Monday 1 November 2010

ಗ್ರಾಹಕನ ಹಕ್ಕು ಚಲಾಯಿಸಿ, ಇಲ್ಲ "ದಿವಾಳಿ" ಆಚರಿಸಲು ಸಜ್ಜಾಗಿ..!


ಗೆಳೆಯರೆ,
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.

ಇಲ್ಲಿ ಲಗತ್ತಿಸಿರುವ ಚಿತ್ರದಲ್ಲಿ "ಶುಭೋ ಬಿಜೊಯ" ಅಂಥ ಅಚ್ಚ ಬೆಂಗಾಲಿಯನ್ನು ಇಂಗ್ಲೀಷ ಲಿಪಿಯಲ್ಲಿ ಬರೆದು ಶುಭಾಶಯ ಕೋರಲಾಗಿದೆ. "ಶುಭೋ ಬಿಜೊಯ" ಅನ್ನೊದು ಬೆಂಗಾಲಿಯಲ್ಲಿ ’ದಸರಾ ಹಬ್ಬ’ ಇದ್ದ ಹಾಗೆ. ಕೆಲವು ದಿನಗಳ ಹಿಂದೆ ಈ ಚಿತ್ರ ಒಂದು ಮಾಲ್ ನ ಸ್ಕ್ರೀನ್ ಮೇಲೆ ಕಂಡುಬಂತು. ಇದು ಕಂಡು ಬಂದಿದ್ದು, ಪಶ್ಚಿಮ್ ಬಂಗಾಲದ ಯಾವುದೋ ಮಾಲನಲ್ಲಿ ಅಲ್ಲ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಮಂತ್ರಿ ಮಾಲನ ಸ್ಕ್ರೀನ್ ಮೇಲೆ. ಅದನ್ ನೋಡಿದ ಮೇಲೆ ಒಂದ್ ಕ್ಷಣದಲ್ಲಿ ಕೊಲ್ಕತಾ ಪ್ರಯಾಣ ಮುಗಿಸಿ ಬಂದಂಗಾಯ್ತು. ಈಗ ವಿಷ್ಯ ಏನಪ್ಪ ಅಂದ್ರೆ, ಸುಮಾರು ೧೮೦೦ ಕಿ.ಮೀ ದೂರದಲ್ಲಿ ಆಚರಿಸುವ ಹಬ್ಬವನ್ನು ನಮ್ಮ ಬೆಂಗಳೂರಿನಲ್ಲಿ ಅಚ್ಚ ಅಲ್ಲಿಯ ಭಾಷೆಯಲ್ಲೇ ಶುಭಾಶಯ ಕೋರುವ ಅಗತ್ಯ ಕಾಣುವವರು, ಕಣ್ ಮುಂದೆ ಇರುವ ೬ ಕೋಟಿ ಕನ್ನಡಿಗರಿಗೆ ಯಾವ ಭಾಷೆಯಲ್ಲಿ ಯಾವ ಲಿಪಿಯಲ್ಲಿ, ಶುಭಾಶಯ ಕೋರಬೇಕು ಎಂಬ ಸಾಮಾನ್ಯ ಪರಿಜ್ನಾನ ಇಲ್ಲವೇ.? ಇದು ಯಾವುದೋ ಒಂದು ಮಾಲ್ ನ ಕಥೆ ಅಲ್ಲ, ಬದಲಾಗಿ ಕಣ್ಣು ಹಾಯಿಸಿದಲ್ಲೆಲ್ಲ ಕನ್ನಡಿಗ ನಿತ್ಯ ಕಾಣುವ ವ್ಯಥೆಯಾಗಿದೆ.
ನಮ್ಮದೇ ನಾಡಿನಲ್ಲಿ ನಮ್ಮ ಹಬ್ಬಗಳಾದ ದಸರಾ, ದೀಪಾವಳಿಗಳನ್ನು "Happy Dusshera", "Happy Diwali" ಎಂದು ಕರೆದು ಕನ್ನಡಿಗರನ್ನು ದಿವಾಳಿ ಎಬ್ಬಿಸುವ ಈ ಪ್ರಯತ್ನ ಖಂಡಿಸುವಂಥದ್ದು. ನಮ್ಮ ಊರಲ್ಲೇ ದೀಪಾವಳಿ, ದಸರಾ ಹಬ್ಬಗಳ ಶುಭಾಶಯಗಳನ್ನು ನಮ್ಮ ನುಡಿಯಲ್ಲಿ ಪಡೆದುಕೊಳ್ಳಲಾರದಷ್ಟು ನತದೃಷ್ಟರೇ ನಾವು ಕನ್ನಡಿಗರು.? ಅರ್ಥವಾಗದ ಸಂಗತಿ ಅಂದ್ರೆ, ತಾವು ನಿಂತಿರುವ ಜಾಗವನ್ನೇ ಮರೆತು, ತಾವು ಅವಲಂಬಿತವಾಗಿರುವ ಕನ್ನಡ ಗ್ರಾಹಕನ ಅನುಕೂಲಗಳನ್ನೇ ಮರೆತು, ಕೆಲವೇ ಕೆಲವು ಬೆರಳೆಣಿಕೆಯಷ್ಟು ಗ್ರಾಹಕರ ಸಲುವಾಗಿ ಜಾಹೀರಾತಿಗಾಗಿ ಬೆಂಗಳೂರಿನಲ್ಲಿ ಹಿಂದಿ, ಇಂಗ್ಲೀಷ ಮೊರೆ ಹೋಗುತ್ತಿರುವ ಕಂಪನಿಗಳಿಗೆ, ಕನ್ನಡಿಗ ಗ್ರಾಹಕನ ಮಹತ್ವವನ್ನು, ತಮ್ಮ ಸೇವೆಯಲ್ಲಿ ಕನ್ನಡದ ಬಳಕೆಯಿಂದಾಗುವ ಪ್ರಯೋಜನವನ್ನು ಮನದಟ್ಟು ಮಾಡಿಸುವ ಅಗತ್ಯತೆ ಇದೆ. ಗ್ರಾಹಕನ ಹಕ್ಕನ್ನು ಬರೀ ವಸ್ತುವಿನ ಗುಣ, ಪ್ರಮಾಣದಲ್ಲೇ ಅಳೆಯುವ ನಾವು, ನಮ್ಮ ನುಡಿಯಲ್ಲಿ ಸೇವೆ ಪಡೆಯುವುದು ಕೂಡ ನಮ್ಮ ಹಕ್ಕು ಎಂಬ ಕಟು ಸತ್ಯವನ್ನು ಮನಗಾಣಬೇಕಿದೆ, ಕರ್ನಾಟಕದಲ್ಲೇ ಕನ್ನಡಿಗ ಗ್ರಾಹಕ "ದಿವಾಳಿ" (DIWALI) ಆಗುವುದನ್ನು ತಡೆಯಬೇಕಿದೆ.
ಈ ವಿಷಯದ ಬಗ್ಗೆ ಮಂತ್ರಿ ಮಾಲ್ನ್ ಗಮನ ಸೆಳೆಯಲು ಇಲ್ಲಿ ಸಂಪರ್ಕಿಸಿ.

Tuesday 14 September 2010

ವಿಶ್ವಕ್ಕೆ ಮಾದರಿ ನಮ್ಮೀ ವಿಶ್ವೇಶ್ವರಯ್ಯ...!

"If Australia and Canada could have universities of their own for less than a million population, cannot Mysore with a population of not less that 60 lakhs have a University of its own?"
ಹೀಗೆ ದೂರ ದೃಷ್ಟಿ ಬೀರಿದವರು ಭಾರತ ಕಂಡ ಗಣ್ಯ ಇಂಜಿನಿಯರುಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿ ನಿಲ್ಲುವ ನಮ್ಮ ಭಾರತರತ್ನ ಸರ್ ಎಮ್. ವಿಶ್ವೇಶ್ವರಯ್ಯನವರು. ಇಂದು (೧೫-೦೯-೨೦೧೦) ಅವರ ೧೫೦ ನೇ ಜನ್ಮ ದಿನಾಚರಣೆ. ಅವರು ತಾಂತ್ರಿಕತೆಯಲ್ಲಿ ದೇಶಕ್ಕೆ ನೀಡಿದ ಕೊಡುಗೆ ಅಪಾರ,ಈ ನಿಟ್ಟಿನಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ೧೫ ರಂದು ಅವರ ಸ್ಮರಣಾರ್ಥವಾಗಿ ದೇಶದಲ್ಲೆಡೆ ENGINEER’S DAY ಯನ್ನಾಗಿ ಆಚರಿಸಲಾಗುತ್ತದೆ.

ಮೈಸೂರು ವಿವಿ, ಹಿಂದೂಸ್ಥಾನ್ ಏರಕ್ರಾಫ್ಟ್ ಫ್ಯಾಕ್ಟರಿ (ಈಗಿನ ಎಚ್.ಎ.ಎಲ್), ಕನ್ನಂಬಾಡಿ ಕಟ್ಟೆ, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತು, ಸರಕಾರಿ ಸಾಬೂನು ಕಾರ್ಖಾನೆ, ಶಿವನಸಮುದ್ರ, ಜೋಗ ಜಲವಿದ್ಯುತ್ ಯೋಜನೆ, ಬ್ಲಾಕ್ ಸಿಸ್ಟಮ್ (ನೀರಾವರಿ ಯೋಜನೆ), ಮೈಸೂರು ಸ್ಯಾಂಡಲ್ ಸೋಪ್, ಪ್ರಿಂಟಿಂಗ್ ಪ್ರೆಸ್, ಭಟ್ಕಳ ಬಂದರು, ಶ್ರೀಗಂಧ ಎಣ್ಣೆ ತಯಾರಿಕೆ, ಮೈಸೂರು ಸಕ್ಕರೆ ಕಾರ್ಖಾನೆ, ಬೆಂಗಳೂರು ವಿವಿ ಇಂಜಿನಿಯರ್ ಕಾಲೇಜು, ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ, ಕಬ್ಬನ್ ಪಾರ್ಕನ ಸೆಂಚೂರಿ ಕ್ಲಬ್, ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು, ದೇಶದಲ್ಲಿಯೇ ಮೊಟ್ಟಮೊದಲಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ, ಕನ್ನಂಬಾಡಿ ಕಟ್ಟೆಗೆ ವಿಶ್ವದಲ್ಲಿಯೇ ಮೊದಲ ಸ್ವಯಂ ಚಾಲಿತ ಗೇಟಗಳ ಅಳವಡಿಕೆ.

ಅಬ್ಬಾ, ಒಂದಾ ಎರಡಾ. ಬಹುಶ: ಜಗತ್ತಿನ ಯಾವುದೇ ದೇಶದಲ್ಲೂ ಯಾವುದೇ ಒಬ್ಬ ವ್ಯಕ್ತಿಯಿಂದಲೂ ಒಂದು ನಿರ್ಧಿಷ್ಟ ಪ್ರದೇಶಕ್ಕೆ ಇಷ್ಟೊಂದು ಅನುಕೂಲವಾದ ಮತ್ತೊಂದು ಉದಾಹರಣೆ ನಮಗೆ ಸಿಗಲಾರದು.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಸರ್ ಎಮ್.ವಿ ಅವರು ನಮ್ಮ ಸರಕಾರದ ನಾಯಕರು ಅರವತ್ತು ವರ್ಷ ಮಾಡಲಾಗದ್ದನ್ನು ದಿವಾನರಾಗಿ ಆರೇ ವರ್ಷಗಳಲ್ಲಿ ಮಾಡಿದ್ದಾರೆ. ಇವತ್ತು ಕರ್ನಾಟಕದ ಮುಖ್ಯವಾಗಿ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಜನರು ನೆಮ್ಮದಿಯಿಂದಿದ್ದರೆ, ಬೆಂಗಳೂರಿನ ನಿವಾಸಿಗಳಾದ ನಾವು ನೀರು ಕುಡಿಯುತ್ತಿದ್ದರೆ ಅದು ಆ ಮಹಾನುಭಾವನ ದೂರದೃಷ್ಟಿ ಮತ್ತು ಪರಿಶ್ರಮದ ಫಲ. ಅಷ್ಟೇ ಅಲ್ಲದೇ, ಇವತ್ತು ನಮ್ಮ ಬೆಂಗಳೂರು ಐಟಿ, ಬಾಹ್ಯಾಕಾಶ ಸಂಭಂದಿತ ಕ್ಷೇತ್ರಗಳಲ್ಲಿ ಮಿಂಚುತ್ತಿರುವುದಕ್ಕೂ ಸರ್ ಎಮ್.ವಿ ಅವರೇ ಕಾರಣ. ಈ ಭಾಗದ ಜನರ ದೇವರ ಮನೆಯಲ್ಲಿ ಸ್ಥಾನ ಗಿಟ್ಟಿಸಲು ಇವರು ಖಂಡಿತ ಅರ್ಹರು.

ಇದು ಬರೀ ರಾಜ್ಯದ ಕಥೆಯಾದರೆ, ಹೊರರಾಜ್ಯಗಳಲ್ಲೂ ಬಹಳ ಕಡೆ ಇವರ ದೂರದೃಷ್ಟಿಯ ಲಾಭ ಗೋಚರಿಸುತ್ತದೆ. ಇಂಥ ಮಹಾ ಮೇಧಾವಿಯನ್ನು ಪಡೆದ ಭರತಖಂಡ ಅದರಲ್ಲೂ ಕನ್ನಡನಾಡೇ ಧನ್ಯ.

ವಿಶ್ವೇಶ್ವರಯ್ಯನವರ ಕುರಿತ ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಕೊಂಡಿಗಳಲ್ಲಿ ನೋಡಿ....
> ಮೋಕ್ಷಗುಂಡಂ ವಿಶ್ವೇಶ್ವರಯ್ಯ
> Sir M Visvesvaraya
> One of the makers of modern India

Tuesday 3 August 2010

ನಮ್ಮ ಬೇಲಿಗಳಿಗೆ ಹೊಲದ ಬಗ್ಗೆ ಕಾಳಜಿನೇ ಇಲ್ಲ...!














ಎಲ್ಲರಿಗೂ (ತಡವಾಗಿಯಾದರೂ) ಸ್ನೇಹಿತರ ದಿನಾಚರಣೆಯ ಶುಭಾಶಯಗಳು.

ನಮ್ಮ ಹೊಲವನ್ನು ಕಾಯಬೇಕಾದ ಬೇಲಿಯೇ ಹೊಲವನ್ನು ಮೈಯ್ಯಲು ನಿಂತಂತಿದೆ, ಮದ್ಯದಲ್ಲಿರುವ ಈ ಚಿತ್ರ. ಇದು ಕನ್ನಡಪ್ರಭದಲ್ಲಿ ಬಂದ ಲೇಖನ. ಕನ್ನಡಪ್ರಭ ಎಂದರೆ ಅಲ್ಲಿ ನಾವು ತಿಳಿದೋ ತಿಳಿಯದೇನೊ ಆ ಹೆಸರಿನ ಮೂಲಕ ಅಲ್ಲಿ ಕನ್ನಡದ ಸಾರ್ವಭೌಮತ್ವವನ್ನು ಕಾಣುತ್ತೇವೆ. ಆದರೆ ಮೊನ್ನೆ ಮುಗಿದ ಸ್ನೇಹಿತರ ದಿನಾಚರಣೆಯ ಬಗ್ಗೆ ಮರುದಿನ ಅಂದರೆ ನಿನ್ನೆ (೦೨-೦೮-೧೦) ಪ್ರಕಟವಾದ ಲೇಖನ ಜನರ ತಲೆಕೆಡಿಸಿ, ಕನ್ನಡಿಗರ ತಲೆಯಲ್ಲಿ ವಿವಿಧ ತಳಿಯ "ಹಿಂದಿ ಹುಳ" ಬಿಡುವ ಪ್ರಯತ್ನದ ಭಾಗವಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಸ್ನೇಹಿತರ ದಿನದ ಬಗ್ಗೆ ವರ್ಣಿಸಲು ಕನ್ನಡಪ್ರಭ ಎಂಬ ಹೆಸರಿಟ್ಟುಕೊಂಡಿರುವ ಇವರಿಗೆ ಕನ್ನಡದಲ್ಲಿ ವಾಕ್ಯಗಳೇ ಸಿಗಲಿಲ್ಲವೇ. ಹಿಂದಿಯನ್ನು ಕಷ್ಟ ಪಟ್ಟು, ಕನ್ನಡದಲ್ಲಿ ಬರೆದರೇ ಅದನ್ನು ಕನ್ನಡಿಗರು ಬಿಟ್ಟು ಬಿಹಾರಿ ಬಾಬು ಓದಲು ಸಾದ್ಯವೇ.? ಕನ್ನಡಿಗರೇ ಓದುವಾಗ ಅಲ್ಲಿ ಹಿಂದಿಗೇಕೆ ಮಣೇ. ಹಿಂದಿಯನ್ನು ಕಲಿಸುವ ಕಾಂಟ್ರ್ಯಾಕ್ಟ ಯಾಕೆ ಬೇಕು ಇವರಿಗೆ.
ಅದನ್ನು ಓದಿದ ಮೇಲೆ ಖಂಡಿತ ಅದರ ಅರ್ಥ ಗೊತ್ತಿರದವನು ತಿಳಿಯುವ ಪ್ರಯತ್ನ ಮಾಡುತ್ತಾನೆ. ಇಲ್ಲಿಂದ ಶುರು ಆಗುತ್ತೆ ನೋಡಿ, ಹಿಂದಿ ಬೀಜಕ್ಕೆ ನಿರುಣಿಸುವ ಪ್ರಯತ್ನ. ಇದರ ಮುಂದುವರಿದ ಭಾಗವಾಗಿ "ಹಿಂದಿ ಮಾತಾಡಿದವನು ಕೂಲ್ ಮತ್ತು ಕನ್ನಡ ಮಾತಾಡುವವನು ಫೂಲ್" ಎಂಬ ಉದ್ದಟತನದ, ನಿರಾಭಿಮಾನದ ಕೀಳರಿಮೆ ಅವನಲ್ಲಿ ಮೊಳಕೆಯೊಡೆಯುತ್ತದೆ.
ಹಿಂದಿ ಪ್ರಚಾರಕರಿಗೆ ಹಿಂದಿ ಜ್ವರ ವಿಪರಿತವಾಗುವುದು ಸೆ. ೧೫ ರ ಆಸು ಪಾಸಿನ ದಿನಗಳಲ್ಲಿ ಮತ್ತು ಅವಾಗವಾಗ. ಆದರೆ ಈ ಟಿವಿವಾಹಿನಿಗಳು ಮತ್ತು ಅವರ ಕಾರ್ಯಕ್ರಮಗಳು, ಪತ್ರಿಕೆಗಳು, ಕೇಂದ್ರ ಸರಕಾರದ ಸಂಸ್ಥೆಗಳಿಗೆ ೨೪*೭ ಮೈ ಬೆಚ್ಚಗೆ ಇರುತ್ತದೆ, ಯಾವಾಗ ಹಿಂದಿ ಜ್ವರ ಬರುತ್ತದೋ ಗೊತ್ತೆ ಆಗೋದಿಲ್ಲ. ಕನ್ನಡದ ಹೊಲವನ್ನು ಕಾಯಬೇಕಾದ ಬೇಲಿಗಳೂ ಇದರಿಂದ ಹೊರತಾಗಿಲ್ಲ ಎಂಬುದು ವಿಪರ್ಯಾಸವೇ ಸರಿ.

ಈ ನಿಟ್ಟಿನಲ್ಲಿ ಇದರ ಬಗ್ಗೆ ಅವರ ಗಮನ ಸೆಳೆಯುವ ಒಂದು ಪ್ರಯತ್ನ ನಾವ್ಯಾಕೆ ಮಾಡ್ಬಾರದು..?
ಅವರಿಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಲು ಇಲ್ಲಿ ಮಿಂಚಿಸಿ.
kpnetdivision@gmail.com

Wednesday 7 July 2010

FYKI ಇದು ಮುಖಭಂಗ ಅಲ್ಲ, ಕಪಾಳಮೋಕ್ಷ......!





ಬೆಳಗಾವಿ, ಕಲ್ಬುರ್ಗಿ ಸೇರಿದಂತೆ ಮತ್ತಿತರ ಗಡಿ ಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಎಮ್.ಇ.ಎಸ್ ನವರ ಮೊಂಡುವಾದವನ್ನು ತಿರಸ್ಕರಿಸಿ, ಅಲ್ಲಿ ಮರಾಠಿ ಭಾಷಿಕರಿದ್ದರೂ ಅವುಗಳು ಕರ್ನಾಟಕಕ್ಕೆ ಸೇರಬೇಕು, ಅವುಗಳು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಕೇಂದ್ರ ಸರಕಾರ ಸುಪ್ರೀಮ್ ಕೋರ್ಟಿಗೆ ಪ್ರಮಾಣ ಪತ್ರ (ಅಫಿಡೆವಿಟ್) ಸಲ್ಲಿಸಿದೆ ಎಂಬ ಸುದ್ದಿ ಬೆಳಿಗ್ಗೆ ಬೆಳಿಗ್ಗೆನೆ ಜೇನುತುಪ್ಪದ ರುಚಿ ತೋರಿಸ್ತು ಗುರು. ಇದು ನಿಜಕ್ಕೂ ತುಂಬಾ ಸಂತಸದ ಸುದ್ದಿ. ಈ ಹಿನ್ನೆಲೆಯಲ್ಲಿ ಇವತ್ತು ಇವರನ್ನು ನೆನೆಯದಿದ್ದರೆ, ಖಂಡಿತ ಸಂಭ್ರಮಕ್ಕೆ ಬೆಲೆ ಇರುವುದಿಲ್ಲ. ಬೆಳಗಾವಿಯನ್ನೇ ಕೈ ಚೆಲ್ಲಿದ್ದ ಸರಕಾರಕ್ಕೆ, ಸೆಡ್ಡು ಹೊಡೆದು ಅಲ್ಲಿ ನಡೆಯುತ್ತಿದ್ದ ಒಣ ವಿಷ ಬೀಜ ಬಿತ್ತುವ ಎಮ್.ಇ.ಎಸ್ ನವರ ಕೆಲಸಗಳಿಗೆ ಕಡಿವಾಣ ಹಾಕಿ, ಸರಕಾರ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ನಿರ್ವಹಿಸಿದ ನಮ್ಮ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರಿಗೆ ಅಭಿನಂಧನೆಗಳು. ಅದರಂತೆಯೇ ಎಮ್.ಇ.ಎಸ್ ನವರ ಒಣ ಪುಂಡಾಟವನ್ನು ಮನಗಂಡು ಅವರ ದುರಾಲೋಚನೆಗೆ ತಕ್ಕ ಉತ್ತರ ಕೊಡುವಲ್ಲಿ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರಕ್ಕೂ, ಕರ್ನಾಟಕದ ಪರವಾಗಿ ವಾದ ಮಂಡಿಸಿರಬಹುದಾದ ನಮ್ಮ ಜನಪ್ರತಿನಿಧಿಗಳಿಗೂ, ಅಧಿಕಾರಿ ವರ್ಗಕ್ಕೂ ಕೃತಜ್ನತೆಗಳು.
ಬೆಳವಣಿಗೆಯಿಂದ ಎಮ್.ಇ.ಎಸ್ ನವರ ಪುಂಡಾಟಗಳಿಗೆ ಸಾಥ್ ನೀಡಿದ್ದ ಮಹಾರಾಷ್ಟ್ರ ಸರಕಾರಕ್ಕೆ ಮುಖಭಂಗವಾದರೆ, ಅಲ್ಲಿನ ಕೆಲವು ರಾಜಕೀಯ ಪಕ್ಷಗಳಿಗೆ ತಿಳಿಯಾಗಿದ್ದ ಕೆಸರಿನಲ್ಲಿ ಕಲ್ಲೆಸೆದು ಸಿಡಿಸಿಕೊಂಡ ಅನುಭವವಾದರೆ, ಎಮ್.ಇ.ಎಸ್ ಗೆ ಒಂದಲ್ಲ ಎರಡೂ ಕಡೆಗೆ ಕಪಾಳಮೋಕ್ಷವಾಗಿದೆ. ಇಲ್ಲಿ ಒಂದು ಅಂಶ ಸ್ಪಷ್ಟ, ನಿಜವಾಗಿಯೂ ಹೇಳಬೇಕೆಂದರೆ ಕರ್ನಾಟಕದ ಮರಾಠಿ ಭಾಷಿಕರಿಗೆ (ಬೆರಳೆಣಿಕೆಯಷ್ಟು ಪುಂಡರು ಬಿಟ್ಟರೆ) ಇದ್ಯಾವದೂ ಬೇಕಾಗಿಯೇ ಇಲ್ಲ. ಅವರು ಸಂತೃಪ್ತಿಯಿಂದ ಇದ್ದಾರೆ. ಆದರೂ ಎಮ್.ಇ.ಎಸ್ ನವರು ಅವರನ್ನು ಅನಗತ್ಯವಾಗಿ ಎಳೆದು ತಂದು ವಿವಾದ ಸೃಷ್ಟಿಸಿದಕ್ಕಾಗಿ ಅವರಿಂದಲೂ ಕಪಾಳಮೋಕ್ಷವಾಗಿದೆ.

ಉಪ್ಪು ತಿಂದವನು ನೀರು ಕುಡಿಲೇಬೇಕೊ ಇಲ್ವೊ ಗೊತ್ತಿಲ್ಲ, ಆದರೆ ವಿಷ ಬೀಜ ಬಿತ್ತಿದವನು ಕಹಿ ಹಣ್ಣನ್ನು ತಿನ್ನಲೇಬೇಕು ಅಲ್ವ.
ಒಟ್ಟಾರೆ ರಾಜ್ಯಕ್ಕೆ ಬಂಪರ್ ನ್ಯಾಯ ಸಿಗುವ ಲಕ್ಷಣ ಗೋಚರಿಸುತ್ತಿದೆ, ಅದಕ್ಕಿಂತ ಇನ್ನೇನ್ ಬೇಕ್ರಿ.
ಇದೇ ಖುಷಿಲಿ ಮಸ್ತ್ ಮಜಾ ಮಾಡಿ, ಚಮ್ಕಾಯ್ಸಿ ಚಿಂದಿ ಉಡಾಯ್ಸಿ............!!!

Tuesday 29 June 2010

ಗುಣಮಟ್ಟದ ಶಿಕ್ಷಣ ಅಂದ್ರೆ "ಸಿ. ಬಿ. ಎಸ್. ಸಿ" ಪಠ್ಯಕ್ರಮನಾ.....?


ಇದು ಮೆಟ್ರೊ ನಗರ ಬೆಂಗಳೂರಿನಲ್ಲಿ ಹರಿದಾಡುತ್ತಿರುವ ಮಾತಲ್ಲ, ರಾಜಧಾನಿಯಿಂದಾಚೆ ನೂರಾರು ಕಿ.ಮಿ. ದೂರದ ಊರುಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡುವಂಥ ಇಂಥದೊಂದು ಗಬ್ಬು ವಾತಾವರಣ ದಿನದಿಂದ ದಿನಕ್ಕೆ ಅವ್ಯಾಹತವಾಗಿ ಹಬ್ತಾ ಇದೆ ಗುರು. ಇದಕ್ಕೆ ಪುಷ್ಟಿ ನೀಡುವ ಉದಾಹರಣೆಗಳಿಗೇನು ಕಮ್ಮಿ ಇಲ್ಲ.
ಒಂದು ತಾಜಾ ನಿದರ್ಶನ. ನಮ್ಮ ವಿಜಾಪುರ ಜಿಲ್ಲೆಯ ಗಲಗಲಿ ಎಂಬ ಪುಟ್ಟ ಗ್ರಾಮದಲ್ಲಿ ೨೦೦೪ ರಲ್ಲಿ ಉಳ್ಳವರು ಶಿವಾಲಯ ಮಾಡೊ ಹಾಗೆ, ಆಂಗ್ಲ ಮಾದ್ಯಮದ ಅಂತರಾಷ್ಟೀಯ ಶಾಲೆಯೊಂದನ್ನು ಪ್ರಾರಂಭ ಮಾಡಿದ್ರು. ಗುಣಮ್ಮಟ್ಟದ ಶಿಕ್ಷಣ ಎಂಬ ಉದ್ದೇಶದಿಂದ ಇದು ಪ್ರಾರಂಭವಾಯ್ತು. ಈಗ ೨೦೧೦ ರಲ್ಲಿ ಆ ಗುಣಮಟ್ಟದ ಶಿಕ್ಷಣ ಸಾಲದೆಂಬಂತೆ ಈ ಸಂಸ್ಥೆ ಸಿ.ಬಿ.ಎಸ್.ಸಿ ಪಠ್ಯಕ್ರಮದ ಅಂತರಾಷ್ಟೀಯ ಶಾಲೆಯೊಂದನ್ನು ತೆರೆಯಲು ಮುಂದಾಗಿದೆ ಎಂಬ ವರದಿ ಮೊನ್ನೆಯ ವಿಕ ದಲ್ಲಿ ಪ್ರಕಟವಾಗಿತ್ತು. ಅಲ್ಲಿ ಅವರು ನೀಡಿರುವ ಹೇಳಿಕೆ ಗಮನ ಸೆಳೆಯಿತು. " ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ದೂರದ ಊರುಗಳಿಗೆ ಕಳುಹಿಸಬೇಕು. ನಮ್ಮಲ್ಲೇ ಉತ್ತಮ ಗುಣಮಟ್ಟದ ಶಾಲೆ ನಡೆಸಿ, ಮಕ್ಕಳು ದೂರಕ್ಕೆ ಹೋಗುವುದನ್ನು ತಪ್ಪಿಸಬೇಕೆಂಬ ಸದುದ್ದೇಶದಿಂದ ಇಲ್ಲಿಯೆ ಸಿ.ಬಿ.ಎಸ್.ಸಿ ಪಠ್ಯಕ್ರಮದ ಶಾಲೆಯೊಂದನ್ನು ತೆರೆಯಲು ನಿರ್ಧರಿಸಲಾಗಿದೆ" ಎಂದು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಇವರು ಹೇಳೊ ರೀತಿ ನೋಡಿದ್ರೆ ಗುಣಮಟ್ಟದ ಶಿಕ್ಷಣ ಅಂದ್ರೆ ಸಿ.ಬಿ.ಎಸ್.ಸಿ ನಲ್ಲೆ ಕಲೀಬೇಕು. ನಮ್ಮ ಮಕ್ಕಳು ಉಧ್ಧಾರ ಆಗಲು ಸಿ.ಬಿ.ಎಸ್.ಸಿ ಶಾಲೆಗಳಿಗೆನೇ ಹೋಗಬೇಕು ಅಂಥ ಮುಖಕ್ಕೆ ಹೊಡೆದ ಹಾಗೆ ಹೇಳ್ತಾ ಇದ್ದಾರೆ ಅನ್ಸುತ್ತೆ. ಹಳ್ಳಿಗಳಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮುಖಾಂತರ ಹಳ್ಳಿಯ ಮಕ್ಕಳು ಏಳಿಗೆ ಹೊಂದಲು ಸಹಕಾರಿಯಾಗುವುದು ಎಂಬ ವಾದವನ್ನು ಒಪ್ಪಬಹುದು, ಆದರೆ ಸಿ.ಬಿ.ಎಸ್.ಸಿ ಯಿಂದ ನಮ್ಮ ಹುಡುಗರು ಕನ್ನಡದಿಂದ ಮತ್ತು ಕನ್ನಡ ನಾಡಿನಿಂದ ಬಹಳ ದೂರವಾಗುತ್ತಾರೆ ಎಂಬ ಅರಿವು ಬರಬೇಕಲ್ಲವೇ. ಇದು ಯಾವುದೋ ಒಬ್ಬ ವ್ಯಕ್ತಿಯ, ಒಂದು ಜಿಲ್ಲೆಯ ಕಥೆಯಲ್ಲ, ನಮ್ಮ ಘನ ಸರಕಾರದ ಕೃಪಾಕಟಾಕ್ಷದಿಂದ, ಹೇಳೊಕೆ ಆಚಾರ ತಿನ್ನೋಕೆ ಬದನೆಕಾಯಿ ಎಂಬಂತಿರುವ ಸರಕಾರದ ಇಂಗ್ಲೀಷ ವ್ಯಾಮೋಹದಿಂದ ದೊಡ್ಡ ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಈ ರೀತಿ ಅಭಿಪ್ರಾಯಗಳು ರಾಜ್ಯದ ತುಂಬೆಲ್ಲ ಹರಡುತ್ತಿದೆ. ಹಳ್ಳಿಗಳಲ್ಲೂ ಇಂಥ ಶಾಲೆಗಳು ಆರಂಭವಾಗೋದ್ರಿಂದ ಸಹಜವಾಗಿ ಸರಕಾರಿ ಕನ್ನಡ ಶಾಲೆಯಲ್ಲಿ ಓದುತ್ತಿರುವ ೮೫% ಕನ್ನಡ ಮಕ್ಕಳಿಗೆ ತಪ್ಪು ಸಂದೇಶ ರವಾನೆಯಾಗದೇ ಇರುವುದೇ..? ಅವರನ್ನ ಶಾಲೆಗೆ ಕಳುಹಿಸುತ್ತಿರುವ ಪಾಲಕರಲ್ಲಿ ಆತಂಕ ಸೃಷ್ಟಿಸದೇ ಇರುವುದೇ..? ಇಷ್ಟ ಪಟ್ಟು ಕನ್ನಡ ಮಾದ್ಯಮ ಕಲಿಯುವವರ ಸಂಖ್ಯೆ ಕ್ಷೀಣೀಸುವುದಿಲ್ಲವೇ..? ಆಂಗ್ಲ ಮಾದ್ಯಮದಲ್ಲಿ ಕಲಿಸುವ ಶಕ್ತಿ ಇಲ್ಲದವರು ಮಾತ್ರ ಕನ್ನಡ ಮಾದ್ಯಮ ಅನ್ನೋ ಥರ ವಾತಾವರಣ ಸೃಷ್ಟಿ ಆಗದೇ ಇರುತ್ತಾ..?

ಯಾಕೆ ಹೀಗೆ.?
ಗುಣಮಟ್ಟದ ಶಿಕ್ಷಣ ಎಂದ ತಕ್ಷಣ ಆಂಗ್ಲ ಮಾದ್ಯಮ ಶಾಲೆ, ಸಿ.ಬಿ.ಎಸ್.ಸಿ ಪಠ್ಯಕ್ರಮದ ಕಡೆ ತಿರುಗುವ ನಮ್ಮ ಅತೀ ಬುದ್ದಿವಂಥ ನಾಗರಿಕರು, ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿ ಅದರಲ್ಲಿಯೆ ಇನ್ನೊಬ್ಬ ವಿಶ್ವೇಶ್ವರಯ್ಯ, ಮತ್ತೊಬ್ಬ ಡಾ: ಮೋದಿ ಯವರನ್ನು ಸೃಷ್ಟಿ ಮಾಡುವಂಥ ಹೊಣೆಯನ್ನು ಹೊತ್ತುಕೊಳ್ಳಬಾರದೇ.? ಅಂತರಾಷ್ಟೀಯ ಆಂಗ್ಲ ಮಾದ್ಯಮ ಶಾಲೆ ತೆರೆಯುವ ಬದಲು ಗುಣಮಟ್ಟದ ಅಂತರಾಷ್ಟ್ರೀಯ ಕನ್ನಡ ಮಾದ್ಯಮ ಮಾದರಿ ಶಾಲೆ ತೆರೆಯಬಾರದೇ..? ಇಂಥದ್ದೊಂದು ಯೋಚನೆ ಜನರಲ್ಲಿ ಮತ್ತು ಉಳ್ಳವರಲ್ಲಿ ಬರಬೇಕೆಂದರೆ ಗುಣಮ್ಮಟ್ಟದ ಶಿಕ್ಷಣ ಕನ್ನಡದಲ್ಲೂ ಕೊಡಬಹುದು, ಕನ್ನಡ ಮಾದ್ಯಮದಲ್ಲಿ ಕಲಿತವರು ಇಂಜಿನಿಯರ ಡಾಕ್ಟರ ಅಷ್ಟೇ ಅಲ್ಲದೇ ಆ ಹುದ್ದೆಗಳಿಗೆ ’ರೋಲ್ ಮಾಡೆಲ್’ ಎಂದೆನಿಸಿದ ನಮ್ಮ ನಾಡಿನ ಹೆಮ್ಮೆಯ ವಿಶ್ವೇಶ್ವರಯ್ಯ ಮತ್ತು ಡಾ: ಮೋದಿ ಥರನೂ ಆಗಬಹುದು ಎಂಬ ನಂಬಿಕೆ ಮೂಡಿದಾಗ. ಆದರೆ ಇಂಥದೊಂದು ನಂಬಿಕೆ ಮೂಡಲು ಬದಲಾವಣೆಗೆ ಮುನ್ನುಡಿ ಬರೆಯಬೇಕಾದ ಸರಕಾರವೇ ಮುಂದೆ ನಿಂತು ತಿಥಿ ಊಟ (ಸಿ.ಬಿ.ಎಸ್.ಸಿ ಪಠ್ಯಕ್ರಮ) ಬಡಿಸುತ್ತಿರುವಾಗ ಯಾರಿಗೆ ಏನಂದು ಏನು ಪ್ರಯೋಜನ.

ಇನ್ನು ನಮ್ಮ ಪ್ರಾಧಿಕಾರಗಳು:
ಕನ್ನಡನಾಡು ನುಡಿ ನೆಲ ಜಲಗಳ ಸಂರಕ್ಷಣೆಗೆ ನಮ್ಮ ಸರಕಾರಗಳು ಪ್ರಾಧಿಕಾರ ಅಂಥ ಮಾಡಿದ್ದಾವೆ. ಆದರೆ ಅವು ’ಅಧಿಕಾರ ಹಂಚಿಕೆ ಮಾಡ್ಕೊಳ್ಳೊಕೆ ದಾರಿಯಾಗಿದೆ ಅಷ್ಟೆ’. ಸಚಿವ ಸ್ಥಾನ ಸಿಗದ ನಾಯಕರಿಗೆ, ಸಮಾಧಾನ ಪಡಿಸ್ಲಿಕ್ಕೆ ಬೇಕಾಗಿರೊ ಕುರ್ಚಿ ಆಗೊಗಿದೆ. ಇವುಗಳು ಲೆಕ್ಕಕ್ಕುಂಟು, ಆದರೆ ಆಟಕ್ಕಿಲ್ಲ. ಅವಾಗವಾಗ ಅಲ್ಪ ಸ್ವಲ್ಪ ಆಟ ಆಡಿದ್ದು ಬಿಟ್ರೆ, ಏನು ಆಟ ಆಡ್ಬೇಕಿತ್ತೊ, ಯಾವ ಜವಾಬ್ದಾರಿಯನ್ನು ನಿರ್ವಹಿಸಬೇಕಿತ್ತೋ ಅದನ್ನು ಹೇಗೆ ನಿರ್ವಹಿಸ್ತಾ ಇವೆ ಅಂಥ ಬಿಡಿಸಿ ಹೇಳ್ಭೇಕಾ. ಗಡಿ ಜಿಲ್ಲೆಗಳಲ್ಲಿರುವ ಕನ್ನಡ ಶಾಲೆಗಳ ಅತಂತ್ರ ಸ್ಥಿತಿ ಇವರು ನಿರ್ವಹಿಸುತ್ತಿರುವ ಬೇಜವಾಬ್ದಾರಿಗೆ ನಿದರ್ಶನ.
ಆಂಗ್ಲ ಮಾದ್ಯಮದ ಕುರಿತಾದ ಒಂದು ಜೋಕು ನೆನಪಾಗ್ತಿದೆ...........
ಇಂಗ್ಲೀಷ ಶಾಲೆಗಳಲ್ಲಿ ಬರಸೇ ಬರೆಯಿಸುವರು ಹೋಮ್ ವರ್ಕ್, ಮಾಸ್ತರು
ಇಂಗ್ಲೀಷ ಶಾಲೆಗಳಲ್ಲಿ ಬರಸೇ ಬರೆಯಿಸುವರು ಹೋಮ್ ವರ್ಕ್, ಮಾಸ್ತರು
ಬರೆದು ಬರೆದು ಸುಸ್ತಾಗಿ ನಮ್ಮ ಮಕ್ಕಳಾಗುವರು ಕಡೆಗೆ ..... ಗುಮಾಸ್ತರು : )

ಗೋಡೆ ಬರಹ: ಸರ್ವರೋಗಕ್ಕೂ ಸಾರಾಯಿ ಮದ್ದು ಅಂತಾರೆ, ಹೌದೋ ಅಲ್ಲವೋ ಗೊತ್ತಿಲ್ಲ ಆದರೆ
ಕರ್ನಾಟಕದ ಸರ್ವಸಮಸ್ಯೆಗೂ ಪ್ರಾದೇಷಿಕ ಪಕ್ಷ ಮದ್ದು ಎಂಬುದು ಮಾತ್ರ ಹೈಕಮಾಂಡ್ ಇರೋರು ಕೂಡ ಅಲ್ಲಗಳೆಯಕ್ಕಾಗಲ್ಲ.

Saturday 19 June 2010

ರಾಮರಾಜ್ಯದಲ್ಲಿ ’ರಾವಣ’ನ ಅಟ್ಟಹಾಸ ಮುಂದುವರಿಕೆಗೆ ಕಟ್ಟಾಜ್ಞೆ.......!


ಕಡೆಗೂ ’ರಾವಣ’ ತನ್ನ ದುರ್ಬುಧ್ಧಿಯನ್ನು ’ರಾಮರಾಜ್ಯದ’ ಮೇಲೆ ತೋರಿಸಿಯೇ ಬಿಟ್ಟಿದ್ದಾನೆ. ನಿನ್ನೆ (೧೭-೦೬-೧೦) ’ರಾವಣ’, ಕರ್ನಾಟಕ ಚಲನಚಿತ್ರ ಮಂಡಳಿ ನಿಯಮದಂತೆ ಸುಮಾರು ೨೪ ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಆದ್ರೆ ಈ ನಡುವೆ ’ದಿ ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ’ (ಸಿ ಸಿ ಐ) ಎಂಬ ರಾಷ್ಟ್ರೀಯ ಆಯೋಗವು, ರಾವಣ ಚಿತ್ರ ವಿತರಕರ ಮೇಲೆ ನೇರ ಹಾಗೂ ಪರೋಕ್ಷವಾಗಿ ಯಾವುದೇ ಕ್ರಮಕೈಗೊಳ್ಳದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ(ಕೆಎಫ್ ಸಿಸಿ) ಕಟ್ಟಾಜ್ಞೆ ವಿಧಿಸಿದ ಸುದ್ದಿ ನಿನ್ನೆ ಹೊರಬಿತ್ತು. ಈ ಕಟ್ಟಾಜ್ಞೆ ಕೇವಲ ಕೆ ಎಫ್ ಸಿ ಸಿ ಅಷ್ಟೆ ಅಲ್ಲದೇ, ಇಡೀ ಕನ್ನಡ ಚಿತ್ರ ಕಲಾವಿದರಿಗೆ ಮತ್ತು ಕನ್ನಡ ಚಿತ್ರಗಳ ಅಭಿಮಾನಿಗಳಿಗೆ ಆದ ಹಿನ್ನಡೆ ಎಂದು ಭಾವಿಸಬಹುದು. ಈ ಕಟ್ಟಾಜ್ಞೆಯನ್ನ ನಾವ್ ಖಂಡಿಸಬೇಕು ಅಲ್ವಾ ಗುರು.

ಯಾಕೆ ಅಂತೀರಾ....
ಈ ’ಸಿ ಸಿ ಐ’ (ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ) ಅನ್ನೋದು ಗ್ರಾಹಕರ ಹಿತಾಸಕ್ತಿ, ವ್ಯಾಪಾರ ಸ್ವಾತಂತ್ರ್ಯ ಮತ್ತು ಸ್ಪರ್ಧಾತ್ಮಕ ವಾತಾವರಣ ಎಂಬ ದ್ಯೇಯಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಒಂದು ರಾಷ್ಟ್ರೀಯ ಆಯೋಗ. ಗ್ರಾಹಕರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯಾಪಾರದಲ್ಲಿ ಒಂದು ಸ್ಪರ್ಧಾತ್ಮಕ ವಾತಾವರಣವನ್ನು ಪ್ರೋತ್ಸಾಹಿಸುವುದು ಈ ಆಯೋಗದ ಉದ್ದೇಶ. ಆದ್ರೆ ನಿನ್ನೆ (೧೮-೦-೧೦) ಕೊಟ್ಟ ತೀರ್ಪಿನಲ್ಲಿ ಇದು ಏಕೊ ಕೆಲವು ಗ್ರಾಹಕರನ್ನು ಮರೆತಂತಿದೆ. ಗ್ರಾಹಕ ಹೇಗಿದ್ರು ಗ್ರಾಹಕನೇ. ಅದು ೮೦ ಕೋಟಿ ರೂಪಾಯಿ ವೆಚ್ಚ ಚಿತ್ರದ ಗ್ರಾಹಕನಾದ್ರು ಅಷ್ಟೆ, ೮ ಕೋಟಿ ರೂಪಾಯಿ ವೆಚ್ಚ ಚಿತ್ರದ ಗ್ರಾಹಕನಾದ್ರು ಅಷ್ಟೆ. ಅಲ್ಲಿ ಗ್ರಾಹಕನಿಗೆ ಬೆಲೆ ಕಟ್ಟೊಕಾಗತ್ತಾ..? ಆದ್ರೆ ಈ ಆಯೋಗ ಮೇಲ್ನೋಟಕ್ಕೆ ಒಬ್ಬನಿಗೆ ಬೆಣ್ಣೆ ಮತ್ತೊಬ್ಬನಿಗೆ ಸುಣ್ಣ ಪದ್ದತಿ ಅನುಸರಿಸಿರುವುದು ಗೋಚರಿಸುತ್ತದೆ. ಅಧೇಗೆ ಅಂದ್ರೆ, ರಾವಣ ಚಿತ್ರ ನಿಯಮ ಉಲ್ಲಂಘಿಸಿ ೨೪ ರ ಬದಲು ೪೮ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ್ರೆ, ಆ ಹೆಚ್ಚಿದ ೨೪ ಚಿತ್ರಮಂದಿರಗಳಲ್ಲಿ ನಡೆಯುತ್ತಿರುವ ನಮ್ಮ ಕನ್ನಡ ಚಿತ್ರಗಳಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಹೀಗಾದಾಗ ಈ ೨೪ ಚಿತ್ರಮಂದಿರಗಳಿಗೆ ಬರುತ್ತಿದ್ದ ಕನ್ನಡ ಚಿತ್ರಗಳ ಗ್ರಾಹಕರಿಗೆ ಮತ್ತು ಅಭಿಮಾನಿಗಳಿಗೆ ಇವರ ಕಟ್ಟಾಜ್ಞೆ ಮಾರಕವಾಗುವುದಿಲ್ಲವೇ..? ಆಗ ’ಸಿ ಸಿ ಐ’ ನ ಗ್ರಾಹಕರ ಹಿತಾಸಕ್ತಿ ಎಂಬ ದ್ಯೇಯ ಇಲ್ಲಿ ಅನ್ವಯವಾಗುತ್ತದೆಯೇ..? ಕನ್ನಡ ಚಿತ್ರಗಳ ಗ್ರಾಹಕರು ಇವರಿಗೆ ಗ್ರಾಹಕರಾಗಿ ಏಕೆ ಕಾಣಲಿಲ್ಲ. ಒಬ್ಬನಿಗೆ ಒಂದು ನ್ಯಾಯ, ಇನ್ನೊಬ್ಬನಿಗೆ ಇನ್ನೊಂದು ಅಂದ್ರೆ ಹೇಗೆ ಸ್ವಾಮಿ. ನಮ್ಮ ಚಿತ್ರಗಳು ಚಿತ್ರಮಂದಿರಗಳಿಂದ ಎತ್ತಂಗಡಿ ಆದ್ರೂ ಪರ್ವಾಗಿಲ್ಲ, ಇವರ ಚಿತ್ರಗಳು ಬಿಡುಗಡೆಯಾಗ್ಬೇಕು ಅನ್ನೊ ವಾದ ಯಾವ ಕನ್ನಡಾಭಿಮಾನಿ ತಾನೆ ಒಪ್ಪಲು ಸಾದ್ಯ. ಕರ್ನಾಟಕದಲ್ಲೇ ಮಾರುಕಟ್ಟೆ ಕಂಡುಕೊಳ್ಳುವ ನಮ್ಮ ಚಿತ್ರಗಳು ಎಕ್ಕುಟ್ಟೊದ್ರು ಪರ್ವಾಗಿಲ್ಲ, ದೇಶದಾದ್ಯಂತ ಮಾರುಕಟ್ಟೆ ಇರೋ ಇವರಿಗೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ತಡೆಯೊಡ್ಡದೇ ಚಿತ್ರದ ಗೆಲುವಿಗೆ ಅವಕಾಶ ಮಾಡಿಕೊಡಬೇಕು ಅನ್ನೋ ಕಟ್ಟಪ್ಪಣೆಗೆ ತಲೆಬಾಗಲು ಸಾದ್ಯವೇ..?

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದ್ರೆ, ಒಂದು ಚಿತ್ರದ ಉಳಿವಿಗಾಗಿ, ಚೆನ್ನಾಗಿ ಓಡುತ್ತಿರುವ ಮತ್ತೊಂದು ಚಿತ್ರವನ್ನು ಅಳಿಸುವುದು ಯಾವ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಲು ಸಾದ್ಯ. ಪರಭಾಷಾ ಚಿತ್ರಗಳ ನಿಯಮ ಉಲ್ಲಂಘನೆಯಿಂದಾಗುವ ಕನ್ನಡ ಚಿತ್ರಗಳ ಬಿಡುಗಡೆ ವಿಳಂಬ ಯಾವ ವ್ಯಾಪಾರ ಸ್ವಾತಂತ್ರ್ಯವನ್ನು ಬಿಂಬಿಸಲು ಸಾದ್ಯ. ಒಂದು ವೇಳೆ ಮುಂಬೈನಲ್ಲಿ ಸುಮಾರು ೮೦೦ ಕೋಟಿ ರೂಪಾಯಿ ವೆಚ್ಚದ ಇಂಗ್ಲೀಷ ಚಲನಚಿತ್ರ, ಇವರ ಮುಖ್ಯ ಮಾರುಕಟ್ಟೆಯನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದರೆ ಇದೇ ಅಂಬಾನಿ ಸಾಹೇಬರ ಕಂಪನಿ ಸುಮ್ಮನಿರುವುದೇ..? ಈ ಪುರಾಣದಲ್ಲಿ ಇನ್ನೂ ಒಂದು ಮಾತು ಇಲ್ಲಿ ಹೇಳಲೇಬೇಕು, ಈ ರಾವಣ ಚಿತ್ರ ಹಿಂದಿ, ತಮಿಳು, ತೆಲುಗು ಹೀಗೆ ನೂರೆಂಟು ಭಾಷೆಯಲ್ಲಿ ನೋಡೊ ಬದಲು, ನಮ್ಮ ಭಾಷೆಯಲ್ಲೇ ’ಡಬ್’ ಆಗಿದ್ದಿದ್ದರೆ ಈ ಸಮಸ್ಯೆನೇ ಇರ್ತಿರ್ಲಿಲ್ಲ. ನಮ್ಮಲ್ಲಿ ಡಬ್ಬಿಂಗಗೆ ಅವಕಾಶ ಇಲ್ಲದಿರುವ ಪರಿಣಾಮವೇ ಈ ಸಮಸ್ಯೆ.
ಅದಿರ್ಲಿ ಈಗ ಈ ಆಜ್ಞೆ ಬರೋ ಜೂನ್ ೨೨ ರವರೆಗೆ ಜಾರಿಯಿರಲಿದ್ದು, ಅಂದು ನಡೆಯವ ವಿಚಾರಣೆಯಲ್ಲಿ ಚಲನಚಿತ್ರ ಮಂಡಳಿ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಬೇಕಿದೆ. ಪರಭಾಷಾ ಚಿತ್ರಗಳಿಗೆ ವಿಧಿಸಿರುವ ನಿಯಮಗಳ ಪಾಲನೆಯನ್ನು ಎತ್ತಿ ಹಿಡಿಯಬೇಕಿದೆ.

Tuesday 8 June 2010

ನಾಡಪರ ಚಿಂತಕರು ಯಾವ ನಾಡ ಪರ ಅನ್ನೋದು ಯಕ್ಷ ಪ್ರಶ್ನೆ.......???




"ಕನ್ನಡದ ಮನೆಯಲ್ಲಿ ಕನ್ನಡತಿಯೇ ಯಜಮಾನತಿ; ಮಿಕ್ಕ ಹೆಂಗಸರೆಲ್ಲಾ ಒಕ್ಕಲಷ್ಟೇ ಎಂಬುದರ ನಿಜವನ್ನು ಅರಿತರೆ ಎಲ್ಲರಿಗೂ ಸುಖವಾದೀತು. ಯಜಮಾನತಿ ಮಾತ್ರ ತಾನು ಧರ್ಮಪತ್ನಿ ಎಂಬ ಜಂಭದಲ್ಲಿಯೇ ನಿದ್ರೆ ಮಾಡಿದರೆ, ಊಳಿಗಗಿತ್ತಿಯೂ ಯಜಮಾನನನ್ನು ಲೂಟಿ ಮಾಡುತ್ತಾಳೆಂಬುದನ್ನು ನಾವು ನೋಡಿಲ್ಲವೇ? ಕನ್ನಡತಿ ಯಜಮಾನತಿ ಹೌದು. ಯಜಮಾನನಾದ ಆತ್ಮನಿಗೆ ಪತ್ನಿಯಾಗಿ ಶೃಧ್ಧೆಯಿರುವಂತೆ ಕನ್ನಡಿಗರ ಲಲಿತಾಂಗವನ್ನು ಕನ್ನಡ ಸ್ವಯಂಪ್ರಭೆಯಾಗಿ ಸುತ್ತಮುತ್ತಿಕೊಳ್ಳಬೇಕು". ಇದು ತಾಯಿನುಡಿ ಕನ್ನಡವಲ್ಲದ, ವರಕವಿ ದ. ರಾ. ಬೇಂದ್ರೆ ಅವರು ಕನ್ನಡ ಭಾಷೆಯ ಕುರಿತಂತೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ ಮಾತು.

ಈಗ ಯಕ್ಷ ಪ್ರಶ್ನೆ ಏನಪ್ಪಾ ಅಂದ್ರೆ, ಈ ಮೇಲಿನ ಸಾಲನ್ನು ನಮ್ಮ ಸಾಹಿತಿ ಮಹೋದಯರು, ನಾಡಪರ ಚಿಂತಕರು (ಕನ್ನಡನಾಡ ಪರ ಅಂಥ ಅನ್ಕೊಳ್ಳೋಣ), ಸಭೆ ಸಮಾರಂಭಗಳಲ್ಲೆಲ್ಲ ಕನ್ನಡ ಹಾಗಾಗಿದೆ, ಹೀಗಾಗಿದೆ, ಹಾಗಾಗಬೇಕಿದೆ, ಹೀಗಾಗಬೇಕಿದೆ ಎಂದು ಬಾಯಲ್ಲಿ ಬಡ ಬಡಿಸುವಂಥ ಹಿರಿಯರು, ಎಷ್ಟು ಜನ ಇದನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅದನ್ನು ಅನುಷ್ಟಾನಕ್ಕೆ ತರುವತ್ತ ಪ್ರಯತ್ನಪಡುತ್ತಿದ್ದಾರೆ ಎಂಬುದು. ಸಾಹಿತಿಗಳೆಂದರೆ ಒಂದರ್ಥದಲ್ಲಿ ಕನ್ನಡವನ್ನು ಉಳಿಸುವ ಬೆಳೆಸುವ ಮುಂಚೂಣಿ ನಾಯಕರು ಎಂದರ್ಥ. ಒಬ್ಬ ವ್ಯಕ್ತಿ ಕನ್ನಡದ ಸಾಹಿತಿ ಅಂಥ ಕರೆಯಿಸಿಕೊಂಡರೆ ಅವರು ಸ್ವಾಭಾವಿಕವಾಗಿ ಕನ್ನಡ ಕರ್ನಾಟಕ ಕನ್ನಡಿಗರ ಬಗ್ಗೆ ಇತರರಿಗಿಂತ ಹೆಚ್ಚು ಕಾಳಜಿ, ಗೌರವ ಇರುವವರಾಗಿರಬೇಕಲ್ಲವೇ. ಏಕೆಂದರೆ ಕನ್ನಡದಿಂದಲೇ ಅವರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವವರು. ನಮ್ಮ ನಾಡಿನಲ್ಲಿ ಸಾಹಿತ್ಯಕ್ಕೂ ಬರ ಇಲ್ಲ, ಸಾಹಿತಿಗಳಿಗೂ ಬರ ಇಲ್ಲ. ಆದರೆ ಇಲ್ಲಿ ಎದ್ದು ಕಾಣುತ್ತಿರುವುದು ಒಗ್ಗಟ್ಟಿನ ಕೊರತೆ. ರಾಜಕೀಯ ಪಕ್ಷಗಳನ್ನು ಮೀರಿಸುವಂತಹ ಬಣಗಳು ನಮ್ಮ ಕನ್ನಡ ಸಾಹಿತ್ಯದ ಮನೆಯಲ್ಲಿ. (ದಿನಪತ್ರಿಕೆಗಳಲ್ಲಿ ದಿನಾಲು ಸಾಹಿತಿಗಳ ಕಿತ್ತಾಟ ನೋಡಿ ನೋಡಿ ಬೇಸರವಾಗಿ ಬರೆದ ಲೇಖನವಿದು). ನಮ್ಮ ಸಾಹಿತಿಗಳ ದ್ವಂದ ನಿಲುವುಗಳು, ಕೆಲವರು ಸರಕಾರವನ್ನು ಮೆಚ್ಚಿಸುವ ರೀತಿಯಲ್ಲಿ ನೀಡುವ ಹೇಳಿಕೆಗಳು ಹಿಂದಿನ ಕಹಿ ಅನುಭವಗಳಿಂದ ಸಾಬೀತಾಗಿದೆ. ಕೆಲವರಂತೂ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿರುವುದು ನಿಜಕ್ಕೂ ಘನತೆಗೆ ತಕ್ಕದ್ದಲ್ಲ. ರಾಜ್ಯದಲ್ಲಿ ಸೋನಿಯಾ ಮೇಡಮ್ ಅವರ ಸರ್ಕಾರವಿದ್ದಾಗ ಮುಂಚೂಣಿಯಲ್ಲಿದ್ದು ಬೀದಿಗಿಳಿದು ಹೋರಾಟಗಳನ್ನು ಮಾಡಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಕೆಲವರಿಗೆ, ಸುಷ್ಮಾ ಮೇಡಮ್ (ಗಣಿ ದಣಿಗಳ ಮಾತೆ) ಅವರ ಸರ್ಕಾರ ಬಂದ ಮೇಲೆ ಮಾತುಗಳೇ ಹೊರಡುತ್ತಿಲ್ಲ. ಇದರಿಂದ ಅವರು ನಾಡ ಪರವೋ, ಪಕ್ಷದ ಪರವೋ ಎಂಬ ಸಂಶಯಗಳು ಸ್ವಾಭಾವಿಕವಾಗಿ ಜನರ ಮನಸ್ಸಿನಲ್ಲಿ ಮೂಡಲಾರಂಭಿಸಿವೆ. ಸಾಹಿತಿಗಳು, ನಾಡಪರ ಚಿಂತಕರು ಸರ್ಕಾರದ ಜೊತೆ ಸೇರಿ ಸಲಹೆ ಸೂಚನೆಗಳನ್ನು ಕೊಡುವುದೇನು ಒಳ್ಳೆಯ ನಡೆ. ಆದರೆ ಅದು ಸರ್ಕಾರ ತಪ್ಪು ಹೆಜ್ಜೆ ಇಟ್ಟ ಸಂದರ್ಭದಲ್ಲೂ ಬೆಂಬಲಿಸುವಂಥ ಮಟ್ಟಿಗೆ ಹೋಗಬಾರದಲ್ಲವೇ. ತಿರುವಳ್ಳವರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಆಗಿದ್ದು ಇದೇ ತಾನೆ. “ಕನ್ನಡಿಗರು ವಿಶಾ.....ಲ ಹೃದಯದವರು” ಎಂಬ ಮಾತನ್ನು ಸಾಬೀತು ಮಾಡಲು ಪ್ರತಿಮೆ ಅನಾವರಣ ಪರ ಮಾತನಾಡಿದರು. ಇದರಿಂದ ಕನ್ನಡಿಗರ ಕಿವಿ ಮೇಲೆ ಈಗಾಗಲೇ ಇರುವ ಹೂಗಳ ಜೊತೆಗೆ ಮತ್ತೊಂದು ಹೂ (ಕ್ರೇಜಿ ಸ್ಟಾರ್ ’ಹೂ’ ಅಲ್ಲ) ಇಟ್ಟಂತಾಗುತ್ತದೆ ಎಂಬ ಪರಿಜ್ನಾನವೂ ಇಲ್ಲದ ಇವರು ಯಾವ ಸೀಮೆ ನಾಡಪರಚಿಂತಕರು. (ಹೀಗೆ ಆದರೆ ’ಕನ್ನಡಿಗರು ವಿಶಾ...ಲ ಹೃದಯದವರು’ ಎಂಬ ವಾಕ್ಯ ಕೇಳಿ ಕೇಳಿ ಮುಂದೊಂದು ದಿನ ಮೈ ಉರಿಯುವ ಹಾಗಾಗದೇ ಇರುವುದೇ..?)


ಪ್ರತಿಮೆ ಪುರಾಣನೂ ಆಯಿತು, ನಿರೀಕ್ಷಿಸಿದಂತೆ ಅವರ ಮತಗಳೂ ಬಂದವು. ಅವರು ತಮ್ಮ ಪಾಡಿಗೆ ತಾವು ಕೆಲಸನೂ ಶುರು ಮಾಡಿದರು. ನಮ್ಮ ನಾಡಪರ ಚಿಂತಕರು (ಕನ್ನಡನಾಡ ಪರ ಅಂಥ ಅನ್ಕೊಳ್ಳಿ ಇನ್ನೊಮ್ಮೆ ಪ್ಲೀಸ್) ಊಹಿಸಿದ ಯಾವ ಭಾಂಧವ್ಯ, ಯಾವ ಸಾಮರಸ್ಯ ಬೆಸೆಯಿತು ಎಂಬುದು ಈಗಾಗಲೇ ಅರ್ಥ ಆಗಿರಬೇಕು. ಭಾಂಧವ್ಯ ಬೆಸೆಯಲು ಒಬ್ಬರೇ ’ವಿಶಾ...ಲ ಹೃದಯದವರು’ ಆಗಿದ್ದರೆ ಸಾಲದು ಸ್ವಾಮಿ, ಇನ್ನೊಬ್ಬರಿಗೂ ಆ ನಿಯತ್ತು ಇರಬೇಕಲ್ಲವೇ. ಹಿಂದುಸ್ಥಾನ ಮತ್ತು ಪಾಕಿಸ್ಥಾನ ಭಾಂಧವ್ಯ ಬೆಳೆಯದಿರಲು ಕೂಡ ಇದೇ ಕಾರಣವಲ್ಲವೇ..? ಇಷ್ಟೆಲ್ಲ ಆದರೂ, ಹೊಗೆನಕ್ಕಲನಲ್ಲಿ ಕೆಲಸ ಭರದಿಂದ ಸಾಗಿದ್ದರೂ, ಅಲ್ಲಿ ಕನ್ನಡಿಗರ ಪ್ರವೇಶಕ್ಕೆ ನಿರ್ಭಂಧ ಹೇರಿದ್ದರೂ, ಮಾತನಾಡದ, ತುಟಿ ಬಿಚ್ಚದ ಇವರನ್ನು ನಮ್ಮ ನಾಡಿನ ರತ್ನಗಳು ಎಂದು ಯಾವ ಬಾಯಿಂದ ಹೇಳುವುದು. ಇತ್ತೀಚಿಗೆ ಕರ್ನಾಟಕ ಸರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಸಿ..ಬಿ.ಎಸ್.ಸಿ ಶಾಲೆಗಳನ್ನು ತೆರೆಯುವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಇವರು ಎಂತಹ ಕನ್ನಡಾಭಿಮಾನಿಗಳು ಎಂದು ಒಂದು ಸಲ ಸ್ಪಷ್ಟ ಪಡಿಸಲಿ. ಇನ್ನೂ ಕೆಲವರಿಗೆ ಜಾತಿ ಮೇಲೆ ಮೋಹ (ಪ್ರೇಮ ಅಲ್ಲ). ತಮ್ಮ ಮೋಹಕ್ಕೆ ಮತ್ತೊಬ್ಬರ ಮೇಲೆ ಎಗರಾಡಿ ಕನ್ನಡವನ್ನು ನಿರ್ಲಕ್ಷಿಸುತ್ತಿರುವುದನ್ನು ನಾವೂ ನೋಡಿಲ್ಲವೇ. ಅಲ್ಲ ಸ್ವಾಮಿ, ಈ ಥರ ಎಲ್ಲರೂ ತಮ್ಮ ತಮ್ಮ ಸ್ವಯಂಘೋಷಿತ ಒಂದೊಂದು ತತ್ವ ಸಿದ್ಧಾಂಥಗಳನ್ನೇ ಜನರಿಗೆ ವೇದ ವಾಕ್ಯಗಳೆಂದು ಹೇಳುತ್ತಿದ್ದರೆ, ಕನ್ನಡದ ತತ್ವ ಸಿದ್ಧಾಂಥ ಏಳಿಗೆ ಕಡೆಗೆ ಗಮನ ಹರಿಸುವವರ್ಯಾರು ಮಾರಾಯ್ರೇ..? ನಾವು ರಾಜ್ಯ ಬಿಟ್ಟು ಹೊರಗಡೆ ಇದ್ದಾಗ ಅಲ್ಲಿ ನಮ್ಮನ್ನು(ಕನ್ನಡಿಗರನ್ನು) ಕೂಡಿಸುವುದು ಯಾವ ಜಾತಿ..?, ಕನ್ನಡ ಜಾತಿನೇ ಅಲ್ಲವೇ. ಅಲ್ಲಿ ಯಾವ ಬೇರೆ ಜಾತಿಯ ಸುಳಿವೇ ಇರುವುದಿಲ್ಲ. ನನ್ನ ಒಂದು ಘಟನೆ ನೆನಪಾಯ್ತು. ನಾನು ಒಮ್ಮೆ ಬೇರೆ ರಾಜ್ಯದಲ್ಲಿ ಇದ್ದಾಗ, ಹೀಗೆ ಅಚಾನಕ್ಕಾಗಿ ಒಬ್ಬ ಕನ್ನಡಿಗ ಸಿಕ್ಕರು. ಖುಷಿಯಾಯ್ತು. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿದ್ದು ಏನಪ್ಪಾ ಅಂದ್ರೆ ಅವರು ಹೇಳಿದ ಮಾತು. "ಹಿಂದಿ ಇಂಗ್ಲೀಷ ಮಾತನಾಡಿ ನನ್ನ ನಾಲಿಗೆ ಕೊಳೆಯಾಗಿತ್ತು, ಈಗ ನೀವು ಸಿಕ್ರಲ್ಲ, ಇನ್ ಮೇಲೆ ಸ್ವಚ್ಚ ಆಗುತ್ತೆ" ಅಂಥ. ಅವರು ಒಬ್ಬ ಮುಸ್ಲಿಮ್ ಕನ್ನಡಿಗ ಅನ್ನೋದು ಗಮನಾರ್ಹ. ಹೀಗೆ ಹೊರನಾಡ ಕನ್ನಡಿಗರಲ್ಲಿ ಇರುವಂತಹ ಆ ಅಭಿಮಾನ, ಆ ನಮ್ಮತನ ಒಳನಾಡಿನಲ್ಲಿರುವವರಿಗೂ ತುಂಬುವ ಕೆಲಸ ಮಾಡಬೇಕಾದ ನಮ್ಮ ಹಿರಿಯರೇ ಹೀಗೆ ಸ್ವಾರ್ಥಿಯಾದರೆ ಹೇಗೆ ಸ್ವಾಮಿ. ಯುವಕರಲ್ಲಿ ಸ್ಪೂರ್ತಿ ತುಂಬಬೇಕಾದ ಇವರೇ ಹೀಗೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಮುಂದಿನ ಪೀಳಿಗೆಗೆ ಕನ್ನಡವನ್ನು ಕೊಂಡೊಯ್ಯಲು ಸಾದ್ಯವೇ. ದೇವಸ್ಥಾನದ ಗರ್ಭಗುಡಿಯಲ್ಲೇ ದೇವರು ಇಲ್ಲದ ಮೇಲೆ ಹೊರಗಡೆ ಎಷ್ಟು ಮೂರ್ತಿಗಳನ್ನಿಟ್ಟರೂ ಏನು ಪ್ರಯೋಜನ..? ಕನ್ನಡ ನಾಡಿನಲ್ಲೇ ಕನ್ನಡವಿಲ್ಲದಿದ್ದರೆ, ಹೊರನಾಡಿನಲ್ಲಿ ಎಷ್ಟು ಕನ್ನಡ ಸಂಘಗಳನ್ನು ಮಾಡಿದರೂ ಏನು ಪ್ರಯೋಜನ. ಕರ್ನಾಟಕದಲ್ಲೇ ಕನ್ನಡವಿಲ್ಲದಿದ್ದರೆ, ಮುಂದೊಂದು ದಿನ, ಹೊರನಾಡಿನಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸುವುದು, ಸಭೆ ಸಮಾರಂಭಗಳನ್ನು ನಡೆಸುವುದು ನಗೆ ಚಾಟಿಕೆ ಆಗುತ್ತದೆ ಎಂಬುದನ್ನು ಯಾರಾದರೂ ಅಲ್ಲಗಳೆಯಲು ಸಾದ್ಯವೇ..?


ಏಕೀಕರಣದ ಸಂದರ್ಭದಲ್ಲಿ ಎಲ್ಲ ಮಹೋದಯರು ತಮ್ಮ ಸ್ವಹಿತ, ಪ್ರತಿಷ್ಟೆಯನ್ನು ಬದಿಗಿಟ್ಟ ಪರಿಣಾಮವಾಗಿಯೇ ಈ ನಾಡಿನ ಉದಯವಾಯಿತು. ಈಗ ಅದನ್ನು ಬೆಳೆಸಲು ಎಲ್ಲರೂ ತಮ್ಮ ಸ್ವಹಿತವನ್ನು ಬದಿಗಲ್ಲ, ಊರಾಚೆಯಿಡಬೇಕಲ್ಲವೇ...?

Friday 7 May 2010

ಶಂಖದಿಂದ್ ಬಂದ್ರನೇ ತೀರ್ಥ.................!!!







ಸುದ್ದಿ: ಹೊಗೆನಕ್ಕಲ್ ಯೋಜನೆ ಕುರಿತು ರಾಜ್ಯ ಸಂಸದರಿಂದ ಪ್ರದಾನ ಮಂತ್ರಿ ಭೇಟಿ........
ಅದರ ಕುರಿತು ಹಳ್ಳಿಯ ಒಂದು ಕಟ್ಟೆಯ ಮೇಲೆ ನಡೆದ ಒಂದು ಸಂವಾದದ ಕಿರುನೋಟ, (ಹಾಗೇ ಸುಮ್ಮನೆ).................


ಗುಂಡ: ಲೇ ತಿಮ್ಮ ಇವತ್ತಿನ್ ಪೇಪರ್ ನೋಡಿಯೇನ....?
ತಿಮ್ಮ : ಇಲ್ಲ ಯಾಕ..?

ಗುಂಡ: ನಮ್ಮ ಎಂಪಿಗೋಳು ನಿನ್ನೆ, ಹೊಗೆನಕ್ಕಲ್ ಸಮಸ್ಯೆ ಬಗಿ ಹರಸ್ರಿ ಅಂತ್ ಹೇಳಾಕ್ ಪ್ರದಾನಮಂತ್ರಿ ಅವರ್ನ್ ಭೆಟ್ಟಿ ಆಗ್ಯಾರಂತ್.
ತಿಮ್ಮ: ಹೌದಾ..!

ಗುಂಡ: ಹೌದಲೇ, ನಮ್ಮ ಎಂಪಿಗೋಳು ಎಲ್ಲಾರು ಪಕ್ಷಭೇಧ ಮರತು, ಎಲ್ಲಾರು ಸೇರಿ, ಪ್ರದಾನ ಮಂತ್ರಿಯವರ್ನ್ ಭೆಟ್ಟಿ ಅಗ್ಯಾರಂತ್. ಇದು ಅಂದ್ರ್ ನೋಡಪಾ ನಮ್ಮ ಎಂಪಿಗೋಳು ಒಗ್ಗಟ್ಟ್ ಅಂದ್ರ. ತಮಿಳನಾಡಿನವ್ರಿಗಿ ಇನ್ ಮ್ಯಾಗ್ ಚಾಲೊ ಆಯ್ತ್ ನೋಡ್ ಮಾರಿ ಹಬ್ಬ. ನೀ ಎನಂತಿ..?
ತಿಮ್ಮ: ಲೇ ನಿಮ್ಮಾಯಿ, ಯಾವ ಜಗತ್ತಿನ್ಯಾಗ್ ಅದಿಯೋಲೆ ನೀ. ಇವತ್ತ್ ನಮ್ಮ ಎಂಪಿಗೋಳ್ ಎಲ್ಲಾರೂ ಸೇರಿ ದಿಲ್ಲಿಗಿ ಹೋಗಿ ಪ್ರದಾನ ಮಂತ್ರಿಯವರ್ನ್ ಭೆಟ್ಟಿ ಆಗ್ಯಾರಂದ್ರ ಅದರ್ ಹಿಂದ್ ಎನೇನ್ ರಾಮಾಯಣ, ಮಹಾಭಾರತ್ ನಡೆದೈತಿ ಅಂತ್ ಗೊತ್ತೈತೇನ್...? ಇವತ್ತ್ ಇವರು ತಮ್ಮ ಉಟ್ಟ ಅರಿಬಿ ಮ್ಯಾಗ್, ದಿಲ್ಲಿಗಿ ಖಬರ್ ಹಾರಿ ಹೊಗ್ಯಾರ ಅಂದ್ರ ಅದಕ್ಕ ಯಾರ್ ಕಾರಣ ಅನ್ನೂದು ಗೊತ್ತೈತೇನ್..? ಸುಮ್ ಸುಮ್ನ ತಲಿ ಕೆಟ್ಟ್ಂಗ್ ಮಾತಾಡ್ತಿಲಾ. ಇವತ್ತ್ ಅವರ್ ದಿಲ್ಲಿಗಿ ಹೊಗ್ಯಾರ್ ಅಂದ್ರ ಅದಕ್ಕ ನಮ್ಮ ಕರವೇ ಕಾರಣಪಾ.

ಗುಂಡ: ಹೌದಾ..? ಖರೇನಾ...?
ತಿಮ್ಮ: ಹೂನೋ ಮಾರಯ್ಯ. ರಾಜ್ಯದ ಸಮಸ್ಯೆ ಬಂದಾಗ ಇವರ್ ಅಷ್ಟ ಒಗ್ಗಟ್ಟಾಗಿ ಇರ್ತಿದ್ರಪಾ ಅಂದ್ರ, ಹೊಗೆನಕ್ಕಲ್, ಬೆಳಗಾವಿ ಮತ್ ಎನೇನ್ ರಾಜ್ಯದ ಸಮಸ್ಯೆ ಅದಾವ್, ಎಲ್ಲ ನಾವ್ ಹುಟ್ಟುಕಿಂತ್ ಮದ್ಲ ಬಗಿ ಹರಿತಿದ್ವು. “ಇವ್ರು, ತಮ್ಮ್ ಹೈ ಕಮಾಂಡ್ ಪರ್ಮಿಷನ್ ಕೊಟ್ಟ್ ಮ್ಯಾಗೆ ಮುಂಜಾನಿ ಮಾಡು ದಿನನಿತ್ಯದ ಕೆಲಸಗಳನ್ನ್ ಮಾಡೊದು. ಇಲ್ಲ ಅಂದ್ರ್ ಇಲ್ಲ (ಅಷ್ಟೊಂದ್ ಪ್ರಾಮಾಣಿಕರು)”. ಇವ್ರ್ ಹಿಂಗ್ ಅದಾರ್ ಅಂತ್ ಹೇಳೆ ಅವು ಸಮಸ್ಯೆ ಇನ್ನೂ ಉಳ್ಕೊಂಡಾವ್. ಇವ್ ಹಿಂಗ್ ಮುಂದ್ ನಮ್ಮ್ ಮಕ್ಳು ಮೊಮ್ಮಕ್ಕಳ್ ಕಾಲದ ತನಕ ಮುಂದುವರಿಬಾರದು ಅಂತ್ ಹೇಳಿ, ನಮ್ಮ್ ಕರವೇ ಅವರು ಇದನ್ನ್ ಬಗಿಹರಿಸಬೇಕಂತ್ ಬೆನ್ನ್ ಹತ್ಯಾರ್. ನಮ್ ಎಂಪಿಗೋಳು ದಿಲ್ಲಿಗಿ ಹೋಗ್ಲಾಕು ಇವರು ಹಿಂದ್ ನಿಂತ್ ಕೀಲಿ ಕೊಟ್ಟಿದ್ದೆ ಕಾರಣ. ನಮ್ ಕರವೇ ದವ್ರು ಇವರ್ ಮನಿ ಮುಂದ್ ಧರಣೀ, ಪ್ರತಿಭಟನೆ ಮಾಡಿದ್ ಮ್ಯಾಗ್ ಇವ್ರಿಗಿ, ಬುಡಕ್ ಬೆಂಕಿ ಹತ್ತತು. ಅವಾಗ್ ಎಚ್ಚರ್ ಆದ್ರು. ಇವ್ರು ಕರ್ನಾಟಕನ ನಮ್ಮ್ ಮನಿ, ಅಂಥ್ ತಿಳ್ಕೊಂಡಿದ್ರ ಹಿಂಗ್ಯಾಕ್ ಆಗ್ತಿತ್ತು. ಆದ್ರ್ ಇವ್ರು ಹಂಗ್ ತಿಳ್ಕೊಂಡಿಲ್ಲ, ತಮ್ಮ ಮತಕ್ಷೇತ್ರ ಮಾತ್ರ ತಮ್ ಮನಿ(ಸ್ವಲ್ಪ ಮಂದಿ ಅದೂ ಇಲ್ಲ), ಉಳಿಕಿದ್ದು ಏನೂ ಸಂಬಂದ ಇಲ್ಲ, ಅನ್ನು ಹಂಗ್ ವರ್ತಿಸ್ತಾರ್. ತಮ್ಮ್ ಸ್ವಂತ ಮನಿಗಿ ಹಾನಿ ಆದಗ್ಲೇ ಇವ್ರಿಗಿ ಬುಡಕ್ಕ್ ಬೆಂಕಿ ಹತ್ತುದು, ಎಚ್ಚರ್ ಆಗುದು, ಉಟ್ಟ ಅರಿಬಿನ್ಯಾಗ್ ದಿಲ್ಲಿಗಿ ಹೋಗುದು. ಅಲ್ಲಿ ತನಕ ತಮ್ ತಮ್ಮ ಲೋಕದಾಗ್ ಇರ್ತಾರ್ ಇವ್ರು, ಬೆಳಗಾವಿಯರೇ ಹೋಗ್ಲಿ, ಹೊಗೆನಕ್ಕಲಾದ್ರು ಹೋಗ್ಲಿ. ವಿಧಾನಸೌದಕ್ಕ್ ಚಲೋ ರೇಟ್ ಬಂದ್ರ ಅದನ್ನೂ ಮಾರಿಬಿಡ್ತಾರ್, ಅಂತವ್ರು ಇವ್ರ್. ಇಂತವರ್ನ್ ಆರ್ಸಿದ್ದಕ್ಕ್ ನಮ್ಮ್ ಕೆರು ತೊಗೊಂಡ್ ನಾವೇ ಹೊಡ್ಕೊಬೇಕ್ ಅನಸ್ತೈತಿ...

ಗುಂಡ: ಹಂಗದ್ರ ಇವ್ರಿಗಿ ಅವಾಗವಾಗ್ ಕೀಲಿ ಕೊಟ್ಟ್ ಮುಂದ್ ನಡಸ್ಲಿಕ್ ಒಬ್ರು ಬೇಕು ಅಂದಂಗಾಯ್ತು.( ನಮ್ಮ್ ಮಕ್ಳು ಆಡು ಆಟಿಗಿ ಸಾಮಾನ್ ಇದ್ದಂಗ್, ಚಾವಿ ಕೊಟ್ಟ್ರ ಮುಂದ್ ಹೊಗ್ತಾವ್, ಇಲ್ಲ ಅಂದ್ರ್ ಇಲ್ಲ.)
ತಿಮ್ಮ: ಹೌದ್ ಹೌದ್. ನಮ್ಮ್ ಹಿರಿಯಾರ್ ಅದಕ್ಕ್ ಹೇಳ್ಯಾರ್, ಶಂಖದಿಂದ ಬಂದ್ರನೇ ತೀರ್ಥ ಅಂಥ. ಚಂದಂಗೆ ಹೇಳಿದ್ರ ಕೇಳುದಿಲ್ಲ ಇವ್ರು. ಒಟ್ಟಿನ್ಯಾಗ್ ಈಗಾದ್ರೂ ಎಚ್ಚರ ಆಗ್ಯಾರ್ ಅಷ್ಟೇ ಖುಶಿ. ಆದ್ರ್ ನಮ್ಮವ್ರು ಭಾಳ್ ಎಚ್ಚರಿಕೆಯಿಂದ್ ಇರ್ಬೇಕು, ಯಾಕ್ ಅಂದ್ರ್ ನಮ್ಮ್ ರಾಜಕಾರಣಿಗೋಳು "ಜನರ ಕಿವಿ ಮ್ಯಾಗ್ ನಮ್ಮ್ ಬೆಂಗಳೂರಿನ್ ಲಾಲಬಾಗ್ ಇಡ್ಲಾಕ್ ಎತ್ತಿದ್ ಕೈ". ಸುಮ್ ಸುಮ್ನ ಪೇಪರ್ನ್ಯಾಗ್ ಫೋಟೊ ಬರ್ಲಾಕ್ ಫೊಜ್ ಕೊಟ್ಟ, ಆಮೇಲಿ ಚಿನ್ನ ತಂಬಿ, ಬೆಳ್ಳಿ ತಂಬಿ, ತಾಮ್ರ ತಂಬಿ, ಕಬ್ಬಿಣದ ತಂಬಿ ಅಂಥ ಎಲ್ಲಾರೂ ಒಂದೊಂದ್ ತಂಬಿಗಿನ ಕೈಗ್ ಕೊಟ್ಟ್ರು ಅಂದ್ರ ನಾನು ನೀನು ಇಬ್ಬರೂ ಸೇರಿ ಗೋಳಗುಮ್ಮಟಕ್ಕ್ ಹೋಗಿ ಬಾಯಿ ಬಾಯಿ ಬಡ್ಕೊಬೇಕಾತೈತಿ.
ಹ್ಹಾ..............

LAST SIP: IMPORTANT QUOTE FROM ABRAHIM LINKON SUITS TO THE SITUATION.
“DEMOCRACY IS ELECTED BY FOOLS, AND RULING BY FRAUDS”.

Tuesday 6 April 2010

ಬೆಳಕಿಗೆ ಬಾರದ ಹೋರಾಟದ ತಲೆಗಳು ಮತ್ತು ಮುನ್ನುಡಿ ಬರೆದ ಕೈಗಳು...............






ಗೆಳೆಯರೆ..........

ಕರ್ನಾಟಕದಲ್ಲಿ ಇದೇ ಪ್ರಪಥಮ ಬಾರಿಗೆ ರೇಲ್ವೆ ನೇಮಕಾತಿ ಪರೀಕ್ಷೆಗಳು ನಮ್ಮ ರಾಜ್ಯ ಭಾಷೆ ಕನ್ನಡದಲ್ಲಿ ನಡೆಯುತ್ತಿವೆ. ಇದರಿಂದ ಕನ್ನಡ ಮಾದ್ಯಮ ವಿದ್ಯಾರ್ಥಿಗಳಿಗೆ ಆಗುವ ಲಾಭ ಅಷ್ಟಿಷ್ಟಲ್ಲ. ಅದಕ್ಕಾಗಿಯೇ ಕನ್ನಡದಲ್ಲಿ ಪರೀಕ್ಷಾ ಮಾರ್ಗದರ್ಶಿ ಹೊತ್ತಿಗೆಗಳು ಬರಲಾರಂಭಿಸಿವೆ. ಕನ್ನಡದ ಸಾಮಾನ್ಯ ಜ್ನಾನದ ಹೊತ್ತಿಗೆಗಳು ಹೆಚ್ಚು ಹೆಚ್ಚು ಮಾರಾಟವಾಗುತ್ತಿವೆ. ಅಭ್ಯರ್ಥಿಗಳು ಹಿಂದಿನದಕ್ಕಿಂತ ಹೆಚ್ಚು ಉತ್ಸಾಹದಿಂದ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಹಳ್ಳಿಯ ವಿದ್ಯಾರ್ಥಿಗಳಲ್ಲಂತೂ ಹೊಸ ಹೊಸ ಆಸೆಗಳು, ಹೊಸ ಹೊಸ ಬಯಕೆಗಳು ಚಿಗುರೊಡೆಯತೊಡಗಿವೆ. (ಇವು ಹೆಸರಿಸಲು ಮಾತ್ರ, ಇನ್ನು ಸಾಕಷ್ಟಿವೆ).
ಕರ್ನಾಟಕದಲ್ಲಿ ಆಗುತ್ತಿರುವ ಈ ಬದಲಾವಣೆಗಳಿಗೆ ಯಾರು ಕಾರಣರು ಎಂದು ಕೇಳಿದರೆ ಹೆಚ್ಚಿನವರು ಬೆರಳು ತೋರಿಸುವುದು ಕೇಂದ್ರ ರೇಲ್ವೆ ಸಚಿವೆ ಮಮತಾ ಬ್ಯಾನರ್ಜಿ, (ಒಂದು ವಿಧದಲ್ಲಿ ಅಭಿನಂದನಾರ್ಹರು) ಕೇಂದ್ರ ರೇಲ್ವೆ ಸಹಾಯಕ ರಾಜ್ಯ ಸಚಿವ ಹೆಚ್. ಮುನಿಯಪ್ಪ, ಮತ್ತೊಬ್ಬ ಸಚಿವ ವೀರಪ್ಪ ಮೊಯ್ಲಿ (ಇಬ್ಬರೂ ಲೋಕಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರಾಕರಿಸಿದಂಥ ಕನ್ನಡಿಗರು) ಇಟಿಸಿ, ಇಟಿಸಿ.............
ಆದರೆ ಈ ಸಾದನೆಯ ಹಿಂದೆ ಇರುವ ನಿಜವಾದ ತಲೆಗಳೆಂದರೆ, ಈ ಬದಲಾವಣೆಗೆ ಮುನ್ನುಡಿ ಬರೆದ ಶುಧ್ಧ ಕೈಗಳೆಂದರೆ ನಮ್ಮ ಕನ್ನಡ ಪರ ಹೋರಾಟಗಾರರು. ಅವರ ನಿರಂತರ ಹೋರಾಟ, ಸತತ ಒತ್ತಡದ ಪರಿಣಾಮವಾಗಿ ಇಂದು ಕನ್ನಡದಲ್ಲಿ ರೇಲ್ವೆ ನೇಮಕಾತಿ ಪರೀಕ್ಷೆಗಳನ್ನು ಬರೆಯಬಹುದಾಗಿದೆ. ಇದನ್ನು, ನಮ್ಮನ್ನಾಳಿದ ’ಕೈ’ ಯಲ್ಲಿ ’ಕಮಲ’ದ ಹೂವನ್ನು ಹಿಡಿದ ’ಮಣ್ಣಿನ ಮಕ್ಕಳು’ ಇನ್ನೂ ೫೦ ವರ್ಷ ರಾಜ್ಯವನ್ನಾಳಿದ್ದರೂ ಸಾದಿಸಲಾಗುತ್ತಿರಲಿಲ್ಲ. ಯಾವ ರಾಜಕೀಯ ಪಕ್ಷವು (ಇಡೀ ದೇಶದಲ್ಲಿ) ಮಾಡದಂಥ ಇಂಥ ಸಾದನೆಯನ್ನು ನಮ್ಮ ಕನ್ನಡ ಪರ ಹೋರಾಟಗಾರರು ಮಾಡಿದ್ದು ನಿಜಕ್ಕೂ ಎದೆ ತಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳುವಂತಹ ವಿಷಯ. ಇದರಿಂದ ಕೇವಲ ಕನ್ನಡಕ್ಕಷ್ಟೆ ಅಲ್ಲದೇ ದೇಶದಲ್ಲಿರುವ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಲಾಭವಾಗಲಿದೆ. ಎಲ್ಲ ಪ್ರಾದೇಶಿಕ ಭಾಷೆಯ ಅಭ್ಯರ್ಥಿಗಳು ಇದರ ಲಾಭ ಪಡೆಯಲಿದ್ದಾರೆ. ಆದರೆ ವಿಪರ್ಯಾಸವೆಂದರೆ ಹೆಚ್ಚಿನವರಿಗೆ ಇದರ ಹಿಂದಿರುವ ಕೈಗಳ ಬಗ್ಗೆ, ಆ ಹೋರಾಟಗಾರರ ಬಗ್ಗೆ ಅರಿವೇ ಇಲ್ಲ. ಹೋರಾಟದ ಹಾದಿಯಲ್ಲಿ ಹೋರಾಟಗಾರರು ಅನುಭವಿಸಿದ ಕಷ್ಟ, ಯಾತನೆಗಳನ್ನು ಅಷ್ಟು ಸಲೀಸಾಗಿ ಮರೆಯಲು ಸಾದ್ಯವೇ...?
ಏನಿದು ವ್ಯವಸ್ಥೆ..? ಕನ್ನಡವನ್ನು ಕಡೆಗಣಿಸಿದವನಿಗೆ ಕನ್ನಡದ ಸಾದನೆಯ ಕಿರೀಟ,, ಮೂರು ಹೊತ್ತು ಕನ್ನಡ ಕನ್ನಡಿಗ ಕರ್ನಾಟಕ ಎಂದು ಜಪಿಸುತ್ತಿರುವವರಿಗೆ,, ಪೋಲಿಸರ ಲಾಠಿ ಏಟು, ನೂರಾರು ಕೇಸುಗಳು, ಹತ್ತಾರು ದಿನಗಳ ಜೈಲು ವಾಸ, ಕುಟುಂಬದಿಂದ ದೂರವಿದ್ದವರಿಗೆ ಇದರ ಅಭಿನಂದನಾರ್ಹರ ಪಟ್ಟಿಯಲ್ಲಿ ಸ್ಥಾನವೇ ಇಲ್ಲ. ಇಷ್ಟೆಲ್ಲ ಇವರು ಮಾಡುತ್ತಿರುವುದು ಯಾರ ಸಲುವಾಗಿ...? ಕನ್ನಡದ ಮಕ್ಕಳ ಸಲುವಾಗಿ, ಕನ್ನಡ ಮಾದ್ಯಮದಲ್ಲಿ ಕಲಿತು ಒಂದು ರೀತಿಯ ಸಮಾಜದ ನಿರ್ಲಕ್ಷ ಮನೋಭಾವನೆಯಿಂದ ನೊಂದಿರುವ ಕನ್ನಡ ಮಕ್ಕಳ ಹೆತ್ತವರ ಸಲುವಾಗಿ, ಕನ್ನಡವನ್ನು ಕಲಿತರೆ ಕೆಲಸ ಸಿಗುವುದಿಲ್ಲ ಎಂಬ ಸ್ವಯಂ ಘೋಷಿತ ಅಪನಂಬಿಕೆಯಿಂದ ಜನರನ್ನು ದೂರ ಮಾಡುವ ಸಲುವಾಗಿ. ನಿಜವಾಗಿಯೂ ಕನ್ನಡಿಗರು ಅಭಿನಂಧನೆ, ಧನ್ಯವಾದಗಳನ್ನು ಸಲ್ಲಿಸಬೇಕಾಗಿರುವುದು ಹಗಲಿರುಳು ಹೋರಾಡಿದ ಕನ್ನಡ ಪರ ಹೋರಾಟಗಾರರಿಗೆ ಹೊರತು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ, ಹವಾನಿಯಂತ್ರಿತ ಕೊಠಡಿಯಲ್ಲಿ ೨೪*೭ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗುವಂಥ ನಿರಾಭಿಮಾನಿ ರಾಜಕಾರಣಿಗಳಿಗಲ್ಲ.
ಈ ವ್ಯವಸ್ಥೆಗೆ ನಮ್ಮದೊಂದು ಧಿಕ್ಕಾರ.............

ಕೊನೆಯ ರೈಲು (ಅಲ್ಲ, ರೀಯಲ್ಲು) : ‘ವೀರ ಕನ್ನಡಿಗ’ ಚಿತ್ರದ ಈ ಹಾಡು ನಿಜವಾಗಿಯೂ ಕನ್ನಡ ಪರ ಹೋರಾಟಗಾರರಿಗೆ ಹೇಳಿ ಮಾಡಿಸಿದ ಹಾಡು.

ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನಮಗಿಂದು, ನಮ್ಮ ನಿದ್ರೆ ಕಳೆಯುತ್ತಿದ್ದರೆ ಸಹಿಸುವವ ನೀನಲ್ಲ...............
ಕೆಂಪು ಹಳದಿ ಭಾವುಟಕ್ಕೆ ನೀನೆ ತಾನೇ ಭಾವುದಂಡ, ನಿನ್ನ ಯುಧ್ಧ ಸತ್ಯ ಶುಧ್ಧ ನಡೆದರೆ ಸೋಲಿಲ್ಲ...............
ನಮಗಾಗಿ ಹುಟ್ಟಿದ ನೀನು ಕಾಪಾಡೊ ಕಾಮಧೇನು ಜ್ವಾಲಾಮುಖಿ ವೈರಿಗೆ............
ಹೇ ಧೀರ, ಹೇ ಧೀರ ಎದುರಾರೊ..? ನಿನಗೆ
ಮನೆ ದೀಪ ಮನೆ ಬೇಲಿ ನಿನಾದೆ ನಮಗೆ..
ಹೇ....................................................
ನಾಡು ಕರುನಾಡು ಎಲ್ಲಾ ನಿನ್ನದು,
ನೀ ತಂದ ವಿಜಯ ಸದಾ ನಮ್ಮದು.
ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನಮಗಿಂದು, ನಮ್ಮ ನಿದ್ರೆ ಕಳೆಯುತ್ತಿದ್ದರೆ ಸಹಿಸುವವ ನೀನಲ್ಲ...............

Monday 15 March 2010

ನಮ್ಮ ಹಣ, ನಮ್ಮ ಹಕ್ಕು.................!!


ಇಂದು (ಮಾರ್ಚ್ ೧೫) ವಿಶ್ವ ಗ್ರಾಹಕರ ಹಕ್ಕುಗಳ ದಿನ. ಇದೊಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಹಕ್ಕುಗಳ ಮತ್ತು ಅವರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಬೆಳಕು ಚೆಲ್ಲಲು ಒದಗುವ ಒಂದು ವಾರ್ಷಿಕ ಸಂದರ್ಭ. ಈ ವರ್ಷದ ಈ ದಿನದ ವಿಷಯ " ನಮ್ಮ ಹಣ, ನಮ್ಮ ಹಕ್ಕು" (“Our money, Our rights”). ಈ ವಿಷಯದ ಹಿಂದಿರುವ ಉದ್ದೇಶ ಅಥವಾ ಪ್ರೇರಣೆ ಏನೆಂದರೆ ಗ್ರಾಹಕರಿಗೆ "ವಿಶ್ವಾಸಾರ್ಹ ಆರ್ಥಿಕ ಸೇವೆ" ಕಲ್ಪಿಸಿಕೊಡುವುದು. ಈ ಗುರಿಯ ಬೆನ್ನಟ್ಟಿ ಈಗಾಗಲೇ ಅನೇಕ ಗ್ರಾಹಕರ ಸಂಸ್ಥೆಗಳು ವಿಶ್ವದಾದ್ಯಂತ ದಣಿವಿಲ್ಲದ ಪ್ರಯತ್ನದಲ್ಲಿ ತೊಡಗಿವೆ. ಆದರೆ ಈ ಲೇಖನದ ವ್ಯಾಪ್ತಿಯನ್ನು ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.

ಕರ್ನಾಟಕ, ಭಾರತವೆಂಬ ಸಂಯುಕ್ತ ರಾಷ್ಟ್ರದ ಒಂದು ಪ್ರಮುಖ ರಾಜ್ಯ. ಇಲ್ಲಿನ ಗ್ರಾಹಕರು "ವಿಶ್ವಾಸಾರ್ಹ ಆರ್ಥಿಕ ಸೇವೆ"ಯಿಂದ ಮಾತ್ರ ತೊಂದರೆ ಅನುಭವಿಸದೇ ಅದಕ್ಕಿಂತಲೂ ಮಹತ್ವವಾದ ಮತ್ತು ಅತ್ಯವಶ್ಯಕವಾಗಿರುವ ಸೇವೆ ಯಿಂದ ವಂಚಿತರಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಅದೇ ಪ್ರಾದೇಶಿಕ ಭಾಷೆಯಲ್ಲಿ ಗ್ರಾಹಕ ಸೇವೆ. ಒಂದು ರಾಜ್ಯದಲ್ಲಿ ಅದರಲ್ಲೂ ಸಂಯುಕ್ತ ರಾಷ್ಟ್ರದಲ್ಲಿರುವ ಒಂದು ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯೆ ಸರ್ವಸ್ವ. ಮೊಟ್ಟ ಮೊದಲನೇ ಪ್ರಾಶಸ್ತ್ಯ ಅದಕ್ಕೆ ದಕ್ಕಬೇಕು. ಆದರೆ ಈ ನಿಯಮವನ್ನು ಕರ್ನಾಟಕ ಪ್ರವೇಶಿಸುವ ಬಹುತೇಕ ಮತ್ತು ಕರ್ನಾಟಕದಲ್ಲೇ ಹುಟ್ಟಿರುವ ಅನೇಕ ಸಂಸ್ಥೆಗಳು ಉಲ್ಲಂಘಿಸುತ್ತಿರುವುದು ನಮ್ಮ ಗ್ರಾಹಕರ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯ ಭರದಿಂದ ಸಾಗಬೇಕಿದೆ.

ಗ್ರಾಹಕರ ಹಕ್ಕು: ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಳಬೇಕೆಂದರೆ, ನಾವು ಕೊಟ್ಟ ಹಣಕ್ಕೆ ಯೋಗ್ಯವಾದ, ವಿಶ್ವಾಸಾರ್ಹ ಆರ್ಥಿಕ ಸೇವೆ ನಮಗೆ ಸಿಗುವ ಹಾಗೆ ಒತ್ತಾಯಿಸುವುದೇ ಗ್ರಾಹಕರ ಹಕ್ಕು. ಅದು ಸಾಮಾನ್ಯವಾಗಿ ಅನ್ವಯವಾಗುವ ಅರ್ಥ. ಕರ್ನಾಟಕದ ಮಟ್ಟಿಗೆ ಈಗಿನ ಪರಿಸ್ಥಿತಿಗೆ ಅನ್ವಯವಾಗುವಂತೆ ಹೇಳುವುದಾದರೆ ನಾವು ಕೊಟ್ಟ ಹಣಕ್ಕೆ ನಮಗೆ ವಿಶ್ವಾಸಾರ್ಹ ಆರ್ಥಿಕ ಸೇವೆಯ ಜೊತೆಗೆ ನಮ್ಮ ರಾಜ್ಯ ಭಾಷೆಯಲ್ಲಿ, ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಸೇವೆ ಸಿಗುವಂತೆ ಒತ್ತಾಯಿಸುವುದೇ ಗ್ರಾಹಕರ ಹಕ್ಕು. ಒಬ್ಬ ಗ್ರಾಹಕ ತಮ್ಮ ರಾಜ್ಯದಲ್ಲಿ ಯಾವುದೋ ಒಂದು ಸ್ಥಳಕ್ಕೆ ಹೋದರೆ ಅಲ್ಲಿ ಆ ರಾಜ್ಯದ ಪ್ರಾದೇಶಿಕ ಭಾಷೆಯಲ್ಲೇ ವ್ಯವಹರಿಸುವುದು, ಪ್ರಾದೇಶಿಕ ಭಾಷೆಯಲ್ಲೇ ಸೇವೆ ಪಡೆಯುವುದು ಅವನ ಜನ್ಮ ಸಿದ್ದ ಹಕ್ಕು. ಆ ತರಹದ ಸೇವೆ ಅವನಿಗೆ ಅಲ್ಲಿ ಕಂಡು ಬರದೇ ಇದ್ದಲ್ಲಿ ಅವನು ಪ್ರತಿಭಟಿಸಿ ಹಕ್ಕು ಚಲಾಯಿಸುವುದು ಒಬ್ಬ ಜಾಗೃತ ಗ್ರಾಹಕನ ಕರ್ತವ್ಯ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಗ್ರಾಹಕರು ತಮ್ಮ ಹಕ್ಕುಗಳನ್ನು ಸರಿಯಾಗಿ ಚಲಾವಣೆ ಮಾಡದೇ ಇರುವುದರಿಂದ ಪ್ರಾದೇಶಿಕ ಭಾಷೆಯನ್ನೇ ಕಳೆದುಕೊಳ್ಳುವ ಹಂತಕ್ಕೆ ಅದು ತಲುಪಬಹುದಾಗಿದೆ. ಆದ್ದರಿಂದ ಗ್ರಾಹಕ ಇದನ್ನೆಲ್ಲ ಮೆಟ್ಟಿ ನಿಂತು, ತನ್ನ ಭಾಷೆಯಲ್ಲಿ ಸೇವೆ ಸಿಗದೇ ಇದ್ದಾಗ ಪ್ರತಿಭಟಿಸಬೇಕಾದಂಥ ಅನಿವಾರ್ಯತೆ ಒದಗಿದೆ. ಕರ್ನಾಟಕದಲ್ಲಿ ಕನ್ನಡಿಗ ಗ್ರಾಹಕನಿಗೆ ಸರಿಯಾದ ಸವಲತ್ತು ದೊರಕುತ್ತಿಲ್ಲ ಎಂದರೆ ಅದಕ್ಕೆ ಗ್ರಾಹಕ ತನ್ನ ಹಕ್ಕನ್ನು ಸರಿಯಾದ ರೀತಿಯಲ್ಲಿ ಮಂಡಿಸದೇ ಇರುವುದೇ ಮುಖ್ಯ ಕಾರಣ ಅಂಥ ಹೇಳಬಹುದು. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಸೇವೆಯಿಂದ ಲಾಭವಾಗುವುದಿಲ್ಲ ಎಂಬ ಸ್ವಯಂ ಘೋಷಿತ ಕಲ್ಪನೆ ಅಥವಾ ಭ್ರಮೆಯಿಂದ ಉದ್ಯಮಿಗಳು ಬಳಲುತ್ತಿದ್ದು, ಅವರನ್ನು ಆ ರೋಗದಿಂದ ಗುಣಮುಖರನ್ನಾಗಿ ಮಾಡುವ ಕೆಲಸ ಪ್ರತಿಯೊಬ್ಬ ಗ್ರಾಹಕರ (ಜಾಗೃತ) ಮೇಲಿದೆ. ಒಬ್ಬೊಬ್ಬ ಜಾಗೃತ ಗ್ರಾಹಕ ಉದ್ಯಮಿಗಳನ್ನು ಆ ರೋಗದಿಂದ ಪಾರು ಮಾಡುವ ಒಂದೊಂದು ಮಾತ್ರೆ (ಔಷದಿ) ಇದ್ದಂತೆ.


ಮೊದಲ ಮಾತ್ರೆ: ಆದ್ದರಿಂದ ಒಬ್ಬ ಜಾಗೃತ ಗ್ರಾಹಕ ಏನೆಲ್ಲವನ್ನು ನಿರೀಕ್ಷಿಸಬೇಕೆಂದರೆ,,
ಬ್ಯಾಂಕಿಗೆ ಹೋದರೆ ಕನ್ನಡದಲ್ಲೇ ವ್ಯವಹರಿಸುವುದು. ಕನ್ನಡದಲ್ಲೇ ಅರ್ಜಿಗಳನ್ನು ಬರೆಯಬೇಕು. ಹೋಟೆಲಗೆ ಹೋದರೆ ಅಲ್ಲಿ ಕನ್ನಡದಲ್ಲಿ ಸಂಭಾಷಿಸುವುದು, ಅಲ್ಲಿನ ಹೊತ್ತಿಗೆಯಲ್ಲಿ ಕನ್ನಡವಿರಬೇಕು. ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಕಡೆಗಣನೆಯಾಗುತ್ತಿರುವ ಪ್ರಾದೇಶಿಕ ಭಾಷೆಯ ಮಹತ್ವವನ್ನು ಮತ್ತು ಅವಶ್ಯಕತೆಯನ್ನು ಒತ್ತಾಯಿಸುವದಲ್ಲದೇ, ಸಾರಿ ಸಾರಿ ಯಾರ್ ಯಾರಿಗೆ ಹೇಗ್ ಹೇಗೆ ಹೇಳಬೇಕೊ ಹಾಗೆ ಹೇಳಲೇಬೇಕಾಗಿದೆ. ಉದ್ಯಮಿಗಳನ್ನು ಮತ್ತು ಉದ್ದಿಮೆಗಳನ್ನು ಈ ಕಾಯಿಲೆಗಳ ವ್ಯಾಪ್ತಿಯಿಂದ ಹೊರತರಬೇಕಿದೆ. ನಾವು ಕೊಟ್ಟ ಹಣಕ್ಕೆ ಪ್ರತಿಯಾಗಿ ಕನ್ನಡದಲ್ಲಿ ಗ್ರಾಹಕ ಸೇವೆ ನಮಗೆ ಸಿಗುವ ಹಾಗೆ ಮಾಡಬೇಕಿದೆ. ಕರ್ನಾಟಕದ ಮಟ್ಟಿಗೆ ಆಗ "ನಮ್ಮ ಹಣ, ನಮ್ಮ ಹಕ್ಕು" ಎಂಬುದು ಯಶಸ್ವಿಯಾಗಲು ಸಾದ್ಯವಾಗುತ್ತದೆ.


ಸೃಷ್ಟಿಯ ಮಜಾ: ಹಲವರಿಗೆ ಕೆಲವು ಸವಲತ್ತುಗಳು ಬಯಸದೇ ಸಿಕ್ಕಿಬಿಡುತ್ತವೆ. ಇನ್ನು ಕೆಲವರು ಹಲವು ಸವಲತ್ತುಗಳನ್ನು ಹೋರಾಟ ಮಾಡಿ, ಹಕ್ಕು ಮಂಡಿಸಿ ಪಡೆಯಬೇಕಾಗುತ್ತದೆ. ಮತ್ತು ಇದೇ ಶಾಶ್ವತ..................

Monday 22 February 2010

ಆತ್ಮಾವಲೋಕನಕ್ಕೆ ಇದು ಸಕಾಲ; ಆಚಾರ್ಯ ಸಾಹೇಬರೇ...........!


"ಕಾಸರಗೋಡಿನಲ್ಲಿ ಕನ್ನಡ ಸಮಾವೇಶ ನಡೆಯುತ್ತಿರುವಾಗ, ಸೊಲ್ಲಾಪೂರಿನಲ್ಲಿ ಕನ್ನಡಿಗರು ಒಗ್ಗೂಡಿ ಸಮಾರಂಭ ಮಾಡುತ್ತಿರುವಾಗ ಬೆಳಗಾವಿಯಲ್ಲಿ ಮರಾಠಿಗರು ನಡೆಸಲುದ್ದೇಶಿಸಿರುವ ಸೀಮಾ ಪರಿಷತ್ ಬೇಡ ಎನ್ನಲು ಹೇಗೆ ಸಾದ್ಯ. ಆದರೆ ಅವರಿಗೆ ನಾವು ಷರತ್ತು ಬಧ್ಧ ಅನುಮತಿ ನೀಡಿದ್ದೇವೆ." ಇದು ಫೇ ೫ ರಂದು ನಡೆದ ಮರಾಠಿಗರ ಸೀಮಾ ಪರಿಷತ್ ಸಮಾವೇಶವನ್ನು ತಡೆ ಹಿಡಿಯಬೇಕು, ಅದಕ್ಕೆ ಅನುಮತಿ ಕೊಡಬಾರದು ಎಂದು ಒತ್ತಾಯಿಸಿದ ಕನ್ನಡಪರ ಸಂಘಟನೆಗಳಿಗೆ ನಮ್ಮ ರಾಜ್ಯದ ಘನತೆವೆತ್ತ ಮನೆ ಮಂತ್ರಿಗಳಾದ (ಗೃಹ ಸಚಿವ) ವಿ.ಎಸ್.ಆಚಾರ್ಯ ಅವರು ನೀಡಿದ ಉತ್ತರ. ಫೆ ೫ ರಂದು ಸೀಮಾ ಪರಿಷತ್ ನಡೆದೇ ಹೋಯಿತು. ಆದರೆ ಗೃಹ ಸಚಿವರ ಅನುಮತಿಯಂತೆ ನಡೆಯಲಿಲ್ಲ. ಅವರ ಷರತ್ತು ಯಾವ ಎಮ್.ಇ.ಎಸ್ ನವರ ಮುಂದೆಯೂ ಹಾಯ್ದು ಹೋಗಲಿಲ್ಲ. ಕರ್ನಾಟಕದ ನೆಲದಲ್ಲೇ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬೈಯ್ದು, ಮನ ಬಂದಂತೆ ಥಳಿಸುವಷ್ಟು ಷರತ್ತು ಬಧ್ಧ ಅನುಮತಿಯನ್ನು ಸರಕಾರ ನೀಡಿತ್ತು ಎಂಬುದನ್ನು ಯಾರೂ ಊಹಿಸಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರು ಭಾರತೀಯರ ಮೇಲೆ ಮಾಡಿದ ಹಲ್ಲೆಯನ್ನು ಮರೆತಿದ್ದ ಕನ್ನಡಿಗರು, ಈ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗಾದರೂ ನೆನಪಿಸಿಕೊಂಡಿರಬಹುದು. ಆದರೆ ಅದಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸ. ಅಲ್ಲಿ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡ ಪರಕೀಯರನ್ನು ದೇಶ ಬಿಟ್ಟು ತೊಲಗಿಸಲು ನಡೆಸಿದ ಹೋರಾಟ. ಇಲ್ಲಿಯ ಘಟನೆಯಲ್ಲಿ ಯಾರೂ ಪರಕೀಯರಲ್ಲ, ಎಲ್ಲರೂ ಭಾರತಿಯರೆ. ಆದರೆ ಕೆಲವರು, ಒಣ ರಾಜಕೀಯದ ದುರುದ್ದೇಶದಿಂದ ವಿವಾದವನ್ನು ಮತ್ತಷ್ಟು ಕೆಣಕಿ, ಮುಗ್ಧ ಜನರಲ್ಲಿ ಅಶಾಂತಿಯನ್ನು ಹುಟ್ಟುಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಭಾರತೀಯರು. ಇನ್ನು ಹಲವರು ವಿವಾದವನ್ನು ಬಗೆಹರಿಸಿ, ಸ್ಥಳೀಯರಲ್ಲಿ ಮತ್ತು ವಲಸಿಗರಲ್ಲಿ ಸಾಮರಸ್ಯವನ್ನು ಬೆಳೆಸಿ, ಜನರಲ್ಲಿ ಶಾಂತಿ ಮೂಡಿಸಲು ಪ್ರಯತ್ನಿಸಿ ತಮ್ಮ ನಿಷ್ಠೆ ಪ್ರದರ್ಶಿಸುತ್ತಿರುವ ಭಾರತೀಯರು.

ಗೃಹ ಸಚಿವರಿಗೆ ಇದು ಆತ್ಮಾವಲೋಕನಕ್ಕೆ ಸಕಾಲ. ಕಾಸರಗೋಡಿನಲ್ಲಿ, ಸೋಲ್ಲಾಪುರಿನಲ್ಲಿ ಕನ್ನಡ ಸಮಾವೇಶ ಮಾಡುವ ಬಗ್ಗೆ ಮಾತನಾಡುವ ಸಚಿವರು, ಆ ಸಮಾವೇಶಗಳಲ್ಲಿ ಕಂಡು ಬರುವ ಶಿಸ್ತಿನ ಬಗ್ಗೆ ಆಲೋಚನೆ ಮಾಡಿದ್ದಾರೆಯೆ...? ಮಹಾರಾಷ್ಟದಲ್ಲಿ ಹಲವಾರು ಕನ್ನಡ ಸಂಘಗಳಿದ್ದಾವೆ. ಅವುಗಳು ಪ್ರತಿ ವರ್ಷ ಹಲವಾರು ಕನ್ನಡ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತವೆ. ಕನ್ನಡ ರಾಜ್ಯೊತ್ಸವವನ್ನು ಅಧ್ಧೂರಿಯಿಂದ ಆಚರಿಸುತ್ತವೆ. ಆದರೆ ಯಾವತ್ತಾದರೂ ಅವುಗಳಿಂದ ಮತ್ತು ಅವುಗಳು ಮಾಡುವ ಕಾರ್ಯಕ್ರಮಗಳಿಂದ ಅಲ್ಲಿನ ಮಹಾರಾಷ್ಟ್ರದ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದ ಉದಾಹರಣೆಗಳಿವೆಯೆ...? ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ ನಿದರ್ಶನಗಳಿವೆಯೆ....? ಯಾವುದೇ ಹೊರರಾಜ್ಯ ಕನ್ನಡದ ಸಮಾರಂಭದಲ್ಲಿ ಅಲ್ಲಿನ ಗೌರವಕ್ಕೆ ಚ್ಯುತಿ ಬರುವಂತಹ ನಿರ್ಣಯಗಳನ್ನು ಅಂಗೀಕರಿಸಲಾಗಿದೆಯೇ.......? ಎಲ್ಲಿಯಾದರೂ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರದ ಜನರ ಮೇಲೆ ಕನ್ನಡಿಗರು ಹಲ್ಲೆ ಮಾಡಿ, ಅವರ ಭಾವನೆಗಳ ಜೊತೆ ಆಟ ಆಡಿದ ಸುದ್ದಿಗಳಿವೆಯೆ....? ಈ ಪ್ರಶ್ನೆಗಳು ಕೇವಲ ಮಹಾರಾಷ್ಟ್ರಕ್ಕೆ ಸಂಬಂದ ಪಡದೇ ಇಡಿ ಜಗತ್ತಿನಲ್ಲಿ ಎಲ್ಲೆಲ್ಲಿ ಕನ್ನಡ ಸಂಘಗಳಿವೆಯೋ ಅಲ್ಲೆಲ್ಲ ಅನ್ವಯಿಸುತ್ತದೆ. ಜಗತ್ತಿನಲ್ಲಿ ಎಲ್ಲಿಯೂ ವಲಸಿಗ ಕನ್ನಡಿಗರು ಸ್ಥಳಿಯ ಜನರ ವಿರುದ್ಧ ಹೋದ ಉದಾಹರಣೆಗಳಿಲ್ಲ. ತಾವು ಕಾಲಿಟ್ಟ ಪ್ರತಿಯೊಂದು ಸ್ಥಳವನ್ನು ಗೌರವಿಸುತ್ತ ಅಲ್ಲಿನ ಜನರ ವಿಶ್ವಾಸಕ್ಕೆ ಪಾತ್ರರಾಗಿ, ತಾವೂ ಅಲ್ಲಿಯ ನಾಗರಿಕರಾಗಿ ಬೆರೆತು ತಮ್ಮ ತಾಯ್ನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ಕಾಪಾಡಿಕೊಂಡು ಹಿರಿಮೆ ಮೆರೆಯುತ್ತಿದ್ದಾರೆ. ಹೀಗೆ ವಿದೇಶಗಳಲ್ಲೆಲ್ಲ ಕನ್ನಡದ ಕಂಪು ಹರಡುತ್ತಿರುವಾಗ ನಮ್ಮ ನೆಲದಲ್ಲೇ ದುಷ್ಟ ಶಕ್ತಿಗಳು ಅಶಾಂತಿ ಹುಟ್ಟುಹಾಕಲು ಪ್ರಯತ್ನಿಸುತ್ತಿರುವಾಗ ನೋಡಿಕೊಂಡು ಸುಮ್ಮನಿರಬೇಕೆ ಮಾನ್ಯ ಆಚಾರ್ಯ ಸಾಹೇಬರೇ.....? ಹಿಂದೆ ನಡೆದ ಹಲವಾರು ಸಮಾವೇಶಗಳಿಂದ ಮತ್ತು ಘಟನೆಗಳಿಂದ ಎಮ್.ಇ.ಎಸ್ ನವರ ಪುಂಡಾಟದ ಬಗ್ಗೆ ಸರಕಾರಕ್ಕೆ ಅರಿವಾಗಿಲ್ಲವೇ.......? ಅಥವಾ ಇದನ್ನು ಸರಕಾರದ ಜಾಣ ಕುರುಡುತನವೆಂದು ತಿಳಿದುಕೊಳ್ಳಬಹುದೇ........? ಪ್ರತಿ ಬಾರಿ ಬೇರೆ ಬೇರೆ ಹೆಸರಿನಲ್ಲಿ ಸಮ್ಮೇಳನ ಮಾಡಿ, ಅಲ್ಲಿನ ಮರಾಠಿ ಭಾಷಿಕರಿಗೆ ಬೇಡವಾದ ಭಾವನೆಗಳನ್ನು ಮೂಡಿಸಿ, ನೀವು ಮರಾಠಿಗರು ಇದು ಮಹಾರಾಷ್ಟ್ರಕ್ಕೆ ಸೇರಬೇಕು, ಇಲ್ಲಿನ ಕಛೇರಿಗಳಲ್ಲಿ ಮರಾಠಿಗೂ ಸ್ಥಾನ ಬೇಕು ಎಂದೆಲ್ಲ ಪೊಳ್ಳು ನಿರ್ದಾರಗಳನ್ನು ಕೈಗೊಂಡು ಅಲ್ಲಿನ ಮರಾಠಿ ಮತ್ತು ಕನ್ನಡ ಭಾಷಿಕರ ನಡುವೆ ಇರುವ ಸಾಮರಸ್ಯವನ್ನು ಹಾಳು ಮಾಡುತ್ತಿರುವವರ ಬಗ್ಗೆ ಸರಕಾರ ಮೃದು ಧೋರಣೆ ತಾಳಿದ್ದು ಏಕೆ........? ಈ ಎಲ್ಲ ಮುನ್ಸೂಚನೆಗಳ ಆದಾರವಾಗಿಟ್ಟುಕೊಂಡೆ ಕನ್ನಡ ಪರ ಸಂಘಟನೆಗಳು ಇದಕ್ಕೆ ಅನುಮತಿ ಬೇಡ ಎಂದಿದ್ದು, ಇಷ್ಟಾಗಿಯೂ ಸೀಮಾ ಪರಿಷತಗೆ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮವನ್ನು ಒಮ್ಮೆ ನಮ್ಮ ಸಚಿವರು ಆತ್ಮಾವಲೋಖನ ಮಾಡಿಕೊಳ್ಳಲಿ. ಇನ್ನು ಸೀಮಾ ಪರಿಷತ ಸಮಾವೇಶವನ್ನು ಬೆಳಗಾವಿ ಮರಾಠಿಗರು ಯಾವ ರೀತಿ ಸ್ವೀಕರಿಸಿದ್ದಾರೆ ಎಂಬುದಕ್ಕೆ ನಿರೀಕ್ಷಿಸಿದ್ದ ಲಕ್ಷ ಲಕ್ಷ ಜನರ ಬದಲಿಗೆ ಅಲ್ಲಿ ನೆರೆದಿದ್ದ ಸಾವಿರದಷ್ಟು ಜನರೇ ಸಾಕ್ಷಿ.

ಎಲೆಯಡಿಕೆ: ಆದ್ದರಿಂದ ಇಂತಹ ಸಮಾವೇಶಗಳು ಮರಾಠಿಗರ ಸಮ್ಮಿಲನಕ್ಕೆ ಒಂದು ವೇದಿಕೆಯಾಗುವ ಬದಲು ಕೇವಲ ಕನ್ನಡವನ್ನು, ಕನ್ನಡಿಗರನ್ನು, ಕರ್ನಾಟಕವನ್ನು ಮತ್ತು ಸರಕಾರವನ್ನು ಟೀಕಿಸಲು ಬಳಸಿಕೊಳ್ಳುವ ವೇದಿಕೆಗಳಾಗುತ್ತವೆ, ಅಲ್ಲಿನ ಶಾಂತಿಯನ್ನು ಕೆದಕುವ ವೇದಿಕೆಗಳಾಗುತ್ತವೆ, ಕನ್ನಡಿಗರ ತಾಳ್ಮೆ ಪರೀಕ್ಷಿಸುವ ವೇದಿಕೆಗಳಾಗುತ್ತವೆ ಎಂಬುದನ್ನು ಇನ್ನಾದರೂ ನಮ್ಮ ಘನ ಸರಕಾರ ಮತ್ತು ಆಚಾರ್ಯ ಸಾಹೇಬರು ಅರ್ಥ ಮಾಡಿಕೊಳ್ಳಬೇಕು. ಬೆಳಗಾವಿ ಗಡಿ ಎಂಬ ಏಕೀಕರಣ ಸಮಯದಲ್ಲಿ ಉದ್ಭವವಾದ ಸಣ್ಣ ಸಮಸ್ಯೆಯನ್ನು ಬಗೆ ಹರಿಸದೇ ಪ್ರತಿ ಬಾರಿ ನುಣುಚಿಕೊಂಡು ಅದನ್ನು ಕರ್ನಾಟಕದ ಮೂಲಭೂತ ವಿವಾದವನ್ನಾಗಿ ಮಾಡಿದ ಕೀರ್ತಿ ನಮ್ಮ ಹಿಂದಿನ ಸರಕಾರಗಳಿಗೆ ಸಲ್ಲುತ್ತದೆ. ಈಗಿರುವ ಬಿಜೆಪಿ ಸರಕಾರ ಈ ಸಮಸ್ಯೆಯನ್ನು ಬಗೆಹರಿಸುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದಿದ್ದರೂ ಸರಿ, ಆದರೆ ಇಂತಹ ಶಾಂತಿ, ಸುವ್ಯವಸ್ಥೆಯನ್ನು ಕದಡುವ ಮತ್ತು ವಿವಾದವನ್ನು ಇನ್ನಷ್ಟು ಜಟಿಲಗೊಳಿಸುವ ಸಮಾವೇಶಗಳಿಗೆ ಅನುಮತಿ ನೀಡಬಾರದೆಂದು ಕರ್ನಾಟಕ ಶಾಂತಿಪ್ರಿಯರ ಒಕ್ಕೋರಲಿನ ಆಗ್ರಹವಾಗಿದೆ.

ಹೆಬ್ಬಯಕೆ: Every Belagavian should feel like this….
" My native is BELAGAVI, and I am not a MAHARASHTRIAN"

Sunday 31 January 2010

ನಾನು ಕಂಡ ಒಂದು ದಿನದ ಚೆನ್ನೈ..................


ನಾನು ಕೆಲವು ದಿನಗಳ ಹಿಂದೆ ಒಂದು ದಿನದ ಕೆಲಸದ ಮೇಲೆ ಮೊದಲ ಬಾರಿಗೆ ಚೆನ್ನೈಗೆ ಹೋಗಿದ್ದೆ. ಅಲ್ಲಿ ನನ್ನ ಗಮನಕ್ಕೆ ಬಂದ ಕೆಲವು ಸಂಗತಿಗಳನ್ನು ಹೇಳಲು ಇಚ್ಛಿಸುತ್ತೇನೆ. ಅಲ್ಲಿನ ಕೆಟ್ಟ ಸಂಗತಿಗಳನ್ನು ಬಿಟ್ಟು ಒಳ್ಳೆಯ ಮತ್ತು ನಾವು ಗಮನಿಸಬಹುದಾದ ಸಂಗತಿಗಳನ್ನು ಮಾತ್ರ ಮಾತನಾಡುವುದು ಉಚಿತ. ಬೆಳಿಗ್ಗೆ ನಿಲ್ದಾಣದಲ್ಲಿ ಇಳಿದು ಅಥಿತಿ ಗೃಹದ ಕಡೆಯಲ್ಲಿ ಆಟೊದಲ್ಲಿ ಹೋಗುತ್ತಿದ್ದಾಗ, ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಎದ್ದಿರುವ ಆಟೊ ಚಾಲಕರ ಬಾಷಾ ವಿಚಾರದ ಆದೇಶದ ನೆನಪಾಯಿತು. ತಮಿಳನಾಡಿನಲ್ಲಿ ಈ ತರಹದ ಆದೇಶ ಜಾರಿಗೊಳಿಸುವುದೇ ಬೇಡ. ಅದು ತನ್ನಿಂದ ತಾನಾಗಿಯೆ ಜಾರಿಯಾಗಿದ್ದು ಕಂಡು ಬಂತು. ಅಲ್ಲಿರುವ ಆಟೊ ಚಾಲಕ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡದಿದ್ದರೆ, ಅದರಿಂದ ತೊಂದರೆ ಅನುಭವಿಸುವುದು ಗ್ರಾಹಕನಲ್ಲ, ಸ್ವತಃ ಆಟೊ ಚಾಲಕನೆ. ಇದು ಅಲ್ಲಿನ ಪರಿಸ್ಥಿತಿ. ನಮ್ಮ ಹಿಂದಿ ಮಾತಿಗೆ ಆಟೊದವನು ತಮಿಳಿನಲ್ಲಿ ಉತ್ತರ ನೀಡಿದ್ದು ನೋಡಿ ಅದು ಗೋಚರವಾಗಿತ್ತು. ಮುಂದೆ ಅಥಿತಿ ಗೃಹಕ್ಕೆ ಹೋಗಿ ನಮ್ಮ ಕೋಣೆಯಲ್ಲಿದ್ದ ಟಿವಿಯ ಒಳಹೊಕ್ಕು ನೋಡಿದರೆ ಅದರಲ್ಲಿ ಕೇವಲ ಒಂದು ಕನ್ನಡ ಚಾನಲ್, ಎರಡು ತೆಲುಗು, ಎರಡು ಹಿಂದಿ ಚಾನಲಗಳನ್ನು ಬಿಟ್ಟರೆ ಉಳಿದೆಲ್ಲವು ತಮಿಳ ಚಾನಲಗಳೆ. ಬೆಂಗಳೂರಿನಲ್ಲಿ ಕನಿಷ್ಟ ಮೂರ್ನಾಲ್ಕು ತಮಿಳು, ಮೂರ್ನಾಲ್ಕು ತೆಲುಗು ಚಾನಲಗಳನ್ನು ನಾವು ನೋಡಬಹುದು. ಮುಂದೆ ನಮ್ಮ ಕೆಲಸಕ್ಕೆ ಹೋಗಲು ಬಸ್ ಹತ್ತಿದಾಗ ಅಲ್ಲಿ ಚಾಲಕನ ಪಕ್ಕದಲ್ಲಿ ಅಂಟಿಸಿದ್ದ ತಿರುವಳ್ಳವರ್ ಫೋಟೊ ಮತ್ತು ಕೆಲವು ಅಕ್ಷರದ ಸಾಲುಗಳು ನಮ್ಮ ಗಮನ ಸೆಳೆದವು. ನಮ್ಮಲ್ಲಿ ರಾಜಕುಮಾರ್, ಶಂಕರನಾಗ್ ಫೋಟೊ ಹಾಕೋ ಥರ ಈ ಬಸ್ಸಿನವರು ಹಾಕಿರಬಹುದು ಎಂದು ನಂಬಿದ್ದ ನನಗೆ ಆಶ್ಚರ್ಯ ಕಾದಿತ್ತು, ಪ್ರತಿಯೊಂದು ನಗರ ಸಾರಿಗೆ ಬಸ್ ನಲ್ಲಿಯೂ ಇದು ಇರುವುದನ್ನು ಕಂಡು, ನಮ್ಮ ಸರಕಾರ ಮತ್ತು ನಾವು, ನಮ್ಮ ಸರ್ವಜ್ನರನ್ನು, ಬಸವಣ್ಣನವರನ್ನು ಎಷ್ಟು ಗೌರವಿಸುತ್ತಿದ್ದೇವೆ ಎಂಬ ಅನುಮಾನವಾಯಿತು.
ಹೀಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ’ಯುನಿನಾರ್’ ಮಹಾಶಯರ ಜಾಹಿರಾತು ಫಲಕಗಳು ನಮ್ಮ ಕಣ್ಣು ಕುಕ್ಕಿದವು. ಬೆಂಗಳೂರಿನಲ್ಲಿ ಜಾಹಿರಾತು ಫಲಕಗಳ ಮೇಲೆ, ನಮ್ಮ ಬಿ ಎಂ ಟಿ ಸಿ ಬಸ್ ಗಳ ಮೇಲೆ, ಹೀಗೆ ಎಲ್ಲೆಂದರಲ್ಲಿ "ಅಬ್ ಮೇರಾ ನಂಬರ್ ಹೈ" "ಅಬ್ ಮೇರಾ ನಂಬರ್ ಹೈ" ಎಂದು ಹಿಂದಿಯಲ್ಲಿ ಬೊಬ್ಬೆ ಹೊಡೆಯುವ ಇವರು ಚೈನ್ನೈನಲ್ಲಿ ಒಂದೇ ಒಂದು ಹಿಂದಿ ಜಾಹಿರಾತು ಹಾಕಿರುವುದನ್ನು ಹುಡುಕಿ ಹುಡುಕಿ ನನ್ನ ಕಣ್ಣುಗಳು ಸುಸ್ತಾದವು. ಚೆನ್ನೈನಲ್ಲಿಯು ತಮಿಳೇತರ ’ತಾಯಿನುಡಿ’ ಇರುವವರ ಸಂಖ್ಯೆ ಏನು ಕಮ್ಮಿ ಇಲ್ಲ. ಆದರೆ ವಿಪರ್ಯಾಸವೆಂದರೆ ಬಹುತೇಕ ಕಂಪನಿಗಳಿಗೆ ಚೈನ್ನೈನಲ್ಲಿದ್ದಾಗ ನೆನಪಾಗದ ’ವಲಸೆಗಾರರು’ ಬೆಂಗಳೂರಿಗೆ ಬಂದ ಮೇಲೆ ಧಿಡೀರನೆ ನೆನಪಾಗಿ ಅವರ ಮೇಲೆ ಮೋಹ (ಪ್ರೀತಿ ಅಲ್ಲ) ಉಕ್ಕಿ ಹರಿಯುತ್ತದೆ. ಬೆಂಗಳೂರಿನಲ್ಲಿ ನೆನಪಾಗದ ಸ್ಥಳಿಯರು ಚೈನ್ನೈಗೆ ಹೋದ ಮೇಲೆ ತಂತಾನೆ ತನ್ನಂತಾನೆ ನೆನಪಾಗುತ್ತಾರೆ. ಬಸ್ ನಲ್ಲಿ ಇನ್ನೊಂದು ಅಪರೂಪದ ದೃಶ್ಯ ಕಂಡು ಒಂದೆಡೆ ಆಶ್ಚರ್ಯ ಇನ್ನೊಂದೆಡೆ ಅಸುಯೆ ಮೂಡಿತು. ನಮ್ಮ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಇಬ್ಬರು ಮುಸ್ಲಿಮರು ಅಚ್ಚ ತಮಿಳಿನಲ್ಲಿ ಮಾತನಾಡುತ್ತಿದ್ದರು. ಅಲ್ಲಿರುವ ಎಷ್ಟೊ ಮುಸ್ಲಿಮರಿಗೆ ಹಿಂದಿ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ ಎಂದು ಯಾರೋ ಹೇಳಿದಾಗ, ಅಲ್ಲಿನ ಭಾಷೆಯ ಆಳ ಕಾಣಿಸಿದಂತಾಯ್ತು. ಹೀಗೆ ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲಿಯೂ, "ಇಲ್ಲಿ ಬಾಳಬೇಕಾದರೆ ತಮಿಳನ್ನು ಕಲಿಯಲೇಬೇಕು" ಎಂಬ ಸಂದೇಶ ನನ್ನ ಮನಸ್ಸಿನಿಂದ ಹೊರಹೊಮ್ಮುತ್ತಿತ್ತು. ಬಹುಶಃ ಇದೇ ಕಾರಣದಿಂದ ಅಲ್ಲಿ ವಲಸೆಗಾರರ ಸಂಖ್ಯೆ ಅಷ್ಟೊಂದಿಲ್ಲ. ವಲಸೆಗಾರರಿದ್ದರೂ ಅದು ದೊಡ್ಡ ಸಮಸ್ಯೆಯಾಗಿಲ್ಲ. ಹೊರಗಿನಿಂದ ಬಂದವರು ಹೊರಗಿನವರಾಗಿ ಬಹಳ ದಿನ ಅಲ್ಲಿ ನೆಲೆಸಲು ಸಾದ್ಯವಿಲ್ಲ. ಅವರು ಅಲ್ಲಿನ ಮುಖ್ಯವಾಹಿನಿಗೆ ಬೆರೆಯಲೇಬೇಕಾಗುತ್ತದೆ. "ತಮಿಳುನಾಡಿಗೆ ಬಂದ ವಲಸಿಗರಿಗೆ ತಮ್ಮ ಭಾಷೆಯನ್ನು ಕಲಿಯುವ ಹಾಗೆ ಮಾಡಿ, ತಮ್ಮ ಸಂಪ್ರದಾಯಕ್ಕೆ ಹೊಂದಿಕೊಳ್ಳುವ ಹಾಗೆ ಮಾಡಿ, ಅವರನ್ನೂ ತಮಿಳುನಾಡಿನವರನ್ನಾಗಿ ಮಾಡುವ ತಮಿಳರು, ತಾವು ಬೇರೆ ಕಡೆಗೆ ವಲಸಿಗರಾಗಿ ಹೋದಾಗ ಆ ನಿಯಮವನ್ನು ಪಾಲಿಸಬೇಕು, ಅಲ್ಲಿನವರಾಗಿ ತಾವೂ ಬಾಳಬೇಕು ಎಂಬ ಮನೋಭಾವನೆಯನ್ನು, ಸೌಜನ್ಯವನ್ನು, ಕರ್ತವ್ಯವನ್ನು ಬೆಳೆಸಿಕೊಳ್ಳದೇ ಇರುವುದು ಮಾತ್ರ ಎಲ್ಲರೂ ಒಕ್ಕೊರಲಿನಿಂದ ಖಂಡಿಸುವಂಥದ್ದು". ಇನ್ನು ನಗರದ ಬಗ್ಗೆ ಹೇಳಬೇಕೆಂದರೆ, ವಾತಾವರಣ, ಸ್ವಚ್ಛತೆ, ನಗರಾಭಿವೃಧ್ಧಿ ಮತ್ತು ಮೂಲಸೌಕರ್ಯಗಳ ವಿಷಯದಲ್ಲಿ ನಮ್ಮ ಬೆಂಗಳೂರಿಗೆ ಚೆನ್ನೈ ಇನ್ನೂ ಸರಿಸಾಟಿಯಾಗಿಲ್ಲ ಎಂದೆನಿಸಿತು. ಬರೋವಾಗ ಚೈನ್ನೈನಲ್ಲಿರೋ ನಮ್ಮ ಕೆ.ಎಸ್.ಆರ್.ಟಿ.ಸಿ ಕಚೇರಿಯ ಫಲಕದಲ್ಲಿ ಕನ್ನಡವಿಲ್ಲದೇ ಇರುವುದನ್ನು ಕಂಡು ಬೇಜಾರಾಯಿತು. (ಬೆಂಗಳೂರಿನಲ್ಲಿರುವ ತಮಿಳನಾಡಿನ ಬಸ್ ಬುಕ್ಕಿಂಗ್ ಆಫೀಸಿನ ಫಲಕದಲ್ಲಿ ತಮಿಳನ್ನು ಮೊದಲನೇ ಸ್ಥಾನದಲ್ಲಿ ಕಾಣಬಹುದು). ಇಷ್ಟು, ಒಂದು ದಿನದ ಅಲ್ಪ ಸ್ವಲ್ಪ ಅನುಭವಗಳನ್ನು ಮತ್ತು ಅನಿಸಿಕೆಗಳನ್ನು ಹೊತ್ತುಕೊಂಡು ನನ್ನ ಒಂದು ದಿನದ ಚೆನ್ನೈ ಪ್ರವಾಸವನ್ನು ಮುಗಿಸಿ ತಾಯ್ನಾಡಿಗೆ ಮರಳಿದೆ.

ನನ್ನ ಅನಿಸಿಕೆಗಳಲ್ಲಿನ ತಪ್ಪುಗಳನ್ನು ದಯವಿಟ್ಟು ಕ್ಷಮಿಸದೇ ಅವುಗಳನ್ನು ತಿದ್ದುವ ಪೂರ್ಣ ಅಧಿಕಾರ ನಿಮಗಿದೆ.......................