Tuesday 29 June 2010

ಗುಣಮಟ್ಟದ ಶಿಕ್ಷಣ ಅಂದ್ರೆ "ಸಿ. ಬಿ. ಎಸ್. ಸಿ" ಪಠ್ಯಕ್ರಮನಾ.....?


ಇದು ಮೆಟ್ರೊ ನಗರ ಬೆಂಗಳೂರಿನಲ್ಲಿ ಹರಿದಾಡುತ್ತಿರುವ ಮಾತಲ್ಲ, ರಾಜಧಾನಿಯಿಂದಾಚೆ ನೂರಾರು ಕಿ.ಮಿ. ದೂರದ ಊರುಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡುವಂಥ ಇಂಥದೊಂದು ಗಬ್ಬು ವಾತಾವರಣ ದಿನದಿಂದ ದಿನಕ್ಕೆ ಅವ್ಯಾಹತವಾಗಿ ಹಬ್ತಾ ಇದೆ ಗುರು. ಇದಕ್ಕೆ ಪುಷ್ಟಿ ನೀಡುವ ಉದಾಹರಣೆಗಳಿಗೇನು ಕಮ್ಮಿ ಇಲ್ಲ.
ಒಂದು ತಾಜಾ ನಿದರ್ಶನ. ನಮ್ಮ ವಿಜಾಪುರ ಜಿಲ್ಲೆಯ ಗಲಗಲಿ ಎಂಬ ಪುಟ್ಟ ಗ್ರಾಮದಲ್ಲಿ ೨೦೦೪ ರಲ್ಲಿ ಉಳ್ಳವರು ಶಿವಾಲಯ ಮಾಡೊ ಹಾಗೆ, ಆಂಗ್ಲ ಮಾದ್ಯಮದ ಅಂತರಾಷ್ಟೀಯ ಶಾಲೆಯೊಂದನ್ನು ಪ್ರಾರಂಭ ಮಾಡಿದ್ರು. ಗುಣಮ್ಮಟ್ಟದ ಶಿಕ್ಷಣ ಎಂಬ ಉದ್ದೇಶದಿಂದ ಇದು ಪ್ರಾರಂಭವಾಯ್ತು. ಈಗ ೨೦೧೦ ರಲ್ಲಿ ಆ ಗುಣಮಟ್ಟದ ಶಿಕ್ಷಣ ಸಾಲದೆಂಬಂತೆ ಈ ಸಂಸ್ಥೆ ಸಿ.ಬಿ.ಎಸ್.ಸಿ ಪಠ್ಯಕ್ರಮದ ಅಂತರಾಷ್ಟೀಯ ಶಾಲೆಯೊಂದನ್ನು ತೆರೆಯಲು ಮುಂದಾಗಿದೆ ಎಂಬ ವರದಿ ಮೊನ್ನೆಯ ವಿಕ ದಲ್ಲಿ ಪ್ರಕಟವಾಗಿತ್ತು. ಅಲ್ಲಿ ಅವರು ನೀಡಿರುವ ಹೇಳಿಕೆ ಗಮನ ಸೆಳೆಯಿತು. " ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ದೂರದ ಊರುಗಳಿಗೆ ಕಳುಹಿಸಬೇಕು. ನಮ್ಮಲ್ಲೇ ಉತ್ತಮ ಗುಣಮಟ್ಟದ ಶಾಲೆ ನಡೆಸಿ, ಮಕ್ಕಳು ದೂರಕ್ಕೆ ಹೋಗುವುದನ್ನು ತಪ್ಪಿಸಬೇಕೆಂಬ ಸದುದ್ದೇಶದಿಂದ ಇಲ್ಲಿಯೆ ಸಿ.ಬಿ.ಎಸ್.ಸಿ ಪಠ್ಯಕ್ರಮದ ಶಾಲೆಯೊಂದನ್ನು ತೆರೆಯಲು ನಿರ್ಧರಿಸಲಾಗಿದೆ" ಎಂದು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಇವರು ಹೇಳೊ ರೀತಿ ನೋಡಿದ್ರೆ ಗುಣಮಟ್ಟದ ಶಿಕ್ಷಣ ಅಂದ್ರೆ ಸಿ.ಬಿ.ಎಸ್.ಸಿ ನಲ್ಲೆ ಕಲೀಬೇಕು. ನಮ್ಮ ಮಕ್ಕಳು ಉಧ್ಧಾರ ಆಗಲು ಸಿ.ಬಿ.ಎಸ್.ಸಿ ಶಾಲೆಗಳಿಗೆನೇ ಹೋಗಬೇಕು ಅಂಥ ಮುಖಕ್ಕೆ ಹೊಡೆದ ಹಾಗೆ ಹೇಳ್ತಾ ಇದ್ದಾರೆ ಅನ್ಸುತ್ತೆ. ಹಳ್ಳಿಗಳಲ್ಲಿ ಒಳ್ಳೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮುಖಾಂತರ ಹಳ್ಳಿಯ ಮಕ್ಕಳು ಏಳಿಗೆ ಹೊಂದಲು ಸಹಕಾರಿಯಾಗುವುದು ಎಂಬ ವಾದವನ್ನು ಒಪ್ಪಬಹುದು, ಆದರೆ ಸಿ.ಬಿ.ಎಸ್.ಸಿ ಯಿಂದ ನಮ್ಮ ಹುಡುಗರು ಕನ್ನಡದಿಂದ ಮತ್ತು ಕನ್ನಡ ನಾಡಿನಿಂದ ಬಹಳ ದೂರವಾಗುತ್ತಾರೆ ಎಂಬ ಅರಿವು ಬರಬೇಕಲ್ಲವೇ. ಇದು ಯಾವುದೋ ಒಬ್ಬ ವ್ಯಕ್ತಿಯ, ಒಂದು ಜಿಲ್ಲೆಯ ಕಥೆಯಲ್ಲ, ನಮ್ಮ ಘನ ಸರಕಾರದ ಕೃಪಾಕಟಾಕ್ಷದಿಂದ, ಹೇಳೊಕೆ ಆಚಾರ ತಿನ್ನೋಕೆ ಬದನೆಕಾಯಿ ಎಂಬಂತಿರುವ ಸರಕಾರದ ಇಂಗ್ಲೀಷ ವ್ಯಾಮೋಹದಿಂದ ದೊಡ್ಡ ದೊಡ್ಡ ನಗರಗಳಿಗೆ ಸೀಮಿತವಾಗಿದ್ದ ಈ ರೀತಿ ಅಭಿಪ್ರಾಯಗಳು ರಾಜ್ಯದ ತುಂಬೆಲ್ಲ ಹರಡುತ್ತಿದೆ. ಹಳ್ಳಿಗಳಲ್ಲೂ ಇಂಥ ಶಾಲೆಗಳು ಆರಂಭವಾಗೋದ್ರಿಂದ ಸಹಜವಾಗಿ ಸರಕಾರಿ ಕನ್ನಡ ಶಾಲೆಯಲ್ಲಿ ಓದುತ್ತಿರುವ ೮೫% ಕನ್ನಡ ಮಕ್ಕಳಿಗೆ ತಪ್ಪು ಸಂದೇಶ ರವಾನೆಯಾಗದೇ ಇರುವುದೇ..? ಅವರನ್ನ ಶಾಲೆಗೆ ಕಳುಹಿಸುತ್ತಿರುವ ಪಾಲಕರಲ್ಲಿ ಆತಂಕ ಸೃಷ್ಟಿಸದೇ ಇರುವುದೇ..? ಇಷ್ಟ ಪಟ್ಟು ಕನ್ನಡ ಮಾದ್ಯಮ ಕಲಿಯುವವರ ಸಂಖ್ಯೆ ಕ್ಷೀಣೀಸುವುದಿಲ್ಲವೇ..? ಆಂಗ್ಲ ಮಾದ್ಯಮದಲ್ಲಿ ಕಲಿಸುವ ಶಕ್ತಿ ಇಲ್ಲದವರು ಮಾತ್ರ ಕನ್ನಡ ಮಾದ್ಯಮ ಅನ್ನೋ ಥರ ವಾತಾವರಣ ಸೃಷ್ಟಿ ಆಗದೇ ಇರುತ್ತಾ..?

ಯಾಕೆ ಹೀಗೆ.?
ಗುಣಮಟ್ಟದ ಶಿಕ್ಷಣ ಎಂದ ತಕ್ಷಣ ಆಂಗ್ಲ ಮಾದ್ಯಮ ಶಾಲೆ, ಸಿ.ಬಿ.ಎಸ್.ಸಿ ಪಠ್ಯಕ್ರಮದ ಕಡೆ ತಿರುಗುವ ನಮ್ಮ ಅತೀ ಬುದ್ದಿವಂಥ ನಾಗರಿಕರು, ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿ ಅದರಲ್ಲಿಯೆ ಇನ್ನೊಬ್ಬ ವಿಶ್ವೇಶ್ವರಯ್ಯ, ಮತ್ತೊಬ್ಬ ಡಾ: ಮೋದಿ ಯವರನ್ನು ಸೃಷ್ಟಿ ಮಾಡುವಂಥ ಹೊಣೆಯನ್ನು ಹೊತ್ತುಕೊಳ್ಳಬಾರದೇ.? ಅಂತರಾಷ್ಟೀಯ ಆಂಗ್ಲ ಮಾದ್ಯಮ ಶಾಲೆ ತೆರೆಯುವ ಬದಲು ಗುಣಮಟ್ಟದ ಅಂತರಾಷ್ಟ್ರೀಯ ಕನ್ನಡ ಮಾದ್ಯಮ ಮಾದರಿ ಶಾಲೆ ತೆರೆಯಬಾರದೇ..? ಇಂಥದ್ದೊಂದು ಯೋಚನೆ ಜನರಲ್ಲಿ ಮತ್ತು ಉಳ್ಳವರಲ್ಲಿ ಬರಬೇಕೆಂದರೆ ಗುಣಮ್ಮಟ್ಟದ ಶಿಕ್ಷಣ ಕನ್ನಡದಲ್ಲೂ ಕೊಡಬಹುದು, ಕನ್ನಡ ಮಾದ್ಯಮದಲ್ಲಿ ಕಲಿತವರು ಇಂಜಿನಿಯರ ಡಾಕ್ಟರ ಅಷ್ಟೇ ಅಲ್ಲದೇ ಆ ಹುದ್ದೆಗಳಿಗೆ ’ರೋಲ್ ಮಾಡೆಲ್’ ಎಂದೆನಿಸಿದ ನಮ್ಮ ನಾಡಿನ ಹೆಮ್ಮೆಯ ವಿಶ್ವೇಶ್ವರಯ್ಯ ಮತ್ತು ಡಾ: ಮೋದಿ ಥರನೂ ಆಗಬಹುದು ಎಂಬ ನಂಬಿಕೆ ಮೂಡಿದಾಗ. ಆದರೆ ಇಂಥದೊಂದು ನಂಬಿಕೆ ಮೂಡಲು ಬದಲಾವಣೆಗೆ ಮುನ್ನುಡಿ ಬರೆಯಬೇಕಾದ ಸರಕಾರವೇ ಮುಂದೆ ನಿಂತು ತಿಥಿ ಊಟ (ಸಿ.ಬಿ.ಎಸ್.ಸಿ ಪಠ್ಯಕ್ರಮ) ಬಡಿಸುತ್ತಿರುವಾಗ ಯಾರಿಗೆ ಏನಂದು ಏನು ಪ್ರಯೋಜನ.

ಇನ್ನು ನಮ್ಮ ಪ್ರಾಧಿಕಾರಗಳು:
ಕನ್ನಡನಾಡು ನುಡಿ ನೆಲ ಜಲಗಳ ಸಂರಕ್ಷಣೆಗೆ ನಮ್ಮ ಸರಕಾರಗಳು ಪ್ರಾಧಿಕಾರ ಅಂಥ ಮಾಡಿದ್ದಾವೆ. ಆದರೆ ಅವು ’ಅಧಿಕಾರ ಹಂಚಿಕೆ ಮಾಡ್ಕೊಳ್ಳೊಕೆ ದಾರಿಯಾಗಿದೆ ಅಷ್ಟೆ’. ಸಚಿವ ಸ್ಥಾನ ಸಿಗದ ನಾಯಕರಿಗೆ, ಸಮಾಧಾನ ಪಡಿಸ್ಲಿಕ್ಕೆ ಬೇಕಾಗಿರೊ ಕುರ್ಚಿ ಆಗೊಗಿದೆ. ಇವುಗಳು ಲೆಕ್ಕಕ್ಕುಂಟು, ಆದರೆ ಆಟಕ್ಕಿಲ್ಲ. ಅವಾಗವಾಗ ಅಲ್ಪ ಸ್ವಲ್ಪ ಆಟ ಆಡಿದ್ದು ಬಿಟ್ರೆ, ಏನು ಆಟ ಆಡ್ಬೇಕಿತ್ತೊ, ಯಾವ ಜವಾಬ್ದಾರಿಯನ್ನು ನಿರ್ವಹಿಸಬೇಕಿತ್ತೋ ಅದನ್ನು ಹೇಗೆ ನಿರ್ವಹಿಸ್ತಾ ಇವೆ ಅಂಥ ಬಿಡಿಸಿ ಹೇಳ್ಭೇಕಾ. ಗಡಿ ಜಿಲ್ಲೆಗಳಲ್ಲಿರುವ ಕನ್ನಡ ಶಾಲೆಗಳ ಅತಂತ್ರ ಸ್ಥಿತಿ ಇವರು ನಿರ್ವಹಿಸುತ್ತಿರುವ ಬೇಜವಾಬ್ದಾರಿಗೆ ನಿದರ್ಶನ.
ಆಂಗ್ಲ ಮಾದ್ಯಮದ ಕುರಿತಾದ ಒಂದು ಜೋಕು ನೆನಪಾಗ್ತಿದೆ...........
ಇಂಗ್ಲೀಷ ಶಾಲೆಗಳಲ್ಲಿ ಬರಸೇ ಬರೆಯಿಸುವರು ಹೋಮ್ ವರ್ಕ್, ಮಾಸ್ತರು
ಇಂಗ್ಲೀಷ ಶಾಲೆಗಳಲ್ಲಿ ಬರಸೇ ಬರೆಯಿಸುವರು ಹೋಮ್ ವರ್ಕ್, ಮಾಸ್ತರು
ಬರೆದು ಬರೆದು ಸುಸ್ತಾಗಿ ನಮ್ಮ ಮಕ್ಕಳಾಗುವರು ಕಡೆಗೆ ..... ಗುಮಾಸ್ತರು : )

ಗೋಡೆ ಬರಹ: ಸರ್ವರೋಗಕ್ಕೂ ಸಾರಾಯಿ ಮದ್ದು ಅಂತಾರೆ, ಹೌದೋ ಅಲ್ಲವೋ ಗೊತ್ತಿಲ್ಲ ಆದರೆ
ಕರ್ನಾಟಕದ ಸರ್ವಸಮಸ್ಯೆಗೂ ಪ್ರಾದೇಷಿಕ ಪಕ್ಷ ಮದ್ದು ಎಂಬುದು ಮಾತ್ರ ಹೈಕಮಾಂಡ್ ಇರೋರು ಕೂಡ ಅಲ್ಲಗಳೆಯಕ್ಕಾಗಲ್ಲ.

Saturday 19 June 2010

ರಾಮರಾಜ್ಯದಲ್ಲಿ ’ರಾವಣ’ನ ಅಟ್ಟಹಾಸ ಮುಂದುವರಿಕೆಗೆ ಕಟ್ಟಾಜ್ಞೆ.......!


ಕಡೆಗೂ ’ರಾವಣ’ ತನ್ನ ದುರ್ಬುಧ್ಧಿಯನ್ನು ’ರಾಮರಾಜ್ಯದ’ ಮೇಲೆ ತೋರಿಸಿಯೇ ಬಿಟ್ಟಿದ್ದಾನೆ. ನಿನ್ನೆ (೧೭-೦೬-೧೦) ’ರಾವಣ’, ಕರ್ನಾಟಕ ಚಲನಚಿತ್ರ ಮಂಡಳಿ ನಿಯಮದಂತೆ ಸುಮಾರು ೨೪ ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಆದ್ರೆ ಈ ನಡುವೆ ’ದಿ ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ’ (ಸಿ ಸಿ ಐ) ಎಂಬ ರಾಷ್ಟ್ರೀಯ ಆಯೋಗವು, ರಾವಣ ಚಿತ್ರ ವಿತರಕರ ಮೇಲೆ ನೇರ ಹಾಗೂ ಪರೋಕ್ಷವಾಗಿ ಯಾವುದೇ ಕ್ರಮಕೈಗೊಳ್ಳದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ(ಕೆಎಫ್ ಸಿಸಿ) ಕಟ್ಟಾಜ್ಞೆ ವಿಧಿಸಿದ ಸುದ್ದಿ ನಿನ್ನೆ ಹೊರಬಿತ್ತು. ಈ ಕಟ್ಟಾಜ್ಞೆ ಕೇವಲ ಕೆ ಎಫ್ ಸಿ ಸಿ ಅಷ್ಟೆ ಅಲ್ಲದೇ, ಇಡೀ ಕನ್ನಡ ಚಿತ್ರ ಕಲಾವಿದರಿಗೆ ಮತ್ತು ಕನ್ನಡ ಚಿತ್ರಗಳ ಅಭಿಮಾನಿಗಳಿಗೆ ಆದ ಹಿನ್ನಡೆ ಎಂದು ಭಾವಿಸಬಹುದು. ಈ ಕಟ್ಟಾಜ್ಞೆಯನ್ನ ನಾವ್ ಖಂಡಿಸಬೇಕು ಅಲ್ವಾ ಗುರು.

ಯಾಕೆ ಅಂತೀರಾ....
ಈ ’ಸಿ ಸಿ ಐ’ (ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ) ಅನ್ನೋದು ಗ್ರಾಹಕರ ಹಿತಾಸಕ್ತಿ, ವ್ಯಾಪಾರ ಸ್ವಾತಂತ್ರ್ಯ ಮತ್ತು ಸ್ಪರ್ಧಾತ್ಮಕ ವಾತಾವರಣ ಎಂಬ ದ್ಯೇಯಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಒಂದು ರಾಷ್ಟ್ರೀಯ ಆಯೋಗ. ಗ್ರಾಹಕರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯಾಪಾರದಲ್ಲಿ ಒಂದು ಸ್ಪರ್ಧಾತ್ಮಕ ವಾತಾವರಣವನ್ನು ಪ್ರೋತ್ಸಾಹಿಸುವುದು ಈ ಆಯೋಗದ ಉದ್ದೇಶ. ಆದ್ರೆ ನಿನ್ನೆ (೧೮-೦-೧೦) ಕೊಟ್ಟ ತೀರ್ಪಿನಲ್ಲಿ ಇದು ಏಕೊ ಕೆಲವು ಗ್ರಾಹಕರನ್ನು ಮರೆತಂತಿದೆ. ಗ್ರಾಹಕ ಹೇಗಿದ್ರು ಗ್ರಾಹಕನೇ. ಅದು ೮೦ ಕೋಟಿ ರೂಪಾಯಿ ವೆಚ್ಚ ಚಿತ್ರದ ಗ್ರಾಹಕನಾದ್ರು ಅಷ್ಟೆ, ೮ ಕೋಟಿ ರೂಪಾಯಿ ವೆಚ್ಚ ಚಿತ್ರದ ಗ್ರಾಹಕನಾದ್ರು ಅಷ್ಟೆ. ಅಲ್ಲಿ ಗ್ರಾಹಕನಿಗೆ ಬೆಲೆ ಕಟ್ಟೊಕಾಗತ್ತಾ..? ಆದ್ರೆ ಈ ಆಯೋಗ ಮೇಲ್ನೋಟಕ್ಕೆ ಒಬ್ಬನಿಗೆ ಬೆಣ್ಣೆ ಮತ್ತೊಬ್ಬನಿಗೆ ಸುಣ್ಣ ಪದ್ದತಿ ಅನುಸರಿಸಿರುವುದು ಗೋಚರಿಸುತ್ತದೆ. ಅಧೇಗೆ ಅಂದ್ರೆ, ರಾವಣ ಚಿತ್ರ ನಿಯಮ ಉಲ್ಲಂಘಿಸಿ ೨೪ ರ ಬದಲು ೪೮ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ್ರೆ, ಆ ಹೆಚ್ಚಿದ ೨೪ ಚಿತ್ರಮಂದಿರಗಳಲ್ಲಿ ನಡೆಯುತ್ತಿರುವ ನಮ್ಮ ಕನ್ನಡ ಚಿತ್ರಗಳಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಹೀಗಾದಾಗ ಈ ೨೪ ಚಿತ್ರಮಂದಿರಗಳಿಗೆ ಬರುತ್ತಿದ್ದ ಕನ್ನಡ ಚಿತ್ರಗಳ ಗ್ರಾಹಕರಿಗೆ ಮತ್ತು ಅಭಿಮಾನಿಗಳಿಗೆ ಇವರ ಕಟ್ಟಾಜ್ಞೆ ಮಾರಕವಾಗುವುದಿಲ್ಲವೇ..? ಆಗ ’ಸಿ ಸಿ ಐ’ ನ ಗ್ರಾಹಕರ ಹಿತಾಸಕ್ತಿ ಎಂಬ ದ್ಯೇಯ ಇಲ್ಲಿ ಅನ್ವಯವಾಗುತ್ತದೆಯೇ..? ಕನ್ನಡ ಚಿತ್ರಗಳ ಗ್ರಾಹಕರು ಇವರಿಗೆ ಗ್ರಾಹಕರಾಗಿ ಏಕೆ ಕಾಣಲಿಲ್ಲ. ಒಬ್ಬನಿಗೆ ಒಂದು ನ್ಯಾಯ, ಇನ್ನೊಬ್ಬನಿಗೆ ಇನ್ನೊಂದು ಅಂದ್ರೆ ಹೇಗೆ ಸ್ವಾಮಿ. ನಮ್ಮ ಚಿತ್ರಗಳು ಚಿತ್ರಮಂದಿರಗಳಿಂದ ಎತ್ತಂಗಡಿ ಆದ್ರೂ ಪರ್ವಾಗಿಲ್ಲ, ಇವರ ಚಿತ್ರಗಳು ಬಿಡುಗಡೆಯಾಗ್ಬೇಕು ಅನ್ನೊ ವಾದ ಯಾವ ಕನ್ನಡಾಭಿಮಾನಿ ತಾನೆ ಒಪ್ಪಲು ಸಾದ್ಯ. ಕರ್ನಾಟಕದಲ್ಲೇ ಮಾರುಕಟ್ಟೆ ಕಂಡುಕೊಳ್ಳುವ ನಮ್ಮ ಚಿತ್ರಗಳು ಎಕ್ಕುಟ್ಟೊದ್ರು ಪರ್ವಾಗಿಲ್ಲ, ದೇಶದಾದ್ಯಂತ ಮಾರುಕಟ್ಟೆ ಇರೋ ಇವರಿಗೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ತಡೆಯೊಡ್ಡದೇ ಚಿತ್ರದ ಗೆಲುವಿಗೆ ಅವಕಾಶ ಮಾಡಿಕೊಡಬೇಕು ಅನ್ನೋ ಕಟ್ಟಪ್ಪಣೆಗೆ ತಲೆಬಾಗಲು ಸಾದ್ಯವೇ..?

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದ್ರೆ, ಒಂದು ಚಿತ್ರದ ಉಳಿವಿಗಾಗಿ, ಚೆನ್ನಾಗಿ ಓಡುತ್ತಿರುವ ಮತ್ತೊಂದು ಚಿತ್ರವನ್ನು ಅಳಿಸುವುದು ಯಾವ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಲು ಸಾದ್ಯ. ಪರಭಾಷಾ ಚಿತ್ರಗಳ ನಿಯಮ ಉಲ್ಲಂಘನೆಯಿಂದಾಗುವ ಕನ್ನಡ ಚಿತ್ರಗಳ ಬಿಡುಗಡೆ ವಿಳಂಬ ಯಾವ ವ್ಯಾಪಾರ ಸ್ವಾತಂತ್ರ್ಯವನ್ನು ಬಿಂಬಿಸಲು ಸಾದ್ಯ. ಒಂದು ವೇಳೆ ಮುಂಬೈನಲ್ಲಿ ಸುಮಾರು ೮೦೦ ಕೋಟಿ ರೂಪಾಯಿ ವೆಚ್ಚದ ಇಂಗ್ಲೀಷ ಚಲನಚಿತ್ರ, ಇವರ ಮುಖ್ಯ ಮಾರುಕಟ್ಟೆಯನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದರೆ ಇದೇ ಅಂಬಾನಿ ಸಾಹೇಬರ ಕಂಪನಿ ಸುಮ್ಮನಿರುವುದೇ..? ಈ ಪುರಾಣದಲ್ಲಿ ಇನ್ನೂ ಒಂದು ಮಾತು ಇಲ್ಲಿ ಹೇಳಲೇಬೇಕು, ಈ ರಾವಣ ಚಿತ್ರ ಹಿಂದಿ, ತಮಿಳು, ತೆಲುಗು ಹೀಗೆ ನೂರೆಂಟು ಭಾಷೆಯಲ್ಲಿ ನೋಡೊ ಬದಲು, ನಮ್ಮ ಭಾಷೆಯಲ್ಲೇ ’ಡಬ್’ ಆಗಿದ್ದಿದ್ದರೆ ಈ ಸಮಸ್ಯೆನೇ ಇರ್ತಿರ್ಲಿಲ್ಲ. ನಮ್ಮಲ್ಲಿ ಡಬ್ಬಿಂಗಗೆ ಅವಕಾಶ ಇಲ್ಲದಿರುವ ಪರಿಣಾಮವೇ ಈ ಸಮಸ್ಯೆ.
ಅದಿರ್ಲಿ ಈಗ ಈ ಆಜ್ಞೆ ಬರೋ ಜೂನ್ ೨೨ ರವರೆಗೆ ಜಾರಿಯಿರಲಿದ್ದು, ಅಂದು ನಡೆಯವ ವಿಚಾರಣೆಯಲ್ಲಿ ಚಲನಚಿತ್ರ ಮಂಡಳಿ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಬೇಕಿದೆ. ಪರಭಾಷಾ ಚಿತ್ರಗಳಿಗೆ ವಿಧಿಸಿರುವ ನಿಯಮಗಳ ಪಾಲನೆಯನ್ನು ಎತ್ತಿ ಹಿಡಿಯಬೇಕಿದೆ.

Tuesday 8 June 2010

ನಾಡಪರ ಚಿಂತಕರು ಯಾವ ನಾಡ ಪರ ಅನ್ನೋದು ಯಕ್ಷ ಪ್ರಶ್ನೆ.......???




"ಕನ್ನಡದ ಮನೆಯಲ್ಲಿ ಕನ್ನಡತಿಯೇ ಯಜಮಾನತಿ; ಮಿಕ್ಕ ಹೆಂಗಸರೆಲ್ಲಾ ಒಕ್ಕಲಷ್ಟೇ ಎಂಬುದರ ನಿಜವನ್ನು ಅರಿತರೆ ಎಲ್ಲರಿಗೂ ಸುಖವಾದೀತು. ಯಜಮಾನತಿ ಮಾತ್ರ ತಾನು ಧರ್ಮಪತ್ನಿ ಎಂಬ ಜಂಭದಲ್ಲಿಯೇ ನಿದ್ರೆ ಮಾಡಿದರೆ, ಊಳಿಗಗಿತ್ತಿಯೂ ಯಜಮಾನನನ್ನು ಲೂಟಿ ಮಾಡುತ್ತಾಳೆಂಬುದನ್ನು ನಾವು ನೋಡಿಲ್ಲವೇ? ಕನ್ನಡತಿ ಯಜಮಾನತಿ ಹೌದು. ಯಜಮಾನನಾದ ಆತ್ಮನಿಗೆ ಪತ್ನಿಯಾಗಿ ಶೃಧ್ಧೆಯಿರುವಂತೆ ಕನ್ನಡಿಗರ ಲಲಿತಾಂಗವನ್ನು ಕನ್ನಡ ಸ್ವಯಂಪ್ರಭೆಯಾಗಿ ಸುತ್ತಮುತ್ತಿಕೊಳ್ಳಬೇಕು". ಇದು ತಾಯಿನುಡಿ ಕನ್ನಡವಲ್ಲದ, ವರಕವಿ ದ. ರಾ. ಬೇಂದ್ರೆ ಅವರು ಕನ್ನಡ ಭಾಷೆಯ ಕುರಿತಂತೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ ಮಾತು.

ಈಗ ಯಕ್ಷ ಪ್ರಶ್ನೆ ಏನಪ್ಪಾ ಅಂದ್ರೆ, ಈ ಮೇಲಿನ ಸಾಲನ್ನು ನಮ್ಮ ಸಾಹಿತಿ ಮಹೋದಯರು, ನಾಡಪರ ಚಿಂತಕರು (ಕನ್ನಡನಾಡ ಪರ ಅಂಥ ಅನ್ಕೊಳ್ಳೋಣ), ಸಭೆ ಸಮಾರಂಭಗಳಲ್ಲೆಲ್ಲ ಕನ್ನಡ ಹಾಗಾಗಿದೆ, ಹೀಗಾಗಿದೆ, ಹಾಗಾಗಬೇಕಿದೆ, ಹೀಗಾಗಬೇಕಿದೆ ಎಂದು ಬಾಯಲ್ಲಿ ಬಡ ಬಡಿಸುವಂಥ ಹಿರಿಯರು, ಎಷ್ಟು ಜನ ಇದನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅದನ್ನು ಅನುಷ್ಟಾನಕ್ಕೆ ತರುವತ್ತ ಪ್ರಯತ್ನಪಡುತ್ತಿದ್ದಾರೆ ಎಂಬುದು. ಸಾಹಿತಿಗಳೆಂದರೆ ಒಂದರ್ಥದಲ್ಲಿ ಕನ್ನಡವನ್ನು ಉಳಿಸುವ ಬೆಳೆಸುವ ಮುಂಚೂಣಿ ನಾಯಕರು ಎಂದರ್ಥ. ಒಬ್ಬ ವ್ಯಕ್ತಿ ಕನ್ನಡದ ಸಾಹಿತಿ ಅಂಥ ಕರೆಯಿಸಿಕೊಂಡರೆ ಅವರು ಸ್ವಾಭಾವಿಕವಾಗಿ ಕನ್ನಡ ಕರ್ನಾಟಕ ಕನ್ನಡಿಗರ ಬಗ್ಗೆ ಇತರರಿಗಿಂತ ಹೆಚ್ಚು ಕಾಳಜಿ, ಗೌರವ ಇರುವವರಾಗಿರಬೇಕಲ್ಲವೇ. ಏಕೆಂದರೆ ಕನ್ನಡದಿಂದಲೇ ಅವರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವವರು. ನಮ್ಮ ನಾಡಿನಲ್ಲಿ ಸಾಹಿತ್ಯಕ್ಕೂ ಬರ ಇಲ್ಲ, ಸಾಹಿತಿಗಳಿಗೂ ಬರ ಇಲ್ಲ. ಆದರೆ ಇಲ್ಲಿ ಎದ್ದು ಕಾಣುತ್ತಿರುವುದು ಒಗ್ಗಟ್ಟಿನ ಕೊರತೆ. ರಾಜಕೀಯ ಪಕ್ಷಗಳನ್ನು ಮೀರಿಸುವಂತಹ ಬಣಗಳು ನಮ್ಮ ಕನ್ನಡ ಸಾಹಿತ್ಯದ ಮನೆಯಲ್ಲಿ. (ದಿನಪತ್ರಿಕೆಗಳಲ್ಲಿ ದಿನಾಲು ಸಾಹಿತಿಗಳ ಕಿತ್ತಾಟ ನೋಡಿ ನೋಡಿ ಬೇಸರವಾಗಿ ಬರೆದ ಲೇಖನವಿದು). ನಮ್ಮ ಸಾಹಿತಿಗಳ ದ್ವಂದ ನಿಲುವುಗಳು, ಕೆಲವರು ಸರಕಾರವನ್ನು ಮೆಚ್ಚಿಸುವ ರೀತಿಯಲ್ಲಿ ನೀಡುವ ಹೇಳಿಕೆಗಳು ಹಿಂದಿನ ಕಹಿ ಅನುಭವಗಳಿಂದ ಸಾಬೀತಾಗಿದೆ. ಕೆಲವರಂತೂ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿರುವುದು ನಿಜಕ್ಕೂ ಘನತೆಗೆ ತಕ್ಕದ್ದಲ್ಲ. ರಾಜ್ಯದಲ್ಲಿ ಸೋನಿಯಾ ಮೇಡಮ್ ಅವರ ಸರ್ಕಾರವಿದ್ದಾಗ ಮುಂಚೂಣಿಯಲ್ಲಿದ್ದು ಬೀದಿಗಿಳಿದು ಹೋರಾಟಗಳನ್ನು ಮಾಡಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಕೆಲವರಿಗೆ, ಸುಷ್ಮಾ ಮೇಡಮ್ (ಗಣಿ ದಣಿಗಳ ಮಾತೆ) ಅವರ ಸರ್ಕಾರ ಬಂದ ಮೇಲೆ ಮಾತುಗಳೇ ಹೊರಡುತ್ತಿಲ್ಲ. ಇದರಿಂದ ಅವರು ನಾಡ ಪರವೋ, ಪಕ್ಷದ ಪರವೋ ಎಂಬ ಸಂಶಯಗಳು ಸ್ವಾಭಾವಿಕವಾಗಿ ಜನರ ಮನಸ್ಸಿನಲ್ಲಿ ಮೂಡಲಾರಂಭಿಸಿವೆ. ಸಾಹಿತಿಗಳು, ನಾಡಪರ ಚಿಂತಕರು ಸರ್ಕಾರದ ಜೊತೆ ಸೇರಿ ಸಲಹೆ ಸೂಚನೆಗಳನ್ನು ಕೊಡುವುದೇನು ಒಳ್ಳೆಯ ನಡೆ. ಆದರೆ ಅದು ಸರ್ಕಾರ ತಪ್ಪು ಹೆಜ್ಜೆ ಇಟ್ಟ ಸಂದರ್ಭದಲ್ಲೂ ಬೆಂಬಲಿಸುವಂಥ ಮಟ್ಟಿಗೆ ಹೋಗಬಾರದಲ್ಲವೇ. ತಿರುವಳ್ಳವರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಆಗಿದ್ದು ಇದೇ ತಾನೆ. “ಕನ್ನಡಿಗರು ವಿಶಾ.....ಲ ಹೃದಯದವರು” ಎಂಬ ಮಾತನ್ನು ಸಾಬೀತು ಮಾಡಲು ಪ್ರತಿಮೆ ಅನಾವರಣ ಪರ ಮಾತನಾಡಿದರು. ಇದರಿಂದ ಕನ್ನಡಿಗರ ಕಿವಿ ಮೇಲೆ ಈಗಾಗಲೇ ಇರುವ ಹೂಗಳ ಜೊತೆಗೆ ಮತ್ತೊಂದು ಹೂ (ಕ್ರೇಜಿ ಸ್ಟಾರ್ ’ಹೂ’ ಅಲ್ಲ) ಇಟ್ಟಂತಾಗುತ್ತದೆ ಎಂಬ ಪರಿಜ್ನಾನವೂ ಇಲ್ಲದ ಇವರು ಯಾವ ಸೀಮೆ ನಾಡಪರಚಿಂತಕರು. (ಹೀಗೆ ಆದರೆ ’ಕನ್ನಡಿಗರು ವಿಶಾ...ಲ ಹೃದಯದವರು’ ಎಂಬ ವಾಕ್ಯ ಕೇಳಿ ಕೇಳಿ ಮುಂದೊಂದು ದಿನ ಮೈ ಉರಿಯುವ ಹಾಗಾಗದೇ ಇರುವುದೇ..?)


ಪ್ರತಿಮೆ ಪುರಾಣನೂ ಆಯಿತು, ನಿರೀಕ್ಷಿಸಿದಂತೆ ಅವರ ಮತಗಳೂ ಬಂದವು. ಅವರು ತಮ್ಮ ಪಾಡಿಗೆ ತಾವು ಕೆಲಸನೂ ಶುರು ಮಾಡಿದರು. ನಮ್ಮ ನಾಡಪರ ಚಿಂತಕರು (ಕನ್ನಡನಾಡ ಪರ ಅಂಥ ಅನ್ಕೊಳ್ಳಿ ಇನ್ನೊಮ್ಮೆ ಪ್ಲೀಸ್) ಊಹಿಸಿದ ಯಾವ ಭಾಂಧವ್ಯ, ಯಾವ ಸಾಮರಸ್ಯ ಬೆಸೆಯಿತು ಎಂಬುದು ಈಗಾಗಲೇ ಅರ್ಥ ಆಗಿರಬೇಕು. ಭಾಂಧವ್ಯ ಬೆಸೆಯಲು ಒಬ್ಬರೇ ’ವಿಶಾ...ಲ ಹೃದಯದವರು’ ಆಗಿದ್ದರೆ ಸಾಲದು ಸ್ವಾಮಿ, ಇನ್ನೊಬ್ಬರಿಗೂ ಆ ನಿಯತ್ತು ಇರಬೇಕಲ್ಲವೇ. ಹಿಂದುಸ್ಥಾನ ಮತ್ತು ಪಾಕಿಸ್ಥಾನ ಭಾಂಧವ್ಯ ಬೆಳೆಯದಿರಲು ಕೂಡ ಇದೇ ಕಾರಣವಲ್ಲವೇ..? ಇಷ್ಟೆಲ್ಲ ಆದರೂ, ಹೊಗೆನಕ್ಕಲನಲ್ಲಿ ಕೆಲಸ ಭರದಿಂದ ಸಾಗಿದ್ದರೂ, ಅಲ್ಲಿ ಕನ್ನಡಿಗರ ಪ್ರವೇಶಕ್ಕೆ ನಿರ್ಭಂಧ ಹೇರಿದ್ದರೂ, ಮಾತನಾಡದ, ತುಟಿ ಬಿಚ್ಚದ ಇವರನ್ನು ನಮ್ಮ ನಾಡಿನ ರತ್ನಗಳು ಎಂದು ಯಾವ ಬಾಯಿಂದ ಹೇಳುವುದು. ಇತ್ತೀಚಿಗೆ ಕರ್ನಾಟಕ ಸರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಸಿ..ಬಿ.ಎಸ್.ಸಿ ಶಾಲೆಗಳನ್ನು ತೆರೆಯುವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಇವರು ಎಂತಹ ಕನ್ನಡಾಭಿಮಾನಿಗಳು ಎಂದು ಒಂದು ಸಲ ಸ್ಪಷ್ಟ ಪಡಿಸಲಿ. ಇನ್ನೂ ಕೆಲವರಿಗೆ ಜಾತಿ ಮೇಲೆ ಮೋಹ (ಪ್ರೇಮ ಅಲ್ಲ). ತಮ್ಮ ಮೋಹಕ್ಕೆ ಮತ್ತೊಬ್ಬರ ಮೇಲೆ ಎಗರಾಡಿ ಕನ್ನಡವನ್ನು ನಿರ್ಲಕ್ಷಿಸುತ್ತಿರುವುದನ್ನು ನಾವೂ ನೋಡಿಲ್ಲವೇ. ಅಲ್ಲ ಸ್ವಾಮಿ, ಈ ಥರ ಎಲ್ಲರೂ ತಮ್ಮ ತಮ್ಮ ಸ್ವಯಂಘೋಷಿತ ಒಂದೊಂದು ತತ್ವ ಸಿದ್ಧಾಂಥಗಳನ್ನೇ ಜನರಿಗೆ ವೇದ ವಾಕ್ಯಗಳೆಂದು ಹೇಳುತ್ತಿದ್ದರೆ, ಕನ್ನಡದ ತತ್ವ ಸಿದ್ಧಾಂಥ ಏಳಿಗೆ ಕಡೆಗೆ ಗಮನ ಹರಿಸುವವರ್ಯಾರು ಮಾರಾಯ್ರೇ..? ನಾವು ರಾಜ್ಯ ಬಿಟ್ಟು ಹೊರಗಡೆ ಇದ್ದಾಗ ಅಲ್ಲಿ ನಮ್ಮನ್ನು(ಕನ್ನಡಿಗರನ್ನು) ಕೂಡಿಸುವುದು ಯಾವ ಜಾತಿ..?, ಕನ್ನಡ ಜಾತಿನೇ ಅಲ್ಲವೇ. ಅಲ್ಲಿ ಯಾವ ಬೇರೆ ಜಾತಿಯ ಸುಳಿವೇ ಇರುವುದಿಲ್ಲ. ನನ್ನ ಒಂದು ಘಟನೆ ನೆನಪಾಯ್ತು. ನಾನು ಒಮ್ಮೆ ಬೇರೆ ರಾಜ್ಯದಲ್ಲಿ ಇದ್ದಾಗ, ಹೀಗೆ ಅಚಾನಕ್ಕಾಗಿ ಒಬ್ಬ ಕನ್ನಡಿಗ ಸಿಕ್ಕರು. ಖುಷಿಯಾಯ್ತು. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿದ್ದು ಏನಪ್ಪಾ ಅಂದ್ರೆ ಅವರು ಹೇಳಿದ ಮಾತು. "ಹಿಂದಿ ಇಂಗ್ಲೀಷ ಮಾತನಾಡಿ ನನ್ನ ನಾಲಿಗೆ ಕೊಳೆಯಾಗಿತ್ತು, ಈಗ ನೀವು ಸಿಕ್ರಲ್ಲ, ಇನ್ ಮೇಲೆ ಸ್ವಚ್ಚ ಆಗುತ್ತೆ" ಅಂಥ. ಅವರು ಒಬ್ಬ ಮುಸ್ಲಿಮ್ ಕನ್ನಡಿಗ ಅನ್ನೋದು ಗಮನಾರ್ಹ. ಹೀಗೆ ಹೊರನಾಡ ಕನ್ನಡಿಗರಲ್ಲಿ ಇರುವಂತಹ ಆ ಅಭಿಮಾನ, ಆ ನಮ್ಮತನ ಒಳನಾಡಿನಲ್ಲಿರುವವರಿಗೂ ತುಂಬುವ ಕೆಲಸ ಮಾಡಬೇಕಾದ ನಮ್ಮ ಹಿರಿಯರೇ ಹೀಗೆ ಸ್ವಾರ್ಥಿಯಾದರೆ ಹೇಗೆ ಸ್ವಾಮಿ. ಯುವಕರಲ್ಲಿ ಸ್ಪೂರ್ತಿ ತುಂಬಬೇಕಾದ ಇವರೇ ಹೀಗೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಮುಂದಿನ ಪೀಳಿಗೆಗೆ ಕನ್ನಡವನ್ನು ಕೊಂಡೊಯ್ಯಲು ಸಾದ್ಯವೇ. ದೇವಸ್ಥಾನದ ಗರ್ಭಗುಡಿಯಲ್ಲೇ ದೇವರು ಇಲ್ಲದ ಮೇಲೆ ಹೊರಗಡೆ ಎಷ್ಟು ಮೂರ್ತಿಗಳನ್ನಿಟ್ಟರೂ ಏನು ಪ್ರಯೋಜನ..? ಕನ್ನಡ ನಾಡಿನಲ್ಲೇ ಕನ್ನಡವಿಲ್ಲದಿದ್ದರೆ, ಹೊರನಾಡಿನಲ್ಲಿ ಎಷ್ಟು ಕನ್ನಡ ಸಂಘಗಳನ್ನು ಮಾಡಿದರೂ ಏನು ಪ್ರಯೋಜನ. ಕರ್ನಾಟಕದಲ್ಲೇ ಕನ್ನಡವಿಲ್ಲದಿದ್ದರೆ, ಮುಂದೊಂದು ದಿನ, ಹೊರನಾಡಿನಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸುವುದು, ಸಭೆ ಸಮಾರಂಭಗಳನ್ನು ನಡೆಸುವುದು ನಗೆ ಚಾಟಿಕೆ ಆಗುತ್ತದೆ ಎಂಬುದನ್ನು ಯಾರಾದರೂ ಅಲ್ಲಗಳೆಯಲು ಸಾದ್ಯವೇ..?


ಏಕೀಕರಣದ ಸಂದರ್ಭದಲ್ಲಿ ಎಲ್ಲ ಮಹೋದಯರು ತಮ್ಮ ಸ್ವಹಿತ, ಪ್ರತಿಷ್ಟೆಯನ್ನು ಬದಿಗಿಟ್ಟ ಪರಿಣಾಮವಾಗಿಯೇ ಈ ನಾಡಿನ ಉದಯವಾಯಿತು. ಈಗ ಅದನ್ನು ಬೆಳೆಸಲು ಎಲ್ಲರೂ ತಮ್ಮ ಸ್ವಹಿತವನ್ನು ಬದಿಗಲ್ಲ, ಊರಾಚೆಯಿಡಬೇಕಲ್ಲವೇ...?