಾರೋ ಕೆಲವರ ನಾಲಿಗೆಯ ಹಿತಕ್ಕೆ ಕೋಟಿ ಕೋಟಿ ನಾಲಿಗೆಗಳು ಹೆಸರನ್ನು ತಿರುಚಿ ಹೇಳುವುದು ಎಷ್ಟು ಸೂಕ್ತ. ಈಗ ವಿಜಯನಗರ ಅಂಥ ಇರೋದನ್ನು ವಿಜಯನಗರಂ ಅಂಥ ಯಾರೋ ಕೆಲವು ಜನ "ಅಂ" ಪ್ರೀಯರು ಕರೀತಾರೆ ಅಂಥ ನಾವು ಅದನ್ನೇ ಅನ್ನೋಕೆ, ಬರಿಯೋಕೆ ಶುರು ಮಾಡಿದ್ರೆ,, ನಾಳೆ ನಮ್ ಉತ್ತರದ ಮಹಾಶಯರು ಬಂದಬಿಟ್ಟು ವಿಜಯನಗರಂ ಅಂಥ ನಮಗೆ ಅನ್ನೋಕೆ ಬರೋದಿಲ್ಲ, ನಾವು ಅದನ್ನು ಭಿಜಯನಗರಂ ಅಂಥ ಕರೀತಿವಿ ಅಂದ್ರೆ, ನಾವು ಹಂಗೆ ಅನ್ನೋಕೆ ಆಗುತ್ತಾ...? ಎಲ್ಲರೂ ಅನ್ನೋದನ್ನೇ ನಾವು ಅನ್ನೋಕೆ, ನಮ್ಮ ನಾಲಿಗೆಗೆ ನಿಯತ್ತೇ ಇಲ್ಲವೇ...? ಸುಂದರವಾಗಿದ್ದ ವಿಜಾಪುರವನ್ನು ಬಿಜಾಪುರ ಅಂಥ ಮಾಡಿದ್ದನ್ನೇ ಇನ್ನೂ ಸರಿ ಮಾಡಕ್ಕಾಗ್ತಿಲ್ಲ. ಇನ್ನೂ ಹಾಗೆ ಎರಡು ಹೆಸರುಗಳ ಮದ್ಯೆ ಗೋಳಾಡ್ತಿದೆ.
ಈಗ ಮಲ್ಲೇಶ್ವರ, ಶೇಷಾದ್ರಿಪುರ ಅಂಥ ಬರೆದಿರೋ ಫಲಕಗಳನ್ನು ನಾವು ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಕಡೆ ನೋಡಬಹುದು. ಬಹುತೇಕ ಕಡೆ ಮುಂದೆ "ಅಂ" ಹಚ್ಚಿ ಬರೆದಿರುವುದನ್ನು ಕಾಣುತ್ತೇವೆ. ಅದೇ ರೀತಿ ಓಕಳೀಪುರ, ಶ್ರೀ ರಾಮಪುರ ಅಂಥ ಕೆಲವು ಕಡೆ ನೋಡಬಹುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ೫-೧೦ ವರ್ಷಗಳ ನಂತರ ಈಗಿರುವ ಹೆಸರುಗಳೂ ಬದಲಾಗುವ ವಾತಾವರಣ ಅಗೋಚರವಾಗಿ ನಿರ್ಮಾಣವಾಗುತ್ತಿದೆ. ದೇವಾಲಯದ ಪ್ರಸಾದಕ್ಕೂ ಇದು ಬಿಟ್ಟಿಲ್ಲ. ಕನ್ನಡದಲ್ಲಿ "ಪ್ರಸಾದ" ಅಂಥ ಇರುವಂಥದ್ದು ಆಂಗ್ಲ ಭಾಶೆಯಲ್ಲಿ ಪ್ರಸಾದಂ ಹೆಂಗ್ ಆಗುತ್ತೆ ಅಂಥ ಆ ದೇವಾಲಯದ ದೇವರಿಗೂ ಯಕ್ಷ ಪ್ರಶ್ನೆಯಾಗಿದೆ. ಲಾಲ್ ಬಾಗಿನ ಮುಖ್ಯ ದ್ವಾರದಲ್ಲಿ ಕಾಣುವ ಫಲಕದಲ್ಲಿ ತೋಟ ಇರುವ ಬದಲು "ತೋಟಂ" ಹೆಂಗ್ ಬಂತು ಅನ್ನೋದು ಅಲ್ಲಿಯ ಹೂಗಿಡಗಳಿಗೂ ತಿಳಿಯದಾಗಿದೆ. ಹೀಗೆ ಮುಂದುವರೆದರೆ ಈಗಿರುವ ವಿಜಯನಗರ ಮುಂದೆ ವಿಜಯನಗರಂ ಅಂಥ, ಈಗಿರುವ ಜಾಲಹಳ್ಳಿ ಮುಂದೆ ಜಾಲಪಲ್ಲಿ ಅಂಥ, ಈಗಿರುವ ಬನ್ನೇರುಘಟ್ಟ ಮುಂದೆ ಬನ್ನೇರುಗುಟ್ಟ ಅಂಥ ಆಗಲು ಬಹಳ ವರ್ಷ ಕಾಯಬೇಕಿಲ್ಲ. ಪೋಕಿರಿಯನ್ನು ಚಿತ್ರಮಂದಿರದಲ್ಲಿ ನೋಡಿ, ವಂಶಿಯನ್ನು ಟಿವಿ ಚಾನಲನಲ್ಲಿ ಹಾಕಿದಾಗ ಕೂಡ ನೋಡದೇ ಇರುವವರಿಗೆ, ನಿಯತ್ತಿಲ್ಲದ ನಾಲಿಗೆಗಳಿಗೆ ಹೇಗೆ ತಿಳಿಯೊಕ್ ಸಾದ್ಯ. ನಿಯತ್ತಿರುವ ನಾಲಿಗೆಗಳು ಈ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಕೊನೆ ಗುಟುಕಂ: ಹೆಸರಲ್ಲೇನಿದೆ...? ಅಂಥ ಹೇಳುವವರು ಹೆಸರಲ್ಲೇ ಎಲ್ಲ ಇದೆ ಅಂಥ ಹೇಳುವವರ ಮತ್ತು ಪ್ರತಿಪಾದಿಸುವವರ ಜೊತೆ ಸಹಕರಿಸಬೇಕಲ್ಲವೇ....?

ವಿಟ್ಯಾಮಿನ್ ಎನ್ (ನಮ್ಮತನ) ಕೊರತೆಯಿಂದ ಬರುವ "ಅಂ ಜ್ವರ" ಎಂಬ ಹೊಸ ಸಾಂಕ್ರಾಮಿಕ ರೋಗ.......

ನಮಸ್ಕಾರ ಗೆಳೆಯರೆ......

ಕೋಳಿ ಜ್ವರ, ಡೆಂಗ್ಯೂ ಜ್ವರ, ಹಂದಿ ಜ್ವರ, ಮಂದಿ ಜ್ವರ ಈ ರೀತಿ ಅನೇಕ ಮಾರಣಾಂತಿಕ, ಸಾಂಕ್ರಾಮಿಕ ಕಾಯಿಲೆಗಳನ್ನು ಕಂಡ ಬೆಂಗಳೂರಿಗೆ ಇದೀಗ ಬಹು ದಿನಗಳಿಂದ ವ್ಯವಸ್ಥಿತವಾಗಿ, ನಿಧಾನವಾಗಿ, ಅಗೋಚರವಾಗಿ ಹರಡುತ್ತಿರುವ ಹೊಸ ಸಾಂಕ್ರಾಮಿಕ ರೋಗದ ಪತ್ತೆಯಾಗಿದೆ. ಬನ್ರಿ ಅದೇನು ಅಂಥ,, ಒಂದ್ ಸ್ವಲ್ಪ ನಮ್ ಕಣ್ಣನ್ನು ಅದರ ಮೇಲೆ ಹಾಯಿಸೋಣ.

ರೋಗದ ಸಂಕ್ಷಿಪ್ತ ಪರಿಚಯ: ಈ ರೋಗದ ಹೆಸರು " ಅಂ ಜ್ವರ ". ಇದು ಆರೋಗ್ಯ ಇಲಾಖೆಗೆ ಸಂಬಂಧಪಡದೇ ಇರುವ ಒಂದು ಸಾಂಕ್ರಾಮಿಕ ರೋಗ. ಇದು ಸಾರ್ವಜನಿಕ ಇಲಾಖೆಗೆ ಸಂಬಂಧವಿರುವ ರೋಗ. ಇದು ಹೆಸರುಗಳಿಗೆ, ವಿಶೇಷವಾಗಿ ಬೆಂಗಳೂರಿನ ಕೆಲವು ಬಡಾವಣೆಗಳ ಹೆಸರುಗಳಿಗೆ ಸದ್ಯದ ಮಟ್ಟಿಗೆ ಮೀಸಲಿರುವ ರೋಗ. ಇದು ಅಗೋಚರವಾಗಿ ಹರಡುತ್ತಿರುವ ಒಂದು ರೋಗವಾಗಿದೆ. ಕನ್ನಡದ ಕಣ್ಣಿನಿಂದ ನೋಡಿದಾಗ ಮಾತ್ರ ಈ ರೋಗ ಕಾಣಸಿಗುವುದು ಇದರ ವಿಶೇಷತೆ.

ರೋಗದ ಗುಣ ಲಕ್ಷಣಗಳು: ಈ ರೋಗದ ಗುಣ ಲಕ್ಷಣಗಳನ್ನು ನಿಖರವಾಗಿ ಹೇಳಲು ಅಸಾದ್ಯ. ಏಕೆಂದರೆ ಅಷ್ಟೊಂದು ವ್ಯವಸ್ಥಿತವಾಗಿ, ಅಗೋಚರವಾಗಿ ಹರಡುತ್ತದೆ. ಸಂಶೋದನಾ ನಿರತ ಕೆಲವು ತಜ್ನ ವೈದ್ಯರ ಪ್ರಕಾರ, "ಕೆಲವೇ ಕೆಲವು ರೋಗಜಂತುಗಳ" ಸ್ವಾರ್ಥದ ಪರಿಣಾಮದಿಂದ ಹುಟ್ಟುವ ಈ ರೋಗ ಮುಂದೆ ವಿಟ್ಯಾಮಿನ್ ಎನ್ ( ನಮ್ಮತನ) ಕಡಿಮೆಯಿರುವ " ಅಸಂಖ್ಯಾತ ಕ್ರಿಮಿಕೀಟಗಳ" ಅರಿವಿನ ಕೊರತೆಯಿಂದ ಮತ್ತು ವಿಟ್ಯಾಮಿನ್ ಎನ್ ಇರುವ "ಹಲವು ಸೂಕ್ಷಜೀವಿಗಳ" ಅಸಹಾಯಕತೆಯಿಂದ ಈ ರೋಗ ಅಚ್ಚುಕಟ್ಟಾಗಿ ಈಗ ಬೆಂಗಳೂರಿನಲ್ಲಿ ಹರಡುತ್ತಿದೆ.

ರೋಗ ಹರಡುವಿಕೆ: ಮೊದ ಮೊದಲು ತೆರೆಮರೆಯಲ್ಲಿ ಕಂಡುಬರುವ ಈ ರೋಗವು ನಿಧಾನ ಗತಿಯಲ್ಲಿ "ಕೆಲವೇ ಕೆಲವು ರೋಗಜಂತುಗಳ" ಸಹಾಯದಿಂದ ಕಾಡ್ಗಿಚ್ಚಿನಂತೆ ಹರಡಿ ಮುಖ್ಯವಾಹಿನಿಗೆ ಬಂದು ಗೋಚರವಾಗುತ್ತದೆ. ಈ ರೋಗ ಹರಡುವುದನ್ನು ತಡೆಯುವುದು ಎಷ್ಟು ಮುಖ್ಯ ಅಂದ್ರೆ,, ಕೇವಲ ರೋಗ ಜಂತುಗಳು ಹೆಚ್ಚಾಗಿರುವ ಕೆಲವು ಪ್ರದೇಶಕ್ಕೆ ಸೀಮಿತವಾಗಿರುವ ಈ ರೋಗ ಮುಂದೆ ರಾಜ್ಯದಾದ್ಯಂತ ವಿಸ್ತಾರವಾಗುವ ಹಂತ ತಲುಪುಬಹುದು. ಇನ್ನೂ ವಿಚಿತ್ರ ಅಂದ್ರೆ ಈ ರೋಗ ವ್ಯಾಪಕವಾಗಿ ಹರಡಿದರೆ ಇದು ಕೆಲವು ಹೊಸ ಸಾಂಕ್ರಾಮಿಕ ರೋಗಗಳಾದ ಪಲ್ಲಿ, ಗುಟ್ಟ ಎಂಬವುಗಳನ್ನು ಹುಟ್ಟು ಹಾಕುತ್ತದೆ. ಇದರಿಂದ ಕೇವಲ ಪುರ ಮತ್ತು ನಗರ ಪ್ರದೇಶಗಳಿಗೆ ಇದ್ದ ಈ ರೋಗ ಮುಂದೆ ನಮ್ಮ ಹಳ್ಳಿಗಳಿಗೆ ವಿಸ್ತರಿಸಿ ಜಾಲಹಳ್ಳಿಯನ್ನು ಜಾಲಪಲ್ಲಿಯನ್ನಾಗಿ, ಬೊಮ್ಮನಹಳ್ಳಿಯನ್ನು ಬೊಮ್ಮನಪಲ್ಲಿಯನ್ನಾಗಿ, ಬನ್ನೇರುಘಟ್ಟವನ್ನು ಬನ್ನೇರುಗುಟ್ಟವನ್ನಾಗಿ ಹೀಗೆ ಹಳ್ಳಿಗಳ ಮತ್ತು ಗುಡ್ಡಗಳ ಸ್ವಾಭಿಮಾನದ ಆರೋಗ್ಯವನ್ನೇ ಹದಗೆಡಿಸುತ್ತದೆ. ಬಾಗೆಪಲ್ಲಿಗೆ ಹಿಡಿದಿರುವ ರೋಗಾನೇ ಭಾಗ್ಯನಗರವಾದರೂ ಇನ್ನೂ ಸರಿಯಾಗಿ ಬಿಟ್ಟಿಲ್ಲ, ಆ ತಾಲೂಕಿನಲ್ಲಿರುವ ಎಷ್ಟೊಂದು ಹಳ್ಳಿಗಳು ಇನ್ನೂ "ಪಲ್ಲಿ ಜ್ವರ" ದಿಂದ ಬಳಲುತ್ತಿವೆ. ಹೀಗಿರುವಾಗ ಬಹಳಷ್ಟು ಹಳ್ಳಿಗಳು ಈ ರೋಗಕ್ಕೆ ತುತ್ತಾದ್ರೆ ಸಾರ್ವಜನಿಕ ಇಲಾಖೆ ಒತ್ತಡಕ್ಕೆ ಸಿಲುಕುತ್ತವೆ. ಈಗಿಗ ದೇವಾಲಯಗಳಿಗೂ, ಅಲ್ಲಿನ ಪ್ರಸಾದಕ್ಕೂ ಈ ರೋಗ ವಿಸ್ತರಿಸಿದೆ.

ರೋಗಕ್ಕೆ ಚಿಕಿತ್ಸೆಗಳು: ಈ ರೋಗಕ್ಕೆ ಮೂರು ತರಹದ ಚಿಕಿತ್ಸೆಗಳನ್ನು ವೈದ್ಯರು ಕಂಡು ಹಿಡಿದಿದ್ದಾರೆ. ಮೊದಲನೆಯದಾಗಿ ಈ ರೋಗಕ್ಕೆ ಮುಖ್ಯ ಕಾರಣವಾಗಿರುವ "ಕೆಲವೇ ಕೆಲವು ರೋಗಜಂತುಗಳನ್ನು" ಹಿಡಿತದಲ್ಲಿಟ್ಟು, ರೋಗ ಹುಟ್ಟುವಿಕೆಯಲ್ಲಿ ಸಕ್ರೀಯಗೊಳ್ಳದಂತೆ ನೋಡಿಕೊಳ್ಳಬೇಕು. ಎರಡನೆಯದಾಗಿ ಈ ರೋಗ ಬೆಳೆಯಲು ಕಾರಣವಾಗುವ ವಿಟ್ಯಾಮಿನ್ ಎನ್ ಕಡಿಮೆಯಿರುವ "ಅಸಂಖ್ಯಾತ ಕ್ರಿಮಿಕೀಟಗಳಿಗೆ" ವಿಟ್ಯಾಮಿನ್ ಎನ್ ಒದಗಿಸುವ ಅಥವಾ ಹೆಚ್ಚಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು. ಮತ್ತು ಮೂರನೆಯದಾಗಿ ಸಾಕಷ್ಟು ವಿಟ್ಯಾಮಿನ್ ಎನ್ ಇದ್ದರೂ ರೋಗ ತಡೆಯುವಿಕೆಯ ಸಾಮರ್ಥ್ಯದ ಕೊರತೆಯಿರುವ "ಹಲವು ಸೂಕ್ಷಜೀವಿಗಳಿಗೆ" ರೋಗ ತಡೆಯುವಿಕೆ ಬಗ್ಗೆ ಮಾರ್ಗದರ್ಶನ ಮಾಡಬೇಕು.

ಕೊನೆ ಔಷದಿ: ಭಾರತೀಯ ವಿಜ್ನಾನ ಸಂಸ್ಥೆ. ಬೆಂಗಳೂರು. ವಿಜ್ನಾನಿಗಳ ಸಂಶೋಧನೆ ಪ್ರಕಾರ ವಿಟ್ಯಾಮಿನ್ ಎನ್ (ನಮ್ಮತನ) ಹೆಚ್ಚಿಸಿಕೊಳ್ಳುವುದರಿಂದ, ನಮ್ಮ ಕಣ್ಣುಗಳನ್ನು ಕನ್ನಡದ ಕಣ್ಣುಗಳಾಗಿ ಉಚಿತವಾಗಿ ಬದಲಾಯಿಸಿಕೊಳ್ಳಬಹುದು. ಮತ್ತು ಸಾರ್ವಜನಿಕ ಇಲಾಖೆಗೆ ಸಂಬಂಧಪಟ್ಟ ಬಹುತೇಕ ಕಾಯಿಲೆಗಳನ್ನು ತಡೆಗಟ್ಟಬಹುದು.